Wednesday, 7 May 2014

ಸ್ತೋತ್ರ ಮಂದಾರ

ಶ್ರೀ ದೇವೀ ಸ್ತೋತ್ರಗಳು.
     *********************
             - ೧ -
|| ಶ್ರೀ ಲಲಿತಾ ಪಂಚರತ್ನ ಸ್ತೋತ್ರಮ್ ||
  *****************************
ಪ್ರಾತ: ಸ್ಮರಾಮಿ ಲಲಿತಾ ವದನಾರವಿಂದಂ
ಬಿಂಬಾಧರಂ ಪೃಥುಲ ಮೌಕ್ತಿಕ ಶೋಭಿನಾಸಮ್ |
ಆಕರ್ಣ ಧೀರ್ಘ ನಯನಂ ಮಣಿಕುಂಡಲಾಢ್ಯಂ
ಮಂದಸ್ಮಿತಮ್ ಮೃಗಮದೋಜ್ವಲ ಭಾಲದೇಶಮ್  ||೧||

ಭಾವಾರ್ಥ :-ತೊಂಡೆಯ ಹಣ್ಣನ್ನು ಹೋಲುವ  ತುಟಿ; ದೊಡ್ಡ ಮುತ್ತಿನ ಮೂಗುತಿಯನ್ನು ಧರಿಸಿ ಶೋಭಿಸುವ ಮೂಗು; ಕಿವಿಯತನಕ ವಿಸ್ತರಿಸಿರುವ ವಿಶಾಲವಾಗಿರುವ ನಯನ ದ್ವಯಗಳು; ಕಿವಿಯಲ್ಲಿ ಮಣಿ ಕುಂಡಲಗಳು;  ಮಂದಹಾಸವನ್ನು ಬೀರುತ್ತಿರುವ  ತುಟಿಗಳು; ಹಾಗೂ ಹಣೆಯಲ್ಲಿ ಉಜ್ವಲವಾಗಿ ಬೆಳಗುತ್ತಿರುವ ಕಸ್ತೂರಿಯ ತಿಲಕ; ಇವುಗಳಿಂದೊಪ್ಪುವ ಲಲಿತಾ ಮಾತೆಯ ಮುಖಕಮಲವನ್ನು ನಾನು ಉಷ: ಕಾಲದಲ್ಲಿ ಸ್ಮರಿಸುತ್ತಿದ್ದೇನೆ.

ಪ್ರಾತರ್ಭಜಾಮಿ ಲಲಿತಾ ಭುಜಕಲ್ಪವಲ್ಲೀಂ
ರಕ್ತಾಂಗುಲೀಯ ಲಸದಂಗುಲಿ ಪಲ್ಲವಾಢ್ಯಾಮ್ |
ಮಾಣಿಕ್ಯ ಹೇಮ ವಲಯಾಂಗದ ಶೋಭಮಾನಾಂ
ಪುಂಡ್ರೇಕ್ಷುಚಾಪ ಕುಸುಮೇಷು ಸೃಣೀರ್ದಧಾನಮ್  ||೨||

ಭಾವಾರ್ಥ :-ಕೆಂಪು ಹರಳಿನ ಉಂಗುರವ ಧರಿಸಿ ಹೊಳೆಯುವ ಬೆರಳೆನ್ನುವ ಚಿಗುರುಗಳಿಂದ ಕೂಡಿದವಳೂ; ಮಾಣಿಕ್ಯದ ಬಳೆಗಳು ಹಾಗೂ ತೋಳ್ಬಂದಿಗಳಿಂದ ಶೋಭಾಯಮಾನಳಾಗಿರುವ ನಾಮ ಕಬ್ಬನ್ನು ಬಿಲ್ಲನ್ನಾಗಿಸಿ ಹೂವುಗಳನ್ನು ಬಾಣಗಳನ್ನಾಗಿಸಿ ತುಂಬಿರುವ ಬತ್ತಳಿಕೆಯನ್ನು ಹಿಡಿದಿರುವ ಲಲಿತಾಮಾತೆಯ ತೋಳುಗಳೆಂಬ ಕಲ್ಪಲತೆಯನ್ನು ನಾನು ಬೆಳಗ್ಗೆ ಭಜಿಸುತ್ತೇನೆ.

ಪ್ರಾತರ್ನಮಾಮಿ ಲಲಿತಾ ಚರಣಾರವಿಂದಂ
ಭಕ್ತೇಷ್ಟ ದಾನ ನಿರತಂ ಭವ ಸಿಂಧು ಪೋತಮ್ |
ಪದ್ಮಾಸನಾದಿ ಸುರನಾಯಕ ಪೂಜನೀಯಂ
ಪದ್ಮಾಂಕುಶ ಧ್ವಜ ಸುದರ್ಶನ ಲಾಂಛನಾಢ್ಯಮ್  ||೩||

ಭಾವಾರ್ಥ:-ಭಕ್ತರು ಅಪೇಕ್ಷಿಸುವ ಇಷ್ಟ ಫಲಗಳನ್ನು ಕರುಣಿಸುವುದರಲ್ಲಿ ತೊಡಗಿಸಿಕೊಂಡಿರುವವಳೂ;ಸಂಸಾರವೆನ್ನುವ ಸಾಗರವನ್ನು ದಾಟಲು ಹರಿಗೋಲಾಗಿರುವವಳೂ; ಬ್ರಹ್ಮಾದಿ ದೇವತಾವರೇಣ್ಯರಿಗೆ ಪೂಜನೀಯವಾಗಿರುವವಳೂ; ಕಮಲ, ಅಂಕುಶ, ಧ್ವಜ, ಸುದರ್ಶನ ಚಕ್ರ ಮೊದಲಾದ ಗುರುತುಗಳನ್ನು ಹೊಂದಿರುವವಳೂ ಆದ ಲಲಿತಾ ಮಾತೆಯ ಪಾದ ಕಮಲಗಳಿಗೆ ನಾನು ಉಷ: ಕಾಲದಲ್ಲಿ ನಮಸ್ಕರಿಸುತ್ತೇನೆ.

ಪ್ರಾತ: ಸ್ತುವೇ ಪರಶಿವಾಂ ಲಲಿತಾಂ ಭವಾನೀಂ
ತ್ರಯಂತ ವೇದ್ಯ ವಿಭವಾಂ ಕರುಣಾನವದ್ಯಾಮ್ |
ವಿಶ್ವಸ್ಯ ಸೃಷ್ಟಿ ವಿಲಯ ಸ್ಥಿತಿ ಹೇತುಭೂತಾಂ
ವಿದ್ಯೇಶ್ವರೀಂ ನಿಗಮಮ ವಾಙ್ಮನಸಾತಿ ದೂರಾಮ್  ||೪||

ಭಾವಾರ್ಥ:-ವೇದಾಂತಗಳಿಂದ ತಿಳಿದುಬರುವ ವೈಭವವನ್ನು ಹೊಂದಿರುವವಳೂ;ದಯಾನಿಧಿಯಾಗಿ ಶ್ಲಾಘನೀಯಳಾದವಳೂ; ಜಗದ ಉತ್ಪತ್ತಿ,ಪಾಲನೆ, ನಾಶಕ್ಕೆ ಕಾರಣೀ ಭೂತವಾಗಿರುವ ಶ್ರೀವಿದ್ಯಾ ಮಂತ್ರಕ್ಕೆ ದೇವತಾ ಸ್ವರೂಪಿಯೂ, ವೇದಗಳಿಗೆ ನಿಲುಕದವಳೂ ,ಮಾತು, ಮತ್ತು ಮನ್ನಸ್ಸಿಗೆ ಸಿಗದವಳೂ ;ಪರಮೇಶ್ವರನ ಒಡತಿಯೂ; ಜಗನ್ಮಾತೆಯೂ ಆಗಿರುವ ಲಲಿತಾ ಮಾತೆಯನ್ನು ನಾನು ಪ್ರಾತ:ಕಾಲದಲ್ಲಿ ಸ್ತುತಿಸುತ್ತೇನೆ.

ಪ್ರಾತರ್ವದಾಮಿ ಲಲಿತೇ ತವ ಪುಣ್ಯ ನಾಮ
ಕಾಮೇಶ್ವರೀತಿ ಕಮಲೇತಿ ಮಹೇಶ್ವರೀತಿ |
ಶ್ರೀ ಶಾಂಭವೀತಿ ಜಗತಾಂ ಜನನೀ ಪರೇತಿ
ವಾಗ್ದೇವತೇತಿ ವಚಸಾ ತ್ರಿಪುರೇಶ್ವರೀತಿ  ||೫||

ಭಾವಾರ್ಥ:-ಕಾಮೇಶ್ವರಿ;ಕಮಲೆ;ಮಹೇಶ್ವರಿ;ಶಾಂಭವಿ;ಶ್ರೇಷ್ಠಳಾಗಿರುವ ಜಗಜ್ಜನನಿ; ವಾಗ್ದೇವಿ; ತ್ರಿಪುರೇಶ್ವರಿ ಎಂಬುದಾಗಿ ನಿನ್ನ ಪುಣ್ಯ ನಾಮಗಳನ್ನು ಲಲಿತಾ ಮಾತೆಯೇ ನಾನು ಬೆಳಗ್ಗಿನ ಹೊತ್ತು ಜಪಿಸುತ್ತೇನೆ.

ಯ: ಶ್ಲೋಕ ಪಂಚಕಮಿದಂ ಲಲಿತಾಂಬಿಕಾಯಾ:
ಸೌಭಾಗ್ಯದಂ ಸುಲಲಿತಂ ಪಠತಿ ಪ್ರಭಾತೇ |
ತಸ್ಮೈ ದದಾತಿ ಲಲಿತಾ ಝಟಿತಿ ಪ್ರಸನ್ನಾ
ವಿದ್ಯಾಂ ಶ್ರಿಯಂ ವಿಮಲ ಸೌಖ್ಯಮನಂತ ಕೀರ್ತಿಮ್ ||೬ ||

ಭಾವಾರ್ಥ:-ಯಾವಾತನು ಸೌಭಾಗ್ಯವನ್ನು ಒದಗಿಸುವ ಸುಂದರವಾದ ಹಾಗೂ ಸುಲಭವಾಗಿರುವ ಲಲಿತಾಂಬಿಕೆಯ ಈ ಐದು ಶ್ಲೋಕಗಳನ್ನು ಉಷ:ಕಾಲದಲ್ಲಿ ಪಠಿಸುವನೋ ಅವನಿಗೆ ತತ್ಕ್ಷಣ ಪ್ರಸನ್ನಳಾಗುವ ಲಲಿತಾ ಮಾತೆಯು ಸಂತೋಷದಿಂದ ವಿದ್ಯೆ,ಸಂಪತ್ತು,ಶೋಭೆ,ನಿರ್ಮಲವಾದ ಸೌಖ್ಯ, ಹಾಗೂ ಅಂತ್ಯವಿಲ್ಲದ್ದ ಕೀರ್ತಿಯನ್ನು ದಯಪಾಲಿಸುತ್ತಾಳೆ.

  || ಇತಿ ಶ್ರೀಮಚ್ಛಂಕರಾಚಾರ್ಯ ವಿರಚಿತ ಶ್ರೀ ಲಲಿತಾ ಪಂಚರತ್ನ ಸ್ತೋತ್ರಮ್ ||

  || ಈ ರೀತಿ ಶ್ರೀಮಚ್ಛಂಕರಾಚಾರ್ಯರು ರಚಿಸಿದ ಶ್ರೀ ಲಲಿತಾ ಪಂಚರತ್ನ ಶ್ಲೋಕದ ಭಾವಾರ್ಥವು ||
*********************************************************************************
             -೨-
  ||ಶ್ರೀ ದೇವೀ ಪ್ರಾತ: ಸ್ಮರಣಮ್ ||
 ++++++++++++++++++++
ಪ್ರಾತ: ಸ್ಮರಾಮಿ ಶರದಿಂದುಕರೋಜ್ಜ್ವಲಾಭಾಂ
ಸದ್ರತ್ನವನ್ಮಕರಕುಂಡಲ ಹಾರಭೂಷಾಮ್ |
ದಿವ್ಯಾಯುಧೋರ್ಜಿತ ಸುನೀಲ ಸಹಸ್ರ ಹಸ್ತಾಂ
ರಕ್ತೋತ್ಪಲಾಭ ಚರಣಾಮ್ ಭವತೀ ಪರೇಶಾಮ್ ||೧||

ಭಾವಾರ್ಥ:-ಶರದೃತುವಿನ ಚಂದ್ರನ ಪ್ರಕಾಶದಂತೆ ಬೆಳಗುತ್ತಲಿರುವ, ಉತ್ತಮವಾದ ಮಣಿರತ್ನಗಳಿಂದ ಶೋಭಿಸುತ್ತಿರುವ; ಮಕರಕುಂಡಲ, ಹಾರಾದಿ ಆಭರಣಗಳನ್ನು ಧರಿಸಿರುವ; ಶ್ರೇಷ್ಠವಾದ ಆಯುಧಗಳನ್ನು ಹಿಡಿದಿರುವ ಕಪ್ಪಗಿನ ಸಾವಿರ ಹಸ್ತಂಗಳನ್ನು ಹೊಂದಿರುವ; ಕೆಂದಾವರೆಯನ್ನು ಹೋಲುವ ಪಾದಗಳ ಒಡತಿಯೂ ಆಗಿರುವ ನಿನ್ನನ್ನು ಉಷ:ಕಾಲದಲ್ಲಿ ಸ್ಮರಿಸುತ್ತಿದ್ದೇನೆ.

ಪ್ರಾತರ್ನಮಾಮಿ ಮಹಿಷಾಸುರ ಚಂಡ ಮುಂಡ-
ಶುಂಭಾಸುರ ಪ್ರಮುಖ ದೈತ್ಯವಿನಾಶ ದಕ್ಷಾಮ್ |
ಬ್ರಹ್ಮೇಂದ್ರರುದ್ರಮುನಿ ಮೋಹನ ಶೀಲಲೀಲಾಂ
ಚಂಡೀಂ ಸಮಸ್ತ ಸುರಮೂರ್ತಿಮನೇಕ ರೂಪಾಮ್ ||೨||

ಭಾವಾರ್ಥ:-ಮಹಿಷಾಸುರ,ಚಂಡ,ಮುಂಡ,ಶುಂಭ-ನಿಶುಂಭಾದಿ ಅಸುರರನ್ನು ನಾಶಮಾಡುವುದರಲ್ಲಿ ಸಮರ್ಥಳಾದ; ಬ್ರಹ್ಮ-ರುದ್ರ-ಇಂದ್ರ-ಮುನಿಗಳನ್ನು ಕೂಡಾ ಮೋಹಾಪಾಶಕ್ಕೆ ಸಿಲುಕಿಸುವ ಲೀಲೆಯುಳ್ಳವಳಾಗಿರುವ; ಸಮಸ್ತ ದೇವತೆಗಳ ರೂಪವನ್ನು ತಾಳುವ ಮತ್ತು ಅದರಿಂದಲೇ ಅನೇಕಾನೇಕ ರೂಪಗಳನ್ನು ಹೊಂದಿರುವ ತಾಯಿ ಚಂಡಿಕಾದೇವಿಗೆ ನಾನು ಮುಂಜಾವದಲ್ಲಿ ನಮಸ್ಕರಿಸುತ್ತಿದ್ದೇನೆ.

ಪ್ರಾತರ್ಭಜಾಮಿ ಭಜತಾಮಭಿಲಾಷದಾತ್ರೀಂ
ಧಾತ್ರೀಂ ಸಮಸ್ತ ಜಗತಾಂ ದುರಿತಾಪಹಂತ್ರೀಮ್ |
ಸಂಸಾರಬಂಧನ ವಿಮೋಚನ ಹೇತುಭೂತಾಂ
ಮಾಯಾಂ ಪರಾಂ ಸಮಧಿಗಮ್ಯ ಪರಸ್ಯ ವಿಷ್ಣೋ: ||೩||

ಭಾವಾರ್ಥ:- ಭಜಿಸುವ ಭಕ್ತರಿಗೆ ಇಷ್ಟಾರ್ಥದಾಯಕಳಾಗಿರುವ; ಸಮಸ್ತ ಲೋಕಗಳ ಪೋಷಕಿಯಾಗಿ ದುರಿತಗಳನ್ನು ಪರಿಹರಿಸುವ; ಸಾಂಸಾರಿಕ ಬಂಧನಗಳನ್ನು ಕಳೆಯಲು ಮಾರ್ಗದರ್ಶಕಳಾಗಿರುವ; ಮಹಾವಿಷ್ಣುವಿನ ಉತ್ತಮವಾದ ಮಾಯಾರೂಪವೇ ನೀನು ಎಂಬುದಾಗಿ ನಂಬಿಕೊಳ್ಳುತ್ತಾ ಪ್ರಾತ:ಕಾಲದಲ್ಲಿ ಶ್ರೀದೇವಿಯನ್ನು ನಾನು ಭಜಿಸುತ್ತಿದ್ದೇನೆ.

ಶ್ಲೋಕತ್ರಯಮಿದಂ ದೇವ್ಯಾಶ್ಚಂಡಿಕಾಯಾ: ಪಠೇನ್ನರ: |
ಸರ್ವಾನ್ ಕಾಮನವಾಪ್ನೋತಿ ವಿಷ್ಣು ಲೋಕೇ ಮಹೀಯತೇ ||೪||

ಭಾವಾರ್ಥ:-ಚಂಡಿಕಾ ದೇವಿಯ ಈ ಮೂರು ಶ್ಲೋಕಗಳನ್ನು ಯಾವ ಮನುಷ್ಯನು ಪಠಿಸುತ್ತಾನೋ ಅವನು ಬಯಸಿದ್ದನ್ನೆಲ್ಲಾ ಪಡೆದು ವಿಷ್ಣು ಸಾಯುಜ್ಯವನ್ನು ಹೊಂದುವನು.
*********************************************************************************
              || ಇತಿ ಶ್ರೀದೇವೀ ಪ್ರಾತ: ಸ್ಮರಣಮ್ ||
|| ಈ ರೀತಿಯಾಗಿ ಶ್ರೀದೇವೀ ಪ್ರಾತ: ಸ್ಮರಣ ಶ್ಲೋಕಗಳ ಭಾವಾರ್ಥವಾಗಿದೆ. ||
*********************************************************************************

                                                 --೩--
 || ವೇದ ಮಾತಾ ಗಾಯತ್ರೀ ಧ್ಯಾನ ಶ್ಲೋಕಮ್ ||
  *********************************
ಮುಕ್ತಾ ವಿದ್ರುಮ ಹೇಮ ನೀಲ ಧವಲಚ್ಛಾಯೈರ್ಮುಖೈಸ್ತ್ರೀಕ್ಷಣೈ:
ಯುಕ್ತಾಮಿಂದುಕಲಾನಿಬದ್ಧರತ್ನಮಕುಟಾಮ್ ತತ್ವಾರ್ಥ ವರ್ಣಾತ್ಮಿಕಾಮ್ |
ಗಾಯತ್ರೀಂ ವರದಾಭಯಾಂಕುಶಕಶಾ: ಶುಭ್ರಂ ಕಪಾಲಂಗುಣಂ
ಶಂಖಂ ಚಕ್ರಮಥಾರವಿಂದಯುಗಲಂ ಹಸ್ತೈರ್ವಹಂತೀಂ ಭಜೇ  ||೧||

                                        [-ಶಾರದಾ ತಿಲಕ ]

ಭಾವಾರ್ಥ:-ಮುತ್ತಿನ ಹಾಗೆ ಸ್ವಚ್ಛ ಬಿಳಿಯಾದ; ಹವಳದ ಹಾಗೆ ಕೆಂಪಗಿನ; ಬಂಗಾರದ ಹಳದಿಯ ;  ನೀಲ ಹಾಗೂ ಹಾಲು ಬಿಳಿ ವರ್ಣದ ಪಂಚವದನದವಳಾಗಿ ಪ್ರತಿಯೊಂದು ಮೊಗದಲ್ಲಿ ಮೂರು ಕಣ್ಣುಗಳನ್ನು ಹೊಂದಿದವಳಾಗಿ ಚಂದ್ರಕಲೆಯ ಕಿರೀಟದಿಂದ ಶೋಭಿತಳಾಗಿ ;ಪಂಚ ತತ್ವಗಳ ಅರ್ಥವನ್ನು ಸಾರುತ್ತಾ ಇಪ್ಪತ್ತನಾಲ್ಕು ಅಕ್ಷರಗಳನ್ನು ಒಳಗೊಂಡು ಕೈಗಳಲ್ಲಿ ವರದ ಮತ್ತು ಅಭಯ ಮುದ್ರೆಗಳನ್ನು ಹಾಗೂ ಅಂಕುಶ, ಪಾಶ, ಚಕ್ರ, ಶುಭ್ರವಾದ ಕಪಾಲ, ಅಲ್ಲದೆ ಎರಡು ತಾವರೆಗಳನ್ನು ಧರಿಸಿರುವ ವೇದ ಮಾತಾ ಗಾಯತ್ರಿ ದೇವಿಯನ್ನು ನಾನು ಭಜಿಸುತ್ತೇನೆ.

ಶ್ರೀಮದ್ ವೇದಾಂತವಾಕ್ಯೈರ್ಮುನಿಗಣ ಕಥಿತೈ: ಸ್ತೂಯಮಾನಾಂ ಪ್ರಸನ್ನಾಂ
ಗಾಯತ್ರೀಂ ವೇದಗರ್ಭಾಂ ನಿಖಿಲಮನುಮಯೀಂ ಸರ್ವ ಯಂತ್ರಾಧಿವಾಸಾಮ್ |
ಸಂಧ್ಯಾರೂಪಾಂ ತ್ರಿನೇತ್ರಾಂ ಭಜಕ ಸುಖಕರೀಂ ಸರ್ವ ಸಂಪತ್ ಪ್ರದಾತ್ರೀಂ
ಬ್ರಹ್ಮಾದ್ಯೈರ್ವಂದ್ಯಮಾನಾಂ ಭವ ಭಯ ಶಮನೀಂ ಭಾರತೀ ತಾಂ ನಮಾಮಿ  ||೨||

ಭಾವಾರ್ಥ:-ಮಹಾನ್ ಋಷಿಮುನಿಗಳ ಸಮೂಹವು ಅರುಹಿದ ವೇದೋಪನಿಷತ್ತುಗಳಿಂದ ಸ್ತುತಿಸಲ್ಪಟ್ಟು ಪ್ರಸನ್ನಳಾದ ; ಜಪಿಸುವವರನ್ನು ಪೊರೆಯುವ; ವೇದಮಾತೆಯೆಂದು ಮಾನ್ಯಳಾಗಿರುವ; ಎಲ್ಲಾ ಯಂತ್ರಗಳಲ್ಲೂ ನೆಲೆಯಾಗಿರುವ; ಸಂಧ್ಯಾಧಿದೇವತೆಯ ಸ್ವರೂಪಿಯಾಗಿರುವ; ಮುಕ್ಕಣ್ಣಳಾದ; ಭಜಿಸುವವರಿಗೆ ಸುಖದಾತಳಾಗಿರುವ; ಸರ್ವ ಸಂಪತ್ ಪ್ರದಾಯಕಳಾಗಿರುವ; ಸಂಸಾರದ ಭೀತಿಯನ್ನು ನಾಶಗೊಳಿಸುವ; ಬ್ರಹ್ಮಾದಿ ದೇವ ದೇವತೆಗಳಿಂದ ನಮಸ್ಕರಿಸಲ್ಪಡುತ್ತಿರುವ ವಾಕ್ಕಿನ ಅಧಿದೇವತೆಯಾಗಿರುವ ಮಹಾಮಾತೆ ಗಾಯತ್ರೀ ದೇವಿಗೆ ನಾನು ನಮಸ್ಕರಿಸುತ್ತೇನೆ.

ಪಂಚವಕ್ತ್ರಾಂ ದಶಭುಜಾಂ ಸೂರ್ಯಕೋಟಿಸಮಪ್ರಭಾಮ್ |
ಸಾವಿತ್ರೀಂ ಬ್ರಹ್ಮವರದಾಂ ಚಂದ್ರಕೋಟಿ ಸುಶೀತಲಾಂ ||
ತ್ರಿನೇತ್ರಾಂ ಸ್ಮಿತವಕ್ತ್ರಾಂ ಚ ಮುಕ್ತಾಹಾರ ವಿರಾಜಿತಾಮ್ |
ವರಾಭಯಾಂಕುಶಕಶಾ ಹೇಮಪಾತ್ರಾಕ್ಷಮಾಲಿಕಾ: ||
ಶಂಖಚಕ್ರಾಬ್ಜಯುಗಲಂ ಕರಾಭ್ಯಾಂ ದಧತೀಂ ಪರಾಮ್ |
ಸಿತಪಂಕಜ ಸಂಸ್ಥಾ ಚ ಹಂಸಾರೂಢಾಂ ಸುಖಸ್ಮಿತಾಮ್ ||
ಧ್ಯಾತ್ವೈವಂ ಮಾನಸಾಂಭೋಜೇ ಗಾಯತ್ರೀಕವಚಂ ಪಠೇತ್ ||೪||

ಭಾವಾರ್ಥ:-ಐದು ಮುಖಗಳನ್ನು ಹೊಂದಿ; ಹತ್ತು ಬಾಹುಗಳಿಂದ ಕೂಡಿ; ಕೊಟಿ ಸೂರ್ಯರಿಗೆ ಸಮಾನವಾದ ಪ್ರಭೆಯುಳ್ಳವಳಾಗಿ; ಸವಿತ್ರು ದೇವತೆಗೆ ಸಂಬಂಧಿಸಿದ; ಜಪಿಸುವವರಿಗೆ ವೇದ ಜ್ಞಾನವನ್ನು ಕರುಣಿಸುವ; ಕೋಟಿ ಚಂದ್ರರಿಗೆ ಸಮಾನವಾಗಿ ಶೀತಳಾಗಿರುವ; ಮುಕ್ಕಣ್ಣಳಾಗಿ ನಗು ಮೊಗವನ್ನು ಹೊಂದಿರುವ; ಮುತ್ತಿನ ಹಾರದಿಂದ ಶೋಭಿಸುವ; ವರಾಭಯಮುದ್ರೆಗಳನ್ನು ತನ್ನ ಎರಡೂ ಕೈಗಳಿಂದಲೂ; ಅಂಕುಶ; ಚಾಟಿ; ಬಂಗಾರದ ಪಾತ್ರೆ; ಜಪಮಾಲೆ; ಶಂಖ ಚಕ್ರಗಳನ್ನು ಮತ್ತೆರಡು ಕೈಗಳಿಂದಲೂ; ಇನ್ನೆರಡು ಕೈಗಳಲ್ಲಿ ಎರಡು ತಾವರೆ ಪುಷ್ಪಗಳನ್ನೂ ಧರಿಸಿದವಳಾಗಿ ಶ್ರೇಷ್ಠವೆನಿಸಿರುವ ಬಿಳಿ ಕಮಲದಮೇಲೆ ಅಥವಾ ಹಂಸದ ಮೇಲೆ ಕುಳಿತು ಮುಗುಳ್ನಗುತ್ತಿರುವ ಕರುಣಾ ಸಾಗರಿಯಾದ ಆ ಗಾಯತ್ರೀ ಮಾತೆಯನ್ನು ಹೃತ್ಕಮಲದಲ್ಲಿ ಧ್ಯಾನಿಸಿ ತದನಂತರ ಗಾಯತ್ರೀ ಕವಚವನ್ನು ಪಠಿಸಬೇಕು.

ಶೇತವರ್ಣಾ ಸಮುದ್ದಿಷ್ಟಾ ಕೌಶೇಯವಸನಾ ತಥಾ |
ಶ್ವೇತೈರ್ವಿಲೇಪನೈ: ಪುಷ್ಪೈರಲಂಕಾರೈಶ್ಚ ಭೂಷಿತಾ ||
ಆದಿತ್ಯಮಂಡಲಾಂತಸ್ಥಾ ಬ್ರಹ್ಮಲೋಕ ಗತಾಸ್ಥವಾ |
ಅಕ್ಷಸೂತ್ರಧರಾ ದೇವೀ ಪದ್ಮಾಸನಗತಾ ಶುಭಾ ||೫||

                             [-ಬ್ರಾಹ್ಮಣ ಸರ್ವಸ್ವ ]

ಭಾವಾರ್ಥ:-ಗಾಯತ್ರಿದೇವಿಯು ಶ್ವೇತ ವರ್ಣದಳು; ಬಿಳಿಯ ರೇಶ್ಮೆ ವಸನವನ್ನುಟ್ಟು ಬಿಳಿವರ್ಣದ ಲೇಪನ ಮತ್ತು ಪುಷ್ಪ, ಹಾಗೂ ವಿವಿಧ ಅಲಂಕಾರಗಳಿಂದ ವಿಭೂಷಿತಳಾಗಿರುವಳು. ಕೈಯಲ್ಲಿ ಜಪಮಾಲೆಯನ್ನು ಹಿಡಿದು ಪದ್ಮಾಸನಸ್ಥಳಾಗಿ ಲೋಕಕ್ಕೆ ಹಿತವನ್ನು ಕರುಣಿಸುವ ಆಕೆಯನ್ನು ಸೂರ್ಯ ಮಂಡಲದೊಳಗೆ ಅಥವಾ ಬ್ರಹ್ಮ ಲೋಕದಲ್ಲಿ ಇರುವವಳೆಂದು ಧ್ಯಾನ ಮಾಡಬೇಕು.

ಮಂದಾರಾಹ್ವಯರೋಚನಾಂಜನ ಜಪಾಚ್ಛಾಭೈರಿಂದುಮದ್-
ರತ್ನೋದ್ಯನ್ಮಕುಟಾಂಗ ಸಂತತಚತುರ್ವಿಂಶಾರ್ಣಚಿತ್ರಾ ತನು: |
ಅಬ್ಜೇ ಚಾರಿ ಗದಾಹ್ವಯೌ ಗುಣಕಪಾಲಾಖ್ಯೌ ಚ ಪಾಶಾಂಕುಶೇ-
ಷ್ಟಾಭೀರ್ತಿರ್ದಧತೀ ಭವೇದ್ ಭವದಭೀಷ್ಟೋದ್ಭಾವಿನೀ ತಾರಿಣೀ ||೬||

                                 [-ಪ್ರಪಂಚ ಸಾರ]

ಭಾವಾರ್ಥ:- ಮಂದಾರಪುಷ್ಪದ ತೆರನಾದ ಬಿಳಿ; ಗೋರೋಚನದಂತೆ ಹಳದಿ; ಅಂಜನೋಪಾದಿಯ ಕಪ್ಪು; ದಾಸವಾಳದ ರೀತಿಯ ಕೆಂಪು ಹಾಗೂ ಸ್ಪಟಿಕದಷ್ಟು ಸ್ವಚ್ಛ; ಈ ಬಗೆಯ ಐದು ಮೊಗಗಳಿಂದಲೂ; ಚಂದ್ರಕಲಾಶೋಭಿತೆಯಾಗಿ ರತ್ನಮಯ ಕಿರೀಟಾಂಕೃತಳಾಗಿ ಇಪ್ಪತ್ತನಾಲ್ಕು ಅಕ್ಷರಗಳನ್ನು ತನ್ನ ಅವಯವಗಳಲ್ಲಿ ಅಳವಡಿಸಿಕೊಂಡಿರುವ ವಿಚಿತ್ರವಾದ ದೇಹ; ತನ್ನ ಎರಡು ಕೈಗಳಲ್ಲಿ ಎರಡು ಕಮಲ ಪುಷ್ಪಗಳನ್ನು ಹಿಡಿದು; ಮತ್ತೆರಡು ಹಸ್ತಗಳಲ್ಲಿ ಚಾಟಿ,ಚಕ್ರ,ಗದೆ,ಪಾಶ,ಕಪಾಲ,ಅಂಕುಶಗಳನ್ನೂ; ಇನ್ನೆರಡು ಕೈಗಳಲ್ಲಿ ಅಭಯ ಹಾಗೂ ವರದ ಮುದ್ರೆಗಳನ್ನು ಧರಿಸಿದ ಗಾಯತ್ರೀ ದೇವಿಯು ಸರ್ವಾಭೀಷ್ಟಗಳನ್ನು ಕರುಣಿಸಿ ಸಂಸಾರ ಚಕ್ರದಿಂದೆಮ್ಮ ಪಾರುಮಾಡಲಿ.

  | ಇತಿ  ವೇದ ಮಾತಾ ಗಾಯತ್ರೀ ಧ್ಯಾನ ಹ್ಲೋಕಮ್ ||

|| ಈ ತೆರನಾಗಿ ವೇದಮಾತಾ ಗಾಯತ್ರೀ ದೇವಿಯ ಧ್ಯಾನ ಶ್ಲೋಕದ ಭಾವಾರ್ಥವು ||    
*********************************************************************************
                  - ೪ -
     || ಜಗದ್ದಾತ್ರೀ ಸ್ತೋತ್ರಮ್ ||
  +++++++++++++++++

ಆಧಾರಭೂತೇ ಚಾಧೇಯೇ ಧೃತಿರೂಪೇ ಧುರಂಧರೇ |
ಧ್ರುವೇ ಧ್ರುವಪದೇ ಧೀರೇ ಜಗದ್ಧಾತ್ರೀ ನಮೋಸ್ಸ್ತುತೇ  ||೧||

ಭಾವಾರ್ಥ:- ಜಗತ್ತಿಗೆಲ್ಲಾ ಆಧಾರಭೂತಳಾಗಿರುವವಳು ನೀನು.ಆಧೇಯಳೂ ನೀನೇ ಆಗಿರುವೆ.ಧಾರಣಾ ಶಕ್ತಿ ಸ್ವರೂಪಳೂ ಸರ್ವೋತ್ತಮಳೂ ಶಾಶ್ವತಳೂ ನೀನೇ ಆಗಿರುವೆ. ಶಾಶ್ವತ ಸ್ಥಾನಳೂ ಅಚಲ ಸ್ವಭಾವವನ್ನು ಹೊಂದಿರುವವಳೂ ಧೈರ್ಯವತಿಯೂ ಆಗಿರುವ ಹೇ! ಜಗದ್ಧಾತ್ರಿಯೇ ನಿನಗಿದೋ ನನ್ನ ನಮಸ್ಕಾರಗಳು.

ಶವಾಕಾರೇ ಶಕ್ತಿರೂಪೇ ಶಕ್ತಿಸ್ಥೇ ಶಕ್ತಿವಿಗ್ರಹೇ |
ಶಾಕ್ತಾಚಾರ ಪ್ರಿಯೇ ದೇವಿ ಜಗದ್ಧಾತ್ರೀ ನಮೋಸ್ಸ್ತುತೇ  ||೨||

ಭಾವಾರ್ಥ:-ಹೇ ದೇವೀ!ನೀನು ನಿರ್ಗುಣ ಶಿವ ಸ್ವರೂಪಳೂ,ಶವಾಕಾರಳೂ, ಚೈತನ್ಯಮಯಿಯೂ ಆಗಿ ಸಮಸ್ತ ಶಕ್ತಿಗಳ ಚೈತನ್ಯದಾಯಕಳೂ,ಸರ್ವ ಶಕ್ತಿಗಳಲ್ಲಿ ನೆಲೆಯಾಗಿರುವ ವಿಗ್ರಹಸ್ವರೂಪದವಳೂ,ಶಾಕ್ತೇಯ ಸಂಪ್ರದಾಯದ ಆಚಾರದಿಂದ ಸಂತಸ ಹೊಂದುವವಳೂ ಆಗಿರುವೆ.  ಹೇ! ಜಗದ್ಧಾತ್ರಿಯೇ ನಿನಗಿದೋ ನನ್ನ ನಮಸ್ಕಾರಗಳು.

ಜಯದೇ ಜಗದಾನಂದೇ ಜಗದೇಕ ಪ್ರಪೂಜಿತೇ |
ಜಯ ಸರ್ವಗತೇ ದೇವಿ ಜಗದ್ಧಾತ್ರೀ ನಮೋಸ್ಸ್ತುತೇ  ||೩||

ಭಾವಾರ್ಥ:-ಹೇ!ದುರ್ಗಾಮಾತೇಯೇ! ನೀನು ಜಯ ಪ್ರದಾಯಕಳು. ಜಗದ ಆನಂದ ಸ್ವರೂಪಳು.ಜಗತ್ತಿನಲ್ಲಿ ನೀನು ಮಾತ್ರಾ ಸರಿಯಾದ ಕ್ರಮದಲ್ಲಿ ಅರ್ಚಿಸಲ್ಪಡುವವಳು.ಸಮಸ್ತ ಬ್ರಹ್ಮಾಂಡವನ್ನು ವ್ಯಾಪಿಸಿಕೊಂಡಿರುವ ದುರ್ಗಾ ದೇವಿಯೇ! ನಿನಗೆ ಜಯವಾಗಲಿ. ಜಗತ್ತನ್ನು ಪೊರೆಯುವ ಹೇ! ಜಗದ್ಧಾತ್ರಿಯೇ ನಿನಗಿದೋ ನನ್ನ ನಮಸ್ಕಾರಗಳು.

ಪರಮಾಣು ಸ್ವರೂಪೇ ಚ ದ್ವ್ಯಣುಕಾದಿ ಸ್ವರೂಪಿಣಿ |
ಸೂಕ್ಷಾತಿಸೂಕ್ಷ್ಮ ರೂಪೇ ಚ ಜಗದ್ಧಾತ್ರೀ ನಮೋಸ್ಸ್ತುತೇ  ||೪||

ಭಾವಾರ್ಥ:-ಪರಮಾಣು ಹಾಗೂ ಅವುಗಳ ಬೆರೆಯುವಿಕೆಯಿಂದಾದ ಅತಿಸೂಕ್ಷಾಣುಗಳ ಸ್ವರೂಪಿಣಿಯು ನೀನಾಗಿರುವೆ.ಸೂಕ್ಷ್ಮಾತಿ ಸೂಕ್ಷ್ಮಕ್ಕಿಂತಲೂ ಅತಿ ಸೂಕ್ಷ್ಮಳಾಗಿರುವವಳು ನೀನು. ತಾಯೀ; ಹೇ! ಜಗದ್ಧಾತ್ರಿಯೇ ನಿನಗಿದೋ ನನ್ನ ನಮಸ್ಕಾರಗಳು.

ಸೂಕ್ಷ್ಮಾತಿ ಸೂಕ್ಷ್ಮ ರೂಪೇಚ ಪ್ರಾಣಾಪಾನಾದಿರೂಪಿಣಿ |
ಭಾವಾಭಾವ ಸ್ವರೂಪೇ ಚ ಜಗದ್ಧಾತ್ರೀ ನಮೋಸ್ಸ್ತುತೇ  ||೫||

ಭಾವಾರ್ಥ:-ಸೂಕ್ಷ್ಮಾತಿ ಸೂಕ್ಷ್ಮ ರೂಪಳಾಗಿ ಜಗತ್ತಿನ ಸಮಸ್ತ ಜೀವರಾಶಿಗಳ ಪ್ರಾಣ ಹಾಗೂ ಅಪಾನಾದಿ ವಾಯು ಸ್ವರೂಪಳು ನೀನೇ ಆಗಿರುವೆ.ಸಮಸ್ತ ವಸ್ತುಗಳ ಇರುವಿಕೆ ಮತ್ತು ಇಲ್ಲದಿರುವಿಕೆಯ ಸ್ವರೂಪಳೂ ನೀನಾಗಿರುವೆ.ಅಂತಹಾ ವಿಶ್ವಮಾತೆಯೇ!ಹೇ! ಜಗದ್ಧಾತ್ರಿಯೇ ನಿನಗಿದೋ ನನ್ನ ನಮಸ್ಕಾರಗಳು.

ಕಾಲಾದಿರೂಪೇ ಕಾಲೇಶೇ ಕಾಲಾಕಾಲವಿಭೇಧಿನಿ |
ಸರ್ವ ಸ್ವರೂಪೇ ಸರ್ವಜ್ಞೇ ಜಗದ್ಧಾತ್ರೀ ನಮೋಸ್ಸ್ತುತೇ  ||೬||

ಭಾವಾರ್ಥ:-ತಾಯೇ! ನೀನು ಕಾಲವೇ ಮೊದಲಾದ ಸೃಷ್ಟಿಯ ದ್ರವ್ಯ ಸ್ವರೂಪಳು.ಹಾಗೆಯೆ ಕಾಲಕ್ಕೆ ಈಶ್ವರೀ ಶಕ್ತಿಯಾದ ಒಡತಿ. ಕಾಲ ಮತ್ತು ಕಾಲಾತೀತವೆನ್ನುವ ಭೇಧ ಸ್ವರೂಪಕ್ಕೆ ಕಾರಣಳು. ಸಮಸ್ತವನ್ನೂ ಧರಿಸಿಕೊಂಡಿರುವ ಆದಿಶಕ್ತಿಯೇ! ಹೇ! ಜಗದ್ಧಾತ್ರಿಯೇ ನಿನಗಿದೋ ನನ್ನ ನಮಸ್ಕಾರಗಳು.

ಮಹಾವಿಘ್ನೇ ಮಹೋತ್ಸಾಹೇ ಮಹಾಮಾಯೇ ವರಪ್ರದೇ |
ಪ್ರಪಂಚಸಾರೇ ಸಾಧ್ವೀಶೇ ಜಗದ್ಧಾತ್ರೀ ನಮೋಸ್ಸ್ತುತೇ ||೭||

ಭಾವಾರ್ಥ:-ಮಹಾ ವಿಘ್ನ ಸ್ವರೂಪಳೂ,ಸಮಸ್ತ ಜೀವಿಗಳ ಉತ್ಸಾಹಕ್ಕೆ ಕಾರಣೀಭೂತಳೂ, ಮಹಾಮಾಯೆಯೂ ,ವರಪ್ರದಾತಳೂ, ಜಗತ್ತಿನ ಸಾರಾಸಾರ ಸ್ವರೂಪಳೂ,ಸಾಧುಜನರೊಡತಿಯೂ ಆಗಿರುವ ಲೋಕಮಾತೆಯೇ! ಹೇ! ಜಗದ್ಧಾತ್ರಿಯೇ ನಿನಗಿದೋ ನನ್ನ ನಮಸ್ಕಾರಗಳು.

ಅಗಮ್ಯೇ ಜಗತಾಮಾದ್ಯೇ ಮಾಹೇಶ್ವರೀ ವರಾಂಗನೇ |
ಅಶೇಷರೂಪೇ ರೂಪಸ್ಥೇ ಜಗದ್ಧಾತ್ರೀ ನಮೋಸ್ಸ್ತುತೇ  ||೮||

ಭಾವಾರ್ಥ:-ಅಮ್ಮಾ! ನೀನು ಯಾರಿಂದಲೂ ತಲಪಲು ಅಸಾಧ್ಯವಾಗಿರುವವಳು.ಹಾಗೆಯೇ ತಿಳಿದುಕೊಳ್ಳಲೂ ಅಸಾಧ್ಯವಾಗಿರುವವಳು.ವಿಶ್ವಕ್ಕೆ ಆದಿಕಾರಣಳು ನೀನು.ಮಹೇಶ್ವರನ ಮನದನ್ನೆಯಾಗಿ ಅತ್ಯಂತ ಶ್ರೇಷ್ಠಳಾದವಳು ನೀನು.ಅಖಿಲ ಸೌಂದರ್ಯ ಸ್ವರೂಪಳಾದ ಸಮಸ್ತ ರೂಪವನ್ನು ಧರಿಸಿರುವ ಜಗದಾದಿ ಮಾತೆ ನೀನು. ಹೇ! ಜಗದ್ಧಾತ್ರಿಯೇ ನಿನಗಿದೋ ನನ್ನ ನಮಸ್ಕಾರಗಳು.

ದ್ವಿಸಪ್ತ ಕೋಟಿಮಂತ್ರಾಣಾಂ ಶಕ್ತಿರೂಪೇ ಸನಾತನಿ |
ಸರ್ವ ಶಕ್ತಿ ಸ್ವರೂಪೇ ಚ ಜಗದ್ಧಾತ್ರೀ ನಮೋಸ್ಸ್ತುತೇ  ||೯||

ಭಾವಾರ್ಥ:-ಹದಿನಾಲ್ಕು ಕೋಟಿ ಮಂತ್ರಗಳ ಶಕ್ತಿ ಸ್ವರೂಪಿಣಿ ನೀನು. ಸನಾತಳೂ ನೀನೇ. ಸರ್ವ ಶಕ್ತಿಗಳ ರೂಪಿಣಿಯೂ ನೀನೇ ಆಗಿರುವೆ. ಹೇ! ಜಗದ್ಧಾತ್ರಿಯೇ ನಿನಗಿದೋ ನನ್ನ ನಮಸ್ಕಾರಗಳು.

ತೀರ್ಥ ಯಜ್ಞ ತಪೋದಾನ ಯೋಗಸಾರೇ ಜಗನ್ಮಯೀ |
ತ್ವಮೇವ ಸರ್ವಂ ಸರ್ವಸ್ಥೇ ಜಗದ್ಧಾತ್ರೀ ನಮೋಸ್ಸ್ತುತೇ  ||೧೦||

ಭಾವಾರ್ಥ:-ತೀರ್ಥ,ಯಜ್ಞ,ತಪಸ್ಸು,ದಾನ,ಯೋಗ ಇವುಗಳ ಸಾರವೇ ನೀನಾಗಿರುವೆ.ನೀನು ಜಗನ್ಮಯಿ, ಎಲ್ಲವೂ ನೀನೇ ಆಗಿರುವೆ; ಎಲ್ಲದರಲ್ಲೂ ನೀನೇ ಇರುವೆ. ಅಂತಹಾ ಲೋಕಮಾತೆಯೇ!  ಹೇ! ಜಗದ್ಧಾತ್ರಿಯೇ ನಿನಗಿದೋ ನನ್ನ ನಮಸ್ಕಾರಗಳು.

ದಯಾರೂಪೇ ದಯಾ ದೃಷ್ಟೇ ದಯಾರ್ದ್ರೇ ದು:ಖಮೋಚನೀ |
ಸರ್ವಾಪತ್ತಾರಿಕೇ ದುರ್ಗೇ ಜಗದ್ಧಾತ್ರೀ ನಮೋಸ್ಸ್ತುತೇ   ||೧೧||

ಭಾವಾರ್ಥ:-ಹೇ! ದುರ್ಗಾ ಮಾತೆಯೇ; ನೀನು ದಯಾಸ್ವರೂಪಳು. ದಯಾ ದೃಷ್ಟಿಯನ್ನು ಹೊಂದಿರುವವಳು. ನೀನು ದಯಾರ್ದ್ರ ಹೃದಯವುಳ್ಳವಳು. ದು:ಖವನ್ನು ಪರಿಹರಿಸುವ ಶಕ್ತಿದಾಯಿನಿಯು. ಸಮಸ್ತ ಆಪತ್ತು-ವಿಪತ್ತುಗಳಿಂದ ಸಂರಕ್ಷಿಸುವ ತಾಯಿ. ಎಲ್ಲರ ದುರ್ಗತಿಯನ್ನು ನಾಶ ಮಾಡುವ ಅಮ್ಮಾ! ಹೇ! ಜಗದ್ಧಾತ್ರಿಯೇ ನಿನಗಿದೋ ನನ್ನ ನಮಸ್ಕಾರಗಳು.

ಅಗಮ್ಯಧಾಮಧಾಮಸ್ಥೇ ಮಹಾಯೋಗೀಶಹೃತ್ಪುರೇ |
ಅಮೇಯ ಭಾವಕೂಟಸ್ಥೇ ಜಗದ್ಧಾತ್ರೀ ನಮೋಸ್ಸ್ತುತೇ  ||೧೨||

ಭಾವಾರ್ಥ:-ತಾಯೇ! ನೀನು ಯಾರೂ ತಲಪಲು ಅಸಾಧ್ಯವಾಗಿರುವಂತಹಾ  ಪ್ರಕಾಶಮಾನರೂಪದ  ನಿಲಯದಲ್ಲಿ ನೆಲಸಿರುವೆ.ಅದೇ ತೆರನಾಗಿ ಶ್ರೇಷ್ಠರಾಗಿರುವ ಮಹಾಮುನಿಗಳ ಹೃದಯವೆಂಬ ಪಟ್ಟಣದಲ್ಲಿ ನೆಲಸಿರುವೆ.ನೀನು ಅಳತೆಗೆ ಸಿಲುಕದ ಭಾವ ರಾಶಿಗಳಲ್ಲಿ ನೆಲೆಯಾಗಿರುವವಳು.ಹೀಗಿರುವ ಆದಿಶಕ್ತಿ ಮಹಾಮಾತೆಯೇ!ಹೇ! ಜಗದ್ಧಾತ್ರಿಯೇ ನಿನಗಿದೋ ನನ್ನ ನಮಸ್ಕಾರಗಳು.
++++++++++++++++++++++++++++++++++++++++++++++++++++++++++++++++++++++++
 ||ಇತಿ ಶ್ರೀ ಜಗದ್ಧಾತ್ರೀ ಸ್ತೋತ್ರಮ್ || || ಇದು ಶ್ರೀಜಗದ್ಧಾತ್ರೀ ಸ್ತೋತ್ರದ ಭಾವಾರ್ಥ ||
++++++++++++++++++++++++++++++++++++++++++++++++++++++++++++++++++++++++
                   - ೫ -
  || ಶ್ರೀರಾಜ ರಾಜೇಶ್ವರೀ ಸ್ತೋತ್ರಮ್ ||
 ======================

ಕಲ್ಯಾಣಾಯತ ಪೂರ್ಣಚಂದ್ರವದನಾ ಪ್ರಾಣೇಶ್ವರಾನಂದಿನೀ
ಪೂರ್ಣಾಪೂರ್ಣತರಾ ಪರೇಶಮಹಿಷೀ ಪೂರ್ಣಾಮೃತಾಸ್ವಾದಿನೀ |
ಸಂಪೂರ್ಣಾ ಪರಮೋತ್ತಮಾಮೃತಕಲಾ ವಿದ್ಯಾವತೀ ಭಾರತೀ
ಶ್ರೀ ಚಕ್ರಪ್ರಿಯ ಬಿಂದುತರ್ಪಣಪರಾ ಶ್ರೀರಾಜರಾಜೇಶ್ವರೀ  ||೧||

ಭಾವಾರ್ಥ:-ಮಂಗಲಮಯವಾದ ಪೌರ್ಣಿಮೆಯ ಚಂದಿರನಂತೆ ಆಕರ್ಶಕವಾದ ಮೊಗವನ್ನು ಹೊಂದಿದವಳಾಗಿರುವ; ಪತಿಯಾಗಿರುವ ಈಶ್ವರಗೆ ಸಂತಸವನ್ನು ಉಂಟುಮಾಡುವ; ಪರಿಪೂರ್ಣಾಳಾದ; ಪರಮೇಶ್ವರನ ಪಟ್ಟದ ಮಹಿಷಿಯಾಗಿ ಅಮೃತರಸವನ್ನು ಪೂರ್ಣವಾಗಿ ಸವಿಯುತ್ತಿರುವ; ಹದಿನಾರು ಕಲಾ ಶಕ್ತಿಗಳನ್ನು ಹೊಂದಿರುವ; ಶ್ರೇಷ್ಠವಾದ ಅಮೃತಾತ್ಮಕಲಾ ಸ್ವರೂಪಿಯಾಗಿರುವ ವಿದ್ಯಾವತಿಯೂ,ವಿದ್ವಾಂಸಳೂ ಆಗಿ ಶ್ರೀ ಚಕ್ರದ ಮಧ್ಯಬಿಂದುವಿನಲ್ಲಿ ತೃಪ್ತಿಯಿಂದ ಶ್ರೀ ರಾಜರಾಜೇಶ್ವರಿಯು ಸಂಚರಿಸುತ್ತಿರುವಳು

ಏಕಾರಾದಿ ಸಮಸ್ತವರ್ಣ ವಿವಿಧಾರೈಕ ಚಿದ್ರೂಪಿಣೀ
ಚೈತನ್ಯಾತ್ಮಕ ಚಕ್ರರಾಜ ನಿಲಯಾ ಚಕ್ರಾಂತ ಸಂಚಾರಿಣೀ |
ಭಾವಾ ಭಾವ ವಿಭಾವಿನೀ ಭವಪರಾ ಸದ್ಭಕ್ತಿ ಚಿಂತಾಮಣೀ
ಶ್ರೀ ಚಕ್ರಪ್ರಿಯ ಬಿಂದುತರ್ಪಣಪರಾ ಶ್ರೀರಾಜರಾಜೇಶ್ವರೀ  ||೨||

ಭಾವಾರ್ಥ:-ಏ ಕಾರದಿಂದ ಆರಂಭವಾದ ಎಲ್ಲ ಅಕ್ಷರಗಳ ವಿವಿಧ ಸ್ವರೂಪವನ್ನು ಹೊದಿದ್ದರೂ ಒಂದೇ ಜ್ಞಾನ ಸ್ವರೂಪಳಾದ; ಶ್ರೀಚಕ್ರದಲ್ಲಿ ಚೈತನ್ಯವನ್ನೊಳಗೊಂಡು ನೆಲೆಯಾಗಿರುವುದಲ್ಲದೆ ಶ್ರೀಚಕ್ರದೊಳಗೆ ಅಂತರ್ಮಯಿಯಾಗಿ ವಿಹರಿಸುವ, ಸೃಷ್ಟಿ ಹಾಗೂ ಲಯ ಕರ್ತೃವಾಗಿರುವ, ಶಿವನ್ನಲ್ಲಿ ತಲ್ಲೀನಳಾಗಿರುವ ಶ್ರೇಷ್ಠತಮ ಭಕ್ತಿಗೆ ಚಿಂತಾಮಣಿಯಂತೆ ಇಷ್ಟಾರ್ಥದಾಯಕಳಾಗಿರುವ; ಶ್ರೀಚಕ್ರದಲ್ಲಿ ಇಷ್ಟವಾದ ಬಿಂದುವಿನಲ್ಲಿ ಸಂತೃಪ್ತಿಯಿಂದ ರಾಜರಾಜೇಶ್ವರಿಯು ಸಂಚರಿಸುತ್ತಿರುತ್ತಾಳೆ.

ಈಹಾಧಿಕ್ ಪರಯೋಗಿವೃಂದ ವಿದಿತಾ ಸ್ವಾನಂದಭೂತಾಪರಾ
ಪಶ್ಯಂತೀ ತನುಮಧ್ಯಮಾ ವಿಲಸಿನೀ ಶ್ರೀ ವೈಖರೀ ರೂಪಿಣೀ |
ಆತ್ಮಾನಾತ್ಮವಿಚಾರಿಣೀ ವಿವರಗಾ ವಿದ್ಯಾ ತ್ರಿಬೀಜಾತ್ಮಿಕಾ
ಶ್ರೀ ಚಕ್ರಪ್ರಿಯ ಬಿಂದುತರ್ಪಣಪರಾ ಶ್ರೀರಾಜರಾಜೇಶ್ವರೀ  ||೩||

ಭಾವಾರ್ಥ:-ಸಂಸಾರದ ಆಶೆಯಿಂದ ವಿರಹಿತಳಾಗಿ ಶ್ರೇಷ್ಠ ಮುನಿವೃಂದವರಿಂದ ಅರಿತುಕೊಳ್ಳಲು ಸಾಧ್ಯವಾಗುವಂತಹಾ ಆತ್ಮಾನಂದರೂಪೆಯಾಗಿರುವ,ಯಾವುದೇ ಮಾತು ಆರಂಭವಾಗುವ ಮುನ್ನ ನಾಭಿಯಿಂದ ಆರಂಭವಾಗುವ "ಪರಾ" ಮತ್ತು ಹೃದಯದ ಸಮೀಪವರ್ತಿಯಾದಾಗ ಪಶ್ಯಂತೀ "ಕಂಠದ ಸಮೀಪ ತಲುಪಿದಾಗ "ಮಧ್ಯಮಾ " ಎಂಬ ಅವ್ಯಕ್ತ ವಾಕ್ಕಿನ ಮೂರು ರೀತಿಯ ರೂಪಗಳಲ್ಲಿ ಸಂಚರಿಸುವ ಅದೇ ರೀತಿ ಗಂಟಲಿನಿಂದ ಹೊರ ಹೊಮ್ಮುವ "ವೈಖರೀ"" ಎಂಬ ಸ್ವಷ್ಟವಾದ ಮಾತಿನರೂಪದಲ್ಲಿ ನೆಲೆಯಾಗಿ ಆತ್ಮ ಹಾಗೂ ಆತ್ಮವಲ್ಲದ ವಸ್ತುಗಳನ್ನು ವಿಮರ್ಶಿಸುವ ಬುದ್ಧಿಮತ್ತೆಯ ವಿದ್ಯಾರೂಪಿಣಿಯಾದ ತ್ರಿಗುಣಾತ್ಮ ಬೀಜರೂಪೆಯಾಗಿರುವ ಶ್ರೀಚಕ್ರದಲ್ಲಿ ಇಷ್ಟವಾದ ಬಿಂದುವಿನಲ್ಲಿ ಸಂತೃಪ್ತಿಯಿಂದ ರಾಜರಾಜೇಶ್ವರಿಯು ಸಂಚರಿಸುತ್ತಿರುತ್ತಾಳೆ.

ಲಕ್ಷ್ಯಾಲಕ್ಷ್ಯ ನಿರೀಕ್ಷಣಾ ನಿರುಪಮಾ ರುದ್ರಾಕ್ಷ ಮಾಲಾಧರಾ
ತ್ರ್ಯಕ್ಷಾರ್ಧಾಕೃತಿ ದಕ್ಷವಂಶಕಲಿಕಾ ದೀರ್ಘಾಕ್ಷಿ ದೀರ್ಘಸ್ವರಾ |
ಭದ್ರಾ ಭದ್ರವರಪ್ರದಾ ಭಗವತೀ ಭದ್ರೇಶ್ವರೀ ಮುದ್ರಿಣೀ
ಶ್ರೀ ಚಕ್ರಪ್ರಿಯ ಬಿಂದುತರ್ಪಣಪರಾ ಶ್ರೀರಾಜರಾಜೇಶ್ವರೀ  ||೪||

ಭಾವಾರ್ಥ:-ಲಕ್ಷಿಸಬೇಕಾದ ಹಾಗೂ ಅಲಕ್ಷಿಸಬೇಕಾದ ವಸ್ತುಗಳ ಬಗ್ಗೆ ಅರಿತು ನೋಡುವ ಮತ್ತು ತನ್ನನ್ನು ಹೋಲುವ ಇನ್ನೊಂದು ವಸ್ತುವೇ ಇಲ್ಲದ, ರುದ್ರಾಕ್ಷಿ ಮಾಲೆಯನ್ನು ಧರಿಸಿರುವ, ಮುಕ್ಕಣ್ಣನಿಗೆ ಅರ್ಧ ಶರೀರಿಯಾಗಿ ದಕ್ಷವಂಶದ ಕುಡಿಯಾಗಿರುವ, ವಿಶಾಲವಾದ ನಯನಗಳನ್ನು ಹೊಂದಿರುವ, ಧೀರ್ಘವಾದ ಸ್ವರದ ಆಲಾಪನೆಯಲ್ಲಿನಿರತಳಾಗಿರುವ,ಮಂಗಲಮಯವಾಗಿರುವ ಶುಭವರದಾಯಿಕೆಯಾಗಿರುವ, ಐಶ್ವರ್ಯ,ಧೈರ್ಯ,ಯಶಸ್ಸು,ಸಂಪತ್ತು,ಜ್ಞಾನ,ಮತ್ತು ವೈರಾಗ್ಯಗಳೆಂಬ ಆರು ಸಂಪತ್ತುಗಳನ್ನು ಹೊಂದಿದವಳಾಗಿ ಮಂಗಲಮಯವಸ್ತುಗಳಿಗೆಲ್ಲಾ ಒಡತಿಯಾಗಿ ಜ್ಞಾನಮುದ್ರೆಯನ್ನು ಹಿಡಿದುಕೊಂಡು ಬ್ರಹ್ಮಾಂಡದ ಚಕ್ರವರ್ತಿಯಾಗಿ ಶ್ರೀಚಕ್ರದಲ್ಲಿ ಇಷ್ಟವಾದ ಬಿಂದುವಿನಲ್ಲಿ ಸಂತೃಪ್ತಿಯಿಂದ ರಾಜರಾಜೇಶ್ವರಿಯು ಸಂಚರಿಸುತ್ತಿರುತ್ತಾಳೆ.

ಹ್ರೀಂ ಬೀಜಾಗತ ನಾದಬಿಂದು ಭರಿತಾ ಓಂಕಾರ ನಾದಾತ್ಮಿಕಾ
ಬ್ರಹ್ಮಾನಂದ ಘನೋದರೀ ಗುಣವತೀ  ಜ್ಞಾನೇಶ್ವರೀ ಜ್ಞಾನದಾ |
ಇಚ್ಛಾಜ್ಞಾನಕೃತೀ ಮಹೀಂಗತವತೀ ಗಂಧರ್ವ ಸಂಸೇವಿತಾ
ಶ್ರೀ ಚಕ್ರಪ್ರಿಯ ಬಿಂದುತರ್ಪಣಪರಾ ಶ್ರೀರಾಜರಾಜೇಶ್ವರೀ  ||೫||

ಭಾವಾರ್ಥ:-"ಹ್ರೀಂ" ಎಂಬ ಬೀಜಾಕ್ಷರದಿಂದ ಮೂಡುವ ನಾದಬಿಂದುವಿನಲ್ಲಿ ವ್ಯಾಪಿಸಿರುವ ಓಂಕಾರದ ನಾದವನ್ನು ಒಳಗೊಂಡು ಶ್ರೇಷ್ಠವಾಗಿರುವ ಬ್ರಹ್ಮಾನಂದವನ್ನು ತನ್ನೊಡಲಲ್ಲಿ ಇರಿಸಿಕೊಂಡು ಸದ್ಗುಣಭರಿತಳಾಗಿ ಸಕಲ ಜ್ಞಾನಗಳ ಒಡತಿಯಾಗಿ ಜ್ಞಾನವನ್ನು ಕರುಣಿಸುವ;ಇಚ್ಛಾಶಕ್ತಿ;ಜ್ಞಾನಶಕ್ತಿ;ಕ್ರಿಯಾಶಕ್ತಿಗಳ ಸ್ವರೂಪಳಾಗಿರುವ ಭುವಿಗಿಳಿದು ಬಂದು ಗಂಧರ್ವಾದಿಗಳಿಂದ ಸೇವೆಯನ್ನು ಸ್ವೀಕರಿಸುತ್ತಾ  ಶ್ರೀಚಕ್ರದಲ್ಲಿ ಇಷ್ಟವಾದ ಬಿಂದುವಿನಲ್ಲಿ ಸಂತೃಪ್ತಿಯಿಂದ ರಾಜರಾಜೇಶ್ವರಿಯು ಸಂಚರಿಸುತ್ತಿರುತ್ತಾಳೆ.

ಹರ್ಷೋನ್ಮತ್ತ ಸುವರ್ಣ ಪಾತ್ರ ಭರಿತಾ ಪೀನೋನ್ನತಾ ಘೂರ್ಣಿತಾ
ಹುಂಕಾರಪ್ರಿಯ ಶಬ್ದಜಾಲ ನಿರತಾ ಸಾರಸ್ವತೋಲ್ಲಾಸಿನೀ |
ಸಾರಾಸಾರ ವಿಚಾರ ಚಾರುಚತುರಾ ವರ್ಣಾಶ್ರಮಾಕಾರಿಣೀ
ಶ್ರೀ ಚಕ್ರಪ್ರಿಯ ಬಿಂದುತರ್ಪಣಪರಾ ಶ್ರೀರಾಜರಾಜೇಶ್ವರೀ  ||೬||

ಭಾವಾರ್ಥ:-ಉನ್ಮಾದಭರಿತ ಆತ್ಮಾನಂದದ ಸಾರವನ್ನು ಬಂಗಾರದ ಪಾತ್ರೆಯಲ್ಲಿ ತುಂಬಿಸಿ ತನ್ನ ಕೈಯಲ್ಲಿ ಹಿಡಿದುಕೊಂಡು ಎದೆಯುಬ್ಬಿಸಿ ಸಂಸಾರದ ಚಕ್ರವನ್ನು ತಿರುಗಿಸುತ್ತಾ ತನಗೆ ಪ್ರಿಯವಾದ ಹುಂಕಾರ ಶಬ್ದದ ಅಲೆಗಳ ಸಮೂಹದಲ್ಲಿ ತನ್ನನ್ನು ತೊಡಗಿಸಿಕೊಂಡು ವೇದಗಳಲ್ಲಿ ವಿಹರಿಸುತ್ತಾ ಸಂಸಾರದ ಸಾರಾಸಾರ ವಸ್ತುಗಳ ಬಗ್ಗೆ ಸಮರ್ಪಕವಾಗಿ ವಿಚಾರ ಮಾಡುವದರಲ್ಲಿ ನೈಪುಣ್ಯತೆ ಹೊಂದಿದವಳಾಗಿ ಚತುರ್ವರ್ಣಾಶ್ರಮಗಳನ್ನು ನಿರ್ಮಿಸಿ ಅವುಗಳ ನೀತಿ-ನಿಯಮಗಳನ್ನು ರೂಪಿಸಿ ಬ್ರಹ್ಮಾಂಡದ ಚಕ್ರವರ್ತಿನಿಯಾಗಿ ಶ್ರೀಚಕ್ರದಲ್ಲಿ ಇಷ್ಟವಾದ ಬಿಂದುವಿನಲ್ಲಿ ಸಂತೃಪ್ತಿಯಿಂದ ರಾಜರಾಜೇಶ್ವರಿಯು ಸಂಚರಿಸುತ್ತಿರುತ್ತಾಳೆ.

ಸರ್ವೇಶಾಂಗ ವಿಹಾರಿಣೀ ಸಕರುಣಾ ಸನ್ನಾದಿನೀ ನಾದಿನೀ
ಸಂಯೋಗಪ್ರಿಯ ರೂಪಿಣೀ ಪ್ರಿಯವತೀ ಪ್ರೀತಾ ಪ್ರತಾಪೋನ್ನತಾ |
ಸರ್ವಾಂತರ್ಗತ ಶಾಲಿನೀ ಶಿವತನೂ ಸಂದೀಪಿನೀ ದೀಪಿನೀ
ಶ್ರೀ ಚಕ್ರಪ್ರಿಯ ಬಿಂದುತರ್ಪಣಪರಾ ಶ್ರೀರಾಜರಾಜೇಶ್ವರೀ  ||೭||

ಭಾವಾರ್ಥ:-ಸರ್ವೇಶ್ವರನಾಗಿರುವ ಶಿವನ ಅರ್ಧಾಂಗಿಯಾಗಿ ಆತನ ದೇಹದಲ್ಲಿ ಸಂಚರಿಸುತ್ತಿರುವ ಕರುಣಾಸಾಗರಳಾಗಿ ಸದಾತ್ಮಸ್ವರೂಪದ ಅರ್ಥವನ್ನು ವಿವರಿಸುವ ಓಂಕಾರ ನಾದರೂಪಿಣಿ;ಶಬ್ದಬ್ರಹ್ಮರೂಪಿಣಿ;ಕಾಂತನಾದ ಶಿವನಲ್ಲಿ ಸಂಯೋಗಗೊಂಡು ರೂಪ ಸಂಪನ್ನೆಯಾಗಿ; ಪ್ರೀತಾತ್ಮಸ್ವರೂಪೆಯಾಗಿ; ಭಕ್ತಜನಪ್ರಿಯಳಾಗಿ;ಅತಿ ಪರಾಕ್ರಮಿಯಾಗಿ ಶಿವನ ಶರೀರವನ್ನು ಬೆಳಗಿಸುವ; ಸ್ವಯಂಜ್ಯೋತಿಯೂ ಅಂತರ್ಯಾಮಿಯೂ ಆಗಿ ಚಕ್ರವರ್ತಿಯಾದ ಶಿವನ ಅರಸಿಯಾಗಿ  ಶ್ರೀಚಕ್ರದಲ್ಲಿ ಇಷ್ಟವಾದ ಬಿಂದುವಿನಲ್ಲಿ ಸಂತೃಪ್ತಿಯಿಂದ ರಾಜರಾಜೇಶ್ವರಿಯು ಸಂಚರಿಸುತ್ತಿರುತ್ತಾಳೆ.

ಕರ್ಮಾಕರ್ಮ ವಿವರ್ಜಿತಾ ಕುಲವತೀ ಕರ್ಮಪ್ರದಾ ಕೌಲಿನೀ
ಕಾರುಣ್ಯಾಂಬುಧಿ ಸರ್ವಕಾಮ ನಿರತಾ ಸಿಂಧುಪ್ರಿಯೋಲ್ಲಾಸಿನೀ |
ಪಂಚಬ್ರಹ್ಮ ಸನಾತನಾಸನಗತಾ ಗೇಯಾ ಸುಯೋಗಾನ್ವಿತಾ
ಶ್ರೀ ಚಕ್ರಪ್ರಿಯ ಬಿಂದುತರ್ಪಣಪರಾ ಶ್ರೀರಾಜರಾಜೇಶ್ವರೀ  ||೮||

ಭಾವಾರ್ಥ:-ಕರ್ಮಾಕರ್ಮಗಳ ವಿಧಿ ನಿಯಯಗಳನ್ನು ಮೀರಿದವಳಾಗಿ, ಸತ್ಕುಲವತಿಯಾಗಿ ಜನಿಸಿ, ಸಕಲಜೀವಿಗಳಿಗೆ ಕರ್ಮಫಲವನ್ನು ನೀಡುವ,ಶಾಕ್ತೇಯ ಪಂಥದವರಿಂದ ಆರಾಧಿಸಲ್ಪಡುತ್ತಿರುವ,ಕರುಣಾಸಾಗರಿಯಾಗಿ ಭಕ್ತರ ಸಮಸ್ತ ಆಕಾಂಕ್ಷೆಗಳನ್ನು ಪೂರೈಸುತ್ತಾ,ಸಾಗರವನ್ನು ಪೀತಿಸುತ್ತಾ ಅಲ್ಲಿ ಉಲ್ಲಾಸದಿಂದ ವಿಹರಿಸುತ್ತಾ ಪಂಚಬ್ರಹ್ಮಾಂತರ್ಗತ ಪಂಚಕೋಶಗಳನ್ನು ತನ್ನ ಶಾಶ್ವತವಾದ ಆಸನವನ್ನಾಗಿಸಿಕೊಂಡು, ಮತ್ತು ಅದರ ಮೇಲೆ ವಿರಾಜಮಾನಳಾಗಿ ವೇದಗಳಿಂದ ಸ್ತುತಿಸಲ್ಪಡುತ್ತಿರುವವಳಾಗಿ, ಶ್ರೇಷ್ಠವಾದ ಧ್ಯಾನದಲ್ಲಿ ನಿರತಳಾಗಿದ್ದು ಆದಿಮಾಯೆಯಾಗಿ ಶ್ರೀಚಕ್ರದಲ್ಲಿ ಇಷ್ಟವಾದ ಬಿಂದುವಿನಲ್ಲಿ ಸಂತೃಪ್ತಿಯಿಂದ ರಾಜರಾಜೇಶ್ವರಿಯು ಸಂಚರಿಸುತ್ತಿರುತ್ತಾಳೆ.

ಹಸ್ತ್ಯುತ್ಕುಂಭ ನಿಭ ಸ್ತನದ್ವತಯತ: ಪೀನೋನ್ನತಾ ದಾನತಾ
ಹಾರಾದ್ಯಾಭರಣಾ ಸುರೇಂದ್ರವಿನುತಾ ಶೃಂಗಾರಪೀಠಾಲಯಾ |
ಯೋನ್ಯಾಕಾರಕ ಯೋನಿ ಮುದ್ರಿತ ಕರಾ ನಿತ್ಯಾ ನವಾರ್ಣಾತ್ಮಿಕಾ
ಶ್ರೀ ಚಕ್ರಪ್ರಿಯ ಬಿಂದುತರ್ಪಣಪರಾ ಶ್ರೀರಾಜರಾಜೇಶ್ವರೀ  ||೯||

ಭಾವಾರ್ಥ:-ಅನೆಯಶಿರದಂತೆ ಉಬ್ಬಿಕೊಂಡಿರುವ ಸ್ತನದ್ವಯಗಳಿಂದ ದೇಹದಲ್ಲಿ ಎತ್ತರ ತಗ್ಗುಗಳನ್ನು ನಿರ್ಮಿಸಿಕೊಂಡು, ಹಾರಾದಿ ಆಭರಣಗಳಿಂದ ಅಲಂಕೃತಳಾಗಿ, ಸಿಂಗಾರಗೊಂಡಿರುವ ಸಿಂಹಾಸನದಲ್ಲಿ ಆರೂಢಳಾಗಿ ಉತ್ಪತ್ತಿ ಸ್ಥಾನದ ಆಕಾರದಲ್ಲಿರುವ ಆ ಯೋನಿಮುದ್ರೆಯನ್ನು ಕೈಯಲ್ಲಿ ಹಿಡಿದುಕೊಂಡು,ಶಾಶ್ವತಳಾಗಿರುವ,ನವಾಕ್ಷರ ಮಂತ್ರಸ್ವರೂಪಿಣಿಯಾಗಿ ಶ್ರೀಚಕ್ರದಲ್ಲಿ ಇಷ್ಟವಾದ ಬಿಂದುವಿನಲ್ಲಿ ಸಂತೃಪ್ತಿಯಿಂದ ರಾಜರಾಜೇಶ್ವರಿಯು ಸಂಚರಿಸುತ್ತಿರುತ್ತಾಳೆ.

ಲಕ್ಷ್ಮೀಲಕ್ಷಣಪೂರ್ಣ ಭಕ್ತವರದಾ ಲೀಲಾ ವಿನೋದಸ್ಥಿತಾ
ಲಾಕ್ಷಾರಂಜಿತ ಪಾದಪದ್ಮಯುಗಲಾ ಬ್ರಹ್ಮೇಂದ್ರ ಸಂಸೇವಿತಾ |
ಲೋಕಾಲೋಕಿತ ಲೋಕಕಾಮ ಜನನೀ ಲೋಕಾಶ್ರಯಾಂಕಸ್ಥಿತಾ
ಶ್ರೀ ಚಕ್ರಪ್ರಿಯ ಬಿಂದುತರ್ಪಣಪರಾ ಶ್ರೀರಾಜರಾಜೇಶ್ವರೀ  ||೧೦||

ಭಾವಾರ್ಥ:-ಸಂಪತ್ತಿನ ಅಧಿದೇವತೆಯಾಗಿ ಲಕ್ಷ್ಮೀರೂಪಿಣಿಯಾಗಿ ಭಕ್ತಿಯ ಎಲ್ಲಾ ಲಕ್ಷಣಗಳನ್ನು ಹೊಂದಿ ಭಕ್ತರಿಗೆ ವರದಾಯಿನಿಯಾಗಿ ಜಗತ್ತಿನಲ್ಲಿ ತನ್ನ ಲೀಲಾವಿನೋದಗಳಿಂದ ಆಟವಾಡುತ್ತಿರುವ,ಆರಗಿನ ಕೆಂಬಣ್ಣದಿಂದ ಶೋಭಿಸುತ್ತಿರುವ ಪಾದಕಮಲದ್ವಯಗಳನ್ನು ಹೊಂದಿರುವ ಬ್ರಹ್ಮಾದಿ‌ಇಂದ್ರರಿಂದ ಸೇವೆಯನ್ನು ಮಾಡಿಸಿಕೊಳ್ಳುತ್ತಿರುವ ಲೋಕದ ಸಮಸ್ತ ಜನರೆಲ್ಲಾ ಗೌರವದಿಂದ ಕಾಣುವ ಸುಂದರನಾದ ಮನ್ಮಥನಿಗೆ ಮರುಜೀವ ಕರುಣಿಸಿದ ತಾಯಿಯಾಗಿ ಹಾಗೂ ಮೂರು ಲೋಕಗಳಿಗೂ ಆಶ್ರಯದಾತನಾಗಿರುವ ದೇವದೇವನಾದ ಮಹಾದೇವನ ಎಡತೊಡೆಯಮೇಲೆ ಆಸೀನಳಾಗಿ  ಶ್ರೀಚಕ್ರದಲ್ಲಿ ಇಷ್ಟವಾದ ಬಿಂದುವಿನಲ್ಲಿ ಸಂತೃಪ್ತಿಯಿಂದ ರಾಜರಾಜೇಶ್ವರಿಯು ಸಂಚರಿಸುತ್ತಿರುತ್ತಾಳೆ.

ಹ್ರೀಂಕಾರಾಶ್ರಿತ ಶಂಕರ ಪ್ರಿಯತನು: ಶ್ರೀಯೋಗಪೀಠೇಶ್ವರೀ
ಮಾಂಗಲ್ಯಾಯತ ಪಂಕಜಾಭನಯನಾ ಮಾಂಗಲ್ಯಸಿದ್ಧಿಪ್ರದಾ |
ತಾರುಣ್ಯೇನ ವಿಶೇಷಿತಾಂಗ ಸುಮಹಾಲಾವಣ್ಯ ಸಂಶೋಭಿತಾ
ಶ್ರೀ ಚಕ್ರಪ್ರಿಯ ಬಿಂದುತರ್ಪಣಪರಾ ಶ್ರೀರಾಜರಾಜೇಶ್ವರೀ  ||೧೧||

ಭಾವಾರ್ಥ:-"ಹ್ರೀಂ"ಕಾರವನ್ನು ಆಶ್ರಯದ ನೆಲೆಯನ್ನಾಗಿಸಿ ಹಾಗೂ ಶಂಕರನಿಗೆ ಮೆಚ್ಚಿಗೆಯಾದ ಶರೀರವನ್ನು ಹೊಂದಿ ಶ್ರೀಯೋಗಪೀಠಾಧಿಕಾರಿಣಿಯಾಗಿ ಮತ್ತು ಮಾಂಗಲ್ಯಕ್ಕೆ ಸ್ಥಾನವಾದಂತಹಾ ಕಮಲದ ಕಣ್ಣುಗಳನ್ನು ಹೊಂದಿ ಮಾಂಗಲ್ಯ ಸಿದ್ಧಿದಾಯಕಳಾಗಿದ್ದು ತಾರುಣ್ಯಭರಿತ ವಿಶೇಷಾಂಗಗಳಿಂದ ಕೂಡಿ ಅತಿ ಸೌಂದರ್ಯವತಿಯಾಗಿ ಶೋಭಿಸುತ್ತಾ   ಶ್ರೀಚಕ್ರದಲ್ಲಿ ಇಷ್ಟವಾದ ಬಿಂದುವಿನಲ್ಲಿ ಸಂತೃಪ್ತಿಯಿಂದ ರಾಜರಾಜೇಶ್ವರಿಯು ಸಂಚರಿಸುತ್ತಿರುತ್ತಾಳೆ.

ಸರ್ವಜ್ಞಾನ ಕಲಾವತೀ ಸಕರುಣಾ ಸರ್ವೇಶ್ವರೀ ಸರ್ವಗಾ
ಸತ್ಯಾ ಸರ್ವಮಯೀ ಸಹಸ್ರದಲಜಾ ಸತ್ವಾರ್ಣವೋಪಸ್ಥಿತಾ |
ಸಂಗಾಸಂಗ ವಿವರ್ಜಿತಾ ಸುಖಕರೀ ಬಾಲಾರ್ಕ ಕೋಟಿಪ್ರಭಾ
ಶ್ರೀ ಚಕ್ರಪ್ರಿಯ ಬಿಂದುತರ್ಪಣಪರಾ ಶ್ರೀರಾಜರಾಜೇಶ್ವರೀ  ||೧೨||

ಭಾವಾರ್ಥ:-ಸಮಸ್ತ ಜ್ಞಾನ ಮತ್ತು ಕಲೆಗಳಿಂದ ಕೂಡಿದವಳಾಗಿ ಕರುಣಾನಿಧಿಯಾಗಿ, ಸರ್ವ ವ್ಯಾಪೀ ಸತ್ಯಸ್ವರೂಪಿಣಿಯಾಗಿ, ಸಮಸ್ತವೂ ತಾನೇ ಆಗಿ,ಸಹಸ್ರದಳ ಕಮಲದಲ್ಲಿ ಉಪಸ್ಥಿತಳಾಗಿ, ಸಾತ್ವಿಕಗುಣ ಸಾಗರದಲ್ಲಿ ನೆಲೆಯಾಗಿದ್ದುಕೊಂಡು,ಸಂಗಾಸಂಗಗಳನ್ನು ಮೀರಿ ನಿಂತು,ಸುಖದಾಯಿನಿಯಾಗಿ ಕೋಟಿಸೂರ್ಯಪ್ರಭೆಯಿಂದ ಪ್ರಕಾಶಿಸುತ್ತಾ ಶ್ರೀಚಕ್ರದಲ್ಲಿ ಇಷ್ಟವಾದ ಬಿಂದುವಿನಲ್ಲಿ ಸಂತೃಪ್ತಿಯಿಂದ ರಾಜರಾಜೇಶ್ವರಿಯು ಸಂಚರಿಸುತ್ತಿರುತ್ತಾಳೆ.

ಕಾದಿಕ್ಷಾಂತ ಸುವರ್ಣಬಿಂದು ಸುತನು: ಸರ್ವಾಂಗ ಸಂಶೋಭಿತಾ
ನಾನಾವರ್ಣ ವಿಚಿತ್ರ ಚಿತ್ರ ಚರಿತಾ ಚಾತುರ್ಯ ಚಿಂತಾಮಣೀ |
ಚಿತ್ರಾನಂದ ವಿಧಾಯಿನೀ ಸುಚಪಲಾ ಕೂಟತ್ರಯಾಕಾರಿಣೀ
ಶ್ರೀ ಚಕ್ರಪ್ರಿಯ ಬಿಂದುತರ್ಪಣಪರಾ ಶ್ರೀರಾಜರಾಜೇಶ್ವರೀ  ||೧೩||

ಭಾವಾರ್ಥ:-"ಕ"ಕಾರಾದಿ "ಕ್ಷ"ಕಾರಾಂತ್ಯದ ತನಕದ ಎಲ್ಲಾ ಅಕ್ಷರಗಳನ್ನು ಹಾಗೂ ಬಿಂದುವನ್ನು ತನ್ನ ದೇಹವನ್ನಾಗಿಸಿ ಎಲ್ಲಾ ಅವಯವಗಳನ್ನೂ ಪರಿಪೂರ್ಣತೆಯಿಂದ ಪ್ರಮಾಣಬದ್ಧವಾಗಿರಿಸಿ ಶೋಭಿತಳಾಗಿದ್ದು ವಿವಿಧ ಭೀಜಾಕ್ಷರಗಳ ಸ್ವರೂಪಿಣಿಯಾಗಿ ಆಶ್ಚರ್ಯಾದ್ಭುತ ಕಾರ್ಯಗಳನ್ನು ಮಾಡಿದ ಚರಿತ್ರೆಯನ್ನು ಹೊಂದಿರುವ ಚಿತ್ರವಿಚಿತ್ರಾನಂದದಾಯಿನಿಯಾಗಿದ್ದುಕೊಂಡು ಚಂಚಲೆಯಾದ ಲಕ್ಷ್ಮಿಯೂ ತಾನಾಗಿ ಸೂಕ್ಷ್ಮರೂಪದ ಪಂಚದಶಾಕ್ಷರೀ ಮಂತ್ರದ ವಾಗ್ಭವಕೂಟ,ಕಾಮಕೂಟ, ಶಕ್ತಿಕೂಟಗಳೆಂಬ ಕೂಟತ್ರಯಗಳ ಆಕಾರರೂಪಿಣಿಯಾಗಿ ಶ್ರೀಚಕ್ರದಲ್ಲಿ ಇಷ್ಟವಾದ ಬಿಂದುವಿನಲ್ಲಿ ಸಂತೃಪ್ತಿಯಿಂದ ರಾಜರಾಜೇಶ್ವರಿಯು ಸಂಚರಿಸುತ್ತಿರುತ್ತಾಳೆ.

ಲಕ್ಷ್ಮೀಶಾನ ವಿಧೀಂದ್ರ ಚಂದ್ರ ಮಕುಟಾದ್ಯಷ್ಟಾಂಗ ಪೀಠಾಶ್ರಿತಾ
ಸೂರ್ಯೇಂದ್ವಗ್ನಿಮಯೈಕ ಪೀಠನಿಲಯಾ ತ್ರಿಸ್ಥಾ ತ್ರಿಕೋಣೇಶ್ವರೀ |
ಗೋಪ್ತ್ರೀಗರ್ವನಿಗರ್ವಿತಾ ಗಗನಗಾ ಗಂಗಾ ಗಣೇಶಪ್ರಿಯಾ
ಶ್ರೀ ಚಕ್ರಪ್ರಿಯ ಬಿಂದುತರ್ಪಣಪರಾ ಶ್ರೀರಾಜರಾಜೇಶ್ವರೀ  ||೧೪||

ಭಾವಾರ್ಥ:-ಲಕ್ಷ್ಮೀಕಾಂತನಾದ ವಿಷ್ಣು,ಬ್ರಹ್ಮ,ಇಂದ್ರ,ಹಾಗೂ ಚಂದ್ರಶೇಖರನಾಗಿರುವ ಶಿವನೇ ಮೊದಲಾದವರನ್ನು ತನ್ನ ಎಂಟು ಅಂಶಗಳಾಗಿರುವ ಪೀಠಗಳಲ್ಲಿ ನೆಲೆಯಾಗಿಸಿ  ಜಾಗ್ರತ್,ಸ್ವಪ್ನ, ಸುಶುಪ್ತಿಗಳೆಂಬ ಅವಸ್ಥಾತ್ರಯಗಳಲ್ಲಿ ಅಥವಾ ಸತ್ವ,ರಜ,ತಮಗಳೆಂಬ ತ್ರಿಗುಣಾತ್ಮಿಕಳಾಗಿ ಇರುತ್ತಾ ಶ್ರೀಚಕ್ರ ಮಧ್ಯದ ತ್ರಿಕೋಣದ ಒಡತಿಯಾಗಿ ರಹಸ್ಯಳಾಗಿರುವ ಹಾಗೂ ದುಷ್ಟರ ಗರ್ವನಾಶಕಳಾಗಿ ಹೃದಯಾಕಾಶಗಳಲ್ಲಿ ಇರುತ್ತಾ ಗಂಗಾ ಗಣಪತಿಯರನ್ನು ಇಷ್ಟಪಡುತ್ತಾ ಶ್ರೀಚಕ್ರದಲ್ಲಿ ಇಷ್ಟವಾದ ಬಿಂದುವಿನಲ್ಲಿ ಸಂತೃಪ್ತಿಯಿಂದ ರಾಜರಾಜೇಶ್ವರಿಯು ಸಂಚರಿಸುತ್ತಿರುತ್ತಾಳೆ.

ಹ್ರೀಂ ಕೂಟತ್ರಯ ರೂಪಿಣೀ ಸಮಯಿನೀ ಸಂಸಾರಿಣೀ ಹಂಸಿನೀ
ವಾಮಾಚಾರ ಪರಾಯಣೀ ಸುಕುಲಜಾ ಬೀಜಾವತೀ ಮುದ್ರಿಣೀ |
ಕಾಮಾಕ್ಷೀ ಕರುಣಾರ್ದ್ರ ಚಿತ್ತ ಸಹಿತಾ ಶ್ರೀಂ ಶ್ರೀಂ ತ್ರಿಮೂರ್ತ್ಯಂಬಿಕಾ
ಶ್ರೀ ಚಕ್ರಪ್ರಿಯ ಬಿಂದುತರ್ಪಣಪರಾ ಶ್ರೀರಾಜರಾಜೇಶ್ವರೀ  ||೧೫||

ಭಾವಾರ್ಥ:-"ಹ್ರೀಂ"ಕಾರಕೂಟತ್ರಯಗಳ ಶಿಖರದಲ್ಲಿರುವ ಪಂಚದಶಾಕ್ಷರೀ ಮಂತ್ರವನ್ನೇ ತನ್ನ ಸೂಕ್ಷ್ಮ ರೂಪವನ್ನಾಗಿಸಿಕೊಂಡು, ಹೃದಯಾಕಾಶದಲ್ಲಿರುವ ಶ್ರೀಚಕ್ರಕ್ಕೆ ಮಾನಸಿಕವಾಗಿ ಮಾಡುವ "ಸಮಯನೀ" ಎಂಬ ಪೂಜಾವಿಧಾನವನ್ನು ಹೊಂದಿರುವ ,ಸಂಸಾರದಲ್ಲಿ ಇದ್ದೂ ಸಂನ್ಯಾಸಿನಿಯಂತೆ ವಿರಾಗಿಣಿಯಾಗಿದ್ದು ತಾಂತ್ರಿಕ ವಾಮಾಚಾರ ಪೂಜಾವಿಧಾನದಲ್ಲಿ ನೈಪುಣ್ಯತೆಯುಳ್ಳ ಸತ್ಕುಲಸಂಜಾತೆಯಾಗಿ ಬೀಜಾಕ್ಷರಮಂತ್ರ ಮಂತ್ರಾಧಿದೇವತೆಯಾಗಿ ಜ್ಞಾನಮುದ್ರೆಹಾಗೂ ಯೋನಿ ಮುದ್ರೆಯೇ ಮೊದಲಾದ ಹತ್ತಾರು ಮುದ್ರೆಗಳ ಮೂಲಕ ಆರಾಧಿಸಲ್ಪಡುತ್ತಿರುವ ಮನೋಹರವಾದ ಕಣ್ಣುಗಳನ್ನು ಹೊಂದಿರುವುದಲ್ಲದೆ ದಯಾರಸದಿಂದ ಒದ್ದೆಯಾದ ಮನಸ್ಸುಳ್ಳವಳಾಗಿ ಸಂಪತ್ತಿನ ಅಧಿದೇವತೆಯಾಗಿ ಮಹಾಲಕ್ಷ್ಮಿ ರೂಪಿಣಿಯಾಗಿ ಬ್ರಹ್ಮ, ವಿಷ್ಣು ಮಹೇಶ್ವರರೆಂಬ ತ್ರಿಮೂರ್ತಿಗಳ ತಾಯಿಯಾಗಿ ಶ್ರೀಚಕ್ರದಲ್ಲಿ ಇಷ್ಟವಾದ ಬಿಂದುವಿನಲ್ಲಿ ಸಂತೃಪ್ತಿಯಿಂದ ರಾಜರಾಜೇಶ್ವರಿಯು ಸಂಚರಿಸುತ್ತಾ  ಇರುತ್ತಾಳೆ.

ಯಾ ವಿದ್ಯಾ ಶಿವಕೇಶವಾದಿ ಜನನೀ ಯಾ ವೈ ಜಗನ್ಮೋಹಿನೀ
ಯಾ ಬ್ರಹ್ಮಾದಿ ಪಿಪೀಲಿಕಾಂತ ಜಗದಾನಂದೈಕ ಸಂದಾಯಿನೀ |
ಯಾ ಪಂಚಪ್ರಣವ ದ್ವಿರೇಫ ನಲಿನೀ ಯಾ ಚಿತ್ಕಲಾಮಾಲಿನೀ
ಸಾ ಪಾಯಾತ್ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ  ||೧೬||

ಭಾವಾರ್ಥ:-ಯಾವಾಕೆ ಜ್ಞಾನಸ್ವರೂಪಿಣಿಯೋ;ಯಾರು ಶಿವ ಕೇಶವಾದಿಯರ ಮಾತೆಯೋ;ಯಾರು ಜಗತ್ತನ್ನು ಮೋಹಗೊಳಿಸುವ ಸೌಂದರ್ಯವತಿಯೋ;ಯಾವಾಕೆ ಬ್ರಹ್ಮಾದಿಗಳಿಂದ ಪ್ರಾರಂಭಿಸಿ ಇರುವೆಯ ತನಕದ ಬ್ರಹ್ಮಾಂಡದ ಜೀವ ಜಗತ್ತಿಗೆ ಆನಂದದಾಯಕಿಯಾಗಿರುವರೋ; ಯಾರು ಐದು ಪ್ರಣವ ಮಂತ್ರಗಳ ಅಧಿಷ್ಠಾನ ದೇವತೆಯೋ ಯಾವಾಕೆ ಜ್ಞಾನದ ಶಕ್ತಿರೂಪವನ್ನು ಹಾರವನ್ನಾಗಿ ಧರಿಸಿರುವಳೋ   ಅಂತಹಾ ಶ್ರೇಷ್ಠ ದೇವಿಯಾಗಿರುವ ಪರಮ ಪಾವನೆಯಾದ ಪೂಜನೀಯಳಾಗಿರುವ ಶ್ರೀ ರಾಜರಾಜೇಶ್ವರೀ ದೇವಿಯು ಸಮಸ್ತರನ್ನೂ ರಕ್ಷಿಸಲಿ.
+++++++++++++++++++++++++++++++++++++++++++++++++++++++++++++++++++++++++++++++++++++++++++++
                                  || ಇತಿ ಶ್ರೀ ರಾಜರಾಜೇಶ್ವರೀ ಸ್ತೋತ್ರಮ್ ||

      || ಈ ರೀತಿಯಾಗಿ ಶ್ರೀ ರಾಜರಾಜೇಶ್ವರೀ ಸ್ತೋತ್ರಗಳ ಭಾವಾರ್ಥವು ||
***********************************************************************************************
                          - ೬ -
 || ಶ್ರೀ ಸರಸ್ವತೀ ಪ್ರಾತ:ಸ್ಮರಣಮ್ ||
  ***************************
ಪ್ರಾತ:ಸ್ಮರಾಮಿ ಮಹನೀಯ ಗುಣಾವತಂಸಂ
ಕಾರುಣ್ಯಪೂರ ಕಮನೀಯ ರಸಪ್ರಸಾರಮ್ |
ಜಿಹ್ವಾಂಚಲ ಪ್ರವಿಲಸನ್ ನಿಜರೂಪದೀಪಂ
ವಾಣೀ ಮನೋಹರ ವರಾಂಗಮಪಾಂಗ ತುಂಗಮ್  ||೧||

ಭಾವಾರ್ಥ:-ಉನ್ನತವಾಗಿರುವ ಗುಣಗಳನ್ನು ಶಿರಸ್ಸಿನಲ್ಲಿ ಭೂಷಣವಾಗಿ ಧರಿಸಿಕೊಂಡಿರುವ,ಕರುಣಾ ಪ್ರವಾಹದಲ್ಲಿ ಆಕರ್ಷಕವಾಗಿರುವ ರಸವನ್ನು ಪಸರಿಸುವ, ನಾಲಗೆಯ ತುದಿಯಲ್ಲಿ ದೀಪರೂಪದಿಂದ ಶೋಭಿಸುತ್ತಾ, ತನ್ನ ಕಡೆಗಣ್ಣಿನ ನೋಟದಿಂದ ಎದ್ದು ಕಾಣುವ ವಾಗ್ದೇವಿಯ ಮನೋಹರ ಮುಖಾರವಿಂದವನ್ನು ಉಷ: ಕಾಲದಲ್ಲಿ ನಾನು ಸ್ಮರಿಸುತ್ತೇನೆ.

ಪ್ರಾತ:ಸ್ಮರಾಮಿ ವಚಸಾಮಧಿನಾಯಿಕಾಖ್ಯಂ
ಸೃಷ್ಟಿ ಸ್ವರೂಪ ವಿಧಿ ಭೋಧನ ಪಾರವಶ್ಯಮ್ |
ಶಬ್ದಾರ್ಥ ರೂಪಮತಿಶಾಯಿತ ವತ್ಸಲತ್ವಂ
ವಾಣೀ ಮನೋಹರ ವರಾಂಗಮಪಾಂಗ ತುಂಗಮ್ ||೨||

ಭಾವಾರ್ಥ:-ಮಾತುಗಳ ಅಧಿನಾಯಕಿಯಾಗಿ ವಾಗಧೀಶ್ವರೀ ಎಂಬುದಾಗಿ,ಸೃಷ್ಟಿಯ ಸ್ವರೂಪಹಾಗೂ ವಿಧಾನವನ್ನು ಭೋಧಿಸುವುದರಲ್ಲಿ ತಲ್ಲೀನಳಾಗಿ ಶಬ್ದ ಮತ್ತು ಅರ್ಥರೂಪದ ಹೆಚ್ಚಿನ ವಾತ್ಸಲ್ಯಭರಿತಳಾಗಿ ಎತ್ತರವಾಗಿರುವ ಕಡೆಗಣ್ಣಿನ ನೋಟದಿಂದ ಕೂಡಿರುವ ವಾಗ್ದೇವಿಯ ಮನೋಹರ ಮುಖಾರವಿಂದವನ್ನು ಉಷ: ಕಾಲದಲ್ಲಿ ನಾನು ಸ್ಮರಿಸುತ್ತೇನೆ.

ಪ್ರಾತ:ಸ್ಮರಾಮಿ ಮನುರಾಜ ಮಹಿಮ್ನ ರೂಪಂ
ಮರ್ತ್ಯಾಮರಾಸುರ ಗಣಾರ್ಚಿತ ಪಾದಪದ್ಮಮ್
ಪದ್ಮಾಸನಾತ್ಮ ಸದನಾಯತನಾಧಿವಾಸಂ
ವಾಣೀ ಮನೋಹರ ವರಾಂಗಮಪಾಂಗ ತುಂಗಮ್ ||೩||

ಭಾವಾರ್ಥ:-ಉನ್ನತವಾಗಿರುವ ಮಂತ್ರಗಳ ಮಹಿಮಾನ್ವಿತರೂಪವನ್ನು ಹೊಂದಿ,ಮನುಜರು,ದೇವತೆಗಳು,ಹಾಗೂ ದೈತ್ಯರ ಸಮೂಹಗಳಿಂದ ಪೂಜಿತವಾಗುವ ಚರಣಕಮಲಗಳಿಂದ ಕೂಡಿ, ಬ್ರಹ್ಮನ ಆತ್ಮ ಸದನದಲ್ಲಿ ವಾಸವಾಗಿದ್ದುಕೊಂಡು,ಕಡೆಗಣ್ಣಿನ ನೋಟದಿಂದ ಕೂಡಿರುವ ವಾಗ್ದೇವಿಯ ಮನೋಹರ ಮುಖಾರವಿಂದವನ್ನು ಉಷ: ಕಾಲದಲ್ಲಿ ನಾನು ಸ್ಮರಿಸುತ್ತೇನೆ.

ಪ್ರಾತ:ಸ್ಮರಾಮಿ ಮನಸಾ ವಚಸಾ ಸುಭಕ್ತ್ಯಾ
ಭಾಷಾಮಯಿ ಪ್ರಬಲಧಾರಣ ಕಾರಣಾಂತಮ್ |
ವಿದ್ಯಾ ಯಶ:ಶ್ರಿಯಮುದಾರತಯಾ ಪ್ರಸನ್ನಂ
ವಾಣೀ ಮನೋಹರ ವರಾಂಗಮಪಾಂಗ ತುಂಗಮ್ ||೪||

ಭಾವಾರ್ಥ:-ವಾಕ್ ರೂಪದ ಪ್ರಬಲ ಧಾರಣೆಗೆ ಕಾರಣವಾಗಿರುವ ಮತ್ತು ವಿದ್ಯೆ,ಕೀರ್ತಿ, ಹಾಗೂ ಸಂಪತ್ ಸ್ವರೂಪದ,ಜನತೆಯ ಮೇಲಿನ ಕರುಣೆಯಿಂದ ಪ್ರಸನ್ನಳಾಗಿ ಅಪಾಂಗದಿಂದ ಎದ್ದು ಕಾಣುವ ವಾಗ್ದೇವಿಯ ಮನೋಹರವಾದ ಮುಖಾರವಿಂದವನ್ನು ಶ್ರದ್ಧಾಭಕ್ತಿ ಪುರಸ್ಸರವಾಗಿ ಉಷ: ಕಾಲದಲ್ಲಿ ಮಾತಿನಿಂದಲೂ ಮನಸ್ಸಿನಿಂದಲೂ ನಾನು ಸ್ಮರಿಸುತ್ತೇನೆ.

ಪ್ರಾತ:ಸ್ಮರಾಮಿ ಜಮದುತ್ತರಣಾಂಘ್ರಿಯುಗ್ಮಂ
ವೇದಾದಿಗಮ್ಯ ಪರತತ್ವ ಪದಾರ್ಥ ಬೋಧಮ್ |
ನಾದ ಪ್ರಿಯಾಮರತರುಂ ಶ್ರಿತಪಾರಿಜಾತಮ್    
ವಾಣೀ ಮನೋಹರ ವರಾಂಗಮಪಾಂಗ ತುಂಗಮ್ ||೫||

ಭಾವಾರ್ಥ:-ಆಹಾರಸೇವನೆಯನ್ನೊಳಗೊಂಡ ಈ ಸಂಸಾರವನ್ನು ದಾಟಿಸುವ ಎರಡು ಚರಣಂಗಳನ್ನು ಹೊಂದಿರುವ ವೇದಗಳಿಂದ ಅರಿತುಕೊಳ್ಳಬೇಕಾಗಿರುವ ಪರಮಾತ್ಮನ ತತ್ವದ ಬಗ್ಗೆ ಅರ್ಥಜ್ಞಾನವನ್ನು ಹೊಂದಿರುವ ಓಂಕಾರನಾದವನ್ನು ಮೆಚ್ಚುವ ದೇವ ವೃಕ್ಷವಾಗಿ ಶರಣಾಗತರಿಗೆ ಕಲ್ಪತರುವಾಗಿ ಕಡೆಗಣ್ಣಿನ ನೋಟದಿಂದ ಎದ್ದು ಕಾಣುವ  ವಾಕ್ಕಿನ ಅಧಿದೇವತೆಯಾಗಿರುವ ವಿದ್ಯಾಧಿಮಾತೆ ಶ್ರೀ ಸರಸ್ವತೀ ದೇವಿಯ ದಿವ್ಯ ಮನೋಹರ ಮುಖಾರವಿಂದವನ್ನು ಉಷ: ಕಾಲದಲ್ಲಿ ನಾನು ಸ್ಮರಿಸುತ್ತೇನೆ.
****************************************************************************                                                       || ಇತಿ ಶ್ರೀ ಸರಸ್ವತೀ ಪ್ರಾತ:ಸ್ಮರಣಮ್ ||

       || ಈ ರೀತಿಯಾಗಿ ಸರಸ್ವತೀ ಪ್ರಾತ: ಸ್ಮರಣ ಸ್ತೋತ್ರಗಳ ಭಾವಾರ್ಥವು ||
*********************************************************************************                         
         - ೭ -
  || ಸರಸ್ವತೀ ಸ್ತೋತ್ರಮ್ - ೧ ||
  ++++++++++++++++++
ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ |
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ  ||೧||

ಭಾವಾರ್ಥ:- ಹೇ! ಸರಸ್ವತಿಯೇ, ವರದಾಯಿನಿಯೇ ,ಇಷ್ಟ ಪಟ್ಟ ರೂಪವನ್ನು ಧರಿಸಬಲ್ಲವಳೇ, ನಿನಗಿದೋ ನನ್ನ ನಮಸ್ಕಾರ. ನಾನು ವಿದ್ಯಾರಂಭವನ್ನು ಮಾಡುತ್ತಲಿರುವೆನು.ನನಗೆ ಯಾವಾಗಲೂ ವಿದ್ಯೆಯು ಸಿದ್ಧಿಸಲಿ.

ಸರಸ್ವತಿ ಮಹಾಭಾಗೇ ವಿದ್ಯೇ ಕಮಲಲೋಚನೇ |
ವಿಶ್ವರೂಪೇ ವಿಶಾಲಾಕ್ಷಿ ವಿದ್ಯಾಂ ಬುದ್ಧಿಂ ಚ ದೇಹಿಮೇ  ||೨||

ಭಾವಾರ್ಥ:-ಸರಸ್ವತಿಯೆ, ಮಹಾತ್ಮಳೇ, ವಿದ್ಯೆಯೇ, ಕಮಲವನ್ನು ಹೋಲುವ ಕಣ್ಣುಗಳನ್ನು ಹೊಂದಿರುವವಳೇ, ವಿಶಾಲವಾಗಿರುವ ದೃಷ್ಟಿಯನ್ನು ಹೊಂದಿರುವವಳೇ, ನನಗೆ ವಿದ್ಯೆ ಹಾಗೂ ಬುದ್ಧಿಯನ್ನು ದಯಪಾಲಿಸು.

ಸಾ ಮೇ ವಸತು ಜಿಹ್ವಾಯಾಂ ವೀಣಾಪುಸ್ತಕಧಾರಿಣೀ |
ವಿಧಾತೃವಲ್ಲಭಾ ದೇವೀ ಸರ್ವ ಶುಕ್ಲಾ ಸರಸ್ವತೀ  ||೩||

ಭಾವಾರ್ಥ :-ವೀಣಾ ಪುಸ್ತಕಗಳನ್ನು ಧರಿಸಿದವಳಾಗಿರುವ ಬ್ರಹ್ಮನ ಮಡದಿಯಾಗಿರುವ,ಪೂರ್ಣವಾಗಿ ಬಿಳಿ ಬಣ್ಣವನ್ನು ಹೊಂದಿರುವ ದೇವಿ ಸರಸ್ವತಿಯು ನನ್ನ ನಾಲಗೆಯ ಮೇಲೆ ನೆಲೆಯಾಗಿರಲಿ.

ಪದ್ಮಪತ್ರ ವಿಶಾಲಾಕ್ಷೀ ಪದ್ಮಕೇಸರವರ್ಣಿನೀ |
ನಿತ್ಯಂ ಪದ್ಮಾಲಯಾ ದೇವೀ ಸಾ ಮಾಂ ಪಾತು ಸರಸ್ವತೀ  ||೪||

ಭಾವಾರ್ಥ:-ಕಮಲದ ಎಸಳಿನ ತೆರನಾಗಿ ವಿಶಾಲವಾಗಿರುವ ಕಣ್ಣುಗಳನ್ನು ಹೊಂದಿರುವ, ತಾವರೆಯ ಕೇಸರದಂತಹಾ ಮೈಬಣ್ಣ ಹೊಂದಿ, ಸದಾಕಾಲ ಕಮಲದಲ್ಲೇ ವಾಸವಾಗಿರುವ ದೇವಿ ಸರಸ್ವತಿಯು ನನ್ನ ಸದಾ ರಕ್ಷಿಸಲಿ.

ಸರಸ್ವತಿ ಮಹಾಭಾಗೇ ವಿದ್ಯೇ ಕಮಲಲೋಚನೇ |
ವಿಶ್ವರೂಪೇ ವಿರೂಪಾಕ್ಷಿ ವಿದ್ಯಾಂ ದೇಹಿ ನಮೋಸ್ಸ್ತುತೇ  ||೫||

ಭಾವಾರ್ಥ:-ಹೇ! ಸರಸ್ವತೀಯೇ,ಮಹಾಭಾಗ್ಯವಂತಳೇ, ವಿದ್ಯಾ ಸ್ವರೂಪಿಣೀ, ಕಮಲವನ್ನು ಹೋಲುವ ಕಣ್ಣುಗಳುಳ್ಳವಳೇ, ವಿಶ್ವರೂಪಿಣಿಯೇ, ವಿಶಾಲಾಕ್ಷಿಯೇ ನನಗೆ ವಿದ್ಯೆಯನ್ನು ಅನುಗ್ರಹಿಸು ತಾಯಿ. ನಿನಗಿದೋ ನನ್ನ ನಮಸ್ಕಾರಗಳು.

ಸುರಾಸುರಾಸೇವಿತಪಾದಪಂಕಜಾ ಕರೇ ವಿರಾಜತ್ ಕಮನೀಯಪುಸ್ತಕಾ |
ವಿರಿಂಚಿಪತ್ನೀ ಕಮಲಾಸನಸ್ಥಿತಾ ಸರಸ್ವತೀ ನೃತ್ಯತು ವಾಚಿ ಮೇಸದಾ  ||೬||

ಭಾವಾರ್ಥ:-ದೇವತೆಗಳೂ ದೈತ್ಯರೂ ಭಕ್ತಿಯಿಂದ ಸರಸ್ವತಿಯ ಪಾದಕಮಲಗಳನ್ನು ಭಜಿಸುವರು. ಅಂತಹಾ, ಕೈಯಲ್ಲಿ ಪುಸ್ತಕವನ್ನು ಧರಿಸಿದ ಕಮಲಾಸನದಲ್ಲಿ ಆರೂಢನಾಗಿರುವ ಬ್ರಹ್ಮನರಗಿಣಿಯಾಗಿರುವ ತಾಯಿ ಸರಸ್ವತಿಯು ನನ್ನ ನಾಲಿಗೆಯಲ್ಲಿ ಸದಾ ನರ್ತಿಸುತ್ತಿರಲಿ.

ಭವತಿ ಯದನುಭಾವಾ ದೇಡಮೂಕೋಸ್ಪಿ ವಾಗ್ಮೀ
ಜಡಮಪಿರಪಿಜಂತು: ಜಾಯತೇ ಪ್ರಾಜ್ಞಮೌಲೀ |
ಸಕಲ ವಚನ ಚೇತೋ ದೇವತಾ ಭಾರತೀ ಸಾ
ಮಮ ವಚಸಿ ನಿಧತ್ತಾಂ ಸನ್ನಿಧಿಂ ಮಾನಸೇ ಚ  ||೭||

ಭಾವಾರ್ಥ:-ಯಾವ ವಾಗ್ದೇವಿಯ ಕೃಪೆಯಿಂದ ಹುಟ್ಟು ಮೂಗನೂ ವಾಗ್ಮಿಯಾಗುವನೋ, ಮಂದಮತಿಯೂ ವಿದ್ವಾಂಸನಾಗುವನೋ, ಎಲ್ಲಾ ನುಡಿಗಳ ಜೀವಶಕ್ತಿಯು ಯಾರಾಗಿರುವರೋ ಅಂತಹಾ ಸರಸ್ವತಿಯು ಯಾವಾಗಲೂ ತನ್ನ ಸನ್ನಿಧಿಯನ್ನು ನನ್ನ ಮಾತು ಮತ್ತು ಮನಸ್ಸುಗಳಲ್ಲಿ ಸ್ಥಿರಗೊಳಿಸಲಿ.

ಯಾದೇವೀ ಸ್ತೂಯತೇ ನಿತ್ಯಂ ಬ್ರಹ್ಮೇಂದ್ರ ಸುರ ಕಿನ್ನರೈ: |
ಸಾ ಮಾಮೈವಾಸ್ತು ಜಿಹ್ವಾಗ್ರೇ ಪದ್ಮಹಸ್ತಾ ಸರಸ್ವತೀ  ||೮||

ಭಾವಾರ್ಥ:-ಯಾವ ದೇವಿಯನ್ನು ಸದಾ ಬ್ರಹ್ಮಾದಿ ದೇವತೆಗಳೂ ಸ್ತೋತ್ರ ಮಾಡುವರೋ ಅಂತಹಾ ಪದ್ಮಹಸ್ತೆಯಾದ ತಾಯಿ ಸರಸ್ವತಿಯು ನನ್ನ ನಾಲಗೆಯ ತುದಿಯಲ್ಲಿ ಸದಾ ಸ್ಥಿರವಾಗಿರಲಿ.

ಯಾ ವೇದಾಂತಾರ್ಥತತ್ತ್ವ್ಯೈಕ ಸ್ವರೂಪಾ ಪರಮಾರ್ಥತ: |
ನಾಮರೂಪಾನಾ ವ್ಯಕ್ತಾ ಸಾ ಮಾಂ ಸರಸ್ವತೀ ||೯||

ಭಾವಾರ್ಥ:-ಯಾರು ನೈಜವಾಗಿ ವೇದಾಂತಾರ್ಥ-ತತ್ವದ ಏಕ ಸ್ವರೂಪಳೂ, ಯಾರು ಇಲ್ಲಿ ನಾಮರೂಪಗಳಲ್ಲಿ ವ್ಯಕ್ತಳಿರುವಳೋ, ಆ ಸರಸ್ವತಿಯು ನನ್ನನ್ನು ಸದಾ ರಕ್ಷಿಸಲಿ.

ಯಾ ಸಾಂಗೋಪಾಂಗವೇದೇಷು ಚತುರ್ಷ್ಟೇಕೈವ ಗೀಯತೇ |
ಅದ್ವೈತಾ ಬ್ರಹ್ಮಣ: ಶಕ್ತಿ: ಸಾಮಾಂ ಪಾತು ಸರಸ್ವತೀ  ||೧೦||

ಭಾವಾರ್ಥ:-ಯಾವಾಕೆ ತನ್ನ ಅಂಗ,ಉಪಾಂಗಗಳಿಂದ ಕೂಡಿದ ನಾಲ್ಕು ವೇದಗಳಲ್ಲಿ ಸ್ತುತಿಸಲ್ಪಟ್ಟಿರುವಳೋ, ಯಾರು ಅದ್ವೀತೀಯಳೋ,ಮತ್ತು ಬ್ರಹ್ಮನ ಶಕ್ತಿರೂಪಳೊ ಅಂತಹಾ ಸರಸ್ವತಿಯು ನನ್ನನ್ನು ಸದಾ ರಕ್ಷಿಸಲಿ.

ಯಾ ವರ್ಣಪದವಾಕ್ಯಾರ್ಥಸ್ವರೂಪೇಣೈವವರ್ತತೇ |
ಅನಾದಿ ನಿಧನಾಸ್ನಂತಾ ಸಾ ಮಾಂ ಪಾತು ಸರಸ್ವತೀ  ||೧೧||

ಭಾವಾರ್ಥ:-ಯಾವಾಕೆ ವರ್ಣ,ಪದ,ವಾಕ್ಯ,ಅರ್ಥ,ಇವುಗಳ ಸ್ವರೂಪಿಣಿಯೋ,ಯಾರಿಗೆ ಆದಿ ಅಂತ್ಯಗಳಿಲ್ಲವೋ;ಅಂತಹಾ ಸರಸ್ವತಿಯು ನನ್ನನ್ನು ಸದಾ ರಕ್ಷಿಸಲಿ.

ಯಾಂ ವಿದಿತ್ವಾಖಿಲಂ ಬಂಧಂ ನಿರ್ಮರ್ಥ್ಯಾಖಿಲವರ್ತ್ಮನಾ |
ಯೋಗೀ ಯಾತಿ ಪರಂ ಸ್ಥಾನಂ ಸಾ ಮಾಂ ಪಾತು ಸರಸ್ವತೀ  ||೧೨||

ಭಾವಾರ್ಥ:-ಯೋಗಿಗಳು ಯಾರನ್ನು ತಿಳಿದು ಬಂಧಗಳೆಲ್ಲವುಗಳಿಂದ ಬಿಡುಗಡೆ ಹೊಂದಿ ಮುಕ್ತಿಯ ಹಾದಿಯ ಮೂಲಕ ಪರಮಪದವನ್ನು ಪಡೆಯುವರೋ ಅಂತಹಾ ಸರಸ್ವತಿಯು ನನ್ನನ್ನು ಸದಾ ರಕ್ಷಿಸಲಿ.

ಅಕ್ಷಸೂತ್ರಾಂಕುಶಧರಾ ಪಾಶಪುಸ್ತಕಧಾರಿಣೀ |
ಮುಕ್ತಾಹಾರ ಸಮಾಯುಕ್ತಾ ವಾಚಿ ತಿಷ್ಟತು ಮೇ ಸದಾ  ||೧೩||

ಭಾವಾರ್ಥ:-ಜಪಮಾಲೆ,ಅಂಕುಶ,ಪಾಶ,ಪುಸ್ತಕ ಇವುಗಳನ್ನು ಹಿಡಿದುಕೊಂಡು ಕಂಠದಲ್ಲಿ ಮುತ್ತಿನ ಹಾರವನ್ನು ಧರಿಸಿರುವ ವಾಗ್ದೇವಿ ಸರಸ್ವತಿಯು ನನ್ನ ವಾಗ್ಶಕ್ತಿಯಲ್ಲಿ ಸದಾ ನೆಲೆಸಿರಲಿ.

ಸ್ತೋತ್ರೇಣಾನೇನ ತಾಂ ದೇವೀಂ ಜಗದ್ಧಾತ್ರೀಂ ಸರಸ್ವತೀಂ |
ಯೇ ಸ್ತುವಂತಿ ತ್ರಿಕಾಲೇಷು ಸರ್ವ ವಿದ್ಯಾಂ ಲಭಂತಿ ತೇ ||೧೪||

ಭಾವಾರ್ಥ:-ಈ ಸ್ತೋತ್ರಗಳಿಂದ ಯಾರು ತ್ರಿಕಾಲಗಳಲ್ಲಿಯೂ ಆ ತಾಯಿ ಸರಸ್ವತಿಯನ್ನು ಆರಾಧಿಸುವರೋ ಅವರಿಗೆ ಸಮಸ್ತ ವಿದ್ಯೆಗಳೂ ಲಭಿಸುತ್ತವೆ.
+++++++++++++++++++++++++++++++++++++++++++++++++++++++++++++++++++++++++++++++++++++++++++++
     || ಇತಿ ಸರಸ್ವತೀ ಸ್ತೋತ್ರಮ್ ||  || ಇದು ಸರಸ್ವತೀ ಸ್ತೋತ್ರಗಳ ಭಾವಾರ್ಥವು ||
+++++++++++++++++++++++++++++++++++++++++++++++++++++++++++++++++++++++++++
                                       --೮--
 || ಸರಸ್ವತೀ ದ್ವಾದಶ ನಾಮ ಸ್ತೋತ್ರಮ್ ||
*********************************
ವಾಗ್ ವಾಣೀ ಭಾರತೀ ಬ್ರಾಹ್ಮೀ ಭಾಷಾ ಗೀ: ಶಾರದಾ ಸ್ವರಾ |
ಸರಸ್ವತೀ ಕಾಮಧೇನು: ವೇದಗರ್ಭಾ,ಅಕ್ಷರಾತ್ಮಿಕಾ  ||೧||

ಭಾವಾರ್ಥ:-ವಾಕ್ಕು,ವಾಣಿ,ಭಾರತಿ,ಬ್ರಾಹ್ಮಿ,ಭಾಷಾ,ಗೀ:,ಶಾರದೆ,ಸ್ವರ,ಸರಸ್ವತಿ,ಕಾಮಧೇನು, ವೇದಗರ್ಭೆ,ಅಕ್ಷರಾತ್ಮಿಕೆ....

ದ್ವಾದಶೈತಾನಿ ನಾಮಾನಿ ಸರಸ್ವತ್ಯಾಸ್ತ್ರಿಸಂಧಿಷು: |
ಜಪನ್ ಸರ್ವಜ್ಞತಾಂ ಮೇಧಾಂ ವಾಕ್ಪಟುತ್ವಂ ಲಭೇದ್ ಧ್ರುವಮ್  ||೨||

ಭಾವಾರ್ಥ:-ಸರಸ್ವತಿಯ ಈ ರೀತಿಯಾಗಿರುವ ಹನ್ನೆರಡು ಹೆಸರುಗಳನ್ನು ಉಷ:ಕಾಲದಲ್ಲಿ, ಮಧ್ಯಾಹ್ನ, ಸಾಯಂಕಾಲ ಯಾರು ಜಪಿಸುತ್ತಾರೋ ಅವರು ಸರ್ವಜ್ಞರ ಮೇಧಾ ಶಕ್ತಿಯನ್ನೂ ಹಾಗೂ ಮಾತಿನ ನೈಪುಣ್ಯತೆಯನ್ನೂ ಪಡೆಯುವರು.

ಷಣ್ಮಾಸಂ ನಿಸ್ಪೃಹೋ ಜಪ್ತ್ವಾ ಲಭೇ ಜ್ಞಾನಂ ವಿಮುಕ್ತಿದಂ |
ಅಷ್ಟೋತ್ತರ ಶತಂ ಜಪ್ತ್ವಾ ವಿದ್ಯಾಂ ಪ್ರಾಪ್ನೋತಿ ಮಾನವ:  ||೩||

ಭಾವಾರ್ಥ:- ಯಾವಾತ ಯಾವುದೇ ಇಷ್ಟಕಾಮನೆಗಳನ್ನು ಇರಿಸಿಕೊಳ್ಳದೆ ಆರು ಮಾಸಗಳ ಕಾಲ ಶ್ರದ್ಧಾಭಕ್ತಿಪುರಸ್ಸರವಾಗಿ ಜಪಿಸುವನೋ ಆತನು ಮೋಕ್ಷಜ್ಞಾನವನ್ನು ಪಡೆಯುವನು. ಅನುದಿನವೂ ೧೦೮ ಸಲ ಜಪಿಸುವ ಮನುಜರು ಸಕಲ ವಿದ್ಯೆಯನ್ನು ಹೊಂದುವರು.
*********************************************************************************
                   ||ಇತಿ ಸರಸ್ವತೀ ದ್ವಾದಶ ನಾಮ ಸ್ತೋತ್ರಮ್ ||
            || ಇದು ಸರಸ್ವತಿ ದ್ವಾದಶ ನಾಮ ಸ್ತೋತ್ರದ ಭಾವಾರ್ಥವು ||
++++++++++++++++++++++++++++++++++++++++++++++++++++++++++++++++++++++++                                                   --೯--
  || ಸರಸ್ವತೀ ಸ್ತೋತ್ರಮ್ -೨ ||
 +++++++++++++++++++

ನಮಸ್ತೇ ಶಾರದಾ ದೇವಿ ಕಾಶ್ಮೀರ ಪುರವಾಸಿನಿ |
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿಮೇ  ||೧||

ಭಾವಾರ್ಥ:-ಕಾಶ್ಮೀರದ ಪಟ್ಟಣದಲ್ಲಿ ವಾಸವಾಗಿರುವ ದೇವಿ ಶಾರದೆಯೇ, ನಿನಗಿದೋ ನಾನು ನಮಸ್ಕರಿಸುತ್ತಿರುವೆ. ನಾನು ನಿನ್ನನ್ನು ಅನುದಿನವೂ ಪ್ರಾರ್ಥಿಸುವೆ. ನನಗೆ ವಿದ್ಯೆಯನ್ನು ಸ್ವೀಕರಿಸುವ ಶಕ್ತಿಯನ್ನು ಅನುಗ್ರಹಿಸು.

ಯಾ ಕುಂದೇಂದುತುಷಾರಹಾರಧವಲಾ ಯಾ ಶುಭ್ರವಸ್ತ್ರಾನ್ವಿತಾ
ಯಾ ವೀಣಾವರದಂಡಮಂಡಿತಕರಾ ಯಾ ಶ್ವೇತಪದ್ಮಾಸನಾ |
ಯಾ ಬ್ರಹ್ಮಾಚ್ಯುತಶಂಕರಪ್ರಭೃತಿಭಿರ್ದೇವೈ: ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶ್ಯೇಷ ಜಾಡ್ಯಾಪಹಾ  ||೨||

ಭಾವಾರ್ಥ:-ಯಾವಾತಳು ಮಲ್ಲಿಗೆಯ ಹೂ, ಚಂದ್ರ,ಮಂಜಿನ ಹನಿ,ಮುತ್ತಿನಮಾಲೆಗಳ ಬಣ್ಣದಂತೆ ಬಿಳುಪಾಗಿರುವಳೋ; ಯಾವಾಕೆ ಸ್ವಚ್ಛವಾದ ವಸ್ತ್ರವನ್ನು ಧರಿಸಿರುವಳೋ; ಯಾವಾಕೆಯ ಹಸ್ತವು ವೀಣೆಯೆನ್ನುವ ವರದಂಡದಿಂದ ಅಲಂಕೃತವಾಗಿರುವುದೋ; ಯಾವಾತಳು ಬಿಳಿಯ ತಾವರೆಯ ಮೇಲೆ ಆರೂಢಳಾಗಿರುವಳೋ;ಯಾವಾಕೆ ಬ್ರಹ್ಮ,ವಿಷ್ಣು,ಮಹೇಶ್ವರರೇ ಮೊದಲಾದ ದೇವಾನುದೇವತೆಗಳಿಂದ ಸದಾ ಪೂಜಿಸಲ್ಪಡುವಳೋ; ಯಾವಾತಳು ಜಡತ್ವವನ್ನು ಶೇಷರಹಿತವನ್ನಾಗಿಸುವಳೋ ಅಂತಹಾ ಭಗವತಿಯಾದ ಸರಸ್ವತಿಯು ನಮ್ಮೆಲ್ಲರನ್ನು ಕಾಪಾಡಲಿ.

ಶ್ವೇತ ಪದ್ಮಾಸನಾ ದೇವೀ ಶ್ವೇತ ಪುಷ್ಪೋಪಶೋಭಿತಾ |
ಶ್ವೇತಾಂಬರಧರಾ ನಿತ್ಯಾ ಶ್ವೇತ ಗಂಧಾನುಲೇಪನಾ  ||೩||

ಭಾವಾರ್ಥ:-ಶಾಶ್ವತಳಾಗಿರುವ ಸರಸ್ವತೀ ದೇವಿ ಬಿಳಿಯ ತಾವರೆ ಮೇಲೆ ಆಸೀನಳಾಗಿ; ಬಿಳಿಯ ಹೂವುಗಳಿಂದ ಅಲಂಕರಿಸಲ್ಪಟ್ಟವಳಾಗಿ; ಬಿಳಿಯ ವಸನಧಾರಿಣಿಯಾಗಿ; ಬಿಳಿಯ ಸುಗಂಧದ್ರವ್ಯಗಳನ್ನು ಲೇಪಿಸಿಕೊಂಡಿರುವಳು.

ಶ್ವೇತಾಕ್ಷಸೂತ್ರ ಹಸ್ತಾ ಚ ಶ್ವೇತಚಂದನಚರ್ಚಿತಾ |
ಶ್ವೇತ ವೀಣಾಧರಾ ಶುಭ್ರಾ ಶ್ವೇತಾಲಂಕಾರಭೂಷಿತಾ ||೪||

ಭಾವಾರ್ಥ:-ಸರಸ್ವತಿಯ ಕೈಯಲ್ಲಿ ಬಿಳಿಯ ಜಪಮಾಲೆಯಿದೆ.ಆಕೆ ಬಿಳುಪಾದ ಶ್ರೀಗಂಧವನ್ನು ಲೇಪಿಸಿಕೊಂಡಿರುತ್ತಾಳೆ. ಕೈಯಲ್ಲಿ ಬಿಳಿದಾದ ವೀಣೆಯನ್ನು ಹಿಡಿದವಳಾಗಿದ್ದಾಳೆ. ಆಕೆ ಶುಭ್ರಳಾಗಿ ಬಿಳಿಯ ವಸ್ತುಗಳಿಂದ ಅಲಂಕಾರಗಳಿಂದ ಭೂಷಿತಳಾಗಿದ್ದಾಳೆ.

ವಂದಿತಾ ಸಿದ್ಧಗಂಧರ್ವೈರರ್ಚಿತಾ ಸುರದಾನವೈ: |
ಪೂಜಿತಾ ಮುನಿಭಿ: ಸರ್ವೈ: ಋಷಿಭಿ: ಸ್ತೂಯತೇ ಸದಾ  ||೫||

ಭಾವಾರ್ಥ:-ಸರಸ್ವತಿಯು ಸಿದ್ಧ-ಗಂಧರ್ವರಿಂದ ವಂದಿಸಲ್ಪಡುವವಳು.ಸುರದಾನವರು ಕೂಡಾ ಅವಳನ್ನು ಅರ್ಚಿಸುತ್ತಾಳೆ. ಸಕಲ ಮುನಿಗಳೂ ಸಹಾ ಆಕೆಯನ್ನು ಪೂಜಿಸುತ್ತಾರೆ.ಋಷಿಗಳು ಆಕೆಯನ್ನು ಸ್ತುತಿಸುತ್ತಿರುತ್ತಾರೆ.

ಯಾ ಶ್ರದ್ಧಾ ಧಾರಣಾ ಮೇಧಾ ವಾಗ್ದೇವೀ ವಿಧಿವಲ್ಲಭಾ |
ಭಕ್ತಜಿಹ್ವಾಗ್ರಸದನಾ ಶಮಾದಿ ಗುಣದಾಯಿನೀ  ||೬||

ಯಾವಾತಳು ಭಕ್ತರ ಶ್ರದ್ಧೆಯನ್ನು ಧರಿಸುತ್ತಾಳೋ;ಮೇಧಾ ಶಕ್ತಿ ರೂಪಳೋ;ವಾಗ್ದೇವಿಯೂ ಬ್ರಹ್ಮನ ಸತಿಯೂ ಆಗಿರುವಳೋಭಕ್ತ ಜನಾದಿಗಳ ನಾಲಗೆಯ ತುದಿಯಲ್ಲಿ ವಾಸವಾಗಿರುವಳೋ; ಶಮದಮಾದಿಗುಣಗಳನ್ನು ಕರುಣಿಸುವಳೋ ಆ ತಾಯಿ ಸರಸ್ವತಿಯು ನನ್ನ ವಾಕ್ಕಿನಲ್ಲಿ ನೆಲೆಯಾಗಿರಲಿ.

ನಮಾಮಿ ಯಾಮಿನೀಂ ನಾಥಲೇಖಾಲಂಕೃತಕುಂತಲಾಮ್ |
ಭವಾನೀಂ ಭವ ಸಂತಾಪನಿರ್ವಾಪಣ ಸುಧಾನದೀಮ್  ||೭||

ಚಂದ್ರನ ಕಲೆಯಂತೆ ಶೋಭಾಯಮಾನವಾಗಿರುವ ಕೂದಲುಗಳನ್ನು ಹೊಂದಿರುವವಳೇ; ಭಕ್ತ ಜನಾದಿಗಳ ಭವ ಸಂತಾಪವನ್ನು ಶಾಂತಗೊಳಿಸುವವಳೇ; ರಕ್ಷಕಳಾಗಿರುವ ತಾಯಿಯೇ; ಜಗನ್ಮಾತೆಯಾಗಿರುವ ನಿನಗಿದೋ ನನ್ನ ಪ್ರಣಾಮಂಗಳು.

ಭದ್ರಕಾಲ್ಯೈ ನಮೋ ನಿತ್ಯಮ್ ಸರಸ್ವತ್ಯೈ ನಮೋ ನಮ: |
ವೇದವೇದಾಂಗವೇದಾಂತವಿದ್ಯಾಸ್ಥಾನೇಭ್ಯ ಏವಚ  ||೮||

ಭದ್ರಕಾಳಿಯೇ, ನಿನಗಿದೋ ನನ್ನ ನಮಸ್ಕಾರಗಳು. ಸರಸ್ವತಿಯೇ ನಿನಗಿದೋ ನನ್ನ ನಮಸ್ಕಾರಗಳು. ವೇದೋಪನಿಷತ್ತುಗಳಲ್ಲಿಯ ವೇದಾಂತ ವಿದ್ಯಾಸ್ಥಾನದಲ್ಲಿರುವ ವಾಗ್ದೇವಿ ಸರಸ್ವತಿಯೇ, ನಿನಗಿದೋ ಪುನ:ಪುನ: ನಮಸ್ಕಾರಗಳು.

ಬ್ರಹ್ಮಸ್ವರೂಪಾ ಪರಮಾ ಜ್ಯೋತಿರೂಪಾ ಸನಾತನೀ |
ಸರ್ವ ವಿದ್ಯಾಧಿದೇವೀ ಯಾ ತಸ್ಯೈ ವಾಣ್ಯೈ ನಮೋ ನಮ:  ||೯||

ಭಾವಾರ್ಥ:- ಸನಾತಳೂ,ಪರಂಜ್ಯೋತಿರೂಪಿಣಿಯೂ, ಬ್ರಹ್ಮಸ್ವರೂಪಳೂ, ಸರ್ವ ವಿದ್ಯೆಗಳಿಗೆ ಅಧಿದೇವತೆಯೂ ಆಗಿರುವ ಆ ವಾಣಿಗೆ ಪುನ: ಪುನ: ನನ್ನ ನಮಸ್ಕಾರಗಳು.

ಯಯಾ ವಿನಾ ಜಗತ್ಸರ್ವಂ ಶಶ್ವಜ್ಜೀವನ್ಮೃತಂ ಭವೇತ್ |
ಜ್ಞಾನಾಧಿದೇವೀ ಯಾ ತಸ್ಯೈ ಸರಸ್ವತ್ಯೈ ನಮೋ ನಮ:  ||೧೦||

ಭಾವಾರ್ಥ:-ಯಾವಾಕೆಯು ಇಲ್ಲದೆ  ಜಗತ್ತಿನ ಸರ್ವ ಜೀವ ರಾಶಿಯು ಶಾಶ್ವತವಾಗಿರುವ ಸಾವನ್ನು ಹೊಂದಲಾರದೋ, ಅಂತಹಾ ಜ್ಞಾನಕ್ಕೆ ಅಧಿದೇವತೆಯಾಗಿರುವ ಮಾತೆ ಸರಸ್ವತಿಗೆ ಇದೋ ನಾನು ಪುನ:ಪುನ: ನಮಸ್ಕರಿಸುವೆ.

ಯಯಾ ವಿನಾ ಜಗತ್ಸರ್ವಂ ಮೂಕಮುನ್ಮತ್ತವತ್ಸದಾ |
ಯಾ ದೇವೀ ವಾಗಧಿಷ್ಠಾತ್ರೀ ತಸ್ಯೈ ವಾಣ್ಯೈ ನಮೋ ನಮ:  ||೧೧||

ಭಾವಾರ್ಥ:-ಯಾವಳ ಹೊರತಾಗಿ ಸರ್ವ ಜಗತ್ತು ಯಾವಾಗಲೂ ಮೂಕವೂ, ಉನ್ಮತ್ತವೂ ಆಗುವುದೋ,ಯಾವ ದೇವಿಯು ವಾಕ್ಕಿಗೆ ಅಧಿದೇವತೆಯೋ ಅಂತಹಾ ವಾಣೀ ದೇವಿಗೆ ಪುನ:ಪುನ: ನನ್ನ ನಮಸ್ಕಾರಗಳು.

ಸ್ತೋತ್ರೇಣಾನೇನ ತಾಂ ದೇವೀಂ ಜಗದ್ದಾತ್ರೀಂ ಸರಸ್ವತೀಂ
ಯೇ ಸ್ಮರಂತಿ ತ್ರಿಸಂಧ್ಯಾಯಾಂ ಸುವಿದ್ಯಾಂ ಪ್ರಾಪ್ನುವಂತಿತೇ  ||೧೨||

ಭಾವಾರ್ಥ:- ಜಗದ್ಧಾತ್ರಿಯಾಗಿರುವ ಸರಸ್ವತೀ ದೇವಿಯನ್ನು ಯಾರು ಮೂರೂ ಸಂಧ್ಯಾ ಸಮಯಗಳಲ್ಲಿ [ತ್ರಿ ಸಂಧ್ಯಾ ಕಾಲಗಳಲ್ಲಿ] ಸ್ಮರಿಸುತ್ತಾರೋ ಅವರು ಉತ್ತಮ ವಿದ್ಯೆಯನ್ನು ಪಡೆಯುತ್ತಾರೆ.
++++++++++++++++++++++++++++++++++++++++++++++++++++++++++++++++++++++++
     ||ಇತಿ ಸರಸ್ವತೀ ಸ್ತೋತ್ರಮ್ || || ಈ ರೀತಿಯಾಗಿ ಸರಸ್ವತೀ ಸ್ತೋತ್ರಗಳ ಭಾವಾರ್ಥವು ||
++++++++++++++++++++++++++++++++++++++++++++++++++++++++++++++++++++++++
                  -೧೦-
  || ಬ್ರಹ್ಮ ಕೃತ ಸರಸ್ವತೀ ಸ್ತೋತ್ರಮ್ ||
   ***************************
ಐಮ್ ಐಮ್ ಐಮ್ ಇಷ್ಟ ಮಂತ್ರೇ ಕಮಲಭವಮುಖಾಂಭೋಜಭೂತಿಸ್ವರೂಪೇ
ರೂಪಾರೂಪಪ್ರಕಾಶೇ ಸಕಲಗುಣಮಯೇ ನಿರ್ಗುಣೇ ನಿರ್ವಿಕಾರೇ |
ನ ಸ್ಥೂಲೇ ನವ್ಯ ಸೂಕ್ಷ್ಮೇಸ್ಪ್ಯವಿದಿತವಿಷಯೇ ನಾಪಿ ವಿಜ್ಞಾತ ತತ್ವೇ
ವಿಶ್ವೇ ವಿಶ್ವಾಂತರಾತ್ಮೇ ಸುರವರ ನಮಿತೇ ನಿಷ್ಕಲೇ ನಿತ್ಯಶುದ್ಧೇ  ||೧||

ಭಾವಾರ್ಥ:-ಐಂ ಐಂ ಐಂ ಎಂಬ ಬೀಜ ಮಂತ್ರಾಕ್ಷರಗಳು ಇಷ್ಟ ಮಂತ್ರವಾಗಿ ಇರುವ ಮತ್ತು ಬ್ರಹ್ಮನ ಮುಖಕಮಲಕ್ಕೆ ಸಂಪತ್ಸ್ವರೂಪಳಾಗಿರುವ ಹೇ ತಾಯಿಯೇ; ಸಾಕಾರ ಹಾಗೂ ನಿರಾಕಾರ ಸ್ವರೂಪಳು ನೀನಾಗಿ ಪ್ರಕಾಶಿಸುತ್ತಿರುವೆ. ಸಕಲ ಗುಣ ಪರಿಪೂರ್ಣಳೂ ನೀನಾಗಿರುವೆ. ನೀನು ನಿರ್ಗುಣತ್ವವನ್ನೂ ಹೊಂದಿರುವೆ. ನೀನು ಸ್ಥೂಲರೂಪಿಣಿಯೂ ಅಲ್ಲ, ಸೂಕ್ಷ್ಮ ರೂಪಿಣಿಯೂ ಅಲ್ಲ. ನಿನ್ನನ್ನು ತಿಳಿದು ಕೊಳ್ಳಲು ಅಸಾಧ್ಯವಿದೆ. ತಿಳಿದಿರಬಹುದಾದ ತತ್ವಗಳಿಗೂ ನೀನು ಹೊರತಾಗಿರುವವಳು. ಸಮಸ್ತ ಬ್ರಹ್ಮಾಂಡವೂ ನೀನೇ ಆಗಿರುವೆ.ಈ ಜೀವ ಜಗತ್ತಿಗೆ ಅಂತರಾತ್ಮ ಸ್ವರೂಪಳು ನೀನು. ದೇವತೆಗಳ ಒಡೆಯನ ಪ್ರಣಾಮಗಳಿಗೆ ಪಾತ್ರಳಾದವಳೂ ನೀನಾಗಿರುವೆ. ನೀನು ಅಖಂಡಳು ಮತ್ತು ನಿತ್ಯಶುದ್ಧಳು.

ಹ್ರೀಂ ಹ್ರೀಂ ಹ್ರೀಂ ಜಾಪ್ಯತುಷ್ಟೇ ಹಿಮರುಚಿ ಮುಕುಟೇ ವಲ್ಲಕೀ ವ್ಯಗ್ರ ಹಸ್ತೇ
ಮಾತರ್ಮಾತರ್ನಮಸ್ತೇ ದಹ ದಹ ಜಡತಾಂ ದೇಹಿ ಬುದ್ಧಿಂ ಪ್ರಶಾಂತಾಮ್ |
ವಿದ್ಯೇ ವೇದಾಂತವೇದ್ಯೇ ಪರಿಣತಪಠಿತೇ ಮೋಕ್ಷದೇ ಮುಕ್ತಿಮಾರ್ಗೇ
ಮಾರ್ಗಾತೀತ ಸ್ವರೂಪೇ ಭವ ಮಮ ವರದಾ ಶಾರದೇ ಶುಭ್ರಹಾರೇ  ||೨||

ಭಾವಾರ್ಥ:-ಅಮ್ಮಾ!ತಾಯಿಯೇ!ಹ್ರೀಂ ಹ್ರೀಂ ಹ್ರೀಂ ಎಂಬೀ ಬೀಜ ಮಂತ್ರಗಳಿಂದಲೇ ನೀನು ಸಂತಸವನ್ನು ಹೊಂದುವವಳಾಗುವೆ. ನಿನ್ನ ಕಿರೀಟವದು ಹಿಮದಂತೆ ಶುಭ್ರವಾಗಿದೆ. ಸದಾ ಕೈಗಳಿಂದ ವೀಣೆಯನ್ನು ನುಡಿಸುವುದರಲ್ಲಿ ನೀನು ಮಗ್ನವಾಗಿರುವೆ. ವಿದ್ಯಾ ಸ್ವರೂಪೆಯಾಗಿರುವವಳೂ ನೀನೇ. ವೇದಾಂತಗಳಿಂದ ವೇದ್ಯಳಾಗುವವಳೂ ನೀನು. ಪರಮ ಜ್ಞಾನಿಗಳಾಗಿರುವ ಮಹಾತ್ಮರು ನಿನ್ನ ಅಪರಿಮಿತ ಮಹಾತ್ಮ್ಯೆಯನ್ನು ಹೊಗಳುವರು. ಮೋಕ್ಷ ಮಾರ್ಗ ರೂಪಿಣಿಯಾಗಿರುವ ನೀನು ಮೋಕ್ಷದಾಯಕಳೂ ಹೌದು.ಅಂತೆಯೇ ನೀನು ಮುಕ್ತಿ ಮಾರ್ಗಕ್ಕೂ ಮೀರಿರುವವಳು. ಶುಭ್ರವಾಗಿರುವ ಮಾಲೆಯನ್ನು ಧರಿಸಿರುವ ತಾಯಿ ಶಾರದೆಯೇ; ನನಗೆ ವರವನ್ನು ಕರುಣಿಸುವವಳಾಗು. ಮಾತೆಯೇ ನಿನಗಿದೋ ನನ್ನ ನಮನಗಳು.ನನ್ನ ಔದಾಸಿನ್ಯವನ್ನು ನಾಶಗೊಳಿಸಿ ಪ್ರಶಸ್ತವಾದ ಸದ್ಬುದ್ಧಿಯನ್ನು ಕರುಣಿಸು.
*********************************************************************************
                || ಇತಿ ಬ್ರಹ್ಮ ಕೃತ ಸರಸ್ವತೀ ಸ್ತೋತ್ರಮ್ ||
      ||ಈ ರೀತಿಯಾಗಿ ಬ್ರಹ್ಮನಿಂದ ರಚಿತವಾದ ಸರಸ್ವತೀ ಸ್ತೋತ್ರಗಳ ಭಾವಾರ್ಥವು ||
*********************************************************************************
                      -೧೧-
 || ಪುರಾಣೋಕ್ತ ಶ್ರೀ ಸರಸ್ವತೀ ಸ್ತೋತ್ರಮ್ ||
  *******************************
ಜ್ಞಾನಂ ದೇಹಿ ಸ್ಮೃತಿಂ ದೇಹಿ ವಿದ್ಯಾಂ ವಿದ್ಯಾಧಿ ದೇವತೇ |
ಪ್ರತಿಷ್ಠಾಂ ಕವಿತಾಂ ದೇಹಿ ಶಕ್ತಿಂ ಶಿಷ್ಯ ಪ್ರಭೋಧಿಕಾಮ್ ||
ಸ್ಮೃತಿಶಕ್ತಿ: ಜ್ಞಾನಶಕ್ತಿ: ಬುದ್ಧಿಶಕ್ತಿ: ಸ್ವರೂಪಿಣೀ |
ಪ್ರತಿಭಾ ಕಲ್ಪನಾಶಕ್ತಿ: ಯಾ ಚ ತಸ್ಸೈ ನಮೋ ನಮ: ||
                               [-ಬ್ರಹ್ಮ ವೈವರ್ತ ಪುರಾಣ; ೨ ; ೪]

ಭಾವಾರ್ಥ:-ಹೇ! ವಿದ್ಯಾಧಿಮಾತೆಯೇ; ನನಗೆ ಜ್ಞಾನವನ್ನು ಕರುಣಿಸು. ನೆನಪಿನ ಶಕ್ತಿಯನ್ನು ಅನುಗ್ರಹಿಸು.  ವಿದ್ಯೆ,ಕವಿತಾಶಕ್ತಿ, ಕೀರ್ತಿ, ಶಿಷ್ಯರಲ್ಲಿ ಅರಿವು ಮೂಡಿಸುವ ಶಕ್ತಿ, ಇವೆಗಳೆಲ್ಲವನ್ನೂ ದಯಪಾಲಿಸು.  ತಾಯಿಯೇ!  ಯಾರು ಸ್ಮೃತಿಶಕ್ತಿಯೋ,ಯಾರು ಜ್ಞಾನ ಶಕ್ತಿಯೋ, ಬುದ್ಧಿಶಕ್ತಿಯೋ, ಪ್ರತಿಭಾಶಕ್ತಿಯೋ, ಕಲ್ಪನಾ ಶಕ್ತಿಯೋ  ಅಂತಹಾ ಮಹಾಮಾತೆ ಶಾರದೆಗೆ  ಪುನ:ಪುನ: ನನ್ನ ನಮಸ್ಕಾರಗಳು.

ಮನೋ ವೃತ್ತಿರಸ್ತು ಸ್ಮೃತಿಸ್ತೇ ಸಮಸ್ತಾ
ತಥಾ ವಾಕ್ಪ್ರವೃತ್ತಿ: ಸ್ತುತಿಸ್ಸ್ಯಾನ್ಮಹೇಶಿ|
ಶರೀರಪ್ರವೃತ್ತಿ: ಪ್ರಣಾಮಕ್ರಿಯಾ ಸ್ಯಾತ್
ಪ್ರಸೀದ ಕ್ಷಮಸ್ವ ಪ್ರಭೋ ಸಂತತಂ ಮೇ ||
                        [-ಪ್ರಪಂಚ ಸಾರತಂತ್ರ ೬, ೭,]

ಭಾವಾರ್ಥ:-ಹೇ! ಮಹೇಷಿ; ನನ್ನ ಮನೋವೃತ್ತಿಗಳೆಲ್ಲವೂ ನಿನ್ನ ಸ್ಮೃತಿಗಳಾಗಲಿ.ನನ್ನ ಮಾತಿನ ಒಲವುಗಳೆಲ್ಲವೂ  ನಿನ್ನದೇ ಸ್ತುತಿಗಳಾಗಲಿ. ನನ್ನ ಶರೀರದ ಸ್ವಭಾವಗಳೆಲ್ಲವೂ ನಿನಗೆನ್ನ ಪ್ರಣಾಮಗಳಾಗಲಿ. ಹೇ! ಮಾತೆ ಮಹೇಶ್ವರಿಯೇ;  ಪ್ರಸನ್ನಳಾಗು. ನನ್ನನ್ನು ಸದಾ ಕ್ಷಮಿಸುವವಳಾಗು.

ಅಮಲ ಕಮಲಾಧಿವಾಸಿನಿ
ಮನಸೋ ವೈಮಲ್ಯದಾಯಿನಿ ಮನೋಜ್ಞೇ |
ಸುಂದರಗಾತ್ರಿ ಸುಶೀಲೇ
ತವ ಚರಣಾಂಭೋರುಹಂ ನಮಾಮಿ ಸದಾ ||
                   [- ವಾಗೀಶ್ವರೀ ಸ್ತೋತ್ರ]

ಭಾವಾರ್ಥ:-ನಿರ್ಮಲವಾಗಿರುವ ತಾವರೆಯಲ್ಲಿ ನೆಲೆಸಿರುವ ಸರಸ್ವತಿಯೇ, ನನ್ನ ಮನಸ್ಸಿಗೆ ನಿರ್ಮಲತ್ವವನ್ನು ಕರುಣಿಸುವ  ಮನೋಜ್ಞರೂಪಿಣಿಯೇ, ಸುಶೀಲಳೂ ಸುಂದರಿಯೂ ಆಗಿರುವ ದೇವಿ ಸರಸ್ವತಿಯೇ, ನಾನು ಸದಾ ನಿನ್ನ ಅಡಿದಾವರೆಗಳಿಗೆ  ನಮಸ್ಕರಿಸುತ್ತೇನೆ.

ಪದ್ಮ ಪುರಾಣೋಕ್ತಂ -> |

{ದೇವಗುರುವಾಗಿರುವ ಬೃಹಸ್ಪತಿಯು ವಾಗ್ದೇವಿ ಶಾರದೆಯನ್ನು ತನ್ನ ವಾಕ್ಸಿದ್ಧಿಗೋಸ್ಕರವಾಗಿ ಸ್ತುತಿಸುವ ಮೂಲಕ  ಒಲಿಸಿಕೊಂಡನೆಂಬ ಕಥಾನಕವು ಪದ್ಮಪುರಾಣದಲ್ಲಿದೆ. ಇದೇ ಸ್ತೋತ್ರವು ಕೆಲವು ಪಾಠಾಂತರಗಳಲ್ಲಿ ಶಿವ-ಪಾರ್ವತಿ ಸಂವಾದ  ಕಥಾನಕವುಳ್ಳ ರುದ್ರಯಾಮಳದಲ್ಲಿಯೂ ಇದೆ. ಇಲ್ಲಿ ಕಾಣಿಸಲಾಗಿರುವುದು ಪದ್ಮ ಪುರಾಣದಲ್ಲಿನ ಪಠ್ಯ}

ಶ್ರೀ: ||ಬೃಹಸ್ಪತಿರುವಾಚ----
ಸರಸ್ವತೀಂ ನಮಸ್ಯಾಮಿ ಚೇತನಾನಾಂ ಹೃದಿ ಸ್ಥಿತಾಂ |
ಕಂಠಸ್ಥಾಂ ಪದ್ಮಯೋನೇಸ್ತು ಹಿಮಾಕರ ಪ್ರಿಯಾಂ ಸದಾ ||೧||

ಭಾವಾರ್ಥ:-ಬೃಹಸ್ಪತಿಯು ನುಡಿಯುತ್ತಾನೆ--
ಸಮಸ್ತ ಜೀವಿಗಳಲ್ಲಿಯೂ ನೆಲೆಸಿರುವ ವಾಗ್ದೇವಿ ಸರಸ್ವತಿಗೆ ನಾನು ನಮಸ್ಕರಿಸುವೆ.ಬ್ರಹ್ಮನ ಕಂಠ ಪ್ರದೇಶದಲ್ಲಿ  ತಂಪಾದಕಿರಣಗಳುಳ್ಳುವಳಾದ ಆಕೆಯು ಪ್ರೀತಿಯುಳ್ಳವಳಾಗಿಸದಾ ನೆಲೆಸಿರುತ್ತಾಳೆ.

ಮತಿದಾಂ ವರದಾಂ ಶುದ್ಧಾಂ ವೀಣಾಹಸ್ತ ವರಪ್ರದಾಂ |
ಐಂ ಐಂ ಮಂತ್ರ ಪ್ರಿಯಾಂ ಹ್ರೀಂ ಹ್ರಾಂ ಕುಮತಿದ್ವಂಸಕಾರಿಣೀಮ್ ||೨||

ಭಾವಾರ್ಥ:-ಸಮಸ್ತರಿಗೂ ಸನ್ಮತಿಯನ್ನು ಈಯುವ,ವರದಾಯಿನಿಯಾಗಿ,ಪರಮಪವಿತ್ರಳೂ ಆಗಿ,ವೀಣೆಯನ್ನು ಕೈಯಲ್ಲಿ  ಧರಿಸಿ, ಐಂ, ಬೀಜಾಕ್ಷರದ ಮೂಲಕ ಸಿದ್ಧಿಯನ್ನು ಕರುಣಿಸುತ್ತಾ ಹ್ರೀಂ ಹಾಗೂ ಹ್ರಾಂ ಬೀಜಾಕ್ಷರ ಮಂತ್ರಗಳಿಂದ ಮನುಜರ  ಕುಬುದ್ಧಿಯನ್ನು ನಾಶಗೊಳಿಸುತ್ತಾ ಇರುವ ಸರಸ್ವತೀ ದೇವಿಗೆ ಪ್ರಣಾಮಗಳು.

ಸುಪ್ರಕಾಶಾಂ ನಿರಾಲಂಬಾಂ ಅಜ್ಞಾನ ತಿಮಿರಾಪಹಾಂ |
ಶುಕ್ಲಾಂ ಮೋಕ್ಷಪ್ರದಾಂ ರಮ್ಯಾಂ ಶುಭಾಂಗಾಂ ಶೋಭನಪ್ರದಾಮ್ ||೩||

ಭಾವಾರ್ಥ:-ಅಜ್ಞಾನವನ್ನು ದೂರೀಕರಿಸಿ, ಜ್ಞಾನದ ಬೆಳಕನ್ನು ಒದಗಿಸುವ ಬಿಳಿಯವರ್ಣದಿಂದ ಕೂಡಿ  ಮೋಕ್ಷದಾಯಕಳಾಗಿಯೂ, ಮನೋಹರವಾಗಿರುವ ಸುಂದರವಾದ ಶರೀರವನ್ನು ಹೊಂದಿದಶುಭಪ್ರದಾಯಳಾಗಿರುವ ಸರಸ್ವತಿಗೆ  ನಾನು ನಮಸ್ಕರಿಸುವೆ.

ಪದ್ಮೋಪವಿಷ್ಠಾಂ ಕುಂಡಲಿನೀಂ ಶುಕ್ಲವರ್ಣಾಂ ಮನೋರಮಾಂ ಆದಿತ್ಯಮಂಡಲೇ ಲೀನಾಂ ಪ್ರಣಮಾಮಿ ಹರಿ ಪ್ರಿಯಾಮ್  ||೪||

ಭಾವಾರ್ಥ:-ಪದ್ಮಾಸನೆಯಾಗಿ, ಕುಂಡಲಿನೀ ಶಕ್ತಿಯನ್ನು ಹೊಂದಿ, ಬಿಳಿಯ ವರ್ಣವನಾಂತು, ಮನಸ್ಸಿಗೆ ಆನಂದವನ್ನು  ಒದಗಿಸುತ್ತಾ, ಸೂರ್ಯಮಂಡಲವಾಸಿಯಾಗಿ, ಮಹಾವಿಷ್ಣುವಿಗೆ ಪ್ರಿಯಳಾದವಳಾಗಿರುವ ಸರಸ್ವತೀದೇವಿಗೆ ನನ್ನ  ಪ್ರಣಾಮಗಳು.

ಇತಿ ಮಾಸಂ ಸ್ತುತಾಸ್ನೇನ ವಾಗೀಶೇನ ಮಹಾತ್ಮನಾ |
ಆತ್ಮಾನಂ ದರ್ಶಯಾ ಮಾಸ ಶರದಿಂದು ಸಮ ಪ್ರಭಾಮ್  ||೫||

ಭಾವಾರ್ಥ:-ಈ ರೀತಿಯಾಗಿ ಶ್ರೀಸರಸ್ವತೀದೇವಿಯನ್ನು ಒಂದು ತಿಂಗಳ ಕಾಲ ಪ್ರಾರ್ಥನೆಯನ್ನು ಮಾಡಿದ ನಂತರ ಬೃಹಸ್ಪತಿಗೆ  ವಾಗ್ದೇವಿಯು ಸಂತಸಗೊಂಡು ಒಲಿದು ಪ್ರತ್ಯಕ್ಷಳಾಗಿ ತನ್ನ ಅತ್ಯದ್ಭುತ ರೂಪವನ್ನು ಕಾಣಿಸಿದಳು.

ಸರಸ್ವತ್ಯುವಾಚ--
ವರಂ ವೃಣೀಷ್ಟ ಭದ್ರಂ ತೇ ಯಸ್ತೇ ಮನಸಿ ವರ್ತತೇ ||

ಬೃಹಸ್ಪತಿರುವಾಚ----
ವರದಾ ಯದಿ ಮೇ ದೇವಿ ಸಮ್ಯಕ್ ಜ್ಞಾನಂ ಪ್ರಯಚ್ಛಮೇ  ||೬||

ಸರಸ್ವತಿಯು ಹೇಳುವಳು "ಮಗೂ; ನಿನಗೇನು ಬೇಕಾಗಿದೆ; ಬೇಡಿಕೊ"
ಬೃಹಸ್ಪತಿ ಅನ್ನುತ್ತಾನೆ "ನನಗೆ ಪರಿಪೂರ್ಣವಾದಂತಹಾ ಜ್ಞಾನವನ್ನು ಅನುಗ್ರಹಿಸುವವಳಾಗು"

ಸರಸ್ವತ್ಯುವಾಚ---
ಇದಂ ತೇ ನಿರ್ಮಲಂ ಜ್ಞಾನಂ ಅಜ್ಞಾನ ತಿಮಿರಾಪಹಮ್ |
ಸ್ತೋತ್ರೇಣಾನೇನ ಮಾಂ ಸ್ರೌತಿ ಸಮ್ಯಗ್ವೇದವಿದೋ ನರ:
ಲಭತೇ ಪರಮಂ ಜ್ಞಾನಂ ಮಮ ತುಲ್ಯ ಪರಾಕ್ರಮಂ  ||೭||

ಸರಸ್ವತಿಯು ಅನ್ನುವಳು---
ಇದೋ ನೀನು ಬೇಡಿಕೊಂಡಂತೆ ನಿನಗೆ ಪರಿಪೂರ್ಣವಾಗಿರುವ ಜ್ಞಾನವನ್ನು ಅನುಗ್ರಹಿಸುತ್ತಿರುವೆ. ಈ ಜ್ಞಾನವನ್ನು  ಪಡೆದವನಾದ ನೀನು ನನಗೆ ಸರಿಸಾಟಿಯಾದ ಜ್ಞಾನಿಯಾಗುವೆ.

ತ್ರಿ ಸಂಧ್ಯಂ ಯ: ಪಠೇನ್ನಿತ್ಯಂ ಯಸ್ತ್ವಿದಂ ಜಪತೇ ಸದಾ |
ತೇಷಾಂ ಕಂಠೇ ಸದಾ ವಾಸಂ ಕರಿಷ್ಯಾಮಿ ನ ಸಂಶಯ:  ||೮||

ಭಾವಾರ್ಥ:-ಯಾರು ನೀನು ಮಾಡುವ ಸ್ತೋತ್ರವನ್ನು  ದಿನದ ಮೂರು ಸಂಧ್ಯಾಕಾಲಗಳಲ್ಲಿಯೂ ಶ್ರದ್ಧಾಭಕ್ತಿಯಿಂದ  ಪಠಿಸುತ್ತಾರೋ,ಜಪಿಸುತ್ತಾರೋ ಅಂತಹವರ ಕಂಠದಲ್ಲಿ ನಾನು ಸದಾ ನೆಲೆಸಿರುತ್ತೇನೆ. ಇದು ನಿಸ್ಸಂಶಯ ಎಂಬುದಾಗಿ  ಬೃಹಸ್ಪತಿಗೆ ವಚನವನ್ನಿತ್ತಳು.
*********************************************************************************
                 || ಇತಿ ಪುರಾಣೋಕ್ತ ಶ್ರೀ ಸರಸ್ವತೀ ಸ್ತೋತ್ರಮ್ ||
|| ಈ ರೀತಿಯಾಗಿ ಪುರಾಣಗಳಲ್ಲಿ ಹೇಳಿರುವಂತಹಾ ಶ್ರೀ ಸರಸ್ವತೀ ಸ್ತೋತ್ರಗಳ ಭಾವಾರ್ಥವು ||
*********************************************************************************
                         -೧೨ -

  || ಶ್ರೀ ಶಾರದಾ ಭುಜಂಗ ಪ್ರಯಾತಾಷ್ಟಕಮ್ ||
 ***********************************
ಸುವಕ್ಷೋಭಕುಂಭಾಂ ಸುಧಾಪೂರ್ಣಕುಂಭಾಂ
ಪ್ರಸಾದಾವಲಂಬಾಂ ಪ್ರಪುಣ್ಯಾವಲಂಬಾಂ |
ಸವಾಸ್ಯೇಂದುಬಿಂಬಾಂ ಸದಾನೋಷ್ಟಬಿಂಬಾಂ
ಭಜೇ ಶಾರದಾಂಬಾಮಜಸ್ರಂಮದಂಬಾಂ   ||೧||

ಭಾವಾರ್ಥ:-ಅಮೃತಭರಿತವಾಗಿರುವ ಕಲಶದೋಪಾದಿಯಲ್ಲಿ ಶ್ರೇಷ್ಠವಾಗಿರುವ ಸ್ತನಗಳನ್ನು ಹೊಂದಿರುವ ಪರಮ  ಪರಿಶುದ್ಧಳೂ ಪವಿತ್ರಳೂ ಆಗಿರುವ, ಪೌರ್ಣಿಮೆಯ ಚಂದಿರನೋಪಾದಿಯಲ್ಲಿ ಸುಂದರವದನದವಳಾಗಿ ತೊಂಡೆಯ ಹಣ್ಣನಂತೆ  ಹೋಲುವ ತುಟಿಯಿಂದ ಶೋಭಿಸುವ ನನ್ನ ಆರಾಧ್ಯ ತಾಯಿ ಶಾರದಾಂಬೆಯನ್ನು ನಾನು ಸದಾ ಭಜಿಸುತ್ತೇನೆ.

ಕಟಾಕ್ಷೇ ದಯಾರ್ದ್ರಾಂ ಕರೇ ಜ್ಞಾನಮುದ್ರಾಂ
ಕಲಾಭಿರ್ವಿನಿದ್ರಾಂ ಕಲಾಪೈ: ಸುಭದ್ರಾಂ |
ಪುರಸ್ತ್ರೀಂ ವಿನಿದ್ರಾಂ ಪುರಸ್ತುಂಗಭದ್ರಾಂ
ಭಜೇ ಶಾರದಾಂಬಾಮಜಸ್ರಂಮದಂಬಾಂ  ||೨||

ಭಾವಾರ್ಥ:-ಕರುಣಾಪೂರ್ಣ ದೃಷ್ಟಿಯುಳ್ಳವಳಾದ, ಜ್ಞಾನಮುದ್ರೆಯ ಹಸ್ತವನ್ನು ಹೊಂದಿ, ದೋಷವಿರಹಿತವಾಗಿರುವ  ಲಲಿತವಿದ್ಯೆಗಳನ್ನು ಹೊಂದಿರುವವಳಾದ, ಸೊಂಟದ ಪಟ್ಟಿಯಿಂದ ಶೋಭಿತಳಾಗಿ, ಜಡತ್ವ ವಿರಹಿತಳಾಗಿರುವ ಮಾನಿನಿಯಾಗಿ,  ಎದುರಲ್ಲಿ ತುಂಗಭದ್ರಾನದಿಯುಳ್ಳವಳಾಗಿರುವ ನನ್ನ ಆರಾಧ್ಯ ತಾಯಿ ಶಾರದಾಂಬೆಯನ್ನು ನಾನು ಸದಾ ಭಜಿಸುತ್ತೇನೆ.

ಲಲಾಮಾಂಕಫಾಲಾಂ ಲಸದ್ಗಾನಲೋಲಾಂ
ಸ್ವಭಕ್ತೈಕಪಾಲಾಂ ಯಶ:ಶ್ರೀಕಪೋಲಾಂ |
ಕರೇತ್ವಕ್ಷಮಾಲಾಂ ಕನತ್ಪ್ರತ್ನಲೋಲಾಂ
ಭಜೇ ಶಾರದಾಂಬಾಮಜಸ್ರಂಮದಂಬಾಂ  ||೩||

ಭಾವಾರ್ಥ:- ತಿಲಕದಿಂದ ಶೋಭಿಸುತ್ತಿರುವ ಹಣೆಯುಳ್ಳವಳಾದ, ಉತ್ತಮವಾಗಿರುವ ಸಂಗೀತದಲ್ಲಿ ಆಸಕ್ತಳಾಗಿರುವವಳಾದ,  ತನ್ನ ಭಕ್ತರನ್ನು ರಕ್ಷಿಸುತ್ತಿರುವ, ಕೀರ್ತಿ ಲಕ್ಷ್ಮಿಯನ್ನು ತನ್ನ ಕಪೋಲದಲ್ಲಿ ಗುರುತಿಸಿಕೊಂಡು ಕೈಯಲ್ಲಿ  ಅಕ್ಷಮಾಲೆಯನ್ನು ಹಿಡಿದಿರುವ, ಹೊಳೆಯುತ್ತಲಿರುವ ಕರ್ಣಾಭರಣಗಳಿಂದ ಮೆರೆಯುತ್ತಿರುವ ನನ್ನ ಆರಾಧ್ಯ ತಾಯಿ  ಶಾರದಾಂಬೆಯನ್ನು ನಾನು ಸದಾ ಭಜಿಸುತ್ತೇನೆ.

ಸುಸೀಮಂತವೇಣೀಂ ದೃಶಾ ನಿರ್ಜಿತೈಣೀಂ
ರಮತ್ಕೀರವಾಣೀಂ ನಮದ್ವಜ್ರಪಾಣಿಂ |
ಸುಧಾಮಂಥರಾಸ್ಯಾಂ ಮುದಾ ಚಿಂತ್ಯವೇಣೀಂ
ಭಜೇ ಶಾರದಾಂಬಾಮಜಸ್ರಂಮದಂಬಾಂ  ||೪||

ಭಾವಾರ್ಥ:- ಚೆನ್ನಾಗಿ ಬೈತಲೆ ಮಾಡಿಕೊಂಡು ಜಡೆ ಹೆಣೆದುಕೊಂಡು ಹರಿಣದ ದೃಷ್ಟಿಯನ್ನು ಮೀರಿಸಿರುವ ಕಣ್ಣುಗಳನ್ನು  ಹೊಂದಿರುವ, ಗಿಣಿಯಂತೆ ಮುದ್ದುಮಾತಿನಿಂದ ಮನೋಹರಳಾಗಿರುವವಳಾದ, ವಜ್ರಾಯುಧಧಾರಿಯಾಗಿರುವ ದೇವೇಂದ್ರನಿಂದ  ವಂದಿಸಲ್ಪಡುತ್ತಿರುವ, ಅಮೃತಪಾನ ಮಾಡಿ ಅಲಸಿಕೆಗೊಂಡಿರುವ ಮೊಗದವಳಾದ, ಭಕ್ತರು ಸಂತಸದಿಂದ ಧ್ಯಾನಿಸುವ  ಜಡೆಯನ್ನು ಹೊಂದಿದ ನನ್ನ ಆರಾಧ್ಯ ತಾಯಿ ಶಾರದಾಂಬೆಯನ್ನು ನಾನು ಸದಾ ಭಜಿಸುತ್ತೇನೆ.

ಸುಶಾಂತಾಂ ಸುದೇಹಾಂ ದೃಗಂತೇ ಕಚಾಂ ತಾಂ
ಲಸತ್ಸಲ್ಲತಾಂಗೀಮನಂತಾಮಚಿಂತ್ಯಾಂ |
ಸೃತಾಂ ತಾಪಸ್ಯೆ: ಸರ್ಗಪೂರ್ವಸ್ಥಿತಾಂ ತಾಂ
ಭಜೇ ಶಾರದಾಂಬಾಮಜಸ್ರಂಮದಂಬಾಂ  ||೫||

ಭಾವಾರ್ಥ:-ಅತ್ಯಂತ ಶಾಂತಲೂ,ಸುಂದರ ಶರೀರಿಯೂ, ಕುಡಿಗಣ್ಣುಗಳನ್ನು ತಲಪುತ್ತಲಿರುವ ಮುಂಗುರುಳು ಉಳ್ಳವಳಾದ,  ಬೆಳ್ಳಿಯಂತೆ ಮಿನುಗುವ ಕಾಯದವಳಾಗಿ, ನಾಶರಹಿತಳೂ, ಊಹಾತೀತಳಾಗಿರುವವಳೂ ಆಗಿರುವ ತಪಸ್ವೀಗಳಿಂದ  ಸ್ತುತಿಸಲ್ಪಡುತ್ತಿರುವ, ಬ್ರಹ್ಮಾಂಡದ ಸೃಷ್ಟಿಯ ಮೊದಲೇ ಇರುವವಳಾದಂತಹಾ ನನ್ನ ಆರಾಧ್ಯ ತಾಯಿ ಶಾರದಾಂಬೆಯನ್ನು  ನಾನು ಸದಾ ಭಜಿಸುತ್ತೇನೆ.

ಕುರಂಗೇ ತುರಂಗೇ ಮೃಗೇಂದ್ರೇ ಖಗೇಂದ್ರೇ
ಮರಾಲೇ ಮದೇಭೇ ಮಹೋಕ್ಷೇಸ್ಧಿರೂಢಾಂ |
ಮಹತ್ಯಾಂ ನವಮ್ಯಾಂ ಸದಾ ಸಾಮರೂಪಾಂ
ಭಜೇ ಶಾರದಾಂಬಾಮಜಸ್ರಂಮದಂಬಾಂ  ||೬||

ಭಾವಾರ್ಥ:-ಮಹಾನವಮಿ ಉತ್ಸವಗಳಲ್ಲಿ ಜಿಂಕೆ,ಕುದುರೆ,ಸಿಂಹ,ಗರುಢ,ಹಂಸ,ಮದವೇರಿದ ಆನೆ, ಮಹಾ ವೃಷಭ ವಾಹಿನಿಯಾಗಿ  ಸಂಭ್ರಮಿಸುವ, ಯಾವತ್ತೂ ಸಾಮರೂಪಿಣಿಯಾಗಿರುವ ನನ್ನ ಆರಾಧ್ಯ ತಾಯಿ ಶಾರದಾಂಬೆಯನ್ನು ನಾನು ಸದಾ ಭಜಿಸುತ್ತೇನೆ.

ಜ್ವಲತ್ಕಾಂತಿವಹ್ನಿಂ ಜಗನ್ಮೋಹನಾಂಗೀಂ
ಭಜನ್ಮಾನಸಾಂಭೋಜಸುಭ್ರಾಂತಭೃಂಗೀಂ |
ನಿಜಸ್ತೋತ್ರ ಸಂಗೀತ ನೃತ್ಯಪ್ರಭಾಂಗೀಂ
ಭಜೇ ಶಾರದಾಂಬಾಮಜಸ್ರಂಮದಂಬಾಂ  ||೭||

ಭಾವಾರ್ಥ:- ಹೊಳೆಯುತ್ತಲಿರುವ ಅಗ್ನಿಯಂತೆ ಕಾಂತಿಯುಕ್ತಳಾಗಿ, ಭಜಕರ ಮನಸ್ಸೆಂಬ ತಾವರೆಯಲ್ಲಿ ಸುಳಿದಾಡುತ್ತಲಿರುವ  ದುಂಬಿಯಾಗಿ, ತನ್ನ ಸ್ತುತಿಗಳ ಗಾಯನಕ್ಕೆ ನರ್ತಿಸುತ್ತಿರುವ ಮಿನುಗುವ ಶರೀರದ ನನ್ನ ಆರಾಧ್ಯ ತಾಯಿ ಶಾರದಾಂಬೆಯನ್ನು  ನಾನು ಸದಾ ಭಜಿಸುತ್ತೇನೆ.

ಭವಾಂಭೋಜನೇತ್ರಾಜಸಂಪೂಜ್ಯಮಾನಾಂ
ಲಸನ್ಮಂದಹಾಸಪ್ರಭಾ ವಕ್ತ್ರ ಚಿನ್ಹಾಂ |
ಚಲಚ್ಚಂಚಲಾಚಾರುತಾಟಂಕ ಕರ್ಣಾಂ
ಭಜೇ ಶಾರದಾಂಬಾಮಜಸ್ರಂಮದಂಬಾಂ  ||೮||

ಭಾವಾರ್ಥ:-ಬ್ರಹ್ಮ-ವಿಷ್ಣು-ಮಹೇಶ್ವರಾದಿ ದೇವದೇವರ್ಕಳಿಂದ ಪೂಜಿಸಲ್ಪಡುತ್ತಳಿರುವ, ಮಂದಹಾಸದ ಮೊಗದಿಂದ  ಶೋಭಿಸುತ್ತಿರುವ ಮನೋಹರವಾಗಿ ಓಲಾಡುತ್ತಲಿರುವ ಕರ್ಣಾಭರಣಗಳಿಂದ ಭೂಷಿತಳಾಗಿರುವ ನನ್ನ ಆರಾಧ್ಯ ತಾಯಿ  ಶಾರದಾಂಬೆಯನ್ನು ನಾನು ಸದಾ ಭಜಿಸುತ್ತೇನೆ. .
*********************************************************************************
            || ಇತಿ ಶ್ರೀ ಶಾರದಾ ಭುಜಂಗ ಪ್ರಯಾತಾಷ್ಟಕಮ್ ||
   || ಶ್ರೀ ಶಾರದಾ ಭುಜಂಗ ಪ್ರಯಾತಾಷ್ಟಕಗಳ ಭಾವಾರ್ಥವು ಈ ರೀತಿಯಾಗಿದೆ. ||
*********************************************************************************
-
 -೧೩-
       || ಶ್ರೀ ಭವಾನೀ ಅಷ್ಟಕಮ್ ||
  ***********************
ನ ತಾತೋ ನ ಮಾತಾ ನ ಬಂದುರ್ನ ದಾತಾ
ನ ಪುತ್ರೋ ನ ಪುತ್ರೀ ನ ಭೃತ್ಯೋ ನ ಭರ್ತಾ |
ನ ಜಾಯಾ ನ ವಿದ್ಯಾ ನ ವೃತ್ತಿರ್ಮಮೈವ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನೀ  ||೧||

ಭಾವಾರ್ಥ:-ಅಮ್ಮಾ!ಹೇ ಭವಾನೀ; ನನಗೆತಂದೆಯಿಲ್ಲ, ತಾಯಿಯಿಲ್ಲ, ಬಂಧುವಿಲ್ಲ, ಬಳಗವಿಲ್ಲ,ಕೊಡುವವನಿಲ್ಲ,ಮಗನಿಲ್ಲ,ಮಗಳಿಲ್ಲ,ಪತಿಯಿಲ್ಲ,ಸತಿಯಿಲ್ಲ,ವಿದ್ಯೆಯಿಲ್ಲ,ಬುದ್ಧಿಯಿಲ್ಲ, ನನ್ನದೆಂಬ ವೃತ್ತಿಯಿಲ್ಲ,ನೀನೊಬ್ಬಳೇ ಗತಿಯೆನಗೆ, ಹೇ! ಭವಾನಿಯೇ ನನಗೆ ಏಕ ಮಾತ್ರ ದಿಕ್ಕು  ನೀನಾಗಿರುವೆ. ತಾಯಿಯೇ ನಿನಗೆ ಸದಾ ನನ್ನ ಪ್ರಣಾಮಗಳು.

ಭವಾಬ್ದಾವಪಾರೇ ಮಹಾದು:ಖಭೀರು:
ಪಪಾತ ಪ್ರಕಾಮಿ ಪ್ರಲೋಭೀ ಪ್ರಮತ್ತ: |
ಕುಸಂಸಾರಪಾಶಪ್ರಬದ್ಧ: ಸದಾಹಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನೀ  ||೨||

ಭಾವಾರ್ಥ:-ಅನಂತವಾಗಿರುವ ಈ ಭವ ಸಾಗರದಲ್ಲಿ ಮಹಾದು:ಖಗಳ ಭೀತಿಗೊಳಪಟ್ಟು ಸಿಲುಕಿಕೊಂಡಿರುವೆನು. ಕಾಮುಕ, ಜಿಪುಣ, ಕರ್ತವ್ಯ ಭ್ರಷ್ಟನು ನಾನಾಗಿರುವೆ.ಹೇ! ಭವಾನಿಯೇ; ಸಂಸಾರಬಂದನದೊಳಗೆ ಯಾವಾಗಲೂ ಸುತ್ತುವರಿಯಲ್ಪಟ್ಟಿರುವ ನನಗೆ ನೀನೊಬ್ಬಳೇ ಗತಿಯಾಗಿರುವೆ, ಹೇ! ಭವಾನಿಯೇ ನನಗೆ ಏಕ ಮಾತ್ರ ದಿಕ್ಕು  ನೀನಾಗಿರುವೆ. ತಾಯಿಯೇ ನಿನಗೆ ಸದಾ ನನ್ನ ಪ್ರಣಾಮಗಳು.

ನ ಜಾನಾಮಿ ದಾನಂ ನ ಚ ಧ್ಯಾನಯೋಗಂ
ನ ಜಾನಾಮಿ ತಂತ್ರಂ ನ ಚ ಸ್ತೋತ್ರಮಂತ್ರಮ್ |
ನ ಜಾನಾಮಿ ಪೂಜಾಂ ನ ಚ ನ್ಯಾಸಯೋಗಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನೀ  ||೩||

ಭಾವಾರ್ಥ:- ದಾನವೆಂಬುದೇನೆಂಬುದ ನಾನರಿಯೆನು ತಾಯೇ; ಧ್ಯಾನಯೋಗದ ಬಗ್ಗೆಯಾಗಲೀ,ತಂತ್ರ ಸ್ತೋತ್ರಗಳ ಬಗೆಗಾಗಲೀ ನನಗೆ ಅರಿವಿಲ್ಲ.ಮಂತ್ರಗಳ ಬಗೆಗಿನ ಜ್ಞಾನವೇ ಎನಗಿಲ್ಲ. ಪೂಜಾ ನ್ಯಾಸಯೋಗಗಳೇನೆಂಬುದೇ ನನಗೆ ತಿಳಿಯದು. ಅಮ್ಮಾ; ಭವಾನಿಯೇ; ನೀನೊಬ್ಬಳೇ ಗತಿಯೆನಗೆ, ಹೇ! ಭವಾನಿಯೇ ನನಗೆ ಏಕ ಮಾತ್ರ ದಿಕ್ಕು  ನೀನಾಗಿರುವೆ. ತಾಯಿಯೇ ನಿನಗೆ ಸದಾ ನನ್ನ ಪ್ರಣಾಮಗಳು.

ನ ಜಾನಾಮಿ ಪುಣ್ಯಂ ನ ಜಾನಾಮಿ ತೀರ್ಥಂ
ನ ಜಾನಾಮಿ ಮುಕ್ತಿಂ ಲಯಂ ವಾ ಕದಾಚಿತ್ |
ನ ಜಾನಾಮಿ ಭಕ್ತಿಂ ವ್ರತಂ ವಾಪಿ ಮಾತ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನೀ  ||೪||

ಭಾವಾರ್ಥ:-ಪುಣ್ಯದ ಬಗ್ಗೆ ನನಗೆ ತಿಳಿಯದು. ತೀರ್ಥಗಳ ಬಗ್ಗೆ ನನಗೆ ಗೊತ್ತೇ ಇಲ್ಲಾ. ಮುಕ್ತಿಯ ಜ್ಞಾನವೆನಗಿನಿತಿಲ್ಲ. ಲಯದ ಕುರಿತಾಗಿಯೂ ಜ್ಞಾನವಿಲ್ಲ.ಭಕ್ತಿಯಾಗಲೀ ವ್ರತದ ಕುರಿತಾಗಿಯಾಗಲೀ ನನಗೆ ತಿಳಿಯದು.ನಾನು ನಂಬಿರುವುದು ಇಷ್ಟೇ ತಾಯೇ; ನೀನೊಬ್ಬಳೇ ಗತಿಯೆನಗೆ, ಹೇ! ಭವಾನಿಯೇ ನನಗೆ ಏಕ ಮಾತ್ರ ದಿಕ್ಕು  ನೀನಾಗಿರುವೆ. ತಾಯಿಯೇ ನಿನಗೆ ಸದಾ ನನ್ನ ಪ್ರಣಾಮಗಳು.

ಕುಕರ್ಮೀ ಕುಸಂಗೀ ಕುಬುದ್ಧಿ: ಕುದಾಸಂ
ಕುಲಾಚಾರಹೀನ: ಕದಾಚಾರಲೀನ: |
ಕುದೃಷ್ಟಿ:ಕುವಾಕ್ಯಪ್ರಬಂಧ: ಸದಾಸ್ಹಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನೀ  ||೫||

ಭಾವಾರ್ಥ:-ದುಷ್ಟ ಕಾರ್ಯಗಳನ್ನು ಮಾಡಿದವನು ನಾನು. ದುರ್ಜನ ಸಂಘದಲ್ಲಿಯೇ ಯಾವಾಗಲೂ ಇದ್ದವನು ನಾನು. ದುರ್ಬುದ್ಧಿಯವರ ಸೇವೆಗೈದವನು ನಾನು. ನಾನೆಂದೂ ಆಚಾರಗಳಲ್ಲಿ ಮಗ್ನನಾದವನಲ್ಲ. ಎಲ್ಲರನ್ನೂ ತುಚ್ಛವಾಗಿ ಕಂಡವನು ನಾನು. ದುರ್ವಚನಗಳ ಪ್ರಯೋಗದಲ್ಲಿ ನಿರತನಾಗಿದ್ದವನು ನಾನು. ಹೀಗಿರುತ್ತಾ ಭವಾನಿ ತಾಯಿಯೇ ನೀನೊಬ್ಬಳೇ ಗತಿಯೆನಗೆ, ನನ್ನನ್ನು ಕ್ಷಮಿಸು ಅಮ್ಮಾ. ಹೇ! ಭವಾನಿಯೇ ನನಗೆ ಏಕ ಮಾತ್ರ ದಿಕ್ಕು  ನೀನಾಗಿರುವೆ. ತಾಯಿಯೇ ನಿನಗೆ ಸದಾ ನನ್ನ ಪ್ರಣಾಮಗಳು.

ಪ್ರಜೇಶಂ ರಮೇಶಂ ಮಹೇಶಂ ಸುರೇಶಂ
ದಿನೇಶಂ ನಿಶೀಥೇಶ್ವರಂ ವಾ ಕದಾಚಿತ್ |
ನ ಜಾನಾಮಿ ಚಾನ್ಯತ್ ಸದಾಸ್ಹಂ ಶರಣ್ಯೇ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನೀ  ||೬||

ಭಾವಾರ್ಥ:-ಹೇ! ಭವಾನೀ; ಪ್ರಜಾಪತಿ ಬ್ರಹ್ಮನಾಗಲೀ, ರಮಾಕಾಂತ ವಿಷ್ಣುವಾಗಲೀ, ಲಯಕರ್ತ ಶಿವನಾಗಲೀ, ಅಮರೇಶ ಇಂದ್ರನಾಗಲೀ ,ಸೂರ್ಯ-ಚಂದ್ರರಾಗಲೀ ನನಗೆ ಎಂದಿಗೂ ತಿಳಿಯದು. ಹಾಗಾಗಿ ನಾನು ನಿನಗೆ ಶರಣು ಬಂದಿರುವೆ. ನೀನೊಬ್ಬಳೇ ಗತಿಯೆನಗೆ, ಹೇ! ಭವಾನಿಯೇ ನನಗೆ ಏಕ ಮಾತ್ರ ದಿಕ್ಕು  ನೀನಾಗಿರುವೆ. ತಾಯಿಯೇ ನಿನಗೆ ಸದಾ ನನ್ನ ಪ್ರಣಾಮಗಳು.

ವಿವಾದೇ ವಿಷಾದೇ ಪ್ರಮಾದೇ ಪ್ರವಾಸೇ
ಜಲೇ ಚಾನಲೇ ಪರ್ವತೇ ಶತ್ರುಮಧ್ಯೇ |
ಅರಣ್ಯೇ ಶರಣ್ಯೇ ಸದಾ ಮಾ ಪ್ರಪಾಹಿ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನೀ  ||೭||

ಭಾವಾರ್ಥ:-ತಾಯಿ ಭವಾನಿಯೇ; ಶರಣು ಬಂದಿರುವ ನನ್ನನ್ನು ವಿವಾದಾತೀತನನ್ನಾಗಿಸು.ದು:ಖದ ಕಾಲದಲ್ಲಿ, ಪ್ರಮಾದಗಳುಂಟಾದಾಗ, ಪ್ರವಾಸದ ಸಮಯದಲ್ಲಿ, ಜಲ, ಅಗ್ನಿ, ಪರ್ವತ ಪ್ರದೇಶಗಳಲ್ಲಿ ನಾನಿರುವಾಗ ನೀನೇ ನನ್ನನ್ನು ಕಾಪಾಡುವವಳು. ಅಮ್ಮಾ; ನೀನೊಬ್ಬಳೇ ಗತಿಯೆನಗೆ, ಹೇ! ಭವಾನಿಯೇ ನನಗೆ ಏಕ ಮಾತ್ರ ದಿಕ್ಕು  ನೀನಾಗಿರುವೆ. ತಾಯಿಯೇ ನಿನಗೆ ಸದಾ ನನ್ನ ಪ್ರಣಾಮಗಳು.

ಅನಾಥೋ ದರಿದ್ರೋ ಜರಾರೋಗಯುಕ್ತೋ
ಮಹಾಕ್ಷೀಣದೀನ: ಸದಾ ಜಾಡ್ಯವಕ್ತ್ರ: |
ವಿಪತ್ತೌ ಪ್ರವಿಷ್ಟ: ಪ್ರನಷ್ಟ: ಸದಾಸ್ಹಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನೀ  ||೮||

ಭಾವಾರ್ಥ:- ಅಮ್ಮಾ ನಾನು ಯಾವತ್ತೂ ಅನಾಥನೇ ಆಗಿರುವೆ. ದರಿದ್ರನೂ ನಾನಾಗಿದ್ದೇನೆ. ಮುಪ್ಪು ಬೇನೆಗಳಿಗೆ ಸಿಲುಕಿದವನು. ಅತ್ಯಂತ ದೀನನು ನಾನು. ನಾನು ಆಲಸ್ಯನು. ಶಕ್ತಿಹೀನನು. ವಿಪತ್ತುಗಳು  ಸದಾ ನನ್ನಲ್ಲಿ ಒಳಹೊಕ್ಕಿಕೊಂಡಿವೆ.ಇದರಿಂದಾಗಿ ನಷ್ಟದಲ್ಲಿ ನಾನು ಮುಳುಗಿ ಹೋಗಿರುವೆನು. ತಾಯಿ ಭವಾನೀ,  ನೀನೋಬ್ಬಳೇ ಗತಿಯೆನಗೆ, ಹೇ! ಭವಾನಿಯೇ ನನಗೆ ಏಕ ಮಾತ್ರ ದಿಕ್ಕು  ನೀನಾಗಿರುವೆ. ತಾಯಿಯೇ ನಿನಗೆ ಸದಾ ನನ್ನ ಪ್ರಣಾಮಗಳು.
*********************************************************************************
                         || ಇತಿ ಶ್ರೀ ಭವಾನೀ ಅಷ್ಟಕಮ್ ||
              || ಈ ರೀತಿಯಾಗಿ ಶ್ರೀ ಭವಾನೀ ಅಷ್ಟಕಗಳ ಭಾವಾರ್ಥವು. ||
********************************************************************************* 
                  - ೧೪ -
 || ದೇವ್ಯಪರಾಧಕ್ಷಮಾಪಣ ಸ್ತೋತ್ರಮ್ ||
*******************************
ನ ಮಂತ್ರಂ ನೋ ಯಂತ್ರಂ ತದಪಿ ಚ ನ ಜಾನೇ ಸ್ತುತಿಮಹೋ
ನ ಚಾಹ್ವಾನಂ ಧ್ಯಾನಂ ತದಪಿ ಚ ನ ಜಾನೇ ಸ್ತುತಿಕಥಾ: |
ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನಂ
ಪರಂ ಜಾನೇ ಮಾತಸ್ತ್ವದನುಸರಣಂ ಕ್ಲೇಶಹರಣಮ್ ||೧||

ಭಾವಾರ್ಥ:-ಅಮ್ಮಾ! ನನಗೆ ನಿನ್ನ ಮಂತ್ರವಾಗಲೀ ಯಂತ್ರವಾಗಲೀ ಸ್ತುತಿಯಾಗಲೀ ತಿಳಿದಿಲ್ಲ. ತಾಯೀ, ನನಗೆ ನಿನ್ನನ್ನು ಆಹ್ವಾನಿಸಲಾಗಲೀ ಧ್ಯಾನಿಸಲಾಗಲೀ ಸ್ತುತಿಕಥೆಗಳಾಗಲೀ ಗೊತ್ತಿರುವುದಿಲ್ಲ. ನಿನ್ನ ಮುದ್ರೆಯನ್ನೂ ನಾನರಿಯೆನು. ನಿನ್ನ ಎದುರು ಮೊರೆಯಿಡಲೂ ನಾನರಿಯೆ. ಆದರೆ ಅಮ್ಮಾ, ನನಗೆ ಇಷ್ಟು ಮಾತ್ರಾ ಅರಿವಿದೆ; ನಿನ್ನನ್ನು ಹಿಂಬಾಲಿಸಿದರೆ ನನ್ನ ಸಂಕಟಗಳೆಲ್ಲವೂ ನಾಶವಾಗುತ್ತವೆ.

ವಿಧೇರಜ್ಞಾನೇನ ದ್ರವಿಣವಿರಹೇಣಾಲಸತಯಾ
ವಿಧೇಯಾಶಕ್ಯತ್ವಾತ್ತವ ಚರಣಯೋರ್ಯಾ ಚ್ಯುತಿರಭೂತ್ |
ತದೇತತ್ ಕ್ಷಂತವ್ಯಂ ಜನನಿ ಸಕಲೋದ್ಧಾರಿಣಿ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ  ||೨||

ಭಾವಾರ್ಥ:-ಹೇ! ತಾಯೀ; ವಿಧಿಯ ಆಟದಿಂದಲೂ, ನನ್ನ ಬಡತನದಿಂದಲೂ ಜಡತ್ವದಿಂದಲೂ, ಹಾಗೇಯೇ, ನಿನಗೆ ವಿಧೇಯನಾಗಿರಲು ಶಕ್ಯನಾಗದಿರುವುದರಿಂದಲೂ, ನಿನ್ನ ಅಡಿದಾವರೆಗಳ ಸೇವೆಯಿಂದ ಹೊರದೂಡಲ್ಪಟ್ಟಿರುವೆನು; ಹೇ ಅಮ್ಮಾ ; ಸಕಲೋದ್ಧಾರಿಣಿ ತಾಯಿ ಶಿವೇ,ನೀನು ನನ್ನ ಸರ್ವಾಪರಾಧಗಳನ್ನು ಕ್ಷಮಿಸು. ಅಮ್ಮಾ; ಲೋಕದಲ್ಲಿ ದುಷ್ಟ ಮಗನು ಹುಟ್ಟಬಹುದು, ಆದರೆ ದುಷ್ಟ ತಾಯಿಯು ಎಲ್ಲಿಯೂ ಕಾಣಲು ಸಿಗಲಾರದು.

ಪೃಥಿವ್ಯಾಂ ಪುತ್ರಾಸ್ತೇ ಜನನಿ ಬಹವ: ಸಂತಿ ಸರಲಾ:
ಪರಂ ತೇಷಾಂ ಮಧ್ಯೇ ವಿರಲತರಲೋsಹಂ ತವ ಸುತ: |
ಮದೀಯೋsಯಂ ತ್ಯಾಗ: ಸುಮುಚಿತಮಿದಂ ತವ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ  ||೩||

ಭಾವಾರ್ಥ:- ಅಮ್ಮಾ! ಈ ಭೂಮಂಡಲದಲ್ಲಿ ಪುಣ್ಯ ಪುರುಷರೆನಿಸಿದ ಅದೆಷ್ಟೋ ಮಕ್ಕಳು ನಿನಗಿರುವರು. ಅವರುಗಳ ನಡುವೆ ಈ ನಿನ್ನ ಮಗನಾಗಿರುವ ನಾನು ಕೇವಲ ಅತ್ಯಲ್ಪನೆನಿಸಿದವನು. ಹೇ! ಶುಭದಾಯಕಿಯಾಗಿರುವ ಶಿವೇ; ನಿನ್ನ ಬಿಟ್ಟು ನಾನಿರುವದು ಸರಿಯೆನಿಸಬಹುದು. ಆದರೆ ನನ್ನನ್ನು ನೀನು ತ್ಯಜಿಸಿರುವುದು ಉಚಿತವಲ್ಲ. ಏಕೆಂದರೆ ಜಗತ್ತಿನಲ್ಲಿ ಕೆಟ್ಟ ಮಗನು ಹುಟ್ಟಲೂ ಬಹುದು. ಆದರೆ ಕಿಂಚಿತ್ತಾದರೂ ಕೆಟ್ಟವಳಾಗಿರುವ ತಾಯಿಯು ಎಲ್ಲಿಯೂ ಕಾಣಸಿಗಲಾರಳು.

ಜಗನ್ಮಾತರ್ಮಾತಸ್ತವ ಚರಣ ಸೇವಾ ನ ರಚಿತಾ
ನ ವಾ ದತ್ತಂ ದೇವಿ ದ್ರವಿಣಮಪಿ ಭೂಯಸ್ತವ ಮಯಾ |
ತಥಾsಪಿ ತ್ವಂ ಸ್ನೇಹಂ ಮಯಿ ನಿರುಪಮಂ ಯತ್ಕುರುಷೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ  ||೪||

ಭಾವಾರ್ಥ:-ಹೇ! ಜಗದಂಬೆಯೇ; ಅಮ್ಮಾ! ನಾನು ಎಂದೂ  ನಿನ್ನ ಚರಣ ಸೇವೆ ಗೈದವನಲ್ಲ. ಅಥವಾ ನಿನಗಾಗಿ ಬಹಳಷ್ಟು ಸಂಪತ್ತನ್ನು ದಾನ ಮಾಡಿದವನೂ ಅಲ್ಲ. ಆದಾಗ್ಯೂ ನಿನಗೆ ನನ್ನಲ್ಲಿ ಇರುವ ಸರಿಸಾಟಿಯಿಲ್ಲದ ಪ್ರೇಮವದು ಅನುಪಮವಾದುದು.  ಏಕೆಂದರೆ ಜಗತ್ತಿನಲ್ಲಿ ಕೆಟ್ಟ ಮಗನು ಹುಟ್ಟಲೂ ಬಹುದು. ಆದರೆ ಕಿಂಚಿತ್ತಾದರೂ ಕೆಟ್ಟವಳಾಗಿರುವ ತಾಯಿಯು ಎಲ್ಲಿಯೂ ಕಾಣಸಿಗಲಾರಳು.

ಪರಿತ್ಯಕ್ತ್ವಾ ದೇವಾನ್ ವಿವಿಧವಿಧಿಸೇವಾಕುಲತಯಾ
ಮಯಾಪಂಚಾಶೀತೇರಧಿಕಮಪನೀತೇತು ವಯಸಿ |
ಇದಾನೀಂ ಮೇ ಮಾತಸ್ತವ ಯದಿ ಕೃಪಾ ನಾಪಿ ಭವಿತಾ
ನಿರಾಲಂಬೋ ಲಂಬೋದರಜನನಿ ಕಂ ಯಾಮಿ ಶರಣಮ್  ||೫||

ಭಾವಾರ್ಥ:- ಎಲೈ ಗಜಮುಖನ ಮಾತೆಯೇ! ಪೂಜಾದಿಗಳ ವಿಧಿ ನಿಯಮಗಳ ನಾನರಿಯೆ. ಆದ ಕಾರಣ ವಿವಿಧ ದೇವತೆಗಳ ಅರ್ಚನೆಯನ್ನು ನಾನು ಪರಿತ್ಯಜಿಸಿರುವೆ. ನಗೀಗಾಗಲೇ ಎಪ್ಪತ್ತೈದಕ್ಕೂ ಅಧಿಕ ವಯಸ್ಸು ಕಳೆಯಿತು. ಅಮ್ಮಾ; ತಾಯಿಯೇ; ಇನ್ನಾದರೂ ನೀನು ನನ್ನಲ್ಲಿ ಕರುಣೆದೋರದಿದ್ದರೆ ನಿರಾಶ್ರಿತನಾದ ನಾನು ಆರಲ್ಲಿ ಮೊರೆಯಿಟ್ಟು ಶರಣಾಗಲಿ?

ಶ್ವಪಾಕೋ ಜಲ್ಪಾಕೋ ಭವತಿ ಮಧುಪಾಕೋಪಮಗಿರಾ
ನಿರಾತಂಕೋ ರಂಕೋ ವಿಹರತಿ ಚಿರಂ ಕೋಟಿಕನಕೈ: |
ತವಾಪರ್ಣೇ ಕರ್ಣೇ ವಿಶತಿ ಮನುವರ್ಣೇ ಫಲಮಿದಂ
ಜನ: ಕೋ ಜಾನೀತೇ ಜನನಿ ಜಪನೀಯಂ ಜಪವಿಧೌ  ||೬||

ಭಾವಾರ್ಥ:-ಅಮ್ಮಾ ಅಪರ್ಣೇ! ನಿನ್ನ ಅಮೃತಮಯ ಸುಮಧುರ ಮಂತ್ರಾಕ್ಷರಗಳು ಕಿವಿಯೊಳಗೆ ಹೊಕ್ಕ ಮಾತ್ರದಲ್ಲಿ ಚಂಡಾಲನು ಕೂಡಾ ಜೇನಿನಂತಹಾ ಸುಮಧುರ ವಾಣಿಗಳನು ಹೊಂದುವನು. ದಟ್ಟ ದರಿದ್ರನೂ ಕುಭೇರ ಸದೃಶನಾಗಿ ಯಾವುದೇ ಆತಂಕಗಳ ಗೊಡವೆಯಿಲ್ಲದೆ ಬಹುಕಾಲ ಸಂಚರಿಸುವನು. ಹೀಗಿರುವಾಗ ಅಮ್ಮಾ, ವಿಧಿವತ್ತಾಗಿ ನಿನ್ನ ಜಪಾನುಷ್ಠಾನ ನಿರತನಿಗೆ ಎಂಥಾ ಫಲ ದೊರಕಬಹುದು ಎಂಬುದನ್ನಾರು ಹೇಳಲು ಸಾಧ್ಯ?

ಚಿತಾಭಸ್ಮಾ ಲೇಪೋ ಗರಲಮಶನಂ ದಿಕ್ಪಟಧರೋ
ಜಟಾಧಾರೀಕಂಠೇ ಭುಜಗಪತಿಹಾರೀ ಪಶುಪತಿ: |
ಕಪಾಲೀ ಭೂತೇಶೋ ಭಜತಿ ಜಗದೀಶೈಕಪದವೀಂ
ಭವಾನೀ ತ್ವತ್ ಪಾಣಿಗ್ರಹಣಪರಿಪಾಟೀ ಫಲಮಿದಮ್  ||೭||

ಭಾವಾರ್ಥ:- ಚಿತಾಗಾರದ ಭಸ್ಮವನ್ನು ಶರೀರಕ್ಕೆ ಲೇಪಿಸಿಕೊಂಡವನೂ, ವಿಷವನ್ನೇ ಕುಡಿದವನೂ, ಬೆತ್ತಲೆಯ ಮೈಯವನೂ, ಜಟೆಯನ್ನು ಧರಿಸಿಕೊಂಡವನೂ,ಕಂಠದಲ್ಲಿ ಉರಗವನ್ನು ಹಾರವಾಗಿ ಧರಿಸಿದವನೂ, ಹಸ್ತದಲ್ಲಿ ತಲೆ ಬುರುಡೆಯನ್ನು ಹಿಡಿದು ಕೊಂಡಿರುವವನೂ, ಪಶುಗಳ ಒಡೆಯನೂ ಆಗಿರುವ ಭೂತಾದಿಗಳ ಮಧ್ಯ ವಾಸಿಸುವ ಶಿವನು ಅದ್ವೀತೀಯವಾಗಿರುವಂತಹಾ ಜಗದೀಶ್ವರನ ಪದವಿಯನ್ನು ಹೊಂದಿರುವುದು ನಿನ್ನ ಪಾಣಿಗ್ರಹಣದ ಫಲದಿಂದ ಸಾಧ್ಯವಾಯಿತು.

ನ ಮೋಕ್ಷಸ್ಯಾಕಾಂಕ್ಷಾ ನ ಚ ವಿಭವವಾಂಛಾsಪಿ ಚ ನ ಮೇ
ನ ವಿಜ್ಞಾನಾಪೇಕ್ಷಾ ಶಶಿಮುಖಿ ಸುಖೇಚ್ಛಾsಪಿ ನ ಪುನ: |
ಅತಸ್ವಾಂ ಸಂಯಾಚೇ ಜನನಿ ಜನನಂ ಯಾತು ಮಮ ವೈ
ಮೃಡಾನೀ ರುದ್ರಾಣೀ ಶಿವ ಶಿವ ಭವಾನೀತಿ ಜಪತ:  ||೮||

ಭಾವಾರ್ಥ:- ಹೇ ಮಾತೆ ಚಂದ್ರವದನೇ! ನನಗೆ ಮೋಕ್ಷದ ಆಶೆಯಿಲ್ಲ. ಧನ ಸಂಪತ್ತುಗಳ ಬಯಕೆಯಿಲ್ಲ. ಸಂಸಾರ ವೈಭವದ ಇಚ್ಛೆಯಿಲ್ಲ. ಜ್ಞಾನಾಪೇಕ್ಷೆಯಾಗಲೀ ಸುಖದ ಅಭಿಲಾಷೆಯಾಗಲೀ ಇಲ್ಲ. ಆದ್ದರಿಂದ ಹೇ ತಾಯಿಯೇ; ನಾನು ನಿನ್ನನ್ನು ಬೇಡಿಕೊಳ್ಳುವುದಿಷ್ಟೇ; ಮೃಡಾನಿ.ರುದ್ರಾಣಿ,ಶಿವ,ಶಿವಾ, ಭವಾನೀ, ಎಂದು ಜಪಿಸುತ್ತಾ ನನ್ನ ಜನ್ಮವೆಲ್ಲವೂ ಕಳೆದುಹೋಗಲಿ.

ನಾರಾಧಿತಾsಸಿ ವಿಧಿನಾ ವಿವಿಧೋಪಚಾರೈ:
ಕಿಂ ರುಕ್ಷ ಚಿಂತನಪರೈರ್ನ ಕೃತಂ ವಚೋಭಿ: |
ಶ್ಯಾಮೇ ತ್ವಮೇವ ಯದಿ ಕಿಂಚನ ಮಯ್ಯನಾಥೇ
ಧತ್ಸೇ ಕೃಪಾಮುಚಿತಮಂಬ ಪರಂ ತವೈವ  ||೯||

ಭಾವಾರ್ಥ:- ಹೇ ಮಾತೇಯೇ! ನಾನೆಂದೂ ವಿಧ ವಿಧವಾದ ಉಪಚಾರಗಳಿಂದ ನಿನ್ನನ್ನು ಅರ್ಚಿಸಿಲ್ಲ. ನೀರಸವಾದ ಚಿಂತನೆಗಳಲ್ಲಿ ತತ್ಪರನಾಗಿ ಕಾಲವನ್ನು ಕಳೆದು ಸಲ್ಲದ ಕರ್ಮಗಳನ್ನು ಮಾಡಿದೆನು. ಆದಾಗ್ಯೂ ದಿಕ್ಕಿಲ್ಲದ ನನ್ನಲ್ಲಿ ನೀನು ಇನಿತಾದರೂ ಕೃಪೆ ಮಾಡಿರುವೆ. ಅದು ನಿನಗೆ ತಕ್ಕದ್ದೇ ಆಗಿದೆ ಏಕೆಂದರೆ ನೀನು ನನ್ನ ಪೊರೆಯುವ ತಾಯಿಯಾಗಿರುವೆ.

ಆಪತ್ಸು ಮಗ್ನ: ಸ್ಮರಣಂ ತ್ವದೀಯಂ
ಕರೋಮಿ ದುರ್ಗೇ ಕರುಣಾರ್ಣವೇಶಿ |
ನೈತಚ್ಛಠತ್ವಂ ಮಮ ಭಾವಯೇಥಾ:
ಕ್ಷುಧಾತೃಷಾರ್ತಾ ಜನನೀ ಸ್ಮರಂತಿ  ||೧೦||

ಭಾವಾರ್ಥ:- ಅಮ್ಮಾ ದುರ್ಗಾಮಾತೆಯೇ! ಕರುಣಾಪೂರ್ಣೇಯೇ; ಈಶ್ವರೀ, ಆಪತ್ತಿನಲ್ಲಿ ಮುಳುಗಿ ನಿನ್ನನ್ನು ಸ್ಮರಿಸುತ್ತಿದ್ದೇನೆ. ಇದನ್ನು ಸಟೆಯೆಂದಾಗಲೀ, ಮೋಸವೆಂದಾಗಲೀ ಭಾವಿಸದಿರು ಅಮ್ಮಾ! ಏಕೆಂದರೆ ಹಸಿವು ಬಾಯಾರಿದಾಗ ಮಾತ್ರಾ ಮಕ್ಕಳು ತಾಯಿಗಾಗಿ ಹಂಬಲಿಸುತ್ತಾರೆಯಲ್ಲವೇ?

ಜಗದಂಬ ವಿಚಿತ್ರಮತ್ರ ಕಿಂ
ಪರಿಪೂರ್ಣಾ ಕರುಣಾಸ್ತಿ ಚೇನ್ಮಯಿ |
ಅಪರಾಧಪರಂಪರಾವೃತಂ ನ ಹಿ
ಮಾತಾ ಸಮುಪೇಕ್ಷತೇ ಸುತಮ್  ||೧೧||

ಭಾವಾರ್ಥ:- ಹೇ! ಜಗಜ್ಜನನಿ ತಾಯಿಯೇ; ನೀನು ನನ್ನ ಬಗ್ಗೆ ಸಂಪೂರ್ಣ ಕರುಣಾಪೂರ್ಣೆಯಾಗಿದ್ದಲ್ಲಿ ಆಶ್ಚರ್ಯವೇನೂ ಇಲ್ಲ. ಏಕೆಂದರೆ ಸಹಸ್ರಾಪರಾಧಗಳನ್ನು ಮಾಡಿದರೂ ಮಾತೆಯು ಎಂದಿಗೂ ಮಗನನ್ನು ಉಪೇಕ್ಷಿಸುವುದಿಲ್ಲ.

ಮತ್ಸಮ: ಪಾತಕೀ ನಾಸ್ತಿ
ಪಾಪಘ್ನೀ ತ್ವತ್ಸಮಾ ನ ಹಿ |
ಏವಂ ಜ್ಞಾತ್ವಾ ಮಹಾದೇವಿ
ಯಥಾ ಯೋಗ್ಯಂ ತಥಾ ಕುರು  ||೧೨||

ಭಾವಾರ್ಥ:-ಹೇ! ಜಗದೋದ್ಧಾರಿಣಿ ತಾಯೇ! ಮಹಾದೇವೀ; ನನ್ನಂತಹಾ ಪಾಪಿಷ್ಟ ಇನ್ನೊಬ್ಬನಿಲ್ಲ. ನಿನ್ನಂತಹಾ ಪಾಪನಾಶಕಳೂ ಬೇರೊಬ್ಬರಿಲ್ಲ. ಆದ ಕಾರಣ ಅಮ್ಮಾ; ತಾಯೀ; ಇದನ್ನು ಅರಿತವಳಾಗಿರುವ ನೀನು ಯಾವುದು ಉಚಿತವೆನಿಸುವುದೋ ಅದನ್ನೇ ನನಗೆ ಅನುಗ್ರಹಿಸು.
*********************************************************************************  ||ಇತಿ ಶ್ರೀ ಮತ್ಪರಮಹಂಸಪರಿವ್ರಾಜಕಾಚಾರ್ಯ ಶ್ರೀಮಚ್ಛಂಕರಾಚಾರ್ಯ ವಿರಚಿತಂ ದೇವ್ಯಪರಾಧಕ್ಷಮಾಪಣ ಸ್ತೋತ್ರಮ್ ||

||ಈ ತೆರನಾಗಿ ಪರಮಪೂಜ್ಯ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀಮಚ್ಛಂಕರಾಚಾರ್ಯ  ಭಗವತ್ಪಾದರಿಂದ ರಚಿತವಾಗಿರುವ ದೇವ್ಯಪರಾಧ ಕ್ಷಮಾಪನಾ ಸ್ತೋತ್ರಗಳ ಭಾವಾರ್ಥವಾಗಿದೆ. ||
*********************************************************************************
                               - ೧೫ -
      || ಶ್ರೀ ತುಲಸೀ ವಂದನಮ್  ||
      **********************
ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾ: ಸರಿತಸ್ತತಾ |
ವಾಸುದೇವಾದಯೋ ದೇವಾ ವಸಂತಿ ತುಲಸೀವನೇ ||೧|

ಭಾವಾರ್ಥ:-ಪುಷ್ಕರಾದಿ ಪವಿತ್ರ ತೀರ್ಥಗಳು,ಗಂಗೆಯೇ ಮೊದಲಾದಿಯಾದ ಪಾವನ ನದಿಗಳು, ಹಾಗೂ ಶ್ರೀಹರಿಯೇ ಮೊದಲಾದ ಪೂಜನೀಯದೇವತೆಗಳು ತುಲಸೀವನಗಳಲ್ಲಿ ನೆಲೆಸಿರುತ್ತಾರೆ.

ತುಲಸೀಕಾನನಂ ಯತ್ರ ಯತ್ರ ಪದ್ಮವನಾನಿ ಚ |
ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿ:  ||೨||

ಭಾವಾರ್ಥ:-ತುಲಸಿಯು ಪುಷ್ಕಳವಾಗಿರುವಲ್ಲಿ,ಕಮಲಗಳು ಬಹುವಾಗಿ ಇರುವಲ್ಲಿ, ವೈಷ್ಣವರು ಹೆಚ್ಚಾಗಿ ವಾಸಿಸುವಲ್ಲಿ ಮಹಾವಿಷ್ಣುವಿನ ದಿವ್ಯ ಸಾನ್ನಿದ್ಧ್ಯವಿದೆ.

ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವದೇವತಾ: |
ಯದಗ್ರೇ ಸರ್ವ ವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್ |೩||

ಭಾವಾರ್ಥ:-ಯಾರ ತಳಬಾಗದಲ್ಲಿ ಎಲ್ಲ ಪವಿತ್ರ ತೀರ್ಥಗಳಿವೆಯೋ ಯಾರ ಮಧ್ಯದಲ್ಲಿ ಸರ್ವ ದೇವತೆಗಳಿದ್ದಾರೆಯೋ, ಯಾರ ತುದಿಯಲ್ಲಿ ಸಮಸ್ತ ವೇದಗಳು ನೆಲೆಗೊಂಡಿವೆಯೋ ಅಂತಹಾ ತುಲಸಿಯೇ ನಿನಗೆ ನಾನು ನಮಸ್ಕರಿಸುತ್ತೇನೆ.

ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೋದ್ಭೂತೇ ತುಲಸಿ ತ್ವಾಂ ನಮಾಮ್ಯಹಮ್ ||೪||

ಭಾವಾರ್ಥ:-ತುಲಸಿ ಮಾತೆಯೇ ಪ್ರಸನ್ನಳಾಗು. ಹರಿವಲ್ಲಭೆಯೇ ಪ್ರಸನ್ನಳಾಗು.ಕ್ಷೀರಮಥನಕಾಲದಲ್ಲಿ ಉದ್ಭವಿಸಿದವಳೇ ಪ್ರಸನ್ನಳಾಗು.ತುಲಸಿ ಮಾತೆಯೇ ನಿನಗಿದೋ ನಾನು ನಮಸ್ಕರಿಸುವೆ.

ನಮಸ್ತುಲಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ |
ನಮೋ ಮೋಕ್ಷಪ್ರದೇ ದೇವಿ ನಮ: ಸಂಪತ್ ಪ್ರದಾಯಿನಿ ||೫||

ಭಾವರ್ಥ:-ಮಂಗಲದಾಯಿನಿಯಾದ ತುಲಸಿಯೇ ನಮಸ್ಕರಿಸುವೆ.ಶುಭದಾಯಕಳಾಗಿರುವ ಹರಿಪ್ರಿಯಳೇ ನನ್ನ ನಮನಗಳು. ಮುಕ್ತಿಪ್ರದಾಯಕ ದೇವಿಯೇ ನಿನಗೆ ನನ್ನ ಪ್ರಣಾಮಗಳು. ಸಂಪದವನ್ನೀವ ತಾಯಿಯೇ ನಿನಗೆ ನನ್ನ ನಮನಗಳು.

ತುಲಸಿ ಶ್ರೀ ಸಖಿ ಶುಭೇ ಪಾಪಹಾರಿಣಿ ಪುಣ್ಯದೇ |
ನಮಸ್ತೇ ನಾರದನುತೇ ನಾರಾಯಣ ಮನ:ಪ್ರಿಯೇ ||೬||

ಭಾವಾರ್ಥ:-ಹೇ! ತುಲಸಿದೇವಿಯೇ; ಲಕ್ಷ್ಮೀ ದೇವಿಯ ಸ್ನೇಹಿತೆಯೇ; ಒಳಿತು ಕೆಡುಕುಗಳನ್ನು ನಿವಾರಿಸುವವಳೇ; ಪುಣ್ಯವನ್ನು ಕರುಣಿಸುವವಳೇ; ನಾರದನಿಂದ ಸ್ತುತಿಸಲ್ಪಡುವವಳೇ ;ಶ್ರೀಮನ್ನಾರಾಯಣನ ಮನೋವಲ್ಲಭೆಯೇ ನಿನಗೆ ಇದೋ ನನ್ನ ನಮನಗಳು.

ಯಾ ದೃಷ್ಟಾ ನಿಖಿಲಾಘ ಸಂಘ ಶಮನೀ ಸ್ಪೃಷ್ಟಾವಪು:ಪಾವನೀ
ರೋಗಾಣಾಮಭಿವಂದತಾ ನಿರಸನೀ ಸಿಕ್ತಾಂತಕ ತ್ರಾಸಿನೀ |
ಪ್ರತ್ಯಾಸತ್ತಿವಿಧಾಯಿನೀ ಭಗವತ: ಕೃಷ್ಣಸ್ಯ ಸಂರೋಪಿತಾ
ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮ:  ||೭||

ಭಾವಾರ್ಥ:-ಹೇ ತುಲಸಿ ಮಾತೆಯೇ! ಕಂಡ ಮಾತ್ರದಲ್ಲೇ ಎಲ್ಲಾ ದೋಷಗಳ ಸಮೂಹವನ್ನೇ ಪರಿಹರಿಹರಿಸುವ ಮಹಾಶಕ್ತಿದಾಯಿನಿಯಾಗಿ, ಮುಟ್ಟಿದ ಮಾತ್ರದಿಂದಲೇ ದೇಹವನ್ನು ಪವಿತ್ರಗೊಳಿಸುವ ಪಾವನಮಯೆಯಾಗಿ, ನಮಸ್ಕರಿಸಿದ ಮಾತ್ರದಿಂದಲೇ ಸಮಸ್ತ ರೋಗಗಳನ್ನು ನಿವಾರಿಸುವ ಮಹಿಮಾನ್ವಿತೆಯಾಗಿ, ನೀರೆರೆದು ಪೋಷಿಸಿದಲ್ಲಿ ಯಮನನ್ನು ಬೆದರಿಸುವವಳಾಗಿ, ನೆಟ್ಟು ಬೆಳೆಸಿದರೆ ಭಗವಂತನಾಗಿರುವ ಶ್ರೀಕೃಷ್ಣನಲ್ಲಿ ಭಕ್ತಿಯನ್ನು ಉಂಟು ಮಾಡುವವಳಾಗಿ, ಆರಾಧ್ಯ ದೇವರ ಚರಣಾರವಿಂದಗಳಿಗರ್ಪಿಸಿದಾಗ ಮೋಕ್ಷಪ್ರದಾಯಕಿಯಾಗುವ ಮಹಾತಾಯಿ ತುಳಸಿಯೇ ನಿನಗಿದೋ ಪ್ರಣಾಮಗಳು.
*********************************************************************************                                                                                                                                                   
 || ಇತಿ ಶ್ರೀತುಲಸೀ ವಂದನಮ್ ||                   || ಈ ರೀತಿಯಾಗಿ ಶ್ರೀತುಲಸೀ ವಂದನಾ ಶ್ಲೋಕಗಳ ಭಾವಾರ್ಥವು ||
*********************************************************************************
                                             -೧೬-
      || ಶ್ರೀ ತುಲಸೀ ಸ್ತೋತ್ರಮ್ ||
     **********************
     || ಶ್ರೀ ಗಣೇಶಾಯ ನಮ: ||
ಜಗದ್ಧಾತ್ರಿ ನಮಸ್ತುಭ್ಯಂ ವಿಷ್ಣೋಶ್ಚ ಪ್ರಿಯವಲ್ಲಭೇ |
ಯತೋ ಬ್ರಹ್ಮಾದಯೋದೇವಾ: ಸೃಷ್ಟಿಸ್ಥಿತ್ಯಂತಕಾರಿಣ:  ||೧||

ಭಾವಾರ್ಥ:- ವಿಷ್ಣುವಿನ ಪ್ರಿಯಕರಳಾಗಿ ಬ್ರಹ್ಮಾಂಡವನ್ನು ಧರಿಸಿರುವ ಮಾತೆಯೇ ನಿನಗೆ ನಮಸ್ಕರಿಸುವೆ.ನಿನ್ನಿಂದಲೇ ಬ್ರಹ್ಮನೇ ಮೊದಲಾದ ದೇವಾನುದೇವತೆಗಳು ಸೃಷ್ಟಿ,ಪಾಲನೆ,ಮತ್ತು ಲಯಕಾರ್ಯಗಳನ್ನು ನಿರ್ವಹಿಸುವ ಶಕ್ತಿಯುಳ್ಳವರಾದರು.

ನಮಸ್ತುಲಸಿ ಕಲ್ಯಾಣೀ ನಮೋವಿಷ್ಣು ಪ್ರಿಯೇಶುಭೇ |
ನಮೋಮೋಕ್ಷ ಪ್ರದೇದೇವಿ ನಮ: ಸಂಪತ್ಪ್ರದಾಯಿಕೆ ||೨||

ಭಾವಾರ್ಥ:-ಶುಭವನ್ನು ಕರುಣಿಸುವ ತುಲಸಿಯೇ ನಿನಗೆ ನಾನು ನಮಸ್ಕರಿಸುವೆ. ಅನುಗ್ರಹದಾಯಕಿ ವಿಷ್ಣು ಪ್ರಿಯಳೇ, ನಿನಗೆ ನನ್ನ ನಮಸ್ಕಾರ. ಮೋಕ್ಷಪ್ರದಾಯಿನಿಯೂ ಸಂಪತ್ಪ್ರದಾಯಿಕೆಯೂ ಆಗಿರುವ ನಿನಗಿದೋ ನಮನಗಳು.

ತುಲಸೀಪಾತು ಮಾಂ ನಿತ್ಯಂ ಸರ್ವಾಪದ್ಭ್ಯೋಸ್ಪಿ ಸರ್ವದಾ |
ಕೀರ್ತಿತಾಪಿ ಸ್ಮೃತಾ ವಾಪಿ ಪವಿತ್ರಯತಿ ಮಾನವಮ್ ||೩||

ಭಾವಾರ್ಥ:-ಹೇ ತುಲಸಿ ಮಾತೆಯೇ!ನಮ್ಮನ್ನು ಎಲ್ಲಾ ಆಪತ್ತುಗಳಿಂದಲೂ ಪ್ರತಿನಿತ್ಯವೂ ಪ್ರತಿಕ್ಷಣವೂ ರಕ್ಷಿಸು. ನಿನ್ನನ್ನು ಸ್ತುತಿಸಲಿ ಯಾ ಸ್ಮರಿಸಲಿ ಅಂತಹವರನ್ನು ನೀನು ಪಾವನಗೊಳಿಸುವೆ.

ನಮಾಮಿ ಶಿರಸಾದೇವೀ ತುಲಸೀ ವಿಲಸತ್ತನುಮ್ |
ಯಾಂ ದೃಷ್ಟ್ವಾ ಪಾಪಿನೋ ಮರ್ತ್ಯಾ ಮುಚ್ಯಂತೇ ಸರ್ವ ಕಿಲ್ಭಿಷಾತ್ ||೪||

ಭಾವಾರ್ಥ:-ಮಾತೆ ತುಲಸಿಯೇ! ನಿನ್ನ ಚೆಲುವಾದ ಶರೀರಕ್ಕೆ ಶಿರಬಾಗಿ ನಮಸ್ಕರಿಸುವೆ ನಿನ್ನ ದರ್ಶನ ಮಾಡುವ ಭುವಿಯಲ್ಲಿನ ಪಾಪಿಗಳು ಸಮಸ್ತ ಪಾಪಗಳಿಂದ ಮುಕ್ತರಾಗುವರು.

ತುಲಸ್ಯಾಂರಕ್ಷಿತಂ ಸರ್ವಂ ಜಗದೇಚ್ಚರಾಚರಮ್ |
ಯಾ ವಿನಿರ್ಹಂತಿ ಪಾಪಾನಿ ದೃಷ್ಟಾ ವಾಂ ಪಾಪಿಭಿರ್ನರೈ:  ||೫||

ಭಾವಾರ್ಥ:-ಯಾವಾಕೆಯನ್ನು ನೋಡಿದ ಮಾತ್ರದಲ್ಲಿ ಪಾಪಿಗಳಾಗಿರುವ ಜನರು ತಮ್ಮ ಪಾಪಗಳಿಂದ ಮುಕ್ತರಾಗುವರೋ ಅಂತಹಾ ತುಲಸಿದೇವಿಯು ಈ ಜಗತ್ತೆಲ್ಲವನ್ನು ರಕ್ಷಿಸುವಳು.

ನಮಸ್ತುಲಸ್ಯತಿತರಾಂ ಯಸ್ಯೈ ಬದ್ಧಾ ಬಲಿಂಕಲೌ |
ಕಲಯಂತಿ ಸುಖಂ ಸರ್ವಂ ಸ್ತ್ರೀಯೋ ವೈಶ್ಯಾಸ್ತಥಾಪರೇ  ||೬||

ಭಾವಾರ್ಥ:-ತುಲಸೀ ದೇವಿಗೆ ನಮಸ್ಕರಿಸಿದರೆ ಸ್ತ್ರೀಯರು ಮತ್ತು ವೈಶ್ಯರು ಹಾಗೆಯೇ ಉಳಿದವರೆಲ್ಲರೂ ಕಲಿಯುಗದ ಎಲ್ಲಾ ಬಂಧನಗಳಿಂದ ಬಿಡುಗಡೆ ಹೊಂದಿ ಸುಖವನ್ನು ಅನುಭವಿಸುವವರಾಗುವರು.

ತುಲಸ್ಯಾ ನಾಪರಂ ಕಿಂಚಿದ್ದೈವತಂ ಜಗತೀತಲೇ |
ಯಯಾ ಪವಿತ್ರಿತೋಲೋಕೋ ವಿಷ್ಣು ಸಂಗೇನ ವೈಷ್ಣವ:  ||೭||

ಭಾವಾರ್ಹ:-ಯಾವಾಕೆಯಿಂದ ಜಗತ್ತು ಪಾವನವಾಗಿ ವಿಷ್ಣುವಿನೊಂದಿಗೆ ವಿಷ್ಣುಮಯವಾಗುವುದೋ ಅಂತಹಾ ಮತ್ತೊಂದು ದೇವತಾಶಕ್ತಿಯು ತುಲಸಿಯ ಹೊರತಾಗಿ ಜಗತ್ತಿನಲ್ಲಿ ಇನ್ನಾವುದೂ ಇಲ್ಲ.

ತುಲಸ್ಯಾ: ಪಲ್ಲವಂ ವಿಷ್ಣೋ: ಶಿರಸ್ಯಾರೋಪಿತಂ ಕಲೌ |
ಆರೋಪ ಯತಿ ಸರ್ವಾಣಿ ಶ್ರೇಯಾಂಸಿ ವರಮಸ್ತಕೇ  ||೮||

ಭಾವಾರ್ಥ:-ಈ ಕಲಿಕಾಲದಲ್ಲಿ ತುಲಸಿಯ ದಳವನ್ನು ವಿಷ್ಣುವಿನ ಶಿರಸ್ಸಿನ ಮೇಲೆ ಏರಿಸುವವರು ಸಮಸ್ತ ಕೀರ್ತಿಯನ್ನೂ ಆತನಿಗೆ ಅರ್ಪಿಸಿದ ಫಲಾನುಭವಿಗಳೆನಿಸುವರು.

ತುಲಸ್ಯಾಂ ಸಕಲಾ ದೇವಾ ವಸಂತಿ ಸತತಂ ಯತ: |
ಅತಸ್ತಾಮರ್ಚಯೇಲ್ಲೋಕೇಸರ್ವಾನ್ ದೇವಾನ್ ಸಮರ್ಚಯನ್  ||೯||

ಭಾವಾರ್ಥ:-ಯಾವ ನಿಮಿತ್ತವಾಗಿ ಎಲ್ಲಾ ದೇವಾನುದೇವತೆಯರು ತುಲಸಿಯಲ್ಲಿ ಶಾಶ್ವತವಾಗಿ ನೆಲೆಯಾಗಿರುವರೋ ಅಂತಹಾ ಕಾರಣಕ್ಕಾಗಿ ಆಕೆಯನ್ನು ಆರಾಧಿಸಿದರೆ ಸಮಸ್ತ ದೇವಾನುದೇವತೆಯರನ್ನು ಆರಾಧಿಸಿದಂತಾಗುವುದು.

ನಮಸ್ತುಲಸಿ ಸರ್ವಜ್ಞೆ ಪುರುಷೋತ್ತಮವಲ್ಲಭೆ |
ಪಾಹಿಮಾಂ ಸರ್ವ ಪಾಪೇಭ್ಯ: ಸರ್ವ ಸಂಪತ್ಪ್ರಾದಾಯಿಕೆ  ||೧೦||

ಭಾವಾರ್ಥ:-ಸಮಸ್ತವನ್ನರಿತವಳಾದ ಸರ್ವ ಸಂಪತ್ಪ್ರದಾಯಕಳಾಗಿರುವ ಪುರುಷೋತ್ತಮನ ಸತಿಯಾಗಿರುವ ದೇವಿ ತುಲಸಿಯೇ; ನಿನಗೆ ನನ್ನ ನಮನಗಳು. ನನ್ನನ್ನು ಸರ್ವ ಪಾಪಗಳಿಂದ ವಿಮುಕ್ತಗೊಳಿಸುವವಳಾಗು.

ಇತಿ ಸ್ತೋತ್ರಂ ಪುರಾಗೀತಂ ಪುಂಡರೀಕೇಣ ಧೀಮತಾ |
ವಿಷ್ಣುಮರ್ಚಯತಾ ನಿತ್ಯಂ ಶೋಭನೈಸ್ತುಲಸೀ ದಲೈ: ||೧೧||

ಭಾವಾರ್ಥ:-ಅನುದಿನವೂ ಮಂಗಲಕರವಾಗಿರುವ ತುಲಸೀ ದಳಗಳಿಂದ ಪೂಜಿಸುವಂತಹಾ ವಿವೇಕಯುತನಾಗಿರುವ ಪುಂಡರೀಕನೆಂಬವನಿಂದ ಪ್ರಥಮವಾಗಿ ಈ ತೆರನಾಗಿ ಸ್ತೋತ್ರ ಮುಖೇನ ಹಾಡಲ್ಪಟ್ಟಿತು.

ತುಲಸೀ ಶ್ರೀ ಮಹಾಲಕ್ಷ್ಮೀರ್ವೀದ್ಯಾವಿದ್ಯಾ ಯಶಸ್ವಿನಿ |
ಧರ್ಮ್ಯಾಧರ್ಮಾನನಾ ದೇವೀ ದೇವದೇವ ಮನ:ಪ್ರಿಯಾ  ||೧೨||

ಭಾವಾರ್ಥ:-ತುಲಸಿಯು ಶ್ರೀಮಹಾಲಕ್ಷ್ಮಿಯೇ ತಾನಾಗಿದ್ದಾಳೆ. ಅವಳು ವಿದ್ಯೆ,ಅವಿದ್ಯೆಗಳಿಗೆ ಕಾರಣಳು. ಯಶಸ್ಸನ್ನು ಕರುಣಿಸುವವಳು. ಧರ್ಮದ ಮೊಗವನ್ನು ಹೊಂದಿರುವವಳು.ದೇವರ ದೇವ ತಾನಾಗಿರುವ ಮಹಾವಿಷ್ಣುವಿನ ಮನಸ್ಸಿಗೆ ಮೆಚ್ಚಿಗೆಯಾದವಳು.

ಲಕ್ಷ್ಮೀ ಪ್ರಿಯಸಖೀದೇವೀದ್ಯೌರ್ಭೂಮಿರಚಲಾ ಚಲಾ |
ಷೋಡತೈತಾನಿ ನಾಮಾನಿ ತುಲಸ್ಯಾ: ಕೀರ್ತಯೇನ್ನರ:  ||೧೩||

ಭಾವಾರ್ಥ:-ಲಕ್ಷ್ಮಿ;ಪ್ರಿಯಾ;ಸಖಿ;ದೇವಿ;ಸ್ವರ್ಗ;ಭೂಮಿ;ಅಚಲೆ;ಚಲೆ;ಎಂಬಿತ್ಯಾದಿ ಹದಿನಾರು ನಾಮಗಳಿಂದ ಮಾನವನು ತುಲಸಿಯನ್ನು ಸ್ತುತಿಸಬೇಕು.

ಲಭತೆ ಸುತರಾಂ ಭಕ್ತಿಮಂತ್ಯೆ ವಿಷ್ಣುಪದಂ ಲಭೇತ್ |
ತುಲಸೀ ಭೂರ್ಮಹಾಲಕ್ಷ್ಮೀ: ಪದ್ಮಿನಿ ಹರಿಪ್ರಿಯಾ   ||೧೪||

ಭಾವಾರ್ಥ:-ಕಿಂಚಿತ್ ಶ್ರದ್ಧಾಭಕ್ತಿ ತುಲಸಿದೇವಿಯ ವಿಚಾರವಾಗಿ ಹೊಂದಿದ್ದಲ್ಲಿ ಅಂತ್ಯದಲ್ಲಿ ವಿಷ್ಣುಪದವು ಲಭಿಸುವುದು.

ತುಲಸಿ ಶ್ರೀ ಸಖಿ ಶುಭೆ ಪಾಪಹಾರಿಣಿ ಪುಣ್ಯದೆ |
ನಮಸ್ತೆ ನಾರದನುತೆ ನಾರಾಯಣ ಮನ:ಪ್ರಿಯೆ  ||೧೫||

ಭಾವಾರ್ಥ:-ತುಲಸಿ; ಭೂ:; ಮಹಾಲಕ್ಷ್ಮಿ; ಪದ್ಮಿನಿ; ಶ್ರೀಹರಿಪ್ರಿಯಾ; ಶ್ರೀ; ಸಖಿ; ಶುಭೆ; ಪಾಪಹಾರಿಣಿ; ಪುಣ್ಯದೆ; ನಾರದನುತೆ; ನಾರಾಯಣ ಮನ:ಪ್ರಿಯೆ ಎಂಬ ವಿವಿಧ ಹೆಸರುಗಳಿಂದ ಸ್ತುತಿಸಲ್ಪಡುವವಳೇ ನಿನಗಿದೋ ನನ್ನ ನಮನಗಳು.
*********************************************************************************
             ||ಇತಿ ಶ್ರೀ ಪುಂಡರೀಕ ಕೃತಂ ತುಲಸೀ ಸ್ತೋತ್ರಮ್ ||
||ಈ ರೀತಿಯಾಗಿ ಶ್ರೀಪುಂಡರೀಕನೆಂಬರಿಂದ ರಚಿಸಲ್ಪಟ್ಟ ಶ್ರೀತುಲಸೀ ಸ್ತೋತ್ರಗಳ ಭಾವಾರ್ಥವು ||
*********************************************************************************
                                  - ೧೭-
  ||ಶ್ರೀ ಮಹಾಲಕ್ಷ್ಮ್ಯಷ್ಟಕಮ್ ||
 ************************
ನಮಸ್ತೇಸ್ಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮೀ ನಮೋಸ್ಸ್ತುತೇ ||೧||

ಭಾವಾರ್ಥ:-ಹೇ ಮಹಾಮಯಾರೂಪಿಣಿಯೇ! ಸೌಭಾಗ್ಯದ ಗದ್ದುಗೆಯ  ಮೇಲೆ ವಿರಾಜಿಸುವವಳೇ,ದೇವಾನುದೇವತೆಗಳಿಂದ ಪೂಜಿಸಿಕೊಂಬವಳೇ;  ನಿನಗೆ ನಮಸ್ಕರಿಸುವೆ. ಹೇ! ಶಂಖ, ಚಕ್ರ,ಗಧೆಗಳನ್ನು  ಧರಿಸಿರುವಾಕೆಯೇ, ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

ನಮಸ್ತೇ ಗರುಡಾರೂಢೇ ಕೋಲಾಸುರಭಯಂಕರಿ |
ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಸ್ಸ್ತುತೇ ||೨||

ಭಾವಾರ್ಥ:-ಹೇ ದೇವಿ ಗರುಢ ವಾಹನೆಯೇ! ಕೋಲನೆಂಬರಕ್ಕಸನನ್ನು  ನಾಶಗೊಳಿಸಿದವಳೇ,ನಿನಗಿದೋ ನಮಸ್ಕಾರಗಳು.ಎಲ್ಲಾ ಪಾಪಗಳನ್ನು  ನಾಶ ಮಾಡುವ  ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

ಸರ್ವಜ್ಞೇ ಸರ್ವವರದೇ ಸರ್ವದುಷ್ಟ ಭಯಂಕರಿ |
ಸರ್ವ ದು:ಖಹರೇ ದೇವಿ ಮಹಾಲಕ್ಷ್ಮಿ ನಮೋಸ್ಸ್ತುತೇ ||೩||

ಭಾವಾರ್ಥ:- ಹೇ! ದೇವಿ; ಸಮಸ್ತವನ್ನೂ ಬಲ್ಲಾಕೆಯೇ,  ಎಲ್ಲವನ್ನೂ ಅನುಗ್ರಹಿಸುವಾಕೆಯೇ,ದುಷ್ಟರಿಗೆ ಭಯಂಕರ  ರೂಪಿಣಿಯೂದವಳೇ,ಸಮಸ್ತ ದು:ಖವನ್ನು ಪರಿಹರಿಸುವವಳೇ, ದೇವಿ  ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ |
ಮಂತ್ರಮೂರ್ತೇ ಸದಾ ದೇವೀ ಮಹಾಲಕ್ಷ್ಮಿ ನಮೋಸ್ಸ್ತುತೇ ||೪||

ಭಾವಾರ್ಥ:-ಹೇ ದೇವಿ; ಸಿದ್ಧಿ ಹಾಗೂ ಬುದ್ಧಿಗಳನ್ನು  ಕರುಣಿಸುವವಳೇ, ಭೋಗ ಮತ್ತು ಮುಕ್ತಿಯನ್ನು  ದಯಪಾಲಿಸುವಾಕೆಯೇ, ಮಂತ್ರಗಳಲ್ಲಿ ಅನುದಿನವೂ ನೆಲೆಸಿರುವವಳೇ  ,ದೇವಿ ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

ಆದ್ಯಂತರಹಿತೇ ದೇವಿ ಆದ್ಯಾಶಕ್ತಿ ಮಹೇಶ್ವರಿ |
ಯೋಗಜೇ ಯೋಗ ಸಂಭೂತೇ ಮಹಾಲಕ್ಷ್ಮಿ ನಮೋಸ್ಸ್ತುತೇ ||೫||

ಭಾವಾರ್ಥ:-ಆದಿಯೂ ಅಂತ್ಯವೂ ಇಲ್ಲದಿರುವ ದೇವಿಯೇ,  ಆದಿಶಕ್ತಿಯೇ, ಮಹೇಶ್ವರಿಯೇ, ಯೋಗವನ್ನು ಕರುಣಿಸುವಾಕೆಯೇ,  ಯೋಗಮಾಯೆಯಿಂದ ಜನಿಸಿದಾಕೆಯೇ,ದೇವಿ ಮಹಾಲಕ್ಷ್ಮಿಯೇ  ನಿನಗೆ ನನ್ನ ನಮಸ್ಕಾರಗಳು.

ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ |
ಮಹಾಪಾಪಹರೇ ದೇವಿ ಮಹಾಲಕ್ಷ್ಮಿ ನಮೋಸ್ಸ್ತುತೇ ||೬||

ಭಾವಾರ್ಥ:-ಅಸಾಮಾನ್ಯಳೂ,ಸಾಮಾನ್ಯಳೂ, ಮಹಾರುದ್ರ  ಸ್ವರೂಪಳೂ, ಮಹಾಶಕ್ತಿರೂಪಿಣಿಯೂ ಆಗಿರುವ ದೇವಿ  ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

ಪದ್ಮಾಸನಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ |
ಪರಮೇಶಿ ಜಗನ್ಮಾತರ್ಮಹಾಲಕ್ಷ್ಮಿ ನಮೋಸ್ಸ್ತುತೇ ||೭||

ಭಾವಾರ್ಥ:- ಹೇ ದೇವಿ; ಕಮಲದ ಮೇಲೆ ಆರೂಢಳಾಗಿರುವಾಕೆಯೇ,  ಪರಬ್ರಹ್ಮ ರೂಪಿಣಿಯೇ, ಪರಮೇಶ್ವರಿಯೇ, ಜಗತ್ತಿನ  ತಾಯಿಯೇ, ದೇವಿ  ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

ಶ್ವೇತಾಂಬರಧರೇ ದೇವಿ ನಾನಾಲಂಕಾರಭೂಷಿತೇ |
ಜಗತ್ ಸ್ಥಿತೇ ಜಗನ್ಮಾತರ್ಮಹಾಲಕ್ಷ್ಮಿ ನಮೋಸ್ಸ್ತುತೇ ||೮||

ಭಾವಾರ್ಥ:-ಶುಭ್ರವಾಗಿರುವ ಬಿಳಿಯ ವಸ್ತ್ರವನ್ನು  ಧರಿಸಿರುವಾಕೆಯೇ, ವಿವಿಧಾಲಂಕಾರಗಳಿಂದ ಶೋಭಿಸುತ್ತಿರುವಾಕೆಯೇ,  ಜಗತ್ತಿಗೆ ಆಧಾರಶಕ್ತಿಯಾಗಿರುವಾಕೆಯೇ, ಜಗತ್ತಿನ ತಾಯಿ  ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

*********************************************************************
                 || ಇತಿ ಶ್ರೀ ಮಹಾಲಕ್ಷ್ಯಷ್ಠಕಮ್ ||
         || ಈ ರೀತಿಯಾಗಿ ಶ್ರೀ ಮಹಾಲಕ್ಷ್ಮ್ಯಷ್ಠಕಗಳ  ಭಾವಾರ್ಥವು||
*********************************************************************
                                        - ೧೮ -
                  || ಚತುಶ್ಲೋಕೀ ||
                  *************
ಕಾಂತಸ್ತೇ ಪುರುಷೋತ್ತಮ: ಪಣಿಪತಿ: ಶಯ್ಯಾಸ್ಸ್ಸನಂ ವಾಹನಮ್
ವೇದಾತ್ಮಾ ವಿಹಗೇಶ್ವರೋ ಯವನಿಕಾ ಮಾಯಾ ಜಗನ್ಮೋಹಿನೀ |
ಬ್ರಹ್ಮೇಶಾದಿ ಸುರವ್ರಜಸ್ಸದಯಿತ ಸ್ತ್ವದ್ದಾಸ ದಾಸೀಗಣ:
ಶ್ರೀರಿತ್ಯೇವ ಚ ನಾಮ ತೇ ಭಗವತಿ ಬ್ರೂಮ: ಕಥಂ ತ್ವಾಂ ವಯಮ್   ||೧||

ಭಾವಾರ್ಥ:-ತಾಯಿಯೇ! ಪುರುಷೋತ್ತಮನಾಗಿರುವ ಶ್ರೀಹರಿಯು  ನಿನ್ನ ಪತಿಯು; ನಾಗರಾಜನಾದ ಆದಿಶೇಷನು ನಿನಗೆ ಆಸನವಾಗಿಯೂ  ಹಾಸಿಗೆಯಾಗಿಯೂ ಇರುವನು. ವೇದಗಳ ಶಕ್ತಿಯೂ ಪಕ್ಷಿಗಳ ಒಡೆಯನೂ  ಆಗಿರುವ ಗರುಢನೇ ನಿನ್ನ ವಾಹನ. ಜಗತ್ತನ್ನೇ ಮೋಹಗೊಳಿಸುವ  ಯಾವ ಮಾಯೆಯಿದೆಯೋ ಅದುವೇ ನಿನ್ನ ಪರದೆ.ಸತೀ ಸಹಿತರಾದ  ಬ್ರಹ್ಮ ಈಶ್ವರನೇ ಮೊದಲಾದ ದೇವಾನುದೇವತೆಗಳು ನಿನ್ನ  ಸೇವಕರು.ಇದಲ್ಲದೆ ನಿನ್ನ ಹೆಸರೇ "ಶ್ರೀ" ಎಂಬುದಾಗಿದೆ. ಅಮ್ಮಾ  ಭಗವತೀ; ಹಾಗಿರುವಾಗ ಇಂತಹಾ ನಿನ್ನನ್ನು ನಾವು ಬೇರಾವ  ರೀತಿಯಲ್ಲಿ ಸ್ತುತಿಸಲು ಸಾಧ್ಯ?

ಯಸ್ಯಾಸ್ತೇ ಮಹಿಮಾನಮಾತ್ಮನ ಇವತ್ವದ್ವಲ್ಲಭೋಸ್ಪಿ  ಪ್ರಭು:
ನಾಲಂ ಮಾತುಮಿಯತ್ತಯಾ ನಿರವಧಿಂ ನಿತ್ಯಾನುಕೂಲಂ ಸ್ವತ: |
ತಾಂ ತ್ವಾಂ ವಾಸ ಇತಿ ಪ್ರಸನ್ನ ಇತಿ ಚ ಸ್ತೋಷ್ಯಾಮ್ಯಹಂ  ನಿರ್ಭಯೋ
ಲೋಕೈಕೇಶ್ವರಿ ಲೋಕನಾಥ ದಯಿತೇ ದಾಂತೇ ದಯಾಂ ತೇ ವಿದನ್   ||೨||

ಭಾವಾರ್ಥ:-ನಿನ್ನ ಇನಿಯನು ಸರ್ವಜ್ಞನಾಗಿರುವ  ದೊರೆಯಾಗಿದ್ದರೂ, ನಿನ್ನ ಹಿರಿಮೆಯೆಂತಿರುವುದೋ ಅಂತೆಯೇ  ಮಿತಿವಿರಹಿತವಾಗಿದ್ದು, ಸ್ವತಹಾ ಅನುಕ್ಷಣವೂ ಅನುಕೂಲವಾಗಿರುವ  ನಿನ್ನ ಶ್ರೇಷ್ಠತೆಯನ್ನು ಇದಮಿತ್ಥಂ ಎಂದು ಅಳೆಯಲು  ಅಸಾಧ್ಯವಿದೆ. ಈ ರೀತಿಯಾಗಿರುವ ನಿನ್ನನ್ನು ಹೇ  ಲೋಕಮಾತೆಯೇ, ಲೋಕೇಶ್ವರನ ಅರಸಿಯೇ,  ಸೋತುಬಂದವರ ಮೇಲೆ  ನಿನಗಿರುವ ಕರುಣೆಯನ್ನು ಅರಿತವನಾಗಿ ನಾನು ನಿನ್ನ ಸೇವಕನು ಹಾಗೂ  ಆಶ್ರಯಿಸಿದವನೆಂದು ನಿರ್ಭಯದಿಂದ ನಿನ್ನನ್ನು ಸ್ತುತಿಸುತ್ತೇನೆ.

ಈಪತ್ ತ್ವತ್ಕರುಣಾ ನಿರೀಕ್ಷಣ ಸುಧಾ ಸಂಧುಕ್ಷಣಾದ್ರಕ್ಷ್ಯತೇ
ನಷ್ಟಂ ಪ್ರಾಕ್ತದಲಾಭತಸ್ತ್ತೀಭುವನಂ ಸಂಪ್ರತ್ಯನಂತೋದಯಮ್ |
ಶ್ರೇಯೋ ನ ಹ್ಯರವಿಂದ ಲೋಚನ ಮನ: ಕಾಂತಾ ಪ್ರಸಾದಾದೃತೇ
ಸಂಸೃತ್ಯಕ್ಷರ ವೈಷ್ಣವಾಧ್ವಸು ನೃಣಾಂ ಸಂಭಾವ್ಯತೇ ಕರ್ಹಿಚಿತ್  ||೩||

ಭಾವಾರ್ಥ:-ಹೇ ಮಾತೆಯೇ! ಯಾವ ನಿನ್ನ ಕರುಣಾಪೂರ್ಣ  ಕುಡಿನೋಟವೆಂಬ ಅಮೃತದ ಹೊರತಾಗಿ ಮೊದಲು ನಾಶವಾಗಿದ್ದ ಮೂರು  ಲೋಕಗಳು ನಿನ್ನ ಅಮೃತಕಟಾಕ್ಷ ದೊರಕಿ ನಾಶವಿಲ್ಲದ  ಸಂಪದೈಶ್ವರ್ಯಯುಕ್ತವಾಗಿ ಕಾಪಾಡಲ್ಪಟ್ಟಿದೆಯೋ ಅದೇ  ತೆರವಾಗಿ ಅರವಿಂದಲೋಚನನ ವಲ್ಲಭೆಯ ಕರುಣೆಯ ಹೊರತಾಗಿ  ಸಂಸಾರದಲ್ಲಾಗಲೀ, ಮೋಕ್ಷದಲ್ಲಾಗಲೀ, ಪಾರಮಾರ್ಥಿಕ  ಹಾದಿಯಲ್ಲಾಗಲೀ ಯಶಸ್ಸು ಎಂದಿಗೂ ದೊರೆಯುವದಿಲ್ಲ.

ಶಾಂತಾನಂತ ಮಹಾವಿಭೂತಿ ಪರಮಂ ಯದ್ಬ್ರಹ್ಮ ರೂಪಂ ಹರೇ:
ಮೂರ್ತಂ ಬ್ರಹ್ಮ ತತೋಸ್ಪಿ ತತ್ಪ್ರಿಯತರಂ ರೂಪಂ  ಯದತ್ಯದ್ಭುತಮ್ |
ಯಾನ್ಯನ್ಯಾನಿ ಯಥಾಸುಖಂ ವಿಹರತೋ ರೂಪಾಣಿ ಸರ್ವಾಣಿ ತಾ-
ನ್ಯಾಹು: ಸ್ವೈರನುರೂಪ ರೂಪ ವಿಭವೈರ್ಗಾಢೋಪಗೂಢಾನಿತೇ  ||೪||

ಭಾವಾರ್ಥ:-ಶಾಂತವೂ ಅನಂತವೂ ಮಹಾ ಅತುಲೈಶ್ವರ್ಯ ಸಹಿತವೂ, ಅತಿ  ಉತ್ಕೃಷ್ಠವೂ ಆಗಿರುವ ಶ್ರೀಹರಿಯ ಪರಬ್ರಹ್ಮ ರೂಪವೂ  ಅದಕ್ಕಿಂತಲೂ ಹೆಚ್ಚಾಗಿ ಅವನಿಗೆ ಪ್ರಿಯವಾಗಿರುವ ಅತಿ  ಅದ್ಭುತವಾದ ಶ್ರೀಹರಿಯ ವಿಶ್ವಾತ್ಮರೂಪವೂ ಹಾಗೆಯೇ ಅವನು  ಸುಖವಾಗಿ ಸಂಚರಿಸಲೋಸುಗ ಅವತರಿಸಿದ ಇನ್ನಿತರ ಯಾವ್ಯಾವ  ಅವತಾರಗಳಿವೆಯೋ ಅವೆಲ್ಲವೂ ಅವನಿಗೆ ತಕ್ಕುದಾಗಿರುವಂತಹಾ ನಿನ್ನ  ರೂಪಗಳ ವೈಭವಗಳೇ  ಸಾಂದ್ರರೂಪವಾಗಿ ಸೇರಿಕೊಂಡಿವೆಯೆಂದು  ಶಾಸ್ತ್ರಗಳು ಸಾರುತ್ತಿವೆ.
*********************************************************************
 || ಇತಿ ಚತುಶ್ಲೋಕೀ ||   || ಈ ತೆರನಾಗಿ ಚತುಶ್ಲೋಕೀ  ಸ್ತೋತ್ರಗಳ ಭಾವಾರ್ಥವು ||
*********************************************************************                                                 - ೧೯ -
              || ಶ್ರೀಸ್ತುತಿ: ||
            ***************
ಜಾತಾಕಾಂಕ್ಷಾ ಜನನಿ ಯುವಯೋರೇಕಸೇವಾಧಿಕಾರೇ
ಮಾಯಾಲೀಢಂ ವಿಭವಮಖಿಲಂ ಮನ್ಯಮಾನಾಸ್ತೃಣಾಯ |
ಪ್ರೀತ್ಯೈ ವಿಷ್ಣೋಸ್ತವ ಚ ಕೃತಿನ: ಪ್ರೀತಿಮಂತೋ ಭಜಂತೇ
ವೇಲಾಭಂಗಪ್ರಶಮನಫಲಂ ವೈದಿಕಂ ಧರ್ಮಸೇತುಮ್  ||೧||

ಭಾವಾರ್ಥ:-ಹೇ ತಾಯಿಯೆ! ನಿಮ್ಮೀರ್ವರ ಏಕಾಂತ ಸೇವೆಯಲ್ಲಿ ಆಸಕ್ತಿಯುಳ್ಳ ಭಕ್ತಜನರು ಮಾಯಾಮಯವಾಗಿರುವ  ಅಖಿಲೈಶ್ವರ್ಯಗಳೆಲ್ಲವನ್ನು ತೃಣವೆಂಬುದಾಗಿ ಪರಿಗಣಿಸುತ್ತಾರೆ.ಹರಿಯ ಹಾಗೂ ನಿನ್ನ ಪ್ರೀತಿಗೋಸ್ಕರವಾಗಿ  ಶಾಸ್ತ್ರಗೌರವವನ್ನು ಮೀರಿದ ದೋಷವನ್ನು ಕಳೆಯಲು ಸಾಧನವಾಗುವಂತಹಾ ವೈದಿಕಧರ್ಮವನ್ನು ಇಂತಹಾ ಭಕ್ತಜನರು  ಬಳಸುತ್ತಾರೆ.

ಸೇವೇ ದೇವಿ ತ್ರಿದಶಮಹಿಲಾಮೌಲಿಮಾಲಾರ್ಚಿತಂ ತೇ
ಸಿದ್ಧಿಕ್ಷೇತ್ರಂ ಶಮಿತವಿಪದಾಂ ಸಂಪದಾಂ ಪಾದಪದ್ಮಮ್ |
ಯಸ್ಮಿನ್ ಈಷನ್ನಮಿತಶಿರಸೋ ಯಾಪಯಿತ್ವಾ ಶರೀರಂ
ವರ್ತಿಷ್ಯಂತೇ ವಿತಮಸಿ ಪದೇ ವಾಸುದೇವಸ್ಯ ಧನ್ಯಾ:  ||೨||

ಭಾವಾರ್ಥ:-ಹೇ ತಾಯಿಯೆ! ದೇವತಾ ಸ್ತ್ರೀಯರ ಶಿರಸ್ಸುಗಳೆಂಬ ಹಾರಗಳಿಂದ ಪೂಜಿಸಲ್ಪಟ್ಟ ಯಾವುದೇ ವಿಪತ್ತುಗಳಿಂದ  ವಿರಹಿತವಾಗಿರುವ ಐಶ್ವರ್ಯ ಸಿದ್ಧಿಯ ಪುಣ್ಯಸ್ಥಳವಾಗಿರುವ ನಿನ್ನ ಚರಣಾರವಿಂದಂಗಳನ್ನು ಸೇವಿಸುವೆ. ನಿನ್ನಾ ಚರಣ  ಕಮಲಗಳಿಗೆ ಇನಿತಾದರೂ ನಮಿಸುವವರು ಪುಣ್ಯಾತ್ಮರೆನಿಸುವರು.ಏಕೆಂದರೆ ಇಂತಹ ಜನರು ತಮ್ಮ ಶರೀರವನ್ನು ತ್ಯಜಿಸಿದ  ನಂತರ ನಿರ್ಮಲಸತ್ವ ಸ್ವರೂಪವಾಗಿರುವ ಮೋಕ್ಷವನ್ನು ಪಡೆಯುವುದರೊಂದಿಗೆ ಶ್ರೀಹರಿಯ ಪದತಲದಲ್ಲಿ ವಾಸಿಸುವರು.

ಸಂಪದ್ಯಂತೇ ಭವಭಯತಮೀಭಾನವ: ತ್ವತ್ ಪ್ರಸಾದಾತ್
ಭಾವಾ: ಸರ್ವೇ ಭಗವತಿ ಹರೌ ಭಕ್ತಿ ಮುದ್ವೇಲಯಂತ: |
ಯಾಚೇ ಕಿಂ ತ್ವಾಮಹಮಿಹ ಯತ: ಶೀತಲೋದಾರಶೀಲಾ
ಭೂಯೋ ಭೂಯೋ ದಿಶಸಿ ಮಹತಾಂ ಮಂಗಲಾನಾಂ ಪ್ರಬಂಧಾನ್  ||೩||

ಭಾವಾರ್ಥ:-ನಿನ್ನ ದಯೆಯಿಂದ ನಾನು ಮಾಡುವ ಎಲ್ಲಾ ಧ್ಯಾನಗಳೂ ಸಂಸಾರಭಯವೆನ್ನುವ ಇರುಳಿಗೆ ರವಿಯಂತಾಗಿ  ಭಗವಂತನಾಗಿರುವ ಶ್ರೀಹರಿಯಲ್ಲಿ ಭಕ್ತಿಯನ್ನು ಹೊಮ್ಮಿಸಿ ಪ್ರವಹಿಸುತ್ತಿವೆ. ಹೆಚ್ಚಾಗಿರುವ ತಂಪಿನಿಂದ  ಕೂಡಿದವಳಾದ ನೀನು ಪುನ: ಪುನ: ನನಗೆ ಶುಭಸಮೂಹವನ್ನೇ ಅನುಗ್ರಹಿಸುತ್ತಿರುವೆ. ಇಂತಿರುತ್ತಾ ನಿನ್ನಿಂದ ನಾನೇನನ್ನು  ಯಾಚಿಸಲಿ ತಾಯೇ?

ಮಾತಾ ದೇವಿ ತ್ವಮಸಿ ಭಗವಾನ್ ವಾಸುದೇವ: ಪಿತಾ ಮೇ
ಜಾತ: ಸೋಸ್ಹಂ ಜನನಿ ಯುವಯೋರೇಕಲಕ್ಷ್ಯಂ ದಯಾಯಾ: |
ದತ್ತೋ ಯುಷ್ಮ ತ್ಪರಿಜನತಯಾ ದೇಶಿಕೈರಪ್ಯರಸ್ತ್ವಂ
ಕಿಂ ತೇ ಭೂಯ; ಪ್ರಿಯಮಿತಿ ಕಿಲ ಸ್ಮೇರವಕ್ತ್ರಾ ವಿಭಾಸಿ ||೪||

ಭಾವಾರ್ಥ:-ಹೇ!ದೇವಿಯೇ; ನೀನು ನನ್ನ ತಾಯಿ. ಪರಮಾತ್ಮನಾಗಿರುವ ಶ್ರೀಹರಿಯು ನನ್ನ ತಂದೆ. ನಿಮ್ಮಿಬ್ಬರ ದಯೆಯ  ಮುಖ್ಯ ಗುರಿಯೇ ನಾನಾಗಿರುವೆ ತಾಯಿ. ಅದು ಮಾತ್ರವಲ್ಲದೆ ನನ್ನನ್ನು ನನ್ನ ಗುರುಗಳು ನಿಮ್ಮ ಸೇವೆಗಾಗಿ ನಿಮ್ಮ  ಚರಣಾರವಿಂದಗಳಿಗೆ ಅರ್ಪಿಸಿದ್ದಾರೆ. ಆದಾಗ್ಯೂ "ನಿನಗೇನು ಇಷ್ಟ?" ಎಂದು ವಿಚಾರಿಸುವ ತೆರನಾಗಿ ಕಿರುನೋಟದಿಂದ  ಕೂಡಿರುವ ಮೊಗದಿಂದ ಶೋಭಿಸುತ್ತಿರುವೆ.

ಕಲ್ಯಾಣಾನಾಮವಿಕಲನಿಧಿ: ಕಾಸ್ಪಿ ಕಾರುಣ್ಯ ಸೀಮಾ
ನಿತ್ಯಾಮೋದಾ ನಿಗಮವಚಸಾಂ ಮೌಲಿಮಂದಾರಮಾಲಾ |
ಸಂಪದ್ ದಿವ್ಯಾ ಮಧುವಿಜಯಿನ: ಸನ್ನಿಧತ್ತಾಂ ಸದಾ ಮೇ
ಸೈಷಾ ದೇವೀ ಸಕಲಭುವನಪ್ರಾರ್ಥನಾಕಾಮಧೇನು:  ||೫||

ಭಾವಾರ್ಥ:-ಲಕ್ಷ್ಮೀ ದೇವಿಯು ಎಲ್ಲಾ ಕಲ್ಯಾಣಗಳ ನಾಶವಿಲ್ಲದ ನಿಧಿಯಾಗಿರುವಳು. ಹಾಗೂ ಕರುಣೆಗೆ ಅಂತಿಮವಾಗಿರುವ  ಗಡಿ. ಆಕೆ ನಿತ್ಯವೂ ಆನಂದದಾಯಕಳು. ಮಂದಾರದ ಪುಷ್ಪ ಮಾಲಿಕೆಯ ತೆರನಾಗಿ ವೇದಗಳ ತಲೆಯನ್ನು ಅಲಂಕರಿಸುವಾಕೆ. ಆಕೆ  ಶ್ರೀಹರಿಯ ದಿವ್ಯವಾದ ಸಂಪದವು. ಸಮಸ್ತ ಜಗತ್ತಿನ ಪ್ರಾರ್ಥನೆಗೆ ಆ ತಾಯಿಯು ಕಾಮಧೇನುವಿನಂತೆ ಇರುವವಳು. ಅಂತಹಾ  ಮಹಾತಾಯಿ ದೇವಿಯು ಯಾವತ್ತೂ ನನ್ನ ಹೃದಯದಲ್ಲಿ ಶಾಶ್ವತವಾಗಿ ನೆಲೆಸಲಿ.
*********************************************************************************
  | ಇತಿ ಶ್ರೀಸ್ತುತಿ: ||   || ಈ ರೀತಿಯಾಗಿ ಶ್ರೀಸ್ತುತಿಗಳ ಭಾವಾರ್ಥವು ||
*********************************************************************************
                                      - ೨೦ -
                   || ಶ್ರೀಸ್ತವ: ||
                   ++++++++
ಐಶ್ವರ್ಯಂ ಯದಶೇಷಪುಂಸಿ ವಿದಿತಂ ಸೌಂದರ್ಯ-ಲಾವಣ್ಯಯೋ
ರೂಪಂ ಯಚ್ಚ ಹಿ ಮಂಗಲಂ ಕಿಮಪಿ ಯಲ್ಲೋಕೇ ಸದಿತ್ಯುಚ್ಯುತೇ |
ತತ್ಸರ್ವಂ ತ್ವದಧೀನಮೇವ ಯದತ: ಶ್ರೀರಿತ್ಯಭೇದೇನ ವಾ
ಯದ್ವಾ ಶ್ರೀಮದಿತೀದೃಶೇನ ವಚಸಾ ದೇವಿ ಪ್ರಥಾಮಶ್ನುತೇ ||೧||

ಭಾವಾರ್ಥ:- ಎಲೇ ದೇವಿಯೇ! ಸಮಸ್ತ ಮಾನವರಲ್ಲಿ ಕಾಣಸಿಗುವ ಐಶ್ವರ್ಯ-ಸೌಂದರ್ಯ-ಲಾವಣ್ಯ ಮೊದಲಾದ ಶುಭ ರೂಪಗಳು ಮತ್ತು ಭುವಿಯಲ್ಲಿ ಯಾವುದನ್ನು "ಸತ್" ಎಂಬುದಾಗಿ ಕರೆಯಲ್ಪಡುತ್ತದೆಯೋ ಅದು ನಿನ್ನಾಧೀನವಾಗಿಯೇ ಇರುವುದಾಗಿದೆ.ಆದುದರಿಂದ ನಿನ್ನಿಂದ ಬೇರೆಯಾಗಲಾರದ ಈ ಸಾರಗಳು "ಶ್ರೀ" ಎಂಬುದಾಗಿಯೊ, "ಶ್ರೀಮತ್" ಎಂಬುದಾಗಿಯೂ ಪ್ರಸಿದ್ಧಿಯನ್ನು ಹೊಂದಿವೆ.

ಲೋಕೇ ವನಸ್ಪತಿ-ಬೃಹಸ್ಪತಿ-ತಾರತಮ್ಯಂ
ಯಸ್ಯಾ: ಪ್ರಸಾದ- ಪರಿಣಾಮಮುದಾಹರಂತಿ |
ಸಾ ಭಾರತಿ ಭಗವತೀ ತು ಯದೀಯದಾಸೀ
ತಾಂ ದೇವದೇವ-ಮಹಿಷೀಂ ಶ್ರಿಯಮಾಶ್ರಯಾಮ: ||೨||

ಭಾವಾರ್ಥ:-ಭುವಿಯೊಳಗೆ ವನಸ್ಪತಿ [ಅಜ್ಞಾನಿಯೆನಿಸಿದ ಗಿಡ], ಬೃಹಸ್ಪತಿ [ಎಲ್ಲವನ್ನೂ ತಿಳಿದಿರುವ ಜ್ಞಾನಿ]ಎನ್ನುವ ತಾರತಮ್ಯವು ಯಾವಾತನ ಸಂತಸದ ಪರಿಣಾಮದಿಂದ ಉಂಟಾಗಿರುವುದೋ ಆ ಭಗವತಿಯಾಗಿರುವ ವಿದ್ಯಾಧಿದೇವತೆ ಸರಸ್ವತಿಯು ಯಾವಾತನ ದಾಸಿಯಾಗಿರುವಳೋ, ಅಂತಹಾ ದೇವಾಧಿದೇವತೆಗಳ ಒಡೆಯನಾಗಿರುವ ಮಹಾವಿಷ್ಣುವಿನ ಪಟ್ಟದರಸಿ ಶ್ರೀದೇವಿಯನ್ನು ನಾವು ಶರಣುಹೊಂದುತ್ತೇವೆ.

ಯಸ್ಯಾ: ಕಟಾಕ್ಷ-ವೀಕ್ಷಾ-ಕ್ಷಣ ಲಕ್ಷಂ ಲಕ್ಷಿತಾ ಮಹೇಶಾ: ಸ್ಯು: |
ಶ್ರೀರಂಗರಾಜ- ಮಹಿಷೀ ಸಾ ಮಾಮಪಿ ವೀಕ್ಷತಾಂ ಲಕ್ಷ್ಮೀ: ||೩||

ಭಾವಾರ್ಥ:-ಯಾವ ದೇವಿಯ ಒಂದು ಕ್ಷಣದ ಕುಡಿನೋಟಕ್ಕೆ ವಸ್ತುವಾಗುವ ವ್ಯಕ್ತಿಗಳೆಲ್ಲರೂ ತಕ್ಷಣವೇ ಮಹೇಶ್ವರ ಸಮಾನರಾಗುವರೋ, ಅಂತಹಾ ಶ್ರೀರಂಗನಾಥಸ್ವಾಮಿಯ ಒಡತಿಯಾಗಿರುವ ಲಕ್ಷ್ಮಿಯು ತನ್ನ ಕೃಪಾಕಟಾಕ್ಷದಿಂದ ನನ್ನನ್ನೂ ಪರಿಗ್ರಹಿಸಿ ಅನುಗ್ರಹಿಸಲಿ.
*********************************************************************************
               || ಇತಿ ಶ್ರೀಸ್ತವ: ||   || ಇದು ಶ್ರೀಸ್ತವದ ಭಾವಾರ್ಥವು ||
++++++++++++++++++++++++++++++++++++++++++++++++++++++++++++++++++++++++
                                        - ೨೧ -
   || ಶ್ರೀಲಕ್ಷ್ಮೀ ಗುಣರತ್ನಕೋಶಮ್ ||
    *************************
ಶ್ರಿಯೈ ಸಮಸ್ತಚಿದಚಿದ್ವಿಧಾನವ್ಯಸನಂ ಹರೇ: |
ಅಂಗೀಕಾರಿಭಿರಾಲೋಕೈ: ಸಾರ್ಥಯಂತ್ರೈ ಕೃತೋಂಸ್ಜಲಿ: ||೧||

ಭಾವಾರ್ಥ:-ಯಾವಾಕೆ ತನ್ನ ಸಮ್ಮತಿಯನ್ನು ನಿರ್ದೇಶಿಸುವ  ಕೃಪಾದೃಷ್ಟಿಯಿಂದ ಶ್ರೀಮನ್ನಾರಾಯಣನ ಸಮಸ್ತ ಸಜೀವ ಹಾಗೂ  ನಿರ್ಜೀವವಾಗಿರುವ ಸೃಷ್ಟಿಯ ಇಚ್ಛೆಯನ್ನು  ಸಾಕಾರಗೊಳಿಸುತ್ತಿರುವಳೋ ಅಂತಹಾ ಶ್ರೀದೇವಿಯ  ಸನ್ನಿಧಾನದಲ್ಲಿ ಬೊಗಸೆಯನ್ನು ಒಡ್ಡುತ್ತಿರುವೆ.

ಯದ್ಭ್ರೂಭಂಗಾ: ಪ್ರಮಾಣಂ ಸ್ಥಿರ-ಚರ-ರಚನಾತಾರತಮ್ಯೇ  ಮುರಾರೇ:
ವೇದಾಂತಾಸ್ತತ್ವಚಿಂತಾಂ ಮುರಭಿದುರಸಿ ಯತ್ಪಾದಚಿನ್ಹೈಸ್ತರಂತಿ |
ಭೋಗೋಪೋದ್ಘಾತ-ಕೇಲೀ- ಚುಲಕಿತ-ಭಗವದ್  ವೈಶ್ವರೂಪ್ಯಾನುಭಾವಾ
ಸಾ ನ: ಶ್ರೀರಾಸ್ತೃಣೀತಾಮಮೃತಲಹರಿಧೀಲಂಘನೀಯೈರಪಾಂಗೈ: ||೨||

ಭಾವಾರ್ಥ:-ಯಾವಾಕೆಯ ಹುಬ್ಬುಹಾರಿಸುವಿಕೆಯು ಶ್ರೀಹರಿಯ  ಸ್ಥಾವರಜಂಗಮಾದಿ ಅನ್ಯಾನ್ಯ ಸೃಷ್ಟಿಗೆ  ಮಾರ್ಗದರ್ಶಕಗಳಾಗಿವೆಯೋ; ಮುರಾರಿಯ ವಕ್ಷಸ್ಥಳದಲ್ಲಿರುವ  ಯಾವಾಕೆಯ ಪಾದಗಳ ಗುರುತಿನಿಂದ ವೇದೋಪನಿಷತ್ತುಗಳು  ಪಾರಮಾರ್ಥಿಕ ನೈಜತ್ವವನ್ನು ನಿರ್ಧರಿಸುತ್ತವೆಯೋ, ಯಾವಾಕೆಯ  ದೈವೀಸ್ವರೂಪ,ಗುಣಾದಿಗಳ ಜ್ಞಾನದಿಂದ ಪರಮಾತ್ಮನ ವಿಶ್ವರೂಪದ  ಸಂಪದವೆಲ್ಲವೂ ಸೇರಿದರೂ ತುಚ್ಛವಾಗುವುದೋ,ಅದನ್ನು ಆ  ಶ್ರೀದೇವಿಯು ಅಮೃತ ಪ್ರವಾಹವನ್ನೂ ಮೀರಿಸುವ ತನ್ನ  ಕುಡಿಗಣ್ಣೋಟಗಳಿಂದ ನಮ್ಮನ್ನು ಸಂಸ್ಕಾರಗೊಳಿಸಲಿ.

ಆಕುಗ್ರಾಮ-ನಿಯಾಮಕಾದಪಿ ವಿಭೋ-ರಾಸರ್ವ-ನಿರ್ವಾಹಕಾತ್
ಐಶ್ವರ್ಯಂ ಯದಿಹೋತ್ತರೋತ್ತರಗುಣಂ ಶ್ರೀರಂಗಭರ್ತು:  ಪ್ರಿಯೇ |
ತುಂಗಂ ಮಂಗಲಮುಜ್ಜ್ವಲಂ ಗರಿಮವತ್ ಪುಣ್ಯಂ ಪುನ: ಪಾವನಂ
ಧನ್ಯಂ ಯತ್ತದದಶ್ವ ವೀಕ್ಷಣಭುವಸ್ತೇ ಪಂಚಷಾ ವಿಪುಷ:  ||೩||

ಭಾವಾರ್ಥ:-ಹೇ! ಶ್ರೀರಂಗನ ಪ್ರೀತಿಪಾತ್ರಳೇ; ಒಂದು ಚಿಕ್ಕ ಜಾಗದ  ಅಧಿಪತ್ಯದಿಂದ ಸರ್ವ ನಿಯಾಮಕನಾಗಿರುವ ಭಗವಂತನತನಕ ಹೆಚ್ಚು  ಹೆಚ್ಚು ವಿಪುಲವಾಗಿರುವ ಯಾವ್ಯಾವ ಸಂಪದಗಳಿವೆಯೋ  ಅವು  ಶ್ರೇಷ್ಠವಾದುದು,ಶುಭಕರವಾದುದು,ಕಾಂತಿಮಯವಾದುದು,ವಿಶಾಲವಾದುದು ,ಪುಣ್ಯಮಯವಾದುದು, ಪಾವನಮಯವಾದುದು,ಕೃತ ಕೃತ್ಯವಾದಂತಹದು  ಯಾವುದೆಲ್ಲವಿದೆಯೋ ಅವೆಲ್ಲವೂ ನಿನ್ನ ದೃಷ್ಟಿಯ ಐದು ಅಥವಾ  ಆರು ಬಿಂದುಗಳು.

ರತಿರ್ಮತಿ-ಸರಸ್ವತೀ-ಧೃತಿ-ಸಮೃದ್ಧಿ-ಸಿದ್ಧಿ-ಶ್ರಿಯ:
ಸುಧಾಸಖಿ ಯತೋಮುಖಂ ಚಿಚಲಿಷೇತ್ ತವ ಭ್ರೂಲತಾ |
ತತೋಮುಖಮಥೇಂದಿರೇ ಬಹುಮುಖೀಮಹಂ-ಪೂರ್ವಿಕಾಂ
ವಿಗಾಹ್ಯ ಚ ವಶಂವದಾ: ಪರಿವಹಂತಿ ಕೂಲಂಕಷಾ:  ||೪||

ಭಾವಾರ್ಥ:-ಅಮೃತದ ಒಡನಾಡಿಯಾಗಿರುವ ಇಂದಿರೆಯೇ,ನಿನ್ನ  ಹುಬ್ಬಿನ ಹಂಬು ಯಾರ ಕಡೆಗೆ ಸಂಚರಿಸಬಯಸುವುದೋ ಅವನೆಡೆಗೆ  ಸಂಪತ್ತು, ಜ್ಞಾನ,ಪ್ರೀತಿ, ವಿದ್ಯೆ,  ಬುದ್ಧಿ,ಸಮೃದ್ಧಿ,ಇಷ್ಟಾಸಿದ್ಧಿ ಇವೆಲ್ಲವೂ ತಾ ಮೊದಲು ತಾ  ಮೊದಲು ಎಂಬುದಾಗಿ ಅಂಚನ್ನು ಮೀರಿ ಹರಿವ ನದಿಯಂತೆ ಪ್ರವಹಿಸಿ  ಅವನ ಕೈ ವಶವಾಗುವುದು.

ಸಹ-ಸ್ಥಿರ-ಪರಿತ್ರಸ-ವ್ರಜ-ಮಂಚನಾಕಿಂಚನೈ:
ಅನೋಕಹ-ಬೃಹಸ್ಪತಿ-ಪ್ರಬಲ-ವಿಕ್ಲಬ-ಪ್ರಕ್ರಿಯಮ್ |
ಇದಂ ಸದಸದಾತ್ಮನಾ ನಿಖಿಲಮೇವ ನಿಮ್ನೋನ್ನತಂ
ಕಟಾಕ್ಷ-ತದುಪೇಕ್ಷಯೋಸ್ತವ ಹಿ ಲಕ್ಷ್ಮಿ ತತ್ತಾಂಡಮ್ ||೫||

ಭಾವಾರ್ಥ:-ಹೇ! ಲಕ್ಷ್ಮಿ,ಸ್ಥಾವರಹಾಗೂ,ಜಂಗಮ,ಸ್ಥಿತಿವಂತ ಮತ್ತು  ದರಿದ್ರ,ಬೃಹಸ್ಪತಿ ಮತ್ತು ವನಸ್ಪತಿ,ಬಲಶಾಲಿ ಮತ್ತು ದುರ್ಬಲ ಈ  ರೀತಿಯಾಗಿ ಸದಸದ್ರೂಪದಲ್ಲಿರುವ ಹಾಗೂ ಉಚ್ಛ ನೀಚ  ಭಾವನೆಗಳನ್ನು ಹೊಂದಿರುವ ಈ ಸಮಸ್ತ ಭೂಮಂಡಲವು ನಿನ್ನ  ಕರುಣೆಯಕುಡಿಗಣ್ಣೋಟವಿಲ್ಲದಿರುವ ಮತ್ತು ಕರುಣಾಕಟಾಕ್ಷದ  ಫಲವಾಗಿದೆ.

ಯದ್ದೂರೇ ಮನಸೋ ಯದೇವ ತಮಸ: ಪಾರೇ ಯದತ್ಯದ್ಭುತಂ
ಯತ್ಕಾಲಾದಪಚೇಲಿಮಂ ಸುರಪುರೀ ಯದ್ಗಚ್ಛತೋ ದುರ್ಗತಿ: |
ಸಾಯುಜ್ಯಸ್ಯ ಯದೇವ ಸೂತಿರಥವಾ ಯದ್ದುರ್ಗ್ರಹಂ ಮದ್ಗಿರಾಂ
ತದ್ವಿಷ್ಣೋ: ಪರಮಂ ಪದಂ ತವ ಕೃತೇ ಮಾತ: ಸಮಾಮ್ನಾಸಿಷು: ||೬||

ಭಾವಾರ್ಥ:-ಯಾವುದು ಮಾತು ಮನಸ್ಸುಗಳಿಗೆ ಕಾಣದಿರುವುದೋ,  ಯಾವುದು ಕತ್ತಲಿನ ಆಚೆಗಿರುವುದೋ,ಯಾವುದು ಅತಿ  ಭಯಂಕರವೋ,ಯಾವುದರ ಮೇಲೆ ವೇಳೆ ಪರಿಣಾಮ ಬೀರಲು  ಸಾಧ್ಯವಾಗುವುದಿಲ್ಲವೋ,ಯಾವ ಜಾಗಕ್ಕೆ ಹೋಗುವವರಿಗೆ ಇಂದ್ರನ  ನಗರಿಯೂ ದುರ್ಗತಿಯ ಅನುಭವನ್ನು ಒದಗಿಸುವುದೋ, ಯಾವುದು ಪರಮ  ಸಾಯುಜ್ಯದ ಉಗಮ ಸ್ಥಾನವೋ,ಅಂತಹಾ ಮಹಾವಿಷ್ಣುವಿನ  ಪರಮಪದವು ನಿನಗೋಸ್ಕರವೆಂದು ವೇದಶಾಸ್ತ್ರಗಳು  ಹೇಳುತ್ತಿವೆಯಮ್ಮಾ!

ಮಾತರ್ಮೈಥಿಲಿ ರಾಕ್ಷಸೀಸ್ತ್ವಯಿ  ತದೈವಾರ್ದ್ರಾಪರಾಧಾಸ್ತ್ವಯಾ
ರಕ್ಷಂತ್ಯಾ ಪವನಾತ್ಮಜಾಲ್ಲಘುತರಾ ರಾಮಸ್ಯ ಗೋಷ್ಟೀ ಕೃತಾ |
ಕಾಕಂ ತವ ಚ ವಿಭೀಷಣಂ ಶರಣಮಿತ್ಯುಕ್ತಿಕ್ಷಮೌ ರಕ್ಷತ:
ಸಾ ನ: ಸಾಂದ್ರಮಹಾಗಸ: ಸುಖಯತು ಕ್ಷಾಂತಿಸ್ತವಾಸ್ಸ್ಕಸ್ಮಿಕೀ ||೭||

ಭಾವಾರ್ಥ:-ಮಾತೆ ಮೈಥಿಲಿಯೇ; ನವನವೀನ ಅಪರಾಧಗಳನ್ನು  ಮಾಡುತ್ತಲಿದ್ದ ರಕ್ಕಸಿಯರನ್ನು ನಾಶಪಡಿಸಲು ಹನುಮನು  ಇಚ್ಚಿಸಿದಾಗ, ನೀನು ಅವರನ್ನು ರಕ್ಷಿಸಿ ರಾಮನ ಸಹವಾಸವನ್ನೂ  ಹಗುರವಾಗಿ ಭಾವಿಸಿದೆ.ಏಕೆಂದರೆ "ನಿನಗೆ ಶರಣು ಬಂದಿರುವೆ"ಎಂದಾಕ್ಷಣ  ಕಾಕಾಸುರನನ್ನೂ ವಿಭೀಷಣನನ್ನೂ ಶ್ರೀರಾಮನು ರಕ್ಷಿಸಿದ. ಅಂತಹಾ  ನಿನ್ನ ಅಕಸ್ಮಾತ್ತಾದ ಮನ್ನಿಸುವ ಗುಣವು ನಮ್ಮೆಲ್ಲರನ್ನು  ಸುಖಿಗಳಾಗಿ ಬಾಳುವಂತೆ ಮಾಡಲಿ.

ಮಾತರ್ಲಕ್ಷ್ಮಿ ಯಥೈವ ಮೈಥಿಲ-ಜನಸ್ತೇನಾಧ್ವನಾ ತೇ ವಯಂ
ತ್ವದ್ದಾಸ್ಯೈಕ-ರಸಾಭಿಮಾನ-ಸುಭಗೈರ್ಭಾವೈರಿಹಾಮುತ್ರ ಚ |
ಜಾಮಾತಾ ದಯಿತಸ್ತವೇತಿ ಭವತೀಸಂಬಂಧ-ದೃಷ್ಟ್ಯಾಹರಿಂ
ಪಶ್ಯೇಮ ಪ್ರತಿಯಾಮ ಯಾಮ ಚ ಪರೀಚಾರಾನ್ ಪ್ರಹ್ಯಷ್ಯೇಮ  ಚ  ||೮||

ಭಾವಾರ್ಥ:-ಅಮ್ಮಾ! ಮಾತೆ ಲಕ್ಷ್ಮೀದೇವಿಯೇ; ಮಿಥಿಲಾನಗರಿಯ  ಪ್ರಜೆಗಳು ನಿನಗೆ ಎಂತು ಸೇರಿದವರಾಗಿರುವರೋ,ನಿನ್ನ ಸೇವೆಯಲ್ಲಿ  ಇರುವ ಶ್ರೇಷ್ಠವಾದ ಶ್ರದ್ಧೆಯಿಂದಲೂ,ನಿನ್ನ ಮೇಲಿರುವ  ತಾದಾತ್ಮ್ಯ ಗೌರವದಿಂದ ಮನ್ನಣೆ ಪಡೆಯುವ ಇಂಗಿತವನ್ನು  ಹೊಂದಿದರೋ ಅದೇ ತೆರನಾಗಿ ನಾವು ಕೂಡಾ ನಿನ್ನವರು. ನಿನ್ನ  ಸಂಪರ್ಕದ ಉದ್ದೇಶದಿಂದ ನಾವು ಶ್ರೀಹರಿಯನ್ನು ಇಲ್ಲಿಯೂ  ಶಾಶ್ವತವಾದ ದಿವ್ಯ ಶಕ್ತಿಯಲ್ಲಿ "ನಿನ್ನ ಪತಿಯು ನಮ್ಮ  ಅಳಿಯನು" ಎಂದು ಕಾಣುತ್ತಿರುವೆವು.ಮತ್ತು ಆತನಲ್ಲಿ ಶರಣಾಗಿ  ಸೇವೆಯನ್ನು ಮಾಡುತ್ತಾ ಸಂತಸವನ್ನು ಹೊಂದುತ್ತಿರುವೆವು.

ಪಿತೇವ ತ್ವತ್ಪ್ರೇಯಾನ್ ಜನನಿ ಪರಿಪೂರ್ಣಾಗಸಿ ಜನೇ
ಹಿತಸ್ರೋತೋ ವೃತ್ತ್ಯಾ ಭವತಿ ಚ ಕದಾಚಿತ್ ಕಲುಷಧೀ: |
ಕಿಮೇತತ್ ನಿರ್ದೋಷ: ಕ ಇಹ ಜಗತೀತಿ ತ್ವಮುಚಿತೈ:
ಉಪಾಯೈರ್ವಿಸ್ಮಾರ್ಯ ಸ್ವಜನಯಸಿ ಮಾತಾ ತದಸಿ ನ:  ||೯||

ಭಾವಾರ್ಥ:-ಹೇ! ತಾಯಿ; ನಿನಗೆ ಮೆಚ್ಚಿನವನಾದ  ಶ್ರೀಮನ್ನಾರಾಯಣನು ಕೆಲವೊಮ್ಮೆ ತಪ್ಪು ಮಾಡಿದವರಾದ ನಮ್ಮ  ಬಗ್ಗೆ ಕೋಪಿಸಿಕೊಳ್ಳುತ್ತಾನೆ. ಆಗ ನೀನು ಜಗತ್ತಿನಲಿ ತಪ್ಪು  ಮಾಡದವರು ಯಾರೂ ಇಲ್ಲ ಎಂದು ತಕ್ಕುದಾದ ಮಾತುಗಳಿಂದಲೂ  ಉಪಾಯದಿಂದಲೂ ನಮ್ಮ ದೋಷಗಳನ್ನು ಮರೆಯುವ ಹಾಗೆ  ಮಾಡುವುದಲ್ಲದೆ ನಮ್ಮನ್ನು ನಿನ್ನವರೆಂದು ಸ್ವೀಕರಿಸುತ್ತಿರುವಿ.  ಆದ ಕಾರಣದಿಂದ ನೀನು ನಮಗೆ ಸಂಶಯಾತೀತವಾಗಿ ಮಾತೃ  ರೂಪಿಯಾಗಿರುವೆ.

ಔದಾರ್ಯ-ಕಾರುಣಿಕತಾಸ್ಸ್ಶ್ರಿತವತ್ಸಲತ್ವ-
ಪೂರ್ವೇಷು ಸರ್ವಮತಿಧಾಯಿತಮತ್ರ ಮಾತ: |
ಶ್ರೀರಂಗಧಾಮ್ನಿ ಯದುತಾನ್ಯದುದಾಹರಂತಿ
ಸೀತಾವತಾರ-ಮುಖಮೇತದಮುಷ್ಯ ಯೋಗ್ಯಮ್  ||೧೦||

ಭಾವಾರ್ಥ:-ತಾಯೇ! ನಿನ್ನ ಗುಣಗಳಾದ ಔದಾರ್ಯ,ಕಾರುಣ್ಯ  ಭಾವ,ಆಶ್ರಿತರಬಗೆಗಿನ ವಾತ್ಸಲ್ಯತೆ, ಇತ್ಯಾದಿಗಳು ಆ  ಶ್ರೀರಂಗಧಾಮದ ಮೂರ್ತ್ಯಾವತಾರದಲ್ಲಿ  ಶ್ರೇಷ್ಠತೆಯನ್ನು  ಪಡೆದಿವೆ. ಇದಕ್ಕಿಂತ ವಿಭಿನ್ನವಾದ ಸೀತಾವತಾರವೇ ಆದಿಯಾದ  ಅವತಾರಗಳನ್ನು ಪ್ರತ್ಯೇಕವಾಗಿ ಹೇಳಿದ್ದರೆ ಅವೆಲ್ಲವೂ ಆ  ಮೂರ್ತ್ಯಾವತಾರಕ್ಕೆ ಯೋಗ್ಯವಾದವುಗಳೇ ಆಗಿವೆ.
*********************************************************************
                    || ಇತಿ ಶ್ರೀಲಕ್ಷ್ಮೀ ಗುಣರತ್ನಕೋಶಮ್ ||
      || ಈರೀತಿಯಾಗಿ ಶ್ರೀಲಕ್ಷ್ಮೀ ಗುಣರತ್ನಕೋಶಸ್ತೋತ್ರಗಳ  ಭಾವಾರ್ಥವು ||
*********************************************************************

                            -೨೨-
          || ಶ್ರೀ ಗಾಯತ್ರೀ ಸ್ತೋತ್ರಮ್ ||
                 ***********************
ನಮಸ್ತೇ ದೇವಿ ಗಾಯತ್ರಿ ಸಾವಿತ್ರಿ ತ್ರಿಪದೇಸ್ಕ್ಷರೇ |
ಅಜರೇ ಅಮರೇ ಮಾತತ್ರಾಹಿ ಮಾಮ್ ಭವಸಾಗರಾತ್  ||೧||

ಭಾವಾರ್ಥ:- ಹೇ! ತಾಯೇ; ಈ ಭವ ಸಾಗರದಿಂದ ನನ್ನನ್ನು  ಕಾಪಾಡು.ಮೂರು ಅಕ್ಷರಗಳಿರುವ ನೀನು ಗಾಯತ್ರಿಯೂ,ಸಾವಿತ್ರಿಯೂ  ಆಗಿದ್ದು ಮುಪ್ಪಿಲ್ಲದವಳೂ ಆಗಿರುವುದಲ್ಲದೆ ಅಮರಳೂ ಆಗಿರುವೆ.  ಮಾತೆಯೇ ನಿನಗಿದೋ ಪ್ರಣಾಮಗಳು.

ನಮಸ್ತೇ ಸೂರ್ಯಸಂಕಾಶೇ ಸೂರ್ಯಸಾವಿತ್ರಿಕೆಮಾತೃಕೇ |
ಬ್ರಹ್ಮವಿದ್ಯೆ ಮಹಾವಿದ್ಯೆ ವೇದಮಾತೇನಮೋಸ್ತುತೇ  ||೨||

ಭಾವಾರ್ಥ:-ತಾಯಿಯೇ;ವೇದಮಾತೆಯೇ,ಮಹಾವಿದ್ಯಾಪ್ರದಾಯಿನಿ ಯೇ,ಬ್ರಹ್ಮ ವಿದ್ಯಾಪಾರಂಗತಳೇ,ಸೂರ್ಯನೊಡನೆ ಸದಾ ಇರುವ  ಮಾತೆಯೇ ನಿನಗಿದೋ ಪ್ರಣಾಮಗಳು.

ಅನಂತಕೋಟಿ ಬ್ರಹ್ಮಾಂಡವ್ಯಾಪಿನಿ ಬ್ರಹ್ಮಚಾರಿಣಿ |
ನಿತ್ಯಾನಂದೇ ಮಹಾಮಾಯೇ ಪರೇಶಾನಿ ನಮೋಸ್ತುತೇ  ||೩||

ಭಾವಾರ್ಥ:-ಹೇ! ಅಮ್ಮಾ; ಬ್ರಹ್ಮಚಾರಿಣಿಯೇ,ಬ್ರಹ್ಮಾಂಡವನ್ನು  ವ್ಯಾಪಿಸಿರುವವಳೇ,ನಿರಂತರ ಆನಂದ ದಾಯಕಿಯಾಗಿ  ಮಾಯಾಸ್ವರೂಪಿಣಿಯೂ ಆಗಿರುವ ಮಾತೆಯೇ, ನಿನಗಿದೋ  ಪ್ರಣಾಮಗಳು.

ತ್ವಂ ಬ್ರಹ್ಮಾ ತ್ವಂ ಹರಿ: ಸಾಕ್ಷಾದ್ ರುದ್ರಸ್ತ್ವಮಿಂದ್ರ  ದೇವತಾ  |
ಮಿತ್ರಸ್ತ್ವಂ ವರುಣಸ್ತ್ವಂ ಚ ತ್ವಮ್ ಅಗ್ನಿರಶ್ವಿನೌ ಭಗ: ||೪||

ಭಾವಾರ್ಥ: ಹೇ! ಅಮ್ಮಾ: ನೀನು ಬ್ರಹ್ಮ ಸ್ವರೂಪಿಯು. ನೀನು ಹರಿ  ಸ್ವರೂಪಳು.ಸಾಕ್ಷಾತ್ ರುದ್ರ ಸ್ವರೂಪಿಣಿಯೂ ಇಂದ್ರ ದೇವತೆಯೂ  ಆಗಿರುವೆ.ನೀನೇ ಸೂರ್ಯ,ಚಂದ್ರ, ಅಗ್ನಿ,ವರುಣ,ಅಶ್ವಿನೀ  ದೇವತೆಯರೂ ಆಗಿರುವೆ.ತಾಯಿಯೇ ನಿನಗಿದೋ ಪ್ರಣಾಮಗಳು.

ಪೂಷಾರ್ಯಮಾ ಮರುತ್ವಾಂಶ್ಚ ಋಷಯೋಸ್ಪಿ ಮುನೀಶ್ವರಾ:  |
ಪಿತರೋ ನಾಗಾ ಯಕ್ಷಾಂಶ್ಚ ಗಂಧರ್ವಾಪ್ಸರಾಂ ಗಣಾ:  ||೫||

ಭಾವಾರ್ಥ:-ನೀನೇ ಸೂರ್ಯ,ನೀನೇ ಪಾರ್ವತೀಮಾತೆ,ನೀನೇ ಮರುತ್  ದೇವತೆಯರ ಸ್ವರೂಪಿಣಿಯಾಗಿರುವಿ.ಋಷಿಗಳ ಸ್ವರೂಪವೂ ನಿನ್ನದೇ  ಆಗಿದೆ.ನಾಗ,ಯಕ್ಷ,ಗಂಧರ್ವ,ಅಪ್ಸರಗಣಾದಿಗಳಿಗೆ ನೀನೇ  ಮಾತಾಸ್ವರೂಪಿಣಿಯಾಗಿರುವಿ.

ರಕ್ಷೋ ಭೂತ ಪಿಶಾಚಾಶ್ಚ ತ್ವಮೇವ ಪರಮೇಶ್ವರೀ |
ಋಗ್ ಯಜು: ಸಾಮ ವಿದ್ಯಾಶ್ಚ ಅಥರ್ವಾಂಗೀರಸಾನಿ  ||೬||

ಭಾವಾರ್ಥ:-ಹೇ!ಪರಮೇಶ್ವರೀ; ನನ್ನನ್ನು ಭೂತ ಪಿಶಾಚಾದಿಗಳಿಂದ  ನೀನೇ ರಕ್ಷಿಸುವುದಾಗಿದೆ.ಅಲ್ಲದೇ  ಚತುರ್ವೇದಗಳಾದ  ಋಗ್,ಯಜು,ಸಾಮಾರ್ಥವಣಗಳು ನಿನ್ನಿಂದಲೇ  ರಕ್ಷಿಸಲ್ಪಡುವುದಾಗಿದೆ.

ತ್ವಮೇವ ಸರ್ವ ಶಾಸ್ತ್ರಾಣಿ ತ್ವಮೇವ ಸರ್ವ ಸಂಹಿತಾ:  |
ಪುರಾಣಿ ಚ ತಂತ್ರಾಣಿ ಮಹಾಗಮಮತಾನಿ ಚ  ||೭||

ಭಾವಾರ್ಥ:-ಅಮ್ಮಾ! ನೀನು ಸಮಸ್ತ ಶಾಸ್ತ್ರಗಳ ಸ್ವರೂಪಿಣಿಯೇ  ಆಗಿರುವಿ.ಅಲ್ಲದೆ ಮಂತ್ರ ಸಂಹಿತೆಗಳ,ತಂತ್ರಾಮಗಮಾದಿ ಪುರಾಣಗಳ  ಸ್ವರೂಪಿಣಿಯೂ ಆಗಿರುವೆ.

ತ್ವಮೇವ ಪಂಚಭೂತಾನಿ ತತ್ವಾನಿ ಜಗದೀಶ್ವರಿ  |
ಬ್ರಾಹ್ಮೀ ಸರಸ್ವತೀ ಸಂಧ್ಯಾ ತುರೀಯಾ ತ್ವಂ ಮಹೇಶ್ವರೀ  ||೮||

ಭಾವಾರ್ಥ:-ತಾಯಿಯೇ!ನೀನೇ  ಪೃಥ್ವೀ,ಅಪ್,ತೇಜೋ,ವಾಯು,ಆಕಾಶಗಳೆಂಬ ಪಂಚ  ಮಹಾಭೂತಾತ್ಮಿಕೆಯಾಗಿರುವೆ. ಸಮಸ್ತ ತತ್ವಗಳೂ ನೀನೇ  ಆಗಿರುವಿ.ನೀನು ಬ್ರಾಹ್ಮೀ ಕಾಲದಲ್ಲಿ ಸರಸ್ವತಿಯಾಗಿಯೂ  ಸಾಯಂಕಾಲ,ನಿಶ:ಕಾಲಗಳಲ್ಲಿ ಮಹೇಶ್ವರಿಯೂ ಆಗಿರುವಿ.

ತತ್ವಂ ಸದ್ ಬ್ರಹ್ಮಸ್ವರೂಪಾ ಕಿಂಚಿದ್ ಸದಸದಾತ್ಮಿಕಾ |
ಪರಾತ್ ಪರೇಶಿ ಗಾಯತ್ರಿ ನಮಸ್ತೇ ಮಾತರಂಬಿಕೇ  ||೯||

ಭಾವಾರ್ಥ:-ಅಮ್ಮ! ಮಾತೆಯೇ!! ಅಂಬಿಕೆಯೇ ನೀನು ಸಾಕ್ಷಾತ್  ಬ್ರಹ್ಮಸ್ವರೂಪಿಣಿಯೇ ಆಗಿರುವೆ. ಸತ್ಯಾತ್ಮಳೂ ಸತ್ಯ  ರೂಪಿಣಿಯೂ,ಶ್ರೇಷ್ಠಳೂ,ಪರಮಾತ್ಮಳೂ ಆಗಿರುವ ಗಾಯತ್ರಿಯೂ  ನೀನೇ ಆಗಿರುವೆ.ಆಂತಹಾ ಮಾತೆಯೇ ನಿನಗಿದೋ ಪ್ರಣಾಮಗಳು.

ಚಂದ್ರೇ ಕಲಾತ್ಮಿಕೇ ನಿತ್ಯೇ ಕಾಲರಾತ್ರಿ ಸ್ವಧೇ ಸ್ವರೇ |
ಸ್ವಾಹಾಕಾರೆಸ್ಗ್ನಿವಕ್ತ್ರೇ ತ್ವಾಮ್ ನಮಾಮಿ ಜಗದೀಶ್ವರಿ  ||೧೦||

ಭಾವಾರ್ಥ:-ಅನುದಿನವೂ ಚಂದ್ರನಲ್ಲಿ ಕಾಣಬಹುದಾದ ಕಲೆಗಳ  ನಿರ್ಮಾತೃ ನೀನೇ ಆಗಿರುವೆ.ಕಾಲರಾತ್ರಿಯಾಗಿಯೂ,ಸ್ವಾಹಾಕಾರದ  ಅಗ್ನಿಮುಖಳೂ ನೀನೇ ಇರುವೆ. ಹೇ! ಗಾಯತ್ರಿ ಮಾತೆಯೇ;  ಜಗದೀಶ್ವರೀಯೂ ಆಗಿರುವ ನಿನಗೆ ನನ್ನ ಪ್ರಣಾಮಗಳು.

ನಮೋ ನಮಸ್ತೇ ಗಾಯತ್ರಿ ಸಾವಿತ್ರಿ ತ್ವಾಂ ನಮಾಮ್ಯಹಮ್ |
ಸರಸ್ವತಿ ನಮಸ್ತುಭ್ಯಮ್ ತುರೀಯೇ ಬ್ರಹ್ಮರೂಪಿಣಿ  ||೧೧||

ಭಾವಾರ್ಥ:-ಗಾಯತ್ರಿ ಮಾತೆಯೇ ನಿನಗಿದೋ ನನ್ನ  ಪ್ರಣಾಮಗಳು.ಸಾವಿತ್ರಿ ಮಾತೆಯೇ ನಿನಗಿದೋ ನನ್ನ  ನಮನಗಳು.ಸರಸ್ವತಿಯೂ ಬ್ರಹ್ಮ ಸ್ವರೂಪಿಣಿಯೂ ಆಗಿರುವ  ಮಹಾಮಾತೆಯೇ ನಿನಗಿದೋ ಎನ್ನ ಪ್ರಣಾಮಗಳು.

ಅಪರಾಧ ಸಹಸ್ರಾಣಿ ತ್ವಸತ್ ಕರ್ಮ ಶತಾನಿ ಚ |
ಮತ್ತೋ ಜಾತಾನಿ ದೇವೇಶಿ ತ್ವಂ ಕ್ಷಮಸ್ವ ದಿನೇ ದಿನೇ  ||೧೨||

ಭಾವಾರ್ಥ:-ಅಮ್ಮಾ! ತಾಯಿಯೇ;ಅನುದಿನವೂ ನನ್ನಿಂದ ಸಾವಿರಾರು  ಅಪರಾಧಗಳು ಸಂಭವಿಸುತ್ತಲೇ ಇರುತ್ತವೆ.ನಿನ್ನಿಂದ ನೂರಾರು  ಸಂಖ್ಯೆಯಲ್ಲಿ ಪ್ರಶಸ್ತ ಕಾರ್ಯಗಳು ಜರಗುತ್ತಲೇ ಇರುತ್ತವೆ.ಹೇ!  ಜಗನ್ಮಾತೆಯೇ; ಸತ್ಯವನ್ನು ಅರಿತವಳಾದ ನೀನು ಅನುದಿನವೂ  ನನ್ನಿಂದಾಗುವ ಅಪರಾಧಗಳನ್ನು ಮಾನ್ನಿಸು ತಾಯೇ!!
*********************************************************************
                       -೨೩-
          || ಅನ್ನ ಪೂರ್ಣಾ ಸ್ತೋತ್ರಮ್ ||
             ***********************
ನಿತ್ಯಾನಂದಕರೀ ವರಾಭಯಕರೀ ಸೌಂದರ್ಯರತ್ನಾಕರೀ
ನಿರ್ಧೂತಾಖಿಲಘೋರಪಾವನಕರೀ ಪ್ರತ್ಯಕ್ಷಮಾಹೇಶ್ವರೀ |
ಪ್ರಾಲೇಯಾಚಲವಂಶಪಾವನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ  ||೧||

ಭಾವಾರ್ಥ:-ನಿತ್ಯವೂ ಆನಂದವನ್ನು ನೀಡುವವಳೂ,ಭಕ್ತರಿಗೆ ವರವನ್ನೂ ಅಭಯವನ್ನೂ ಕರುಣಿಸುವವಳೂ,ಸೌಂದರ್ಯದ ನಿಧಿಯೂ,ಭಕ್ತರ ಪಾಪಗಳನ್ನು ಕಳೆದು ಅವರನ್ನು ಪಾವನರನ್ನಾಗಿಸುವವಳೂ,ಸಾಕ್ಷಾತ್ ಮಾಹೇಶ್ವರೀ ಸ್ವರೂಪಳೂ,ಪರ್ವತರಾಜನ ವಂಶವನ್ನು ಪುನೀತಗೊಳಿಸಿದವಳೂ,ಕಾಶೀ ಪಟ್ಟಣದ ಅಧೀಶ್ವರಿಯೂ,ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.

ನಾನಾರತ್ನವಿಚಿತ್ರಭೂಷಣಕರೀ ಹೇಮಾಂಬರಾಡಂಬರೀ
ಮುಕ್ತಾಹಾರವಿಲಂಬಮಾನವಿಲಸದ್ವಕ್ಷೋಜಕುಂಭಾಂತರೀ |
ಕಾಶ್ಮೀರಾಗರುವಾಸಿತಾ ರುಚಿಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ  ||೨||

ಭಾವಾರ್ಥ:-ವಿಧವಿಧವಾಗಿರುವ ಚಿತ್ರವಿಚಿತ್ರವಾಗಿರುವ ಆಶ್ಚರ್ಯಕಾರಕವಾದ ರತ್ನಾಭರಣಗಳನ್ನು ಧರಿಸಿದವಳೂ ಹೊಂಬಣ್ಣದ ವಸನಗಳಿಂದ ಶೋಭಿಸುತ್ತಿರುವವಳೂ,ವಕ್ಷಸ್ಥಳದ ಮೇಲೆ ಪ್ರಕಾಶಮಾನವಾದಂತಹಾ ಮುತ್ತಿನ ಹಾರವನ್ನು ಧರಿಸಿಕೊಂಡಿರುವವಳೂ,ಕೇಸರಿ-ಅಗರುಗಳಿಂದ ಸುವಾಸಿತಳಾದವಳೂ,ಕಾಂತಿಯುತಳಾಗಿರುವವಳೂ ಕಾಶೀ ಪಟ್ಟಣದ ಅಧೀಶ್ವರಿಯೂ ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.

ಯೋಗಾನಂದಕರೀ ರಿಪುಕ್ಷಯಕರೀ ಧರ್ಮಾರ್ಥನಿಷ್ಠಾಕರೀ
ಚಂದ್ರಾರ್ಕಾನಲಭಾಸಮಾನಲಹರೀ ತ್ರಿಲೋಕ್ಯರಕ್ಷಾಕರೀ |
ಸರ್ವೈಶ್ವರ್ಯಸಮಸ್ತವಾಂಛಿತಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ  ||೩||

ಭಾವಾರ್ಥ:-ಯೋಗಾನಂದದಾಯಕಳೂ,ಶತ್ರು ಸಂಹಾರಕಳೂ,ಧರ್ಮ-ಅರ್ಥಗಳಲ್ಲಿ ಶ್ರದ್ಧೆ ಉಂಟುಮಾಡುವವಳೂ,ಚಂದ್ರ-ಸೂರ್ಯ-ಅಗ್ನಿಗಳ ಕಿರಣಕ್ಕೆ ಸಮಾನವಾದ ದೇಹಕಾಂತಿಯುಳ್ಳವಳೂ,ಮೂರು ಲೋಕಗಳನ್ನು ಪಾಲಿಸುವವಳೂ,ಹಾಗೆಯೇ ಸಮಸ್ತ ಐಶ್ವರ್ಯಗಳನ್ನೂ ವಾಂಛಿತಾರ್ಥಗಳನ್ನೂ ದಯಪಾಲಿಸುವವಳೂ ಕಾಶೀಪಟ್ಟಣದ ಅಧೀಶ್ವರಿಯೂ  ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.

ಕೈಲಾಸಾಚಲಕಂದರಾಲಯಕರೀ ಗೌರೀಹ್ಯುಮಾ ಶಂಕರೀ
ಕೌಮಾರೀ ನಿಗಮಾರ್ಥಗೋಚರಕರೀ ಓಂಕಾರಬೀಜಾಕ್ಷರೀ |
ಮೋಕ್ಷ ದ್ವಾರಕಪಾಟಪಾಟನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ  ||೪||

ಭಾವಾರ್ಥ:-ಕೈಲಾಸ ಪರ್ವತದ ಗುಹೆಗಳನ್ನು ತನ್ನ ಆಲಯವನ್ನಾಗಿಸಿಕೊಂಡವಳೂ,ಗೌರಿ,ಉಮೆ,ಶಂಕರಿ ಹಾಗೆಯೇ ಕೌಮಾರೀ ಸ್ವರೂಪಳೂ,ವೇದಗಳ ಮಹತ್ವವನ್ನು ಮನಗಾಣಿಸುವವಳೂ,ಓಂಕಾರ ಬೀಜಾಕ್ಷರದ ಮೂಲ ಸ್ವರೂಪಳೂ,ಮೋಕ್ಷದ ಹೆಬ್ಬಾಗಿಲನ್ನು ತೆರೆಯುವವಳೂ, ಕಾಶೀಪಟ್ಟಣದ ಅಧೀಶ್ವರಿಯೂ ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.

ದೃಶ್ಯಾದೃಶ್ಯಪ್ರಭೂತವಾಹನಕರೀ ಬ್ರಹ್ಮಾಂಡಭಾಂಡೋದರೀ
ಲೀಲಾನಾಟಕಸೂತ್ರಭೇಧನಕರೀ ವಿಜ್ಞಾನದೀಪಾಂಕುರೀ |
ಶ್ರೀವಿಶ್ವೇಶಮನ:ಪ್ರಸಾದನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ  ||೫||

ಭಾವಾರ್ಥ:-ಸೃಷ್ಟಿಯಲ್ಲಿ ಗೋಚರವಾದ ಹಾಗೂ ಅಗೋಚರವಾದ ಸಮಸ್ತ ವಸ್ತುಗಳನ್ನು ವಹಿಸಿಕೊಂಡಿರುವವಳೂ,ಬ್ರಹ್ಮಾಂಡವನ್ನು ಒಡವೆಯ ರೂಪದಲ್ಲಿ ತನ್ನ ಉದರದಲ್ಲಿ ಧರಿಸಿಕೊಂಡವಳೂ,ಲೀಲಾನಾಟಕದ ನಿಬಂದನೆಗಳನ್ನು ಬೇಧಿಸಬಲ್ಲವಳೂ,ವಿಜ್ಞಾನವೆಂಬ ಸೊಡರು ಪ್ರಕಾಶಿಸಲು ಕಾರಣೀಭೂತಳೂ,ಶ್ರೀವಿಶ್ವೇಶ್ವರನ ಮನಸ್ಸಿಗೆ ಮುದನೀಡುವಾಕೆಯೂ ಕಾಶೀಪಟ್ಟಣದ ಅಧೀಶ್ವರಿಯೂ ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.

ಉರ್ವೀಸರ್ವಜನೇಶ್ವರೀ ಭಗವತೀ ಮಾತಾನ್ನಪೂರ್ಣೇಶ್ವರೀ
ವೇಣೀನೀಲಸಮಾನಕುಂತಲಧರೀ ನಿತ್ಯಾನ್ನದಾನೇಶ್ವರೀ |
ಸರ್ವಾನಂದಕರೀ ದಶಾಶುಭಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ  ||೬||

ಭಾವಾರ್ಥ:-ಬ್ರಹ್ಮಾಂಡದ ಸಮಸ್ತ ಜೀವಿಗಳಿಗೂ ಈಶ್ವರಿಯೂ,ಭಗವತಿಯೂ,ತಾಯಿಯೂ, ಅನ್ನಪೂರ್ಣೇಶ್ವರಿಯೂ  ಕಪ್ಪಾಗಿರುವ ಕೂದಲುಗಳಿಂದ ಮನೋಹರವಾಗಿ ಜಡೆಯನ್ನು ಹೆಣೆದುಕೊಂಡವಳೂ,ಅನುದಿನವೂ ಪ್ರಾಣಶಕ್ತಿದಾಯಕವಾಗಿರುವ ಅನ್ನ ಪ್ರಸಾದವನ್ನು ಕರುಣಿಸುವವಳೂ,ಸರ್ವಾನಂದದಾಯಕಳೂ,ಸೌಭಾಗ್ಯದಾಯಕಳೂ ಕಾಶೀಪಟ್ಟಣದ ಅಧೀಶ್ವರಿಯೂ ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.

ಆದಿಕ್ಷಾಂತಸಮಸ್ತ ವರ್ಣನಕರೀ ಶಂಭೋಸ್ತ್ರಿಭಾವಾಕರೀ
ಕಾಶ್ಮೀರಾ ತ್ರಿಜನೇಶ್ವರೀ ತ್ರಿಲಹರೀ ನಿತ್ಯಾಂಕುರಾ ಶರ್ವರೀ |
ಕಾಮಾಕಾಂಕ್ಷಕರೀ ಜನೋದಯಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ  ||೭||

ಭಾವಾರ್ಥ:-"ಅ"ಕಾರದಿಂದ"ಕ್ಷ"ಕಾರದ ತನಕದ ಸಮಸ್ತ ಅಕ್ಷರ ಸಮೂಹಗಳನ್ನು ಸೃಷ್ಟಿಸಿದವಳೂ,ಈಶ್ವರ,ಹಿರಣ್ಯಗರ್ಭ,ವಿರಾಟ್ ಗಳೆಂಬ ಅವಸ್ಥಾತ್ರಯಗಳಿಗೆ ಕಾರಣೀಭೂತಳಾದವಳೂ,ಕುಂಕುಮಾಂಕಿತೆಯೂ,ಮೂರು ಲೋಕಗಳ ಅಧಿಷ್ಠಾನದೇವತೆಯೂ, ಸೃಷ್ಟಿ-ಸ್ಥಿತಿ-ಲಯಗಳೆಂಬ ಮೂರು ತರಂಗಗಳ ರೂಪವುಳ್ಳವಳೂ,ಸದಾ ಕಾರಣ ಸ್ವರೂಪಳೂ,ಪ್ರಳಯಾಂಧಕಾರ ಸ್ವರೂಪಿಣಿಯೂ,ಸಮಸ್ತ ಆಕಾಂಕ್ಷೆಗಳನ್ನು ಈಡೇರಿಸಬಲ್ಲವಳೂ,ಭಕ್ತೋದ್ಧಾರಕಳೂ, ಕಾಶೀಪಟ್ಟಣದ ಅಧೀಶ್ವರಿಯೂ ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.

ದರ್ವೀ ಸ್ವರ್ಣವಿಚಿತ್ರರತ್ನರಚಿತಾ ದಕ್ಷೇ ಕರೇ ಸಂಸ್ಥಿತಾ
ವಾಮೇ ಸ್ವಾದುಪಯೋದಯೋಧರೀ ಸಹಚರೀ ಸೌಭಾಗ್ಯ ಮಾಹೇಶ್ವರೀ |
ಭಕ್ತಾಭೀಷ್ಟಕರೀ ದೃಶಾ ಶುಭಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ  ||೮||

ಭಾವಾರ್ಥ:-ಬಲಹಸ್ತದಲ್ಲಿ ಬಂಗಾರದ ಸೌಟನ್ನು ಧರಿಸಿದವಳಾಗಿಯೂ,ಎಡಹಸ್ತದಲ್ಲಿ ರುಚಿಕರವಾದ ಅಮೃತಕಲಶವನ್ನು ಹಿಡಿದವಳಾಗಿಯೂ,ಸಕಲ ಸೌಭಾಗ್ಯಗಳಿಗೆ ಒಡತಿಯಾಗಿಯೂ,ಭಕ್ತರ ಸರ್ವಾಭೀಷ್ಟಗಳನ್ನು ಈಡೇರಿಸುವವಳೂ,ಕಟಾಕ್ಷಮಾತ್ರದಿಂದಲೇ ಶುಭವನ್ನು ಅನುಗ್ರಹಿಸುವವಳೂ, ಕಾಶೀಪಟ್ಟಣದ ಅಧೀಶ್ವರಿಯೂ ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.

ಚಂದ್ರಾರ್ಕಾನಲ ಕೋಟಿಕೋಟಿಸದೃಶಾ ಚಂದ್ರಾಂಶುಬಿಂಬಾಧರೀ
ಚಂದ್ರಾರ್ಕಾಗ್ನಿಸಮಾನ ಕುಂಡಲಧರೀ ಚಂದ್ರಾರ್ಕವರ್ಣೇಶ್ವರೀ |
ಮಾಲಾಪುಸ್ತಕಪಾಶಸಾಂಕುಶಧರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ  ||೯||

ಭಾವಾರ್ಥ:-ಕೋಟ್ಯಾನುಕೋಟಿ ಸೂರ್ಯ ಚಂದ್ರ ಅಗ್ನಿಯರಿಗೆ ಸಮಾನವಾದ ತೇಜಸ್ಸನ್ನು ಹೊಂದಿರುವವಳೂ,ಚಂದ್ರನ ಕಿರಣಗಳನ್ನು ಪ್ರತಿಬಿಂಬಿಸುತ್ತಿರುವ ತುಟಿಯನ್ನು ಹೊಂದಿರುವವಳೂ,ಚಂದ್ರ ಸೂರ್ಯಾಗ್ನಿಗಳಂತೆ ಉಜ್ವಲವಾಗಿ ದೇದೀಪ್ಯಮಾನವಾಗಿ ಬೆಳಗುತ್ತಲಿರುವ ಕರ್ಣಾಭರಣಗಳುಳ್ಳವಳೂ,ಸೂರ್ಯ ಚಂದ್ರರಂತೆ ಕಾಂತಿಯುತವಾಗಿರುವ ದೇಹವನ್ನು ಹೊಂದಿರುವವಳೂ,ಹಸ್ತಗಳಲ್ಲಿ ಮಾಲೆ,ಪುಸ್ತಕ,ಪಾಶ,ಅಂಕುಶಗಳನ್ನು ಧರಿಸಿರುವವಳೂ, ಕಾಶೀಪಟ್ಟಣದ ಅಧೀಶ್ವರಿಯೂ ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.

ಕ್ಷತ್ರತ್ರಾಣಕರೀ ಮಹಾಭಯಕರೀ ಮಾತಾಕೃಪಾಸಾಗರೀ
ಸಾಕ್ಷಾನ್ಮೋಕ್ಷಕರೀ ಸದಾ ಶಿವಕರೀ ವಿಶ್ವೇಶ್ವರೀಶ್ರೀಧರೀ |
ದಕ್ಷಾಕ್ರಂದಕರೀ ನಿರಾಮಯಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ  ||೧೦||

ಭಾವಾರ್ಥ:-ಕ್ಷತ್ರಿಯರ ಮಹಾಸಂರಕ್ಷಕಳೂ,ಭಕ್ತರ ಘೋರ ಸಂಕಟಗಳನ್ನು ಪರಿಹರಿಸಿ ಅಭಯ ಪ್ರದಾನ ಮಾಡುವವಳೂ,ದಯಾಸಾಗರೆಯೂ,ಸಾಕ್ಷಾತ್ ಮೋಕ್ಷ ಪ್ರದಾಯಕಳೂ,ಮಂಗಲದಾಯಿನಿಯೂ,ಜಗತ್ತಿನ ಅಧೀಶ್ವರಿಯೂ,ಸಂಂಪತ್ತನ್ನು ಧರಿಸಿರುವವಳೂ,ದಕ್ಷನು ರೋಧಿಸುವಂತೆ ಮಾಡಿದವಳೂ,ಸರ್ವರೋಗ ನಿವಾರಕಳೂ ಕಾಶೀಪಟ್ಟಣದ ಅಧೀಶ್ವರಿಯೂ  ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.

ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣವಲ್ಲಭೇ |
ಜ್ಞಾನವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂದೇಹಿ ಚ ಪಾರ್ವತೀ ||೧೧||

ಭಾವಾರ್ಥ:-ಅನವರತವೂ ಅಮೃತಮಯವಾಗಿ ಸದಾ ಪೂರ್ಣೆಯೆನಿಸಿಕೊಂಡಿರುವ ಅನ್ನಪೂರ್ಣೆ ತಾಯಿಯೇ;ಶಂಕರನಿಗೆ ಪ್ರಾಣಪ್ರಿಯಳಾದವಳೇ,ಪಾರ್ವತೀ ಮಾತೆಯೇ ನನಗೆ ಜ್ಞಾನ ವೈರಾಗ್ಯಗಳು ಸಿದ್ಧಿಸುವಂತೆ ಭಿಕ್ಷೆಯನ್ನು ಕರುಣಿಸು.

ಮಾತಾ ಮೇ ಪಾರ್ವತೀ ದೇವೀ ಪಿತಾದೇವೋ ಮಹೇಶ್ವರ: |
ಬಾಂಧವಾ: ಶಿವಭಕ್ತಾಶ್ಚ ಸ್ವದೇಶೋ ಭುವನತ್ರಯಮ್  ||೧೨||

ಭಾವಾರ್ಥ:-ಪಾರ್ವತೀ ದೇವಿಯೇ ನನ್ನ ತಾಯಿ.ಭಗವಂತನಾಗಿರುವ ಪರಮೇಶ್ವರನೇ ನನ್ನ ತಂದೆ.ಪರಶಿವನ ಭಕ್ತರೆಲ್ಲರೂ ನನ್ನ ಬಂಧುಗಳು. ಮೂರುಲೋಕಗಳೇ ನನ್ನ ಜನ್ಮಭೂಮಿ.ಈ ರೀತಿಯ ಮನೋ ಭಿಕ್ಷೆಯನ್ನು ಸದಾ ನನಗೆ ದಯಪಾಲಿಸು ಅಮ್ಮಾ!
********************************************************************************
          || ಇತಿ ಶ್ರೀಮದಾಚಾರ್ಯ ಶಂಕರವಿರಚಿತ ಅನ್ನಪೂರ್ಣಾ ಸ್ತೋತ್ರಮ್ ||
 || ಈ ರೀತಿಯಾಗಿ ಶ್ರೀಶಂಕರಾಚಾರ್ಯ ವಿರಚಿತ ಅನ್ನಪೂರ್ಣಾ ಸ್ತೋತ್ರಗಳ ಭಾವಾರ್ಥವು ||
*********************************************************************************
                                       -೨೪-
  || ಶ್ರೀ ಮೀನಾಕ್ಷೀ ಪಂಚರತ್ನ ಸ್ತೋತ್ರಮ್ ||
 **********************************
ಉದ್ಯದ್ಭಾನುಸಹಸ್ರ ಕೋಟಿ ಸದೃಶಾಂ ಕೇಯೂರ ಹಾರೋಜ್ವಲಾಂ |
ಬಿಂಬೋಷ್ಟೀಂ ಸ್ಮಿತದಂತ ಪಂಕ್ತಿರುಚಿರಾಂ ಪೀತಾಂಬರಾಲಂಕೃತಾಂ ||
ವಿಷ್ಣು ಬ್ರಹ್ಮ ಸುರೇಂದ್ರ ಸೇವಿತಪದಾಂ ತತ್ವಸ್ವರೂಪಾಂ ಶಿವಾಂ |
ಮೀನಾಕ್ಷೀಂ ಪ್ರಣತೋsಸ್ಮಿ ಸಂತತಮಹಂ ಕಾರುಣ್ಯವಾರಾಂನಿಧಿಮ್  ||೧||

ಭಾವಾರ್ಥ:-ಉದಯಿಸುವ ಸಾವಿರಕೋಟಿ ಸೂರ್ಯಸಮಾನ ತೇಜೋಮಯಿಯಾಗಿರುವಾಕೆಗೆ,ಒಂಕಿಹಾರಗಳನ್ನು ಧರಿಸಿ ಸೌಂದರ್ಯಭರಿತಳಾಗಿರುವಾಕೆಗೆ,ತೊಂಡೆಯ ಹಣ್ಣನ್ನು ಹೋಲುವ ತುಟಿಯನ್ನು ಹೊಂದಿರುವಾಕೆಗೆ,ಚೆಲುವಿನ ದಂತಪಂಕ್ತಿಗಳಿಂದ ಮುಗುಳ್ನಗೆಯನ್ನು ಸೂಸುತ್ತಿರುವಾಕೆಗೆ,ಪೀತಾಂಬರಾಲಂಕೃತಳಿಗೆ,ಬ್ರಹ್ಮ-ವಿಷ್ಣು-ಮಹೇಂದ್ರರಿಂದ ಸೇವೆಯನ್ನು ಸ್ವೀಕರಿತ್ತಿರುವಾಕೆಗೆ,ತತ್ವ ಸ್ವರೂಪಳಿಗೆ,ಆ ಪರಶಿವೆಗೆ,ಅಪಾರ ಕರುಣಾಸಾಗರೆಯಾಗಿರುವ ಮೀನಾಕ್ಷಿಗೆ ನಾನು ನಮಸ್ಕರಿಸುವೆ.  

ಮುಕ್ತಾಹಾರಲಸತ್ಕಿರೀಟರುಚಿರಾಂ ಪೂರ್ಣೇಂದು ವಕ್ತ್ರಪ್ರಭಾಂ |
ಶಿಂಜಿನ್ನೂಪುರಕಿಂಕಿಣೀಮಣಿಧರಾಂ ಪದ್ಮಪ್ರಭಾ ಭಾಸುರಮ್ ||
ಸರ್ವಾಭೀಷ್ಟಫಲಪ್ರದಾಂ ಗಿರಿಸುತಾಂವಾಣೀರಮಾಸೇವಿತಾಂ ||೨||
ಮೀನಾಕ್ಷೀಂ ಪ್ರಣತೋsಸ್ಮಿ ಸಂತತಮಹಂ ಕಾರುಣ್ಯವಾರಾಂನಿಧಿಮ್  ||೨||

ಭಾವಾರ್ಥ:-ಮುತ್ತಿನಹಾರವನ್ನೂ,ಶೋಭಾಯಮಾನವಾಗಿ ಬೆಳಗುವ ಕಿರೀಟವನ್ನೂ ಧರಿಸಿರುವಾಕೆಗೆ,ಪೌರ್ಣಿಮೆಯ ಚಂದಿರನ ಮುಖತೇಜಸ್ಸನ್ನು ಹೊಂದಿರುವಾಕೆಗೆ,ರತ್ನಾಭರಣಾಲಂಕೃತಳಿಗೆ,ತಾವರೆಯನ್ನು ಹೋಲುವ ತೇಜಸ್ಸುಳ್ಳಾಕೆಗೆ,ಸರ್ವೇಚ್ಚೆಗಳನ್ನು ಫಲಪ್ರದಗೊಳಿಸುವಾಕೆಗೆ,ಪರ್ವತರಾಜನ ಕುವರಿಗೆ,ಲಕ್ಷ್ಮೀ ಸರಸ್ವತಿಯರಿಂದ ಸೇವಿಸಲ್ಪಡುವಾಕೆಗೆ ಆ ಪರಶಿವೆಗೆ,ಅಪಾರ ಕರುಣಾಸಾಗರೆಯಾಗಿರುವ ಮೀನಾಕ್ಷಿಗೆ ನಾನು ನಮಸ್ಕರಿಸುವೆ.  

ಶ್ರೀವಿದ್ಯಾಂ ಶಿವವಾಮಭಾಗನಿಲಯಾಂ ಹ್ರೀಂಕಾರ ಮಂತ್ರೋಜ್ವಲಾಂ |
ಶ್ರೀಚಕ್ರಾಂಕಿತ ಬಿಂದು ಮಧ್ಯವಸತಿಂ ಶ್ರೀಮತ್ಸಭಾನಾಯಿಕಾಮ್ ||
ಶ್ರೀಮತ್ಷಣ್ಮುಖ ವಿಘ್ನರಾಜ ಜನನೀಂ ಶ್ರೀಮಜ್ಜಗನ್ಮೋಹಿನೀಂ |
ಮೀನಾಕ್ಷೀಂ ಪ್ರಣತೋsಸ್ಮಿ ಸಂತತಮಹಂ ಕಾರುಣ್ಯವಾರಾಂನಿಧಿಮ್  ||೩||

ಭಾವಾರ್ಥ:-ಶ್ರೀವಿದ್ಯೆಗೆ,ಶಿವನ ಎಡಭಾಗದಲ್ಲಿ ವಿರಾಜಮಾನಳಾಗಿರುವಾಕೆಗೆ,"ಹ್ರೀಂ"ಎಂಬ ಬೀಜ ಮಂತ್ರದಿಂದ ಶೋಭಿಸುತ್ತಿರುವಾಕೆಗೆ,ಶ್ರೀಚಕ್ರದ ಮಧ್ಯ ಬಿಂದುವಿನಲ್ಲಿ ನೆಲಸಿರುವಾಕೆಗೆ,ದೇವ ಸಭಾ ನಾಯಕಿಗೆ,ವಿಘ್ನೇಶ್ವರ-ಸುಬ್ರಹ್ಮಣ್ಯರ ತಾಯಿಗೆ,ಜಗತ್ತು ಮೋಹಿಸುವಾಕೆಗೆ ಆ ಪರಶಿವೆಗೆ,ಅಪಾರ ಕರುಣಾಸಾಗರೆಯಾಗಿರುವ ಮೀನಾಕ್ಷಿಗೆ ನಾನು ನಮಸ್ಕರಿಸುವೆ.  

ಶ್ರೀಮತ್ಸುಂದರನಾಯಿಕಾಂ ಭಯಹರಾಂ ಜ್ಞಾನಪ್ರದಾಂ ನಿರ್ಮಲಾಂ |
ಶ್ಯಾಮಾಭಾಂ ಕಮಲಾಸನಾರ್ಚಿತಪದಾಂ ನಾರಾಯಣಾಸ್ಯಾನುಜಾಮ್ ||
ವೀಣಾವೇಣು ಮೃದಂಗವಾದ್ಯರಸಿಕಾಂ ನಾನಾವಿಧಾಮಂಬಿಕಾಂ |
ಮೀನಾಕ್ಷೀಂ ಪ್ರಣತೋsಸ್ಮಿ ಸಂತತಮಹಂ ಕಾರುಣ್ಯವಾರಾಂನಿಧಿಮ್  ||೪||

ಭಾವಾರ್ಥ:-ಸುಂದರಿಯರಲ್ಲಿ ಅತಿ ಸುಂದರಳೂ, ಭಯ ನಿವಾರಕಳೂ,ಜ್ಞಾನ ಪ್ರದಾಯಿನಿಯೂ,ನಿರ್ಮಳಲೂ,ಶ್ಯಾಮಲ ವರ್ಣ ಕಾಂತಿಯುಳ್ಳವಳೂ,ಬ್ರಹ್ಮನಿಂದ ಪೂಜಿಸಲ್ಪಡುವವಳೂ,ಕಮಲಚರಣಳೂ,ನಾರಾಯಣ ಸೋದರಿಯೂ,ವೀಣಾ ವೇಣು ಮೃದಂಗಾದಿ ನಾನಾ ವಿಧದ ವಾದ್ಯಗಳ ಸ್ವರಮಾಧುರ್ಯ ರಸಿಕಳೂ,ಜಗನ್ಮಾತೆಯೂ ಆಗಿರುವ ಆ ಪರಶಿವೆಗೆ,ಅಪಾರ ಕರುಣಾಸಾಗರೆಯಾಗಿರುವ ಮೀನಾಕ್ಷಿಗೆ ನಾನು ನಮಸ್ಕರಿಸುವೆ.  

ನಾನಾ ಯೋಗಿ ಮುನೀಂದ್ರ ಹೃನ್ನಿವಾಸೀಂ ನಾನಾರ್ಥ ಸಿದ್ಧಿಪ್ರದಾಂ |
ನಾನಾಪುಷ್ಪವಿರಾಜಿತಾಂಘ್ರಿಯುಗಲಾಂ ನಾರಾಯಣೇನಾರ್ಚಿತಾಮ್ ||
ನಾದ ಬ್ರಹ್ಮಮಯೀಂ ಪರಾತ್ಪರತರಾಂ ನಾನಾರ್ಥ ತತ್ವಾತ್ಮಿಕಾಂ |
ಮೀನಾಕ್ಷೀಂ ಪ್ರಣತೋsಸ್ಮಿ ಸಂತತಮಹಂ ಕಾರುಣ್ಯವಾರಾಂನಿಧಿಮ್  ||೫||

ಭಾವಾರ್ಥ:-ಅಸಂಖ್ಯಾತ ಯೋಗಿಗಳ-ಮುನಿ ಶ್ರೇಷ್ಠರುಗಳ ಶುದ್ಧ ಹೃದಯದಲ್ಲಿ ನೆಲೆಯಾಗಿರುವಾಕೆಗೆ,ಅನೇಕಾನೇಕ ಸಿದ್ಧಿಪ್ರದಾಯಕಳಿಗೆ,ಶ್ರೀಮನ್ನಾರಾಯಣನಿಂದ ಅರ್ಚಿಸಲ್ಪಟ್ಟಾಕೆಗೆ,ವಿಧವಿಧದ ಪುಷ್ಪಗಳಿಂದ ಅಲಂಕರಿಸಲ್ಪಟ್ಟು ರಾರಾಜಿಸುತ್ತಲಿರುವ ಚರಕಮಲಗಳನ್ನು ಹೊಂದಿರುವಾಕೆಗೆ,ನಾದಬ್ರಹ್ಮಮಯಿಗೆ,ಪರಾತ್ಪರಳಿಗೆ,ನಾನಾರ್ಥ ತತ್ವಸ್ವರೂಪಳಿಗೆ ಆ ಪರಶಿವೆಗೆ,ಅಪಾರ ಕರುಣಾಸಾಗರೆಯಾಗಿರುವ ಮೀನಾಕ್ಷಿಗೆ ನಾನು ನಮಸ್ಕರಿಸುವೆ.  
*********************************************************************************
       || ಇತಿ ಶ್ರೀ ಶಂಕರಾಚಾರ್ಯ ವಿರಚಿತ ಶ್ರೀಮೀನಾಕ್ಷೀ ಪಂಚರತ್ನ ಸ್ತೋತ್ರಮ್ ||
||ಈ ತೆರನಾಗಿ ಶ್ರೀಶಂಕರಾಚಾರ್ಯ ವಿರಚಿತ ಶ್ರೀಮೀನಾಕ್ಷೀಪಂಚರತ್ನಸ್ತೋತ್ರಗಳ ಭಾವಾರ್ಥವು||

*********************************************************************************
                                                           -೨೫-
   || ಶ್ರೀ ಸರಸ್ವತೀ ಪ್ರಾತ:ಸ್ಮರಣ ಸ್ತೋತ್ರಮ್ ||
  ***********************************
ಪ್ರಾತ:ಸ್ಮರಾಮಿ ಮಹನೀಯ ಗುಣಾವತಂಸಂ |
ಕಾರುಣ್ಯಪೂರ ಕಮನೀಯ ರಸಪ್ರಸಾರಮ್ ||
ಜಿಹ್ವಾಂಚಲ ಪ್ರವಿಲಸನ್ ನಿಜರೂಪದೀಪಂ |
ವಾಣೀಮನೋಹರ ವರಾಂಗಮಪಾಂಗ ತುಂಗಮ್  ||೧||

ಭಾವಾರ್ಥ:-ಪರಮೋಚ್ಚ ಗುಣಗಳನ್ನು ಶಿರೋಭೂಷಣವನ್ನಾಗಿ 

ಧರಿಸಿಕೊಂಡಿರುವ,ಸಹಾನುಭೂತಿಯ ಪ್ರವಾಹವೆನ್ನುವ ಮನಸೆಳೆಯುವ 

ರಸದ ಹರಡುವಿಕೆಯುಳ್ಳ,ನಾಲಗೆಯ ತುದಿಯಲ್ಲಿ ತನ್ನ ಸ್ವರೂಪವೆಂಬ 

ದೀಪದಿಂದ ಶೋಭಿಸುತ್ತಿರುವ,ತನ್ನ ಮನೋಹರವಾದ ಕಡೆಗಣ್ಣ 

ನೋಟದಿಂದ ಕಂಗೊಳಿಸುತ್ತಿರುವ ವಿದ್ಯಾದಾಯಿನಿಯಾದ ಆ ವಾಣಿಯ 

ಮನಮೋಹಕ ಚೆಲುವಿನ ಮುಖವನ್ನು ನಾನು ಉಷ:ಕಾಲದಲ್ಲಿ 

ನೆನೆಯುತ್ತೇನೆ.

ಪ್ರಾತ:ಸ್ಮರಾಮಿ ವಚಸಾಮಧಿನಾಯಿಕಾಖ್ಯಂ |
ಸೃಷ್ಟಿ ಸ್ವರೂಪ ವಿಧಿಭೋಧನ ಪಾರವಶ್ಯಮ್ ||
ಶಬ್ದಾರ್ಥ ರೂಪಮತಿಶಾಯಿತ ವತ್ಸಲತ್ವಂ |
ವಾಣೀಮನೋಹರ ವರಾಂಗಮಪಾಂಗ ತುಂಗಮ್  ||೨||

ಭಾವಾರ್ಥ:-ಮಾತುಗಳಿಗೆ ಅಧಿನಾಯಕಿ ಎಂದು 

ಗುರುತಿಸಿಕೊಂಡಿರುವ,ಸೃಷ್ಟಿಯ ರೂಪ ಮತ್ತು ನಿಯಮಗಳನ್ನು 

ತಿಳಿಯುವಂತೆ ಹೇಳುವುದರಲ್ಲಿ ಮಗ್ನಳಾಗಿರುವ,ಶಬ್ದ ಹಾಗೂ 

ಅರ್ಥಗಳ ಸ್ವರೂಪದವಳಾಗಿ ಹೆಚ್ಚಿನ ವಾತ್ಸಲ್ಯದಿಂದ ಕೂಡಿದ ತನ್ನ 

ಎತ್ತರವಾದ ಹಾಗೂ ಮನೋಹರವಾದ ಕಡೆಗಣ್ಣ ನೋಟದಿಂದ 

ಕಂಗೊಳಿಸುತ್ತಿರುವ ವಿದ್ಯಾದಾಯಿನಿಯಾದ ಆ ವಾಣಿಯ ಮನಮೋಹಕ 

ಚೆಲುವಿನ ಶಿರವನ್ನು ನಾನು ಉಷ:ಕಾಲದಲ್ಲಿ ನೆನೆಯುತ್ತೇನೆ.

ಪ್ರಾತ:ಸ್ಮರಾಮಿ ಮನುರಾಜ ಮಹಿಮ್ನರೂಪಂ |
ಮರ್ತ್ಯಾಮರಾಸುರ ಗಣಾರ್ಚಿತ ಪಾದಪದ್ಮಮ್ ||
ಪದ್ಮಾಸನಾತ್ಮ ಸದನಾಯತನಾಧಿವಾಸಂ |
ವಾಣೀಮನೋಹರ ವರಾಂಗಮಪಾಂಗ ತುಂಗಮ್  ||೩||

ಭಾವಾರ್ಥ:-ಚಿಂತಾಮಣಿ ಹಾಗೂ ಶ್ರೀವಿದ್ಯಾ ಪರಮ ಶ್ರೇಷ್ಠ 

ಮಂತ್ರಗಳ ವೈಭವಾನ್ವಿತ ಸ್ವರೂಪವುಳ್ಳ,ದೇವ ದಾನವ 

ಮನುಜರಾದಿಗಳಿಂದ ಪೂಜಿಸಿಗೊಂಬ ಪಾದಾರವಿಂದಗಳುಳ್ಳ,ಚತುರ್ಮುಖ 

ಬ್ರಹ್ಮನ ಸದನದಲ್ಲಿ ನೆಲೆಯಾಗಿರುವ, ತನ್ನ ಮನೋಹರವಾದ 

ಕಡೆಗಣ್ಣ ನೋಟದಿಂದ ಕಂಗೊಳಿಸುತ್ತಿರುವ ವಿದ್ಯಾದಾಯಿನಿಯಾದ 

ಆ ವಾಣಿಯ ಮನಮೋಹಕ ಚೆಲುವಿನ ಶರೀರವನ್ನು ನಾನು 

ಉಷ:ಕಾಲದಲ್ಲಿ ನೆನೆಯುತ್ತೇನೆ.

ಪ್ರಾತ:ಸ್ಮರಾಮಿ ಮನಸಾ ವಚಸಾ ಸುಭಕ್ತ್ಯಾ |
ಭಾಷಾಮಯಿ ಪ್ರಬಲಧಾರಣ ಕಾರಣಾಂತಮ್ ||
ವಿದ್ಯಾ ಯಶ: ಶ್ರಿಯಮುದಾರತಯಾ ಪ್ರಸನ್ನಂ |
ವಾಣೀಮನೋಹರ ವರಾಂಗಮಪಾಂಗ ತುಂಗಮ್  ||೪||

ಭಾವಾರ್ಥ:-ಮಾತುಗಳ ಸ್ವರೂಪದಲ್ಲಿ ಪ್ರಬಲ ಧಾರಣೆಗೆ 

ಕಾರಣಳಾದ,ವಿದ್ಯಾ,ಕೀರ್ತಿ,ಮತ್ತು ಸಂಪತ್ತು 

ಸ್ವರೂಪದವಳಾದ,ಮನುಜರ ಬಗೆಗಿನ ಕರುಣೆಯಿಂದ ಪ್ರಸನ್ನಳಾದ. 

ಎದ್ದು ಕಾಣುವ ಕಡೆಗಣ್ಣೋಟದ ವಾಗ್ದೇವಿಯ ಸ್ವರೂಪದ  

ವಿದ್ಯಾದಾಯಿನಿಯಾದ ಆ ವಾಣಿಯ ಮನಮೋಹಕ ಚೆಲುವಿನ 

ದೇಹವನ್ನು ನಾನು ಉಷ:ಕಾಲದಲ್ಲಿ ಮಾತು ಮನಗಳಿಂದ 

ನೆನೆಯುತ್ತೇನೆ.

ಪ್ರಾತ:ಸ್ಮರಣ ಜಮದುತ್ತರಣಾಂಘ್ರಿ ಯುಗ್ಮಂ |
ವೇದಾದಿಗಮ್ಯ ಪರತತ್ವ ಪದಾರ್ಥ ಬೋದಮ್ ||
ನಾದ ಪ್ರಿಯಾಮರತರುಂ ಶ್ರಿತ ಪಾರಿಜಾತಮ್ |
ವಾಣೀಮನೋಹರ ವರಾಂಗಮಪಾಂಗ ತುಂಗಮ್  ||೫||

ಭಾವಾರ್ಥ:-ಆಹಾರ ಸ್ವೀಕಾರವನ್ನೊಳಗೊಂಡ ಈ ಸಂಸಾರ ಕಡಲನ್ನು 

ದಾಟಿಸುವ ಎರಡು ಪಾದಗಳುಳ್ಳ,ವೇದಾದಿಗಳಿಂದ ಅರಿತುಕೊಳ್ಳಬೇಕಾದ 

ಪರಮಾತ್ಮ ತತ್ವದ ಸ್ಥಾನದ ಬಗ್ಗೆ 

ಜೀವಜ್ಞಾನವಾಗಿರುವ,ಓಂಕಾರವನ್ನು ಮೆಚ್ಚುವ ದೇವ 

ವೃಕ್ಷವಾಗಿರುವ,ಆಶ್ರಯಿಸಿದವರಿಗೆ ಕಲ್ಪವೃಕ್ಷದಂತೆ 

ಆಶ್ರಯದಾತಳಾಗಿರುವ ತನ್ನ ಮನೋಹರವಾದ ಕಡೆಗಣ್ಣ ನೋಟದಿಂದ 

ಕಂಗೊಳಿಸುತ್ತಿರುವ ವಿದ್ಯಾದಾಯಿನಿಯಾದ ಆ ಸರಸ್ವತೀ ದೇವಿಯ 

ಮನಮೋಹಕ ಚೆಲುವಿನ ಸ್ವರೂಪವನ್ನು ನಾನು ಉಷ:ಕಾಲದಲ್ಲಿ 

ನೆನೆಯುತ್ತೇನೆ.
*********************************************************************                                          ||  ಇತಿ ಶ್ರೀ ಸರಸ್ವತೀ ಪ್ರಾತ:ಸ್ಮರಣ ಸ್ತೋತ್ರಮ್  ||
     || ಈ ರೀತಿಯಾಗಿ ಶ್ರೀ ಸರಸ್ವತೀ ಪ್ರಾತ:ಸ್ಮರಣ ಸ್ತೋತ್ರಗಳ ಭಾವಾರ್ಥವು ||

*********************************************************************
                             -೨೬-
  || ಶ್ರೀ ತ್ರಿಪುರಸುಂದರೀ ಪ್ರಾತ:ಸ್ಮರಣ ಸ್ತೋತ್ರಮ್ ||
 ****************************************
ಕಸ್ತೂರಿಕಾ ಕೃತ ಮನೋಜ್ಞಲಲಾಮ ಭಾಸ್ವದ್- |
ಅರ್ಧೇಂದು ಮುಗ್ಧ ನಿಟಿಲಾಂಚಲ ನೀಲಕೇಶೀಮ್ ||
ಪ್ರಾಲಂಬಮಾನ ನವಮೌಕ್ತಿಕ ಹಾರಭೂಷಾಂ |
ಪ್ರಾತ:ಸ್ಮರಾಮಿ ಲಲಿತಾಂ ಕಮಲಾಯತಾಕ್ಷೀಮ್ ||೧||

ಭಾವಾರ್ಥ:-ಕಸ್ತೂರಿಯಿಂದ ತಯಾರಿಸಲಾದ ಮನೋಹರವಾಗಿರುವ 

ತಿಲಕದಿಂದ ಬೆಳಗುತ್ತಾ ಅರ್ಧ ಚಂದ್ರನನ್ನು ಹೋಲುವ ಹಣೆಯ 

ದಂಡೆಯಲ್ಲಿ ಕರಿದಾದ ತಲೆಗೂದಲುಗಳನ್ನು ಹೊಂದಿರುವ ಹಾಗೂ 

ನೇತಾಡುವ ಹೊಸ ಮುತ್ತಿನ ಹಾರವನ್ನು ಧರಿಸಿರುವ ಕಮಲದಂತೆ 

ವಿಸ್ತಾರವಾಗಿರುವ ನಯನಗಳನ್ನು ಹೊಂದಿರುವ ತಾಯಿ ಶ್ರೀ 

ಲಲಿತಾಂಬಿಕೆಯನ್ನು ಉಷ:ಕಾಲದಲ್ಲಿ ನಾನು ಧ್ಯಾನಿಸುವೆ.

ಏಣಾಂಕ ಚೂಡ ಸಮುಪಾರ್ಚಿತ ಪುಣ್ಯರಾಶಿಂ |
ಉತ್ತಪ್ತ ಹೇಮ ತನುಕಾಂತಿ ಝರೀ ಪರೀತಾಮ್ ||
ಏಕಾಗ್ರ ಚಿತ್ತ ಮುನಿ ಮಾನಸ ರಾಜಹಂಸೀಂ |
ಪ್ರಾತ:ಸ್ಮರಾಮಿ ಲಲಿತಾ ಪರಮೇಶ್ವರೀಮ್ ತಾಮ್ ||೨||

ಭಾವಾರ್ಥ:-ಹರಿಣದ ಕುರುಹುಳ್ಳ ಚಂದಿರನನ್ನು ತಲೆಯ ಆಭರಣವನ್ನಾಗಿ 

ಧರಿಸಿದವನಾದ ಪರಮೇಶ್ವರನು ಶೇಖರಿಸಿರುವ ಪುಣ್ಯದ ರಾಶಿಯೇ 

ಆಗಿರುವ,ಬಿಸಿ ಮಾಡಲ್ಪಟ್ಟ ಬಂಗಾರದ ದೇಹ ಕಾಂತಿಯು ಸುತ್ತಲೂ 

ಹೊರಸೂಸುತ್ತಿರುವುದರಿಂದ ಆದ ನದಿಯಿಂದ 

ಆವರಿಸಲ್ಪಟ್ಟಂತಿರುವ,ಏಕಾಗ್ರ ಚಿತ್ತರಾಗಿ ಧ್ಯಾನಿಸುತ್ತಿರುವ 

ಮುನಿಗಳ ಅಂತರ್ಯವೆಂಬ ಮಾನಸ ಸರೋವರದಲ್ಲಿ ವಿಹರಿಸುತ್ತಿರುವ 

ರಾಜಹಂಸದಂತಿರುವ ತಾಯಿ ಲಲಿತಾ ಪರಮೇಶ್ವರಿಯನ್ನು ನಾನು 

ಉಷ:ಕಾಲದಲ್ಲಿ ಸ್ಮರಿಸುವೆನು.

ಈಶದ್ವಿಕಾಸಿ ನಯನಾಂತ ನಿರೀಕ್ಷಣೇನ |
ಸಾಮ್ರಾಜ್ಯದಾನ ಚತುರಾನನೇಡ್ಯಾಮ್ ||
ಈಶಾಂಕ ವಾಸರಸಿಕಾಂ ರಸಸಿದ್ಧಿದಾತ್ರೀಂ |
ಪ್ರಾತ:ಸ್ಮರಾಮಿ ಮನಸಾ ಲಲಿತಾಧಿನಾಥಾಮ್  ||೩||

ಭಾವಾರ್ಥ:-ಸ್ವಲ್ಪ ತೆರೆದ ಕಡೆಗಣ್ಣಿನ ಕುಡಿನೋಟದಿಂದ ನಂಬುವ 

ಭಕ್ತರಿಗೆ ಸಾಮ್ರಾಜ್ಯವನ್ನೇ ದಯಪಾಲಿಸುವಂತಹಾ 

ಚದುರೆಯಾಗಿರುವ,ಚತುರ್ಮುಖ ಬ್ರಹ್ಮನಿಂದ 

ಪೂಜಿಸಲ್ಪಡುವವಳಾದ,ಮಹಾದೇವನ ಮಡಿಲಲ್ಲಿರಲು 

ಬಯಸುತ್ತಿರುವವಳಾದ,ಬ್ರಹ್ಮಾನಂದ ಫಲಪ್ರಾಪ್ತಿಯನ್ನು 

ಅನುಗ್ರಹಿಸುವ ತಾಯಿ ಲಲಿತಾಂಬಿಕೆಯನ್ನು ಉಷ:ಕಾಲದಲ್ಲಿ ಮನಸಾ 

ಸ್ಮರಿಸುವೆನು.

ಲಕ್ಷ್ಮೀಶ ಪದ್ಮಭವನಾದಿ ಪದೈಶ್ಚತುರ್ಭಿ: |
ಸಂಶೋಭಿತೇ ಚ ಫಲಕೇನ ಸದಾಶಿವೇನ ||
ಮಂಚೇ ವಿತಾನಸಹಿತೇ ಸಸುಖಂ ನಿಷಣ್ಣಾಂ |
ಪ್ರಾತ:ಸ್ಮರಾಮಿ ಮನಸಾ ಲಲಿತಾಧಿನಾಥಾಮ್  ||೪||

ಭಾವಾರ್ಥ:-ವಿಷ್ಣು,ಬ್ರಹ್ಮ,ರುದ್ರ,ಈಶ ಎಂಬ ನಾಲ್ಕು 

ಪಾದಗಳಿಂದಲೂ,ಹಾಗೂ ಸದಾಶಿವನೆಂಬ ಹಲಿಗೆಯಿಂದ 

ಪ್ರಕಾಶಿಸುವ,ಮತ್ತು ಮೇಲ್ ಹೊದಿಕೆಯಿಂದ ಅಲಂಕರಿಸಲ್ಪಟ್ಟ 

ಮಂಚದಲ್ಲಿ ಸಂತಸ ಭರಿತಳಾಗಿ ಆಸೀನಳಾಗಿರುವ ಆ ತಾಯಿ 

ಲಲಿತಾಂಬಿಕೆಯನ್ನು ನಾನು ಉಷ:ಕಾಲದಲ್ಲಿ ಮನಸಾ ಸ್ಮರಿಸುವೆನು.

ಹ್ರೀಂಕಾರ ಮಂತ್ರ ಜಪ ತರ್ಪಣ ಹೋಮ ತುಷ್ಟಾಂ |
ಹ್ರೀಂಕಾರ ಮಂತ್ರ ಜಲಜಾತ ಸುರಾಜಹಂಸೀಮ್ ||
ಹ್ರೀಂಕಾರ ಹೇಮ ನವ ಪಂಜರ ಸಾರಿಕಾಂ ತಾಂ |
ಪ್ರಾತ:ಸ್ಮರಾಮಿ ಮನಸಾ ಲಲಿತಾಧಿನಾಥಾಮ್  ||೫||

ಭಾವಾರ್ಥ:-ಹ್ರೀಂಕಾರ ಮಂತ್ರ,ಜಪ,ತರ್ಪಣ,ಹೋಮಾದಿಗಳಿಂದ 

ಮುದಗೊಳ್ಳುವವಳಾದ,ಹ್ರೀಂಕಾರ ಮಂತ್ರವೆಂಬ ನೀರಿನಲ್ಲಿ 

ಹುಟ್ಟಿರುವ ಕಮಲದ ಒಡನಿರುವ ರಾಜಹಂಸದ ಹಾಗಿರುವ, 

ಹ್ರೀಂಕಾರವೆಂಬ ಬಂಗಾರದ ನವ ಪಂಜರದೊಳಗಿನ ಹೆಣ್ಣು ಗಿಣಿಯಂತೆ 

ಇರುವ ಆ ತಾಯಿ ಲಲಿತಾಂಬಿಕೆಯನ್ನು ನಾನು ಉಷ:ಕಾಲದಲ್ಲಿ ಮನಸಾ 

ಸ್ಮರಿಸುವೆನು.

ಹಲ್ಲೀಸ ಲಾಸ್ಯ ಮೃದು ಗೀತಿ ರಸಂ ಪಿಬಂತೀಂ |
ಆಕೂಣಿತಾಕ್ಷ ಮನವದ್ಯ ಗುಣಾಂಬುರಾಶಿಮ್ ||
ಸುಪ್ತೋತ್ಥಿತಾಂ ಶ್ರುತಿ ಮನೋಹರ ಕೀರವಾಗ್ಭಿ: |
ಪ್ರಾತ:ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ||೬||

ಭಾವಾರ್ಥ:-ಹಲ್ಲೀಸವೆಂಬ ಶೃಂಗಾರಾಭಿನಯ ನೃತ್ಯದ ಮತ್ತು 

ಮೆಲುದನಿಯ ಹಾಡುಗಳ ರಸಾಸ್ವಾದನೆ ಮಾಡುತ್ತಲಿರುವ,ಸ್ವಲ್ಪ 

ಮುಚ್ಚಿದಂತಿರುವ ನಯನಗಳುಳ್ಳ,ದೋಷರಹಿತ ಗುಣ 

ಸಾಗರದಂತಿರುವ,ಕಿವಿಗಳಿಗೆ ಇಂಪಾಗುವ ಗಿಳಿಯ ನುಡಿಗಳೊಡನೆ 

ನಿದ್ರೆಯಿಂದ ಎಚ್ಚೆತ್ತ ಆ ತಾಯಿ ಲಲಿತಾಂಬಿಕೆಯನ್ನು ನಾನು 

ಉಷ:ಕಾಲದಲ್ಲಿ ಮನಸಾ ಸ್ಮರಿಸುವೆನು.

ಸಚ್ಚಿನ್ಮಯೀಂ ಸಕಲ ಲೋಕ ಹಿತೈಷಿಣೀಂ ಚ |
ಸಂಪತ್ಕರೀಂ ಹಯಮುಖೀ ದೇವತೇಡ್ಯಾಮ್ ||
ಸರ್ವಾನವದ್ಯ ಸುಕುಮಾರ ಶರೀರ ರಮ್ಯಾಂ |
ಪ್ರಾತ:ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ||೭||

ಭಾವಾರ್ಥ:-ಪ್ರಶಸ್ತವಾದ ಜ್ಞಾನಗಳಿಂದ ತುಂಬಿಕೊಂಡಿರುವ,ಸಮಸ್ತ 

ಲೋಕ ಹಿತವನ್ನು ಇಚ್ಚಿಸುವ,ಸಂಪತ್ತನ್ನು ಉಂಟು ಮಾಡುವ, 

ಹಯಗ್ರೀವಾದಿ ದೇವತಾ ಸಮೂಹದಿಂದ 

ಪೂಜಿಸಿಗೊಂಬ,ದೋಷರಹಿತವಾದ ಸುಕೋಮಲ ದೇಹದಿಂದ 

ಮನೋಹರವಾಗಿ ಕಾಣುವ ಆ ತಾಯಿ ಲಲಿತಾಂಬಿಕೆಯನ್ನು ನಾನು 

ಉಷ:ಕಾಲದಲ್ಲಿ ಮನಸಾ ಸ್ಮರಿಸುವೆನು.

ಕನ್ಯಾಭಿರರ್ಥ ಶಶಿ ಮುಗ್ಧ ಕಿರೀಟ ಭಾಸ್ವತ್- |
ಚೂಡಾಭಿರಂಕಗತ ಹೃದ್ಯ ವಿಪಂಚಿಕಾಭಿ: ||
ಸಂಸ್ತೂಯಮಾನ ಚರಿತಾಂ ಸರಸೀರುಹಾಕ್ಷೀಂ |
ಪ್ರಾತ:ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ||೮||

ಭಾವಾರ್ಥ:-ಅರ್ಧ ಚಂದ್ರನಿಂದೊಡಗೂಡಿದ ಕಿರೀಟದಿಂದ 

ಪ್ರಕಾಶಿಸುವ, ಮನೋಹರವಾದ ವೀಣೆಯನ್ನು   ಮಡಿಲಲ್ಲಿ 

ಇರಿಸಿಕೊಂಡು ಸ್ತ್ರೀ ಸಮೂಹದಿಂದ ಸ್ತುತಿಸಲ್ಪಡುವ,ಹಾಗೂ 

ತಾವರೆಯನ್ನು ಹೋಲುವ ನಯನಗಳನ್ನು ಹೊಂದಿರುವ ಆ ತಾಯಿ 

ಲಲಿತಾಂಬಿಕೆಯನ್ನು ನಾನು ಉಷ:ಕಾಲದಲ್ಲಿ ಮನಸಾ ಸ್ಮರಿಸುವೆನು.

ಹತ್ವಾsಸುರೇಂದ್ರಮತಿ ಮಾತ್ರ ಬಲಾವಲಿಪ್ತ |
ಭಂಡಾಸುರಂ ಸಮರಚಂಡ ಸುಘೋರ ಸೈನ್ಯಮ್ ||
ಸಂರಕ್ಷಿತಾರ್ತ ಜನತಾಂ ತಪನೇಂದು ನೇತ್ರಾಂ |
ಪ್ರಾತ:ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ||೯||

ಭಾವಾರ್ಥ:-ತನ್ನ ಸ್ವಂತ ಬಲದಿಂದ ಅತಿಗರ್ವಿತನಾದ ಮತ್ತು 

ಕಾಳಗದಲ್ಲಿ ಪ್ರಚಂಡವಾಗಿರುವ ಸೈನ್ಯ ಬಲವನ್ನು ಹೊಂದಿದ್ದ 

ಅಸುರನಾಯಕನಾದ ಭಂಡಾಸುರನೆಂಬವವನನ್ನು ಕೊಂದು,ಶರಣು 

ಹೊಕ್ಕವರನ್ನು ಕಾಪಾಡಿದ,ರವಿಚಂದ್ರರನ್ನೇ 

ಕಣ್ಣುಗಳನ್ನಾಗಿಸಿಕೊಂಡಿರುವ  ಆ ತಾಯಿ ಲಲಿತಾಂಬಿಕೆಯನ್ನು ನಾನು 

ಉಷ:ಕಾಲದಲ್ಲಿ ಮನಸಾ ಸ್ಮರಿಸುವೆನು.

ಲಜ್ಜಾವನಮ್ರ ರಮಣೀಯ ಮುಖೇಂದು ಬಿಂಬಾಂ |
ಲಾಕ್ಷಾರುಣಾಂಘ್ರಿ ಸರಸೀರುಹ ಶೋಭಮಾನಾಮ್ ||
ರೋಲಂಬ ಜಾಲ ಸಮನೀಲಸುಕುಂತಲಾಢ್ಯಾಂ |
ಪ್ರಾತ:ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ||೧೦||

ಭಾವಾರ್ಥ:-ಲಜ್ಜೆಯಿಂದ ಮುದುಡಿದ ಮೋಹಕವಾದ 

ಚಂದ್ರಬಿಂಬವನ್ನು ಹೋಲುವ ಮುಖವುಳ್ಳವಳಾದ,ದಣಿವಿನಿಂದ ಕೆಂಪಾದ 

ಪಾದಗಳಿಂದ ಕಂಗೊಳಿಸುತ್ತಿರುವ,ದುಂಬಿಗಳ ಗುಂಪಿನಂತೆ ಕಾಣುವ 

ಚೆಲುವಾದ ಕಪ್ಪಗಿನ ರೋಮಗಳುಳ್ಳವಳಾದ ಆ ತಾಯಿ 

ಲಲಿತಾಂಬಿಕೆಯನ್ನು ನಾನು ಉಷ:ಕಾಲದಲ್ಲಿ ಮನಸಾ ಸ್ಮರಿಸುವೆನು.

ಹ್ರೀಂಕಾರಿಣೀಂ ಹಿಮಮಹೀಧರ ಪುಣ್ಯರಾಶಿಂ |
ಹ್ರೀಂಕಾರ ಮಂತ್ರ ಮಹನೀಯ ಮನೋಜ್ಞ ರೂಪಾಮ್ ||
ಹ್ರೀಂಕಾರ ಗರ್ಭ ಮನು ಸಾಧಕ ಸಿದ್ಧಿದಾತ್ರೀಂ |
ಪ್ರಾತ:ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ||೧೧||

ಭಾವಾರ್ಥ:-ಹಿಮವಂತನ ಪುಣ್ಯವೇ ಮೈದಳೆದಂತಿರುವ,ಹ್ರೀಂಕಾರ 

ಮಂತ್ರದ ಮೋಹಕ 

ಸ್ವರೂಪಿಣಿಯಂತಿರುವ,ಹ್ರೀಂಕಾರವನ್ನೊಳಗೊಂಡ ಮಂತ್ರದ 

ಸಾಧಕರಿಗೆ ಸಿದ್ಧಿಯನ್ನು ಕರುಣಿಸುವ,ಸಾಕ್ಷಾತ್ ಹ್ರೀಂಕಾರಿಣಿಯೇ 

ಆಗಿರುವ ಆ ತಾಯಿ ಲಲಿತಾಂಬಿಕೆಯನ್ನು ನಾನು ಉಷ:ಕಾಲದಲ್ಲಿ ಮನಸಾ 

ಸ್ಮರಿಸುವೆನು.

ಸಂಜಾತ ಜನ್ಮ ಮರಣಾದಿ ಭಯೇನ ದೇವೀಂ |
ಸಂಫುಲ್ಲಪದ್ಮನಿಲಯಾಂ ಶರದಿಂದು ಶುಭ್ರಾಮ್ ||
ಅರ್ಧೇಂದುಚೂಡ ವನಿತಾಮಣಿಮಾದಿ ವಂದ್ಯಾಂ |
ಪ್ರಾತ:ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ||೧೨||

ಭಾವಾರ್ಥ:-ಹುಟ್ಟು ಸಾವುಗಳೇ ಆದಿಯಾದವುಗಳ ಭೀತಿಯಿಂದ ದೇವಿ 

ಲಲಿತೆಯ ಸ್ಮರಣೆ ಮಾಡುತ್ತಿರುವೆನು.ಆಕೆ ಮನಮೋಹಕವಾಗಿ ಅರಳಿದ 

ಕಮಲದಲ್ಲಿ ನೆಲೆಯಾಗಿರುವಳು.ಮತ್ತು ಶರದೃತುವಿನ ಚಂದ್ರನಂತೆ ಬಿಳಿ 

ವರ್ಣದವಳಾಗಿರುವಳು.ಆ ಪರಶಿವನ ಮಡದಿಯೂ ಆಕೆಯೇ 

ಆಗಿರುವಳು.ಅಣಿಮಾ,ಲಘಿಮಾ,ಗರಿಮಾ,ಮಹಿಮಾ,ಪ್ರಾಪ್ತಿ,ಪ್ರಾಕಾಮ್

ಯ,ಈಶತ್ವ,ವಶಿತ್ವಗಳೆಂಬ ಅಷ್ಟಸಿದ್ಧಿಗಳಿಂದ 

ನಮಸ್ಕರಿಸಲ್ಪಡುವವಳಾದ ಆ ತಾಯಿ ಲಲಿತಾಂಬಿಕೆಯನ್ನು ನಾನು 

ಉಷ:ಕಾಲದಲ್ಲಿ ಮನಸಾ ಸ್ಮರಿಸುವೆನು.

ಕಲ್ಯಾಣ ಶೈಲ ಶಿಖರೇಷು ವಿಹಾರಶೀಲಾಂ |
ಕಾಮೇಶ್ವರಾಂಕ ನಿಲಯಾಂ ಕಮನೀಯ ರೂಪಾಮ್ ||
ಕಾವ್ವರ್ಣ ಮಂತ್ರ ಮಹನೀಯ ಮಹಾನುಭಾವಾಂ |
ಪ್ರಾತ:ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ||೧೩||

ಭಾವಾರ್ಥ:-ಕಲ್ಯಾಣವೆಂಬ ಪರ್ವತದ ತುದಿಯಲ್ಲಿ 

ವಿಹರಿಸುತ್ತಿರುವ,ಕಾಮೇಶ್ವರನ ಮಡಿಲಲ್ಲಿ 

ಕುಳಿತವಳಾದ,ಮನಮೋಹಕ ರೂಪಿನ,"ಕ" ಅಕ್ಷರದಿಂದ ಆರಂಭಗೊಳ್ಳುವ 

ಮಂತ್ರದ ಮಹೋನ್ನತ ಆತ್ಮಾನುಭಾವವುಳ್ಳವಳಾದ  ಆ ತಾಯಿ 

ಲಲಿತಾಂಬಿಕೆಯನ್ನು ನಾನು ಉಷ:ಕಾಲದಲ್ಲಿ ಮನಸಾ ಸ್ಮರಿಸುವೆನು.

ಲಂಬೋದರಸ್ಯ ಜನನೀಂ ತನು ರೋಮ ರಾಜೀಂ |
ಬಿಂಬಾಧರಾಂ ಚ ಶರದಿಂದು ಮುಖೀಂ ಮೃಡಾನೀಮ್ ||
ಲಾವಣ್ಯ ಪೂರ್ಣ ಜಲಧಿಂ ಜಲಜಾತ ಹಸ್ತಾಂ |
ಪ್ರಾತ:ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ||೧೪||

ಭಾವಾರ್ಥ:-ಲಂಬೋದರನಾದ ಗಜಾನನನ ತಾಯಿಯಾಗಿರುವ,ಸೂಕ್ಷ್ಮ 

ಹಾಗೂ ವಿರಳವಾಗಿರುವ ರೋಮಗಳ ಸಮೂಹವುಳ್ಳವಳಾದ,ತೊಂಡೆಯ 

ಹಣ್ಣನ್ನು ಹೋಲುವ ತುಟಿಯನ್ನು ಹೊಂದಿರುವ,ಶರದೃತುವಿನ 

ಚಂದ್ರನ ಮೊಗದಿಂದ ಕೂಡಿದ,ಮಹಾದೇವನ ಸತಿಯಾದ,ಸೌಂದರ್ಯ 

ಸಾಗರೆಯಾಗಿರುವ,ಹಸ್ತದಲ್ಲಿ ತಾವರೆಯ ಪುಷ್ಪವನ್ನು 

ಹಿಡಿದುಕೊಂಡಿರುವ ಆ ತಾಯಿ ಲಲಿತಾಂಬಿಕೆಯನ್ನು ನಾನು 

ಉಷ:ಕಾಲದಲ್ಲಿ ಮನಸಾ ಸ್ಮರಿಸುವೆನು.

ಹ್ರೀಂಕಾರಪೂರ್ಣ ನಿಗಮೈ: ಪ್ರತಿಪಾದ್ಯಮಾನಾಂ |
ಹ್ರೀಂಕಾರ ಪದ್ಮನಿಲಯಾಂ ಹತದಾನವೇಂದ್ರಾಮ್ ||
ಹ್ರೀಂಕಾರ ಗರ್ಭ ಮನುರಾಜ ನಿಷೇವ್ಯ ಮಾಣಾಂ |
ಪ್ರಾತ:ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ||೧೫||

ಭಾವಾರ್ಥ:-ಹ್ರೀಂಕಾರದಿಂದ ತುಂಬಿರುವ ವೇದಾದಿಗಳಿಂದ 

ಪ್ರತಿಪಾದಿಸಲ್ಪಡುತ್ತಿರುವ,ಹ್ರೀಂಕಾರವೆಂಬ ತಾವರೆಯಲ್ಲಿ 

ನೆಲೆಯಾಗಿರುವ,ಅಸುರರನ್ನೆಲ್ಲಾ 

ನಾಶಗೊಳಿಸಿದ,ಹ್ರೀಂಕಾರವನ್ನೊಳಗೊಂಡಿರುವ ಅಗ್ರಗಣ್ಯ 

ಮಂತ್ರಗಳಿಂದ ಸೇವೆಗಳನ್ನು ಸ್ವೀಕರಿಸುತ್ತಿರುವ ಆ ತಾಯಿ 

ಲಲಿತಾಂಬಿಕೆಯನ್ನು ನಾನು ಉಷ:ಕಾಲದಲ್ಲಿ ಮನಸಾ ಸ್ಮರಿಸುವೆನು.

ಶ್ರೀಚಕ್ರರಾಜ ನಿಲಯಾಂ ಶ್ರಿತ ಕಾಮಧೇನುಂ |
ಶ್ರೀ ಕಾಮರಾಜ ಜನನೀಂ ಶಿವಭಾಗಧೇಯಾಮ್ ||
ಶ್ರೀಮದ್ಗುಹಸ್ಯ ಕುಲ ಮಂಗಲ ದೇವತಾಂ ತಾಂ |
ಪ್ರಾತ:ಸ್ಮರಾಮಿ ಮನಸಾ ಲಲಿತಾಧಿನಾಥಾಮ್ ||೧೬||

ಭಾವಾರ್ಥ:-ಶ್ರೀಚಕ್ರದಲ್ಲಿ ನೆಲೆಯಾಗಿರುವ, ಆಶ್ರಿತರಿಗೆ 

ಕಾಮಧೇನುವಿನೋಪಾದಿಯಾಗಿರುವ,ಮನ್ಮಥನ 

ಮಾತೆಯಾಗಿರುವ,ಪರಮೇಶ್ವರನ ಅರ್ಧಾಂಗಿಯಾಗಿ ಆತನ ಅದೃಷ್ಟವೇ 

ಆಗಿರುವ ,ಶ್ರೀಸುಬ್ರಹ್ಮಣ್ಯನ ತಾಯಿಯಾಗಿ ಆತನ ಕುಲದ ಮಂಗಲ 

ದೇವತೆಯೇ ಆಗಿರುವ ಆ ತಾಯಿ ಲಲಿತಾಂಬಿಕೆಯನ್ನು ನಾನು 

ಉಷ:ಕಾಲದಲ್ಲಿ ಮನಸಾ ಸ್ಮರಿಸುವೆನು.
*********************************************************************
       || ಇತಿ ಶ್ರೀ ತ್ರಿಪುರಸುದರೀ ಪ್ರಾತ:ಸ್ಮರಣ ಸ್ತೋತ್ರಮ್ || 
  || ಈ ರೀತಿಯಾಗಿ ಶ್ರೀ ತ್ರಿಪುರಸುಂದರೀ ಪ್ರಾತ:ಸ್ಮರಣಸ್ತೋತ್ರಗಳ ಭಾವಾರ್ಥವು ||

*********************************************************************
                       -೨೭-
  || ಶ್ರೀ ಅನ್ನಪೂರ್ಣಾ ಸ್ತೋತ್ರ ರತ್ನಮ್ ||
 *******************************
ಭಗವತಿ ಭವರೋಗಾತ್ಪೀಡಿತಂ ದುಷ್ಕೃತೋತ್ಥಾತ್ |
ಸುತದುಹಿತೃ ಕಲತ್ರೋsಪದ್ರವೇಣಾನುಯಾಂತಮ್ ||
ವಿಲಸದಮೃತದೃಷ್ಟ್ಯಾ ವೀಕ್ಷ ವಿಭ್ರಾಂತ ಚಿತ್ತಂ |
ಸಕಲಭುವನ ಮಾತ:ತ್ರಾಹಿ ಮಾಮೋಂ ನಮಸ್ತೇ ||೧||

ಭಾವಾರ್ಥ:-ಹೇ!ಭಗವತಿಯೇ;ಜಗನ್ಮಾತೆಯೇ,ದುಷ್ಟಕಾರ್ಯಗಳಿಂದ ಜನಿಸಿದವನನ್ನು,ಸಂಸಾರ ಸ್ವರೂಪದ ರೋಗಗಳಿಂದ ಪೀಡಿತನಾದವನನ್ನು,ಪತ್ನೀ ಪುತ್ರ ಪುತ್ರಿಯರ ಉಪಟಳಕ್ಕೀಡಾದವನನ್ನು,ಮಂಕು ಕವಿದವನನ್ನು,ಬೆಳಗುವ ನಿನ್ನ ಅಮೃತಮಯವಾಗಿರುವ ಕಾರುಣ್ಯ ದೃಷ್ಟಿಯಿಂದ ನೋಡು ಅಮ್ಮಾ! ತಾಯಿಯೇ ನಿನಗೆ ನಮಸ್ಕರಿಸುವೆನು.

ಮಾಹೇಶ್ವರೀ ಮಾಶ್ರಿತಕಲ್ಪವಲ್ಲೀ |
ಮಹಂ ಭವೋಚ್ಛೇದಕರೀಂ ಭವಾನೀಮ್ ||
ಕ್ಷುಧಾರ್ತ ಜಾಯಾ ತನಯಾದ್ಯುಪೇತ |
ಸ್ತ್ವಾಮನ್ನಪೂರ್ಣೇ ಶರಣಮ್ ಪ್ರಪದ್ಯೇ ||೨||

ಭಾವಾರ್ಥ:-ತಾಯಿ ಅನ್ನಪೂರ್ಣೆಯೇ! ನೀನು ಮಹೇಶ್ವರನ ಅರ್ಧಾಂಗಿಯಾಗಿ ಮಾಹೇಶ್ವರಿಯೆನಿಸಿರುವವಳು.ನಿನ್ನನ್ನು ಆಶ್ರಯಿಸಿದವರಿಗೆ  ಕಲ್ಪವೃಕ್ಷಳು.ಸಂಸಾರಬಂಧನವನ್ನು ಛೇಧಿಸುವವಳೂ ನೀನೇ.ಸಾಂಸಾರಿಕ ಜಂಜಾಟಗಳಿಗೆ ಸಿಲುಕಿ ಹಸಿವಿನಿಂದ ಪೀಡಿತರಾಗಿರುವ ಸತಿ ಸುತರಾದಿಯೊಡಗೂಡಿ ಅಮ್ಮಾ ನಿನಗೆ ನಾನು ಶರಣು ಬಂದಿರುವೆ.

ದಾರಿದ್ರ್ಯ ದಾವಾನಲ ದಹ್ಯಮಾನಂ |
ಪ್ರಾಹ್ಯನ್ನಪೂರ್ಣೇ ಗಿರಿರಾಜಕನ್ಯೇ ||
ಕೃಪಾಂಬುಧೌ ಮಜ್ಜನ ಮಾಂ ತ್ವದೀಯೇ |
ತ್ವತ್ಪಾದಪದ್ಮಾರ್ಪಿತ ಚಿತ್ತವೃತ್ತಿಮ್  ||೩||

ಭಾವಾರ್ಥ:-ತಾಯೇ!ಗಿರಿರಾಜಕುವರಿಯೇ,ದಾರಿದ್ರ್ಯದ ಕಾಡ್ಗಿಚ್ಚಿನಿಂದ ಬೇಯುತ್ತಲಿರುವ ನನ್ನನ್ನು ರಕ್ಷಿಸುವವಳಾಗು.ನಿನ್ನ ಚರಣಾರವಿಂದಗಳಿಗೆ ನನ್ನ ಮನಸ್ಸನ್ನು ಅರ್ಪಿಸುತ್ತಿರುವೆನು.ನಿನ್ನ ಕೃಪಾಂಬುಧಿಯಲ್ಲಿ ನನ್ನನ್ನು ಮುಳುಗಿಸು ಅಮ್ಮಾ!

ಇತ್ಯನ್ನಪೂರ್ಣಾ ಸ್ತುತಿರತ್ನಮೇತತ್ |
ಶ್ಲೋಕತ್ರಯಂ ಯ: ಪಠತೀಹ ಭಕ್ತ್ಯಾ ||
ತಸ್ಮೈದಧಾತ್ಯನ್ನ ಸಮೃದ್ಧಿಮಂಬಾ |
ಶ್ರೀಯಂ ಚ ವಿದ್ಯಾಂ ಚ ಯಶಶ್ಚ ಮುಕ್ತಿಮ್ ||೪||

ಭಾವಾರ್ಥ:- ಈ ರೀತಿಯಲ್ಲಿರುವ ಮೂರು ಶ್ಲೋಕಗಳ ಅನ್ನಪೂರ್ಣಾಸ್ತೋತ್ರ ರತ್ನವನ್ನು ಯಾವಾತನು ಶ್ರದ್ಧಾಭಕ್ತಿಯಿಂದ ಪಠಿಸುತ್ತಾನೋ ಅವನಿಗೆ ವಿಫುಲವಾದ ಸಂಪತ್ತು,ಅನ್ನಾಹಾರ,ವಿದ್ಯಾ- ಯಶಸ್ಸು,ಮತ್ತು ಮೋಕ್ಷವನ್ನು ಆ ತಾಯಿ ಅನ್ನಪೂರ್ಣೆಯು ಕರುಣಿಸುವಳು.
*********************************************************************
          || ಇತಿ ಶ್ರೀ ಶಂಕರಾಚಾರ್ಯ ವಿರಚಿತ ಅನ್ನಪೂರ್ಣಾ ಸ್ತೋತ್ರ ರತ್ನಮ್ ||
 || ಈ ರೀತಿಯಾಗಿ ಶ್ರೀ ಶಂಕರಾಚಾರ್ಯರಿಂದ ರಚಿಸಲ್ಪಟ್ಟ ಅನಪೂರ್ಣಾ ಸ್ತೋತ್ರ ರತ್ನಗಳ ಭಾವಾರ್ಥವಾಗಿದೆ, ||

*********************************************************************

                           -೨೮-
              || ಶ್ರೀ ಮೂಕಾಂಬಿಕಾಷ್ಟಕಮ್ ||
           *************************
ಶ್ರೀಚಕ್ರಾಂಕಿತ ಬಿಂದು ಮಧ್ಯನಿಲಯಾಂ ಪೀತಾಂಬರಾಲಂಕೃತಾಂ |
ಶಂಖಂ ಚಕ್ರ ವರಾಭಯಂ ಚ ದಧತೀಂ ಬಾಲೇಂದುಮೌಳೀಂ ಶುಭಾಮ್ ||
ಸಿಂಹಸ್ತೋಪರಿಸಂಸ್ಥಿತಾಂ ತ್ರಿನಯನಾಂ ಮೂಕಾಸುರಾಚ್ಛೆದಿನೀಂ |
ಶ್ರೀಕೋಲಾಪುರವಾಸಿನೀಮ್ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೧||

ಭಾವಾರ್ಥ:-ಶ್ರೀಚಕ್ರದ ಮಧ್ಯದ ಬಿಂದುವಿನಲ್ಲಿ ನೆಲೆಯಾಗಿರುವ, ಪೀತಾಂಬರಾಲಂಕೃತಳಾಗಿರುವ, ಶಂಖಧಾರಿಣಿಯಾಗಿ ಅಭಯಹಸ್ತದಿಂದ ಅನುಗ್ರಹಿಸುತ್ತಿರುವ, ಬಾಲೇಂದುವನ್ನು ಶಿರದ ಮೇಲೆ ಧರಿಸಿಕೊಂಡಿರುವ, ಮಂಗಲದಾಯಿನಿಯಾಗಿರುವ,ಸಿಂಹವಾಹಿನಿಯಾಗಿರುವ,ತ್ರಿನೇತ್ರೆಯಾಗಿರುವ,ಮೂಕಾಸುರನ ಸಂಹಾರಕಳಾದ,ಶ್ರೀಕೋಲಾಪುರನಿವಾಸಿನಿಯಾಗಿರುವ ತಾಯಿ ಭಗವತಿ ಮೂಕಾಂಬಿಕೆಯನ್ನು ನಾನು ಧ್ಯಾನಿಸುವೆನು.

ಮೂರ್ಧಾಗ್ರಾಂಚಿತರತ್ನಮೌಲಿವಿಲಸತ್ ಪೂರ್ಣೇಂದು ಬಿಂಬಾನನಾಮ್ |
ಫಾಲೇ ಕುಂಕುಮಲಾಂಚನಾಂ ನಿಟಿಲಯೋರ್ಮಧ್ಯಸ್ಥ ಕಸ್ತೂರಿಕಾಮ್ ||
ಕರ್ಣಾಲಂಕೃತ ರತ್ನರಾಜಿತ ಘನಶ್ರೀಚಕ್ರ ಯುಗ್ಮಾನ್ವಿತಾಂ |
ಶ್ರೀಕೋಲಾಪುರವಾಸಿನೀಮ್ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೨||

ಭಾವಾರ್ಥ:-ಹಣೆಯ ಭಾಗದಲ್ಲಿ ಹೊಳೆಯುತ್ತಲಿರುವ ಚೂಡಾರತ್ನದಿಂದ ಕೂಡಿರುವ,ಪೌರ್ಣಿಮೆಯ ಚಂದ್ರಬಿಂಬದಂತೆ ತೇಜೋಮಯವಾಗಿರುವ ಸತ್ವಗುಣಾನ್ವಿತ ಮೊಗದ ಮೇಲಿರುವ ಹಣೆಯಲ್ಲಿ ಕುಂಕುಮವನ್ನು ಧರಿಸಿಕೊಂಡವಳಾದ,ಹುಬ್ಬುಗಳ ನಡುವೆ ತಿಲಕವನ್ನು ಧರಿಸಿದವಳಾದ,ಕಿವಿಗಳಿಗೆ ಶ್ರೀಚಕ್ರದ ತೆಳ್ಳನೆಯ ಜತೆಯೋಲೆಗಳನ್ನು ಧರಿಸಿಕೊಂಡು ಬೆಳಗುತ್ತಲಿರುವ ಶ್ರೀಕೋಲಾಪುರನಿವಾಸಿನಿಯಾಗಿರುವ ತಾಯಿ ಭಗವತಿ ಮೂಕಾಂಬಿಕೆಯನ್ನು ನಾನು ಧ್ಯಾನಿಸುವೆನು.

ಕಾಮಾಕ್ಷೀಂ ಕರುಣೇಕ್ಷಣಾಂ ಪರಿಲಸತ್ ದಿವ್ಯಾಂಜನೈ: ರಂಜಿತಾಂ |
ನಾಸಾಯಾಂ ನವಮೌಕ್ತಿಕಾಂ ವಿದಧತೀಂ ಮಾಧುರ್ಯ ಗಾನ ಪ್ರಿಯಾಮ್  ||
ಆದರ್ಶೋಪಮ ಕಾಂತಿಗಂಡಯುಗಲಾಂ ಹಾರಿದ್ರ ಚೂರ್ಣಾನ್ವಿತಾಂ |
ಶ್ರೀಕೋಲಾಪುರವಾಸಿನೀಮ್ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೩||

ಭಾವಾರ್ಥ:-ಕರುಣಾ ಕಟಾಕ್ಷವನ್ನು ಬೀರುತ್ತಲಿರುವ ಕಾಮಾಕ್ಷಿಯಾಗಿ,ದಿವ್ಯ ಕಾಡಿಗೆ ಹಚ್ಚಿಕೊಂಡವಳಾಗಿ,ಮೂಗಿನಲ್ಲಿ ನವಮುತ್ತುಗಳ ಮೂಗುತಿಯಿಂದ ಅಲಂಕೃತಗೊಂಡಿರುವ,ಮಧುರ ನಾದ ಗಾನ ಪ್ರಿಯಳಾದವಳಾದ,ಅರಸಿನವನ್ನು ಹಚ್ಚಿದ ಕನ್ನಡಿಯಂತೆ ಬೆಳಗುವ ಕಪೋಲವುಳ್ಳವಳಾದ ಶ್ರೀಕೋಲಾಪುರನಿವಾಸಿನಿಯಾಗಿರುವ ತಾಯಿ ಭಗವತಿ ಮೂಕಾಂಬಿಕೆಯನ್ನು ನಾನು ಧ್ಯಾನಿಸುವೆನು.

ಬಿಂಬೋಷ್ಠೀಂ ನವಪೀಠಿಕಾರಸ ಲಸತ್ ಸೌಂದರ್ಯ ಮಾಲಾಧರಾಮ್ |
ಶ್ರೀಮದ್ದಾಡಿಮಬೀಜಕಾಂತಿದಶನಾಂ ಮಂದೇಸ್ಮಿತೇನಾನ್ವಿತಾಮ್ ||
ಮಾಧುರ್ಯಕ್ಷರಸಂಯುತಾಂ ಸುಖಕರೀಂ ಮಾರೇಣ ಸಂಸೇವಿತಾಂ |
ಶ್ರೀಕೋಲಾಪುರವಾಸಿನೀಮ್ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೪||

ಭಾವಾರ್ಥ:-ತೊಂಡೆಯ ಹಣ್ಣನ್ನು ಹೋಲುವ ಸುಂದರ ತುಟಿಯಿಂದ ಕೂಡಿ ನವರತ್ನಾಲಂಕೃತ ಸುವರ್ಣ ಸಿಂಹಾಸನದ ಮೇಲೆ ವಿರಾಜಿಸುತ್ತಾ,ದಾಳಿಂಬದ ಎಸಳಿನ ಕಾಂತಿಯನ್ನು ಹೊಂದಿರುವ,ಮುಗುಳ್ನಗೆಯನ್ನು ಬೀರುತ್ತಲಿರುವ,ಮಧುರ ನುಡಿಗಳನ್ನಾಡುವ,ಸುಖದಾಯಕನಾದ ಮನ್ಮಥನಿಂದ ಪೂಜಿಸಲ್ಪಡುವ,  ಶ್ರೀಕೋಲಾಪುರನಿವಾಸಿನಿಯಾಗಿರುವ ತಾಯಿ ಭಗವತಿ ಮೂಕಾಂಬಿಕೆಯನ್ನು ನಾನು ಧ್ಯಾನಿಸುವೆನು.

ಯೈ: ಷಡ್ಭಿರ್ವದನೈ: ನಿಪೀತ ಸುಭಗಾಲಂಕಾರ ಪೀನಸ್ತನೀಂ |
ಸ್ಕಂದಸ್ಯಾಮಿತ ತೇಜಸ: ಸುಜನನೀಂ ಮಂದಾರಮಾಲಾಧರೀಮ್ ||
ಮಧ್ಯೇ ಸೌಷ್ಠವ ರೋಮರಾಜಿ ತಿಲಕಾಂ ಗಂಭೀರನಾಭೀ ಹೃದಾಂ |
ಶ್ರೀಕೋಲಾಪುರವಾಸಿನೀಮ್ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೫||

ಭಾವಾರ್ಥ:-ಮನಮೋಹಕವಾಗಿರುವ ಆರು ಮುಖಗಳುಳ್ಳವಳಾಗಿರುವ,ತನಯ ಷಣ್ಮುಖನಿಗೆ ಸ್ತನ್ಯಪಾನ ಮಾಡಿಸಿದವಳಾದ,ಸ್ಕಂದನ ಅಪರಿಮಿತ ತೇಜೋಮಯಿ ಮಾತೆಯಾಗಿರುವ, ಪಾರಿಜಾತ ಪುಷ್ಪಗಳ ಮಾಲೆಯಿಂದ ಅಲಂಕೃತಳಾಗಿರುವ,ಮನೋಹರ ದೇಹ ಕಾಂತಿಯುಳ್ಳವಳಾದ,ಆಕರ್ಷಣೀಯ ಕೇಶಗಳಿಂದ ಅಲಂಕೃತಳಾಗಿರುವ ಶ್ರೀಕೋಲಾಪುರನಿವಾಸಿನಿಯಾಗಿರುವ ತಾಯಿ ಭಗವತಿ ಮೂಕಾಂಬಿಕೆಯನ್ನು ನಾನು ಧ್ಯಾನಿಸುವೆನು.

ನಾನಾರತ್ನ ವಿಚಿತ್ರ ಭೂಷಣಕರಾಂ ವಾಮೋರುಜಾನುದ್ವಯಾಂ |
ಜಂಘಾಂಗ್ರಾಂಚಿತ ಹಂಸಕಾದಿಕರುಣೋದ್ಭೂಷಾ ವಿಶೇಷಾನ್ವಿತಮ್ ||
ಇಂದ್ರಾದ್ಯಾಮರ ವೃಂದವಂದಿತಪದಾಂ ಭಕ್ತೇಷ್ಟದಾನ ವ್ರತಾಂ |
ಶ್ರೀಕೋಲಾಪುರವಾಸಿನೀಮ್ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೬||

ಭಾವಾರ್ಥ:-ನಾನಾವಿಧದ ಚಿತ್ರ ವಿಚಿತ್ರ ರತ್ನಾಭರಣಗಳನ್ನು ಕೈಯಲ್ಲಿ ಧರಿಸಿ ಸುಂದರವಾಗಿ ಬೆಳಗುತ್ತಲಿರುವ,ಮನೋಹರವಾಗಿರುವ ಶರೀರವನ್ನು ಹೊಂದಿದವಳಾದ,ಕೋಮಲವಾದ ಪಾದಗಳಲ್ಲಿ ಝೇಂಕಾರನಿನಾದ ಮೊಳಗುವ ಗೆಜ್ಜೆಗಳನ್ನು ಧರಿಸಿದ ಕರುಣಾಸಾಗರೆ,ದೇವೇಂದ್ರಾದಿ ದೇವದೇವತೆಯರು ಪೂಜಿಸುವ ಪಾವನಮಯಚರಣಗಳನ್ನು ಹೊಂದಿ ತನ್ನ ನಿಜ ಭಕ್ತರ ಅಭೀಷ್ಟಗಳನ್ನು ಈಡೇರಿಸುವುದನ್ನೇ ಗುರಿಯಾಗಿಸಿಕೊಂಡಿರುವ ಶ್ರೀಕೋಲಾಪುರನಿವಾಸಿನಿಯಾಗಿರುವ ತಾಯಿ ಭಗವತಿ ಮೂಕಾಂಬಿಕೆಯನ್ನು ನಾನು ಧ್ಯಾನಿಸುವೆನು.

ಮಾಯಾಮಾಧವ ಮುಖ್ಯದೇವನಿಚಯೈ: ಸಂಸೇವ್ಯಮಾನಾಂ ಶುಭಾಂ |
ಮಾರಾರಾತಿವಧೂಟಿಕಾಂ ಶುಭಕರೀಂ ಆನಂದ ಸಂದಾಯಿನೀಮ್ ||
ಸೌವರ್ಣಾಂಚಿತಲಿಂಗಮೂರ್ಧ್ನಿ ಪತಿನಾ ಸಾರ್ಥಸ್ವಸಾನ್ನಿಧ್ಯಕಾಂ |
ಶ್ರೀಕೋಲಾಪುರವಾಸಿನೀಮ್ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೭||

ಭಾವಾರ್ಥ:-ಲಕ್ಷ್ಮೀ-ನಾರಾಯಣರೇ ಆದಿಯಾದ ದೇವತಾ ಸಮೂಹದಿಂದ ಆರಾಧಿಸಲ್ಪಡುತ್ತಿರುವ, ಮಂಗಲದಾಯಿನಿಯಾಗಿರುವ,ಮನ್ಮಥನ ವೈರಿಯಾಗಿರುವ ಶಿವನ ಪ್ರೀತಿಯ ಸತಿಯಾದ,ಶುಭಪ್ರದಾಯಕಿಯಾಗಿರುವ,ಶಿವನ ಸಮೀಪ ಪ್ರಯೋಜನಕಾರಿಯಾಗಿರುವ ಸಾನ್ನಿಧ್ಯವನ್ನು ಹೋದಿರುವವಳಾದ ಮಾತೆ ಶ್ರೀಕೋಲಾಪುರನಿವಾಸಿನಿಯಾಗಿರುವ ತಾಯಿ ಭಗವತಿ ಮೂಕಾಂಬಿಕೆಯನ್ನು ನಾನು ಧ್ಯಾನಿಸುವೆನು.

ಶ್ರೀವಾಣೀಂ ಹಿಮಾದ್ರಿಜಾ ದಿತಿಸತೀ ಸ್ವಾಹಾಸ್ವಧಾನ್ವೇಷಿಣೀಂ |
ಶ್ರೀಕಂಠಾದಿಸಮಸ್ತ ದೈವತಮುಖೈ: ಸಂಪ್ರಾರ್ಥಿತಾಂ ಚಿನ್ಮಯೀಮ್ ||
ಶ್ರೀಕಾಮೋದ್ಧತ ಮೂಕವಾಗ್ಮಿಹತಿದಾಂ ಲಕ್ಷ್ಮೀಂ ಮಹಾಪೂರ್ವಿಕಾಂ |
ಶ್ರೀಕೋಲಾಪುರವಾಸಿನೀಮ್ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೮||

ಭಾವಾರ್ಥ:-ವಾಕ್ಕಿನ ಅಧೀಶೆಯಾಗಿರುವ ವಾಣೀಯೇ,ಹಿಮವಂತನ ಮಗಳಾದ ಪಾರ್ವತಿಯೇ,ನೀನು ಲಕ್ಷ್ಮಿಯೂ,ದಾಕ್ಷಾಯಣಿಯೂ ಆಗಿರುವೆ.ಶ್ರೀಕಂಠನೇ ಮೊದಲಾದ ಸಕಲ ದೇವತಾ ಶಕ್ತಿಯಿಂದ ಪೂಜಿಸಿಕೊಳ್ಳುತ್ತಿರುವೆ.ಮಾನಸಿಕ ರೂಪಿಣಿಯಾದ ನೀನು ನಿನ್ನ ಶಕ್ತಿ ಮುಖೇನ ಮೂಕಾಸುರನ ವಾಕ್ಶಕ್ತಿಯನ್ನು ನಿಗ್ರಹಿಸಿದವಳು.ಸೌಂದರ್ಯ ಸ್ವರೂಪಿಣಿಯಾಗಿ,ಅವಿನಾಶಿನಿಯೂ ಅನಾದಿ ಶಕ್ತಿರೂಪಳೂ ಆಗಿರುವ ಶ್ರೀಕೋಲಾಪುರನಿವಾಸಿನಿಯಾಗಿರುವ ತಾಯಿ ಭಗವತಿ ಮೂಕಾಂಬಿಕೆಯನ್ನು ನಾನು ಧ್ಯಾನಿಸುವೆನು.
*********************************************************************
          || ಇತಿ ಶ್ರೀ ಶಂಕರಾಚಾರ್ಯ ವಿರಚಿತ ಮೂಕಾಂಬಿಕಾಷ್ಟಕಮ್ ||
  || ಈ ರೀತಿಯಾಗಿ ಶ್ರೀ ಶಂಕರಾಚಾರ್ಯರಿಂದ ರಚಿಸಲ್ಪಟ್ಟ ಮೂಕಾಂಬಿಕಾಷ್ಟಕಗಳ ಭಾವಾರ್ಥವಾಗಿದೆ ||
*********************************************************************
                                                   -೨೯-
  || ಶ್ರೀ ಭವಾನೀ ಭುಜಂಗ ಸ್ತೋತ್ರಮ್ ||
 *********************************
ಷಢಾಧಾರಪಂಕೇರುಹಾಂತರ್ವಿರಾಜ |
ತ್ಸುಷುಮ್ನಾಂತರಾಲೀsತಿತೇಜೋಲಸಂತೀಮ್ ||
ಸುಧಾಮಂಡಲಂದ್ರಾವಯಂತೀಂ ಪಿಬಂತಿಂ |
ಸುಧಾಮೂರ್ತಿಮೀಡೇ ಚಿದಾನಂದರೂಪಾಮ್ ||೧||

ಭಾವಾರ್ಥ:-ಷಢಾಧಾರಚಕ್ರಗಳೆನ್ನುವ ತಾವರೆಯೊಳು ಹುಟ್ಟಿ ವಿರಾಜಿಸುವ ಶುಷುಮ್ನ ನಾಡಿಯಲ್ಲಿ ಹೆಚ್ಚಾದ ಕಾಂತಿಯಿಂದ ಹೊಳೆಯುವ,ಸಹಸ್ರದಳ ಪದ್ಮದಲ್ಲಿ ಅಮೃತಮಂಡಲವನ್ನು ಕರಗಿಸುವ ಹಾಗೂ ಅದನ್ನು ಸೇವಿಸುವ ಸುಧಾಮೂರ್ತಿಯನ್ನು ನಾನು ಸ್ತುತಿಸುವೆನು.

ಜಲತ್ಕೋಟಿ ಬಾಲಾರ್ಕ ಭಾಸಾರುಣಾಂಗೀಂ |
ಸುಲಾವಣ್ಯ ಶೃಂಗಾರ ಶೋಭಾಭಿರಾಮಾಮ್ ||
ಮಹಾಪದ್ಮ ಕಿಂಜಲ್ಕ ಮಧ್ಯೇ ವಿರಾಜ |
ತ್ರಿಕೋಣೀ ನಿಷಣ್ಣಾಂ ಭಜೇ ಶ್ರೀ ಭವಾನೀಮ್ ||೨||

ಭಾವಾರ್ಥ:-ಮನಮೋಹಕವಾಗಿ ಕಂಗೊಳಿಸುವ ಉದಯರವಿಯ ಹೊಳಪಿನ, ಅರುಣ ವರ್ಣದ,ಶ್ ಋಂಗಾರ ಸಾಧನಗಳಿಂದ ಅಲಂಕೃತಳಾಗಿ ಸೌದರ್ಯದ ಖನಿಯಾಗಿರುವ,ಲಾವಣ್ಯವತಿಯಾಗಿರುವ, ಸಹಸ್ರದಳ ಪದ್ಮದಲ್ಲಿರುವ ಕೇಸರದಲ್ಲಿ ಪ್ರಕಾಶಿಸುವ, ತ್ರಿಕೋಣಗಳ ನಡುವಿನಲ್ಲಿ ಆರೂಢಳಾಗಿರುವ ತಾಯಿ ಶ್ರೀಭವಾನಿಯನ್ನು ನಾನು ಸ್ತುತಿಸುವೆನು.

ಕ್ಷಣತ್ಕಿಂಕಿಣೀ ನೂಪುರೋದ್ಭಾಸಿ ರತ್ನ |
ಪ್ರಭಾಲೀಢ ಲಾಕ್ಷಾರ್ದ್ರ ಪಾದಾಬ್ಜಯುಗ್ಮಮ್ ||
ಅಜೇಶಾಚ್ಯುತಾದ್ಯೈ:ಸುರೈ:ಸೇವಮಾನಂ |
ಮಹಾದೇವಿ ಮನ್ಮೂರ್ಧ್ನಿ ತೇ ಭಾವಯಾಮಿ ||೩||

ಭಾವಾರ್ಥ:-ಝಣ ಝಣ ದ್ವನಿಯನ್ನು ಮಾಡುತ್ತಾ ನೂಪುರಹಾರದಲ್ಲಿರುವ ಮಾಣಿಕ್ಯದ ಪ್ರಭೆಯಿಂದ ಬೆಳಗುವ, ರಕ್ತವರ್ಣದ ಚರಣಾರವಿಂದಗಳುಳ್ಳವಳಾದ, ಹರಿಹರಬ್ರಹ್ಮಾದಿಗಳೇ ಆದಿಯಾದ ದೇವರ್ಕಳುಗಳಿಂದ ಆರಾಧಿಸಲ್ಪಡುತ್ತಲಿರುವ ಅಮ್ಮ ಭವಾನಿಯನ್ನು ನಾನು ನನ್ನ ಮನದಲ್ಲಿ ಧ್ಯಾನಿಸುವೆನು.

ಸುಶೋಣಾಂಬರಾಬದ್ಧ ನೀವೀ ವಿರಾಜ |
ನ್ಮಹಾರತ್ನ ಕಾಂಚೀ ಕಲಾಪಂ ನಿತಂಬಮ್ ||
ಸ್ಫುರದ್ದಕ್ಷಿಣಾವರ್ತನಾಭಿಂ ಚ ತಿಸ್ತ್ರೋ |
ವಲೀರಂಬತೇ ರೋಮರಾಜಿಂ ಭಜೇsಹಮ್ ||೪||

ಭಾವಾರ್ಥ:-ಉತ್ತಮವಾದ ಅರುಣವರ್ಣದ ಮೋಹಕವಾಗಿರುವ ವಸ್ತ್ರಾಲಂಕೃತಳಾಗಿ ವಿರಾಜಮಾನಳಾಗಿರುವ, ಮಹಾಮಾಣಿಕ್ಯಗಳನ್ನು ಪೋಣಿಸಿದ ನಡುಪಟ್ಟಿಯನ್ನು ಧರಿಸಿರುವ, ಚೆಲುವಾದ ನಾಭಿಯನ್ನು ಹೊಂದಿರುವವಳಾಗಿ ಸುಂದರಕೇಶಾಲಂಕೃತೆಯಾಗಿರುವ ಅಮ್ಮಾ! ಭವಾನಿಯೇ! ನಿನ್ನನ್ನು ನಾನು ಸ್ತುತಿಸುತ್ತಿರುವೆನು.

ಲಸದ್ವೃತ್ತ ಮುತ್ತುಂಗ ಮಾಣಿಕ್ಯಕುಂಭೋ |
ಪಮಶ್ರೀ ಸ್ತನದ್ವಂದ್ವಮಂಬಾಂಬುಜಾಕ್ಷಿ ||
ಭಜೇದುಗ್ಧ ಪೂರ್ಣಾಭಿರಾಮಂ ತವೇದಂ |
ಮಹಾಹಾರದೀಪ್ತಂ ಸದಾ ಪ್ರಸ್ನುತಾಸ್ಯಮ್ ||೫||

ಭಾವಾರ್ಥ:-ವಕ್ಷಸ್ಥಲದಲ್ಲಿ ದೇದೀಪ್ಯಮಾನವಾಗಿ ಬೆಳಗುತ್ತಲಿರುವ ಹಾರಗಳಿಂದ ಸುಶೋಭಿಸುತ್ತಾ ರಾರಾಜಿಸುತ್ತಲಿರುವ ಮಹಾಮಾತೆಯಾಗಿರುವ ಅಮ್ಮನೂ, ಕಮಲನಯನಳೂ ಆಗಿರುವ ಶ್ರೀ ಭವಾನಿಯನ್ನು ನಾನು ಸ್ತುತಿಸುವೆನು.

ಶರೀಷಪ್ರಸೂನೋಲ್ಲಸದ್ಬಾಹುದಂಡೈ |
ರ್ಜ್ವಲದ್ಬಾಣ ಕೋದಂಡ ಪಾಶಾಂಕುಶೈಶ್ಚ ||
ಚಲತ್ಕಂಕಣೋದಾರ ಕೇಯೂರ ಭೂಷೋ |
ಜ್ಜ್ವಲದ್ಧಿರ್ಲಸಂತೀಂ ಭಜೇ ಶ್ರೀ ಭವಾನೀಂ ||೬||

ಭಾವಾರ್ಥ:-ಕುಸುಮಕೋಮಲ ಶರೀರವುಳ್ಳವಳಾಗಿ ಬೆಳಗುತ್ತಲಿರುವ,ಬಾಹುದಂಡಗಳಲ್ಲಿ ಪ್ರಕಾಶಮಯವಾದ ಧನುರ್ಬಾಣಗಳನ್ನೂ, ಪಾಶಾಂಕುಶಗಳನ್ನೂ ಧರಿಸಿದವಳಾಗಿರುವ ಚಂಚಲನಯನೆಯಾಗಿರುವ ಕೇಯೂರಹಾರಾದಿಗಳಿಂದ ಅಲಂಕೃತಳಾಗಿ ಬೆಳಗುತ್ತಲಿರುವ ತಾಯಿ ಶ್ರೀಭವಾನಿಯನ್ನು ನಾನು ಸ್ತುತಿಸುವೆನು.

ಶರತ್ಪೂರ್ಣಚಂದ್ರ ಪ್ರಭಾ ಪೂರ್ಣಬಿಂಬಾ |
ಧರ ಸ್ಮೇರ ವಕ್ತಾರವಿಂದಾಂ ಸುಶಾಂತಾಮ್ ||
ಸುರತ್ನಾವಲೀ ಹಾರ ತಾಟಂಕ ಶೋಭಾಂ |
ಮಹಾಸುಪ್ರಸನ್ನಾಂ ಭಜೇ ಶ್ರೀ ಭವಾನೀಂ ||೭||

ಭಾವಾರ್ಥ:-ಶರತ್ಕಾಲದ ಪೌರ್ಣಿಮೆಯ ಚಂದ್ರನ ಪ್ರಭಾಬಿಂಬವನ್ನು ಹೋಲುವ,ಮಂದಸ್ಮಿತವದನೆಯಾಗಿರುವ,ಅತ್ಯಂತಶಾಂತಳಾಗಿರುವ, ಉತ್ತಮವಾಗಿರುವ ರತ್ನಮಾಣಿಕ್ಯಗಳಿಂದ ಕೂಡಿದ ಕರ್ಣಾಭರಣಾಹಾರಗಳಿಂದ ಶೋಭಿತಳಾಗಿರುವ ಪ್ರಸನ್ನ ಚಿತ್ತಳೂ ಆಗಿರುವ ತಾಯಿ ಶ್ರೀ ಭವಾನಿಯನ್ನು ನಾನು ಸ್ತುತಿಸುವೆನು.

ಸುನಾಸಾ ಪುಟಂ ಸುಂದರಂ ಭ್ರೂ ಲಲಾಟಂ |
ತವೌಷ್ಠ ಶ್ರೀಯಂ ದಾನವಕ್ಷಂ ಕಟಾಕ್ಷಂ ||
ಲಲಾಟೋಲ್ಲಸದ್ಗಂಧ ಕಸ್ತೂರಿ ಭೂಪಂ |
ಸ್ಫುರಚ್ಛ್ರೀಮುಖಾಂಬೋಜಮೀಡೇsಹಮಂಬ ||೮||

ಭಾವಾರ್ಥ:-ಮನೋಹರವಾಗಿರುವ ಮೂಗು,ಚೆಲುವಾದ ಹುಬ್ಬು,  ಮತ್ತು ಸೊಗಸಾದ ಹಣೆ, ಸುಂದರ ತುಟಿಗಳನ್ನು ಹೊಂದಿರುವ ಮಾತೆ ಆನಂದಭರಿತಳಾಗಿ ಭಕ್ತರಿಗೆ ದಾನ ಮಾಡುವುದರಲ್ಲಿ ದಕ್ಷತೆಯುಳ್ಳವಳಾಗಿ, ಹಣೆಯಲ್ಲಿ ಪ್ರಕಾಶಿಸುವ ಶ್ರೀಗಂಧ, ಕಸ್ತೂರಿಯಾದಿ ಅಲಂಕಾರಗಳನ್ನು ಹೊಂದಿ,ಕೃಪಾ ಕಟಾಕ್ಷೆಯೂ ತಾನಾಗಿ, ಪ್ರಕಾಶಮಯಿಯಾಗಿ ಬೆಳಗುತ್ತಲಿರುವ ಮುಖಾರವಿಂದವನ್ನು ಹೊಂದಿರುವ ತಾಯಿ ಶ್ರೀ ಭವಾನಿಯನ್ನು ನಾನು ಸ್ತುತಿಸುವೆನು.

ಚಲತ್ಕುಂತಲಾಂತರ್ಭ್ರಮೃದ್ಭೃಂಗ ವೃಂದಂ |
ಘನಸ್ನಿಗ್ಧ ಧಮ್ಮಿಲ್ಲ ಭೂಷೋಜ್ವಲಂ ತೇ ||
ಸ್ಫುರನ್ಮೌಲಿ ಮಾಣಿಕ್ಯ ಬದ್ಧೇಂದುರೇಖಾ |
ವಿಲಾಸೋಲ್ಲಸದ್ದಿವ್ಯ ಮೂರ್ಧಾನಮೀಡೇ ||೯||

ಭಾವಾರ್ಥ:-ಅಮ್ಮಾ!ನಿನ್ನ ಹೊಯ್ದಾಡುವ ಮುಂಗುರುಳುಗಳ ಸುತ್ತಲೂ ಭ್ರಮರಗಳ ಸಮೂಹವು ಹಾರಾಡುತ್ತಲಿವೆ. ದಟ್ಟವಾದ ಸಿರಿಮುಡಿಗೆ ಮಾಲೆಯನ್ನು ತೊಟ್ಟವಳು ನೀನಾಗಿರುವೆ. ಈ ನಿನ್ನ ಅಲಂಕಾರಗಳಿಂದ ದೇಹ ಶಿಖರವು ಬೆಳಗುತ್ತಲಿದೆ. ಮಾಣಿಕ್ಯಾದಿ ರತ್ನ ಸಮೂಹಗಳಿಂದ ಅಲಂಕೃತಗೊಂಡ ಶ್ರೇಷ್ಠ ಕಿರೀಟವುಳ್ಳವಳು ನೀನಾಗಿರುವೆ. ಅಮ್ಮಾ! ಮಾತೆಯೇ; ಭವಾನಿಯೇ; ನಾನಿದೋ ನಿನ್ನನ್ನು ಸ್ತುತಿಸುತ್ತಲಿರುವೆನು.

ಆಪತ್ಸುಮಗ್ನ: ಸ್ಮರಣಂ ತ್ವದೀಯಂ |
ಕರೋಮಿ ದುರ್ಗೇ ಕರುಣಾರ್ಣವೇತಿ ||
ನೇತಚ್ಛಟತ್ವಂ ಮಮ ಭಾವಯೇಥಾ: |
ಕ್ಷುಧಾತೃಷಾರ್ಥಾ ಜನನೀಂ ಸ್ಮರಂತಿ ||೧೦||

ಭಾವಾರ್ಥ:-ಅಮ್ಮಾ!ದುರ್ಗಾ ಮಾತೆಯೇ; ಹಸಿವು ಬಾಯಾರಿಕೆಗಳಿಗೊಳಗಾದ ಮಕ್ಕಳು ಹೆತ್ತಮ್ಮನನ್ನು ಸ್ಮರಿಸುತ್ತಾರೆ.ಅದೇ ರೀತಿ ನಾನಾದರೋ ಆಪತ್ತುಗಳಿಗೆ ಸಿಲುಕಿರುವಾಗ "ಹೇ! ಅಮ್ಮಾ;ದುರ್ಗೆಯೇ:ಕರುಣಾಸಾಗರಿಯೇ" ಎಂಬುದಾಗಿ ನಿನ್ನನ್ನು ಸ್ಮರಿಸುತ್ತಲಿರುವೆನು.ಇದು ನನ್ನ ದುರ್ಬುದ್ಧಿಯೆಂಬುದಾಗಿ ನಿನ್ನಿಂದ ಭಾವಿಸಲ್ಪಡದಿರಲಿ.

ಜಗದಂಬ ವಿಚಿತ್ರ ಮತ್ರ ಕಿಂ |
ಪರಿಪೂರ್ಣಾ ಕರುಣಾsಸ್ತಿ ಚೇನ್ಮಯಿ ||
ಅಪರಾಧಪರಂಪರಾವೃತಂ |
ನ ಹಿ ಮಾತಾಸಮುಪೇಕ್ಷತೇ ಸುತಮ್ ||೧೧||

ಭಾವಾರ್ಥ:-ಅಮ್ಮಾ!ಜಗದಂಬಿಕೆಯೇ; ನೀನು ನನ್ನ ಬಗ್ಗೆ ಕರುಣಾಮಯಿಯಾಗಿದ್ದರೆ ಅದರಲ್ಲಿ ವೈಚಿತ್ರ್ಯವೇನಿಲ್ಲ. ಯಾಕೆಂದರೆ ಅಪರಾಧಗಳ ವಂಶಾವಳಿಯೇ ನನ್ನದಾಗಿ ಸುತ್ತುವರಿದಿದ್ದರೂ ತಾಯಿಯು ಮಗನನ್ನು ನಿರ್ಲಕ್ಷಿಸುವುದಿಲ್ಲ.

[ಮೇಲಿನ ೧೦ ಮತ್ತು ೧೧ ನೆಯ ಶ್ಲೋಕಗಳು "ದೇವ್ಯಪರಾಧಕ್ಷಮಾಪಣಾ ಸ್ತೋತ್ರಗಳಲ್ಲಿಯೂ ಇವೆ]

ತ್ವಮರ್ಕಸ್ತ್ವ ಮಿಂದುಸ್ತ್ವಮಾಪ |
ಸ್ತ್ವಮಾಕಾಶ ಭೂವಾಯುಸ್ತ್ವಂ ಮಹತ್ವಂ ||
ತ್ವದನ್ಯೋ ನ ಕಶ್ಚಿತ್ ಪ್ರಂಪಂಚೋsಸ್ತಿ ಸರ್ವಂ |
ತ್ವಮಾನಂದಸಂವಿತ್ಸ್ವರೂಪಾಂ ಭಜೇsಹಮ್ ||೧೨||

ಭಾವಾರ್ಥ:-ಅಮ್ಮಾ ಭವಾನಿಯೇ!ನೀನು ಸೂರ್ಯ, ಚಂದ್ರ, ಅಗ್ನಿ, ನೀರು, ಆಕಾಶ,ವಾಯು,ಭೂಮಿ ಸ್ವರೂಪಳೇ ಆಗಿರುವೆ. ಶ್ರೇಷ್ಠವಾದ ಜ್ಞಾನ ತತ್ವವು ನಿನ್ನ ಹೊರತಾಗಿ ಅನ್ಯ ಯಾವುದೇ ಸ್ಥಾನದಲ್ಲಿಲ್ಲ. ಸರ್ವಸ್ವವೂ ನೀನೇ ಆಗಿರುವೆ. ನೀನೇ ಆನಂದ ಸ್ವರೂಪಳು. ನೀನೇ ಜ್ಞಾನ ಸ್ವರೂಪಳು.ಅಮ್ಮಾ!ಭವಾನಿಯೇ; ನಿನ್ನನ್ನು ಸ್ತುತಿಸಲು ನಾನು ಸ್ತುತಿಸುವೆನು.

ಶ್ರುತೀ ನಾಮಗಮ್ಯೇ ಸುವೇದಾಗಮಜ್ಞಾ |
ಮಹಿಮ್ನೋ ನ ಜಾನಂತಿ ಪಾರಂ ತವಾಂಬ ||
ಸ್ತುತಿಂ ಕರ್ತು ಮಿಚ್ಚಾಮಿ ತೇತ್ವಂ ಭವಾನಿ |
ಕ್ಷಮಸ್ವೇದಮತ್ರ ಪ್ರಮುಧ: ಕಿಲಾಹಮ್ ||೧೩||

ಭಾವಾರ್ಥ:-ಅಮ್ಮಾ!ಭವಾನೀ;ನಾದವು ನಿನ್ನನ್ನು ಅರಿಯಲಾರದು.ವೇದಗಳು ನಿನ್ನನ್ನು ಚೆನ್ನಾಗಿ ತಿಳಿದಿಲ್ಲ.ಇವು ಯಾವುವೂ ನಿನ್ನ ಮಹತ್ವವನ್ನು ಅರಿಯಲಾರವು.ಅಮ್ಮಾ!ನಿನ್ನನ್ನು ನಾನು ಸ್ತುತಿಸಲು ಇಚ್ಛೆಪಡುತ್ತಿದ್ದೇನೆ.ತಿಳುವಳಿಕೆಯಿಲ್ಲದವನಾದ ನನ್ನನ್ನು ನೀನು ಕ್ಷಮಿಸುವವಳಾಗು.

ಗುರುಸ್ತ್ವಂಶಿವಸ್ತ್ವಂ ಚ ಶಕ್ತಿ ಸ್ತ್ವಮೇವ |
ತ್ವಮೇವಾಸಿ ಮಾತಾಪಿತಾ ಚ ತ್ವ ಮೇವ ||
ತ್ವಮೇವಾಸಿ ವಿದ್ಯಾ ತ್ವಮೇವಾಸಿ ಬಂಧು |
ರ್ಗತಿರ್ಮೇ ಮತಿರ್ದೇವಿ ಸರ್ವಂ ತ್ವಮೇವ ||೧೪||

ಭಾವಾರ್ಥ:-ಅಮ್ಮಾ!ನೀನೇ ಗುರುವು,ನೀನೇ ಹರನು,ನೀನೇ ಶಕ್ತಿಯು,ನೀನೇ ತಾಯಿ,ನೀನೇ ತಂದೆ, ನೀನೇ ವಿದ್ಯೆ,ಬಂಧು,ಬುದ್ಧಿ.ನನಗಾಧಾರವೂ ನೀನೇ ಆಗಿರುವೆ.ತಾಯಿ ಭವಾನಿಯೇ ನನ್ನ ಸರ್ವಸ್ವವೂ ನೀನೇ ಆಗಿರುವೆ.

ಶರಣ್ಯೇ ವರೇಣ್ಯೇ ಸುಕಾರುಣ್ಯ ಮೂರ್ತೇ |
ಹಿರಣ್ಯೋ ದರಾದ್ಯೈರಗಣ್ಯೇ ಸುಪುಣ್ಯೇ ||
ಭವಾರಣ್ಯ ಭೀತೇಶ್ಚಮಾಂ ಪಾಹಿ ಭದ್ರೇ |
ನಮಸ್ತೇ ನಮಸ್ತೇ ನಮಸ್ತೇ ಭವಾನಿ ||೧೫||

ಭಾವಾರ್ಥ:-ಆಶ್ರಯ ಹೊಂದಲು ತಕ್ಕವಳಾದವಳೇ, ಅಗ್ರಗಣ್ಯಳೇ,ಉನ್ನತ ಕರುಣಾಮೂರ್ತಿಯೇ,ಬ್ರಹ್ಮ,ವಿಷ್ಣುವೇ ಮೊದಲಾದವರಿಗೆ ತಿಳಿದುಕೊಳ್ಳಲು ಅಸಾಧ್ಯವಾಗಿರುವ ಮಹಾಸ್ವರೂಪಳೇ,ಅಧಿಕತಮ ಪುಣ್ಯಶಾಲಿನಿಯೇ,ಯೋಗ್ಯಳೇ, ಸಾಂಸಾರಿಕ ಕಾನನದೊಳು ಸಿಲುಕಿ ಭೀತನಾಗಿರುವ ನನ್ನನ್ನು ಕರುಣೆಯಿಂದ ನೋಡುವವಳಾಗು.ಅಮ್ಮಾ ಭವಾನಿಯೇ! ನಿನಗಿದೋ ಅನಂತಾನಂತ ಪ್ರಣಾಮಗಳು.

ಇತೀ ಮಾಂ ಮಹಚ್ಛ್ರೀಭವಾನೀಭುಜಂಗ |
ಸ್ತುತಿಂ ಯ: ಪಠೇದ್ಭಕ್ತಿ ಯುಕ್ತಶ್ಚ ತಸ್ಮೈ ||
ಸ್ವಕೀಯಂ ಪದಂ ಶಾಶ್ವತಂ ವೇದಸಾರಂ |
ಶ್ರೀಯಂ ಚಾಷ್ಟಸಿದ್ಧಿಂ ಭವಾನೀ ದಧಾತಿ ||೧೬||

ಭಾವಾರ್ಥ:-ಇಂತಿರುವ ಉತ್ತಮವಾಗಿರುವ ಭವಾನೀ ಭುಜಂಗ ಸ್ತೋತ್ರವನ್ನು ಯಾವಾತನು ಭಕ್ತಿಯಿಂದ ಪಠಿಸುತ್ತಾರೋ ಅಂತಹವನಿಗೆ ಸರ್ವವೇದಸಾರವಾಗಿರುವ ತನ್ನ ಅವಿನಾಶಿಯಾದ ಸ್ಥಾನವನ್ನೂ,ಅಷ್ಟೈಶ್ವರ್ಯಸಿದ್ಧಿಯನ್ನೂ ಆ ತಾಯಿ ಭವಾನಿಯು ದಯಪಾಲಿಸುವಳು.

ಭವಾನೀ ಭವಾನೀ ಭವಾನೀ ತ್ರಿವಾರ |
ಮುದಾರಂ ಮುದಾ ಸರ್ವದಾ ಯೇ ಜಪಂತಿ ||
ನ ಶೋಕೋ ನ ಮೋಹೋ ನ ಪಾಪಂ ನ ಭೀತಿ: |
ಕದಾಚಿತ್ಕಥಂ ಚಿತ್ಕುತಶ್ಚಿಜ್ಜನಾನಾಮ್  ||೧೭||

ಭಾವಾರ್ಥ:-ಭವಾನೀ,ಭವಾನೀ,ಭವಾನೀ,ಎಂಬುದಾಗಿ ಮೂರುಸಾರಿ ಪ್ರಾಮಾಣಿಕ ಮನಸ್ಸಿನಿಂದ ಅನುರಾಗಭರಿತನಾಗಿ ನಿರಂತರ ಯಾರು ಸ್ತುತಿಸುವರೋ ಅವರಿಗೆ ಯಾವತ್ತೂ ಯಾವ ತೆರನಾಗಿಯೂ ಯಾರಿಂದಲೂ ದು:ಖವಿರಲಾರದು. ಅವರನ್ನು ಮೋಹವು ಬಾಧಿಸದು. ಪಾಪವು ಅವರ ಬಳಿ ಸುಳಿಯದು.ಅವರು ನಿರ್ಭಯರಾಗುವರು.
*********************************************************************
   || ಇತಿ ಶ್ರೀ ಭವಾನೀ ಭುಜಂಗ ಸ್ತೋತ್ರಮ್ ||
  || ಈ ರೀತಿಯಾಗಿ ಶ್ರೀ ಭವಾನೀಭುಜಂಗಸ್ತೋತ್ರಗಳ ಭಾವಾರ್ಥವಾಗಿದೆ ||

*********************************************************************
                              -೩೦-
    || ಶ್ರೀ ಶಾರದಾಸ್ತುತಿಸಪ್ತಕಮ್ ||
   ****************************
ಯಾ ಮಾತಾ ಮಹಿತಾ ಮಹಾಜಲನಿಧೇರ್ಲಕ್ಷ್ಮೀತಿ ಸಂಗೀಯತೇ
ಯಾ ಮಾತಾ ಮಹಿತಾ ಮಹಾಹಿಮಗಿರೇರ್ಗೌರೀತಿ ಚಾಖ್ಯಾಯತೇ |
ಯಾ ವಾಣೀ ವಿಮಲಾ ವಿರಿಂಚಿಮುಖತೋ ನಿರ್ಗತ್ಯ ರಾರಾಜತೇ 
ಸಾ ಮಾಂ ರಕ್ಷತು ಶಾರದಾ ಸುಮತಿದಾ ಶ್ರೀ ರಾಮಚಂದ್ರಾತ್ಮಜಾ ||೧||

ಭಾವಾರ್ಥ:-ಜಗನ್ಮಾತೆಯೆನಿಸಿರುವ ಯಾವ ಮಾತೆಯು ಪಾಲ್ಗಡಲ ತನಯೆಯಾಗಿ ಹುಟ್ಟಿ ಮಹಾಲಕ್ಷ್ಮಿಯೆಂದು ಕರೆಯಲ್ಪಟ್ಟಳೋ, ಜಗನ್ಮಾತೆಯೆನಿಸಿರುವ ಯಾವ ಮಾತೆಯು ಹಿಮವಂತನ ಪುತ್ರಿಯಾಗಿ ಹುಟ್ಟಿ ಮಹಾಗೌರಿ ಎಂಬುದಾಗಿ ತಿಳಿಸಲ್ಪಟ್ಟಳೋ, ಚತುರ್ಮುಖ ಬ್ರಹ್ಮನ ಮುಖದಿಂದ ಪವಿತ್ರಳಾಗಿರುವ ಯಾವ ಸರಸ್ವತಿಯು ವೇದಸ್ವರೂಪದವಳಾಗಿ ಪ್ರಕಟವಾಗಿ ವಿರಾಜಮಾನಳಾಗಿರುವಳೋ, ಶ್ರೀರಾಮಚಂದ್ರನ ಆತ್ಮ ಸಂಭೂತೆಯಾಗಿ ಹುಟ್ಟಿ, ಜ್ಞಾನಗುಣವನ್ನು ಕರುಣಿಸುವವಳಾದ ಆ ಶಾರದೆಯು ನನ್ನನ್ನು ಪರಿಪಾಲಿಸಲಿ. 

ಯಾ ಲೀಲಾ ಸಹಚಾರಿಣೀ ನರಗುರೋ: ಶ್ರೀರಾಮಕೃಷ್ಣಸ್ಯಯಾ 
ವಿಶ್ವೇಷಾಂ ಚ ದಿವೌಕಸಾಂ ಪ್ರಣಮತಾಮಿಷ್ಟಾರ್ಥಸಿದ್ಧಿಪ್ರದಾ |
ಯಾಮಾರಾಧ್ಯ ಹಿ ಸರ್ವಯೋಗಿಮುನಯ: ಪ್ರಾಪ್ತಾವಿಮುಕ್ತಿಂ ಸ್ಥಿರಾಂ
ತಾಮಂಬಾಂ ನ ಉಪಾಸ್ಮಹೇ ತ್ರಿಜಗತಾಮೇಕಾಶ್ರಯಾಂ ಶಾರದಾಮ್ ||೨||

ಭಾವಾರ್ಥ:-ಯಾವಾಕೆ ಜಗದ್ಗುರುವೆನಿಸಿದ ಶ್ರೀರಾಮಕೃಷ್ಣ ಪರಮಹಂಸರ ಲಹರಿಗಳಿಗೆ ನೆರವು ನೀಡುವವಳಾಗಿ ಅವತರಿಸಿದಳೋ, ಯಾವಾಕೆ ಬಾಗಿ ನಮಿಸುವ ಸಮಸ್ತ ದೇವರ್ಕಳಿಗೆ ಅವರವರ ಮನದಬಯಕೆಗಳನ್ನು ಈಡೇರಿಸುವಳೋ, ಯಾವಾಕೆಯನ್ನು ಆರಾಧಿಸಿ ಎಲ್ಲಾ ಮುನಿ ಯೋಗಿಗಳು ಸ್ಥಿರವಾ ಮೋಕ್ಷವನ್ನು ಪಡೆವರೋ, ಅಂತಹಾ ಮೂರ್ಲೋಕಂಗಳಿಗೂ ಅದ್ವಿತೀಯ ಆಶ್ರಯವಾಗಿರುವ ಶಾರದಾಮಾತೆಯನ್ನು ಸೇವೆಗೈಯುತ್ತೇನೆ.

ಭವಾಗ್ನೌ ಸಂದಗ್ಧೈರ್ದುರಿತನಿಹತೈರ್ದು:ಖಭರಿತೈ:
ಹರೇರ್ಹೃತ್ಪದ್ಮಂ ಯದ್ಧ್ಯಹಹ ಮುಕುಲೀಭೂತಸುದಲಮ್ |
ಧ್ರುವಂ ತತ್ಪೀಡಾಯಾಸ್ತ್ರಿದಿವಮಧುಗಂಗೇವ ಗಲಿತಾ
ದಯಾ ಯಾ ಮಾತಾsಭೂದವತು ದಯಯಾ ಮಾಂ ಜಯತು ಸಾತಿ  ||೩||

ಭಾವಾರ್ಥ:-ಸಂಸಾರದ ಬೇಗೆಯಲ್ಲಿ ಬೆಂದು ಸಂಕಷ್ಟಗಳ ಹೊಡೆತಕ್ಕೆ ಸಿಲುಕಿ ದು:ಖಿಸುವವರನ್ನು ಗಮನಿಸಿದ ಮಹಾವಿಷ್ಣುವಿನ ಹೃತ್ಕಮಲವು "ಅಯ್ಯೋ" ಎಂದು ಮರೆಯಾಯಿತಂತೆ.ಇದನ್ನು ಹೋಗಲಾಡಿಸುವಿಕೆಗಾಗಿ ಸವಿಯಾಗಿರುವ ಜೇನಿನಂತೆ ಮತ್ತು ಸ್ವರ್ಗಲೋಕದ ಗಂಗೆಯ ತರಹದ ಪಾವನಮಯವಾದ ಶ್ರೀಹರಿಯ ಕರುಣೆಯು ಶ್ರೀಶಾರದಾಮಾತೆಯರೂಪದಲ್ಲಿ ಪ್ರಕಟವಾಯಿತು. ಅಂತಹಾ ಶ್ರೀಮಾತೆ ಶಾರದೆಯು ನನ್ನನ್ನು ಕೃಪಾದೃಷ್ಟಿಯಿಂದ ಕಾಪಾಡುವಂತಹವಳಾಗಲಿ. ಆಕೆಗೆ ಜಯವು ದೊರಕಲಿ.

ಶಾಖಾಪಲ್ಲವಪತ್ರಪುಷ್ಪಭರಿತ: ಕಶ್ಚಿನ್ಮಹಾವಿದ್ರುಮ:
ಛಾಯಾಂ ಯಚ್ಚತಿ ಶೀತಲಾಮತಿಹಿತಾಂ ಪೌಷ್ಟಂ ಚ ವರ್ಷಂ ಸುಖಮ್ |
ಆತ್ಮಾ ನಂ ನನು ವೃಶ್ಚತೇsಪಿ ಸ ಯಥಾ ಮಾತಾ ತಥಾ ಪೀಡನಂ
ಬಂಧೂನಾಂ ಸತತಂ ಕುಶಿಷ್ಯಚರಿತಂ ಸೋಢ್ವಾ ವರಾನ್ಯಚ್ಛತಿ ||೪||

ಭಾವಾರ್ಥ:-ಎಲೆ,ಚಿಗುರು,ರೆಂಬೆ,ಪುಷ್ಪಗಳಿಂದ ತುಂಬಿ ಹೋಗಿರುವ ಮಹಾವೃಕ್ಷವು ತನ್ನನ್ನು ತುಂಡರಿಸುವವನಿಗೆ ಸಹಾ ತಂಪಾದ ಹಾಗೂ ಹೆಚ್ಚು ಕ್ಷೇಮದಾಯಕವಾಗುವ ನೆರಳನ್ನು ಒದಗಿಸುವುದಲ್ಲದೆ ಅವನ ಮೇಲೆ ಸೌಖ್ಯವನ್ನೊದಗಿಸುವ ಪುಷ್ಪಗಳ ಮಳೆಗರೆಯುವಂತೆ, ಆ ಶ್ರೀಮಾತೆಯು ಕೂಡಾ ತನ್ನ ಬಂಧುಗಳ ಮತ್ತು ಕೆಟ್ಟ ಶಿಷ್ಯರ ಹಿಂಸೆಗಳನ್ನು ನಿತ್ಯವೂ ಸಹಿಸಿಕೊಂಡು ಅವರಿಗೆ ಅನುಗ್ರಹವನ್ನು ಮಾಡುವಳು.

ಸರ್ವವೇದಶಾಸ್ತ್ರಶಿಲ್ಪಸಾರಬೋಧದಾಯಿನೀಂ
ಶರ್ವಧಾತೃವಿಷ್ಣುರೂಪಸರ್ವದೇವವಿಗ್ರಹಾಮ್ |
ಸರ್ವಲೋಕಸರ್ವಜೀವಸರ್ವಭೂತಧಾರಿಣೀಂ 
ಸರ್ವತಾಪಹಾರಿಣೀಂ ಸದಾ ನಮಾಮಿ ಶಾರದಾಮ್ ||೫||

ಭಾವಾರ್ಥ:-ಸಮಸ್ತ ವೇದ ಶಾಸ್ತ್ರಗಳ ಮತ್ತು ಶಿಲ್ಪ ಶಾಸ್ತ್ರಾದಿ ಮತ್ತಿತರ ಜ್ಞಾನಗಳ ಸಾರವನ್ನು ಅನುಗ್ರಹಿಸುವ,ಹರಿ ಹರ ಬ್ರಹ್ಮಾದಿ ಸಮಸ್ತ ದೇವತಾ ಸ್ವರೂಪಿಯಾಗಿರುವ, ಸಮಗ್ರ ಲೋಕಗಳ ಜೀವಿಗಳ ಹಾಗೂ ಭೂತಗಳಿಗಾಧಾರವಾಗಿರುವ ಹಾಗೂ ಸಮಸ್ತ ಬೇಗುದಿಗಳನ್ನು ನಿವಾರಿಸುವ ಆ ಶಾರದಾ ಮಾತೆಗೆ ನಾನು ಅನವರತ ನಮಿಸುವೆನು.

ಪರದೋಷಾನನ್ವೇಷ್ಟುಂ ಯಚ್ಛೀಲಂ ತವ ಸೂನೋ
ತದ್ವಿತ್ವಾ ಪರಮೇಶೇ ಭಕ್ತಿಂ ವೈ ಕುರು ಸತತಂ |
ಇತ್ಯುಕ್ತ್ವಾ ಮೃತಿಕಾಲೇ ಪರಮೇಶಂ ಪ್ರಾಪ್ತಾ ಯಾ
ಸಾsಪಾಯಾತ್ ಪಾಯಾನ್ಮಾಂ ಮೃತಿಭೀತಂ ಸುಖದಾಸಮ್ ||೬||

ಭಾವಾರ್ಥ:-ಮಗನೇ! ಇತರರಲ್ಲಿ ದೋಷಗಳನ್ನು ಶೋಧನೆ ಮಾಡುವ ನಿನ್ನ ಅಭ್ಯಾಸವನ್ನು ತ್ಯಜಿಸಿ ಭಗವಂತನಾದ ಪರಮೇಶ್ವರನಲ್ಲಿ ಭಕ್ತಿಯುಳ್ಳವನಾಗು ಎಂದು ತನ್ನ ಅವಸಾನಕಾಲದಲ್ಲಿ ಉಪದೇಶಮಾಡಿ ಭಗವಂತನಲ್ಲಿ ನೆಲೆಯಾದ ಆಕೆ ಮರಣ ಭೀತಿಗೊಳಗಾದ ಮತ್ತು ಪ್ರಾಪಂಚಿಕ ಸೌಖ್ಯಗಳಿಗೆ ದಾಸನಾಗಿರುವ ನನ್ನನ್ನು ಸರ್ವದಾ ಅಪಾಯಗಳಿಂದ ರಕ್ಷಿಸಲಿ.

ಮಾತಾ ಮೇ ಪರಮಾ ಶಕ್ತಿ: ಶಾರದೇತಿ ಪ್ರಥಾಂ ಗತಾ |
ಸ್ಥಿತೇ ಚೈವಂ ಜನೇರ್ಮೃತ್ಯೋ ಸ್ಸಂಕಷ್ಟಾನ್ಮೇ ಭಯಂ ಕುತ: ||೭||

ಭಾವಾರ್ಥ:-ಶಾರದೆಯೆಂದು ಪ್ರಸಿದ್ಧಿ ಪಡೆದಿರುವ ಆ ಪರಾಶಕ್ತಿಯು ನನ್ನ ಜನನಿಯಾಗಿರಲು ನನಗೆ ಹುಟ್ಟು-ಸಾವುಗಳೆನ್ನುವ ಆಪತ್ತುಗಳ ಭೀತಿಯು ಎಂದಿಗೂ ಬರಲಾರದು.
*********************************************************************
                ||  ಇತಿ ಶ್ರೀ ಶಾರದಾಸ್ತುತಿ ಸಪ್ತಕಮ್  || 
 || ಈ ತೆರನಾಗಿ ಶ್ರೀ ಶಾರದಾಸ್ತುತಿಸಪ್ತಕಂಗಳ ಭಾವಾರ್ಥವಾಗಿದೆ  ||

*********************************************************************
                                                           -೩೨-